ವೃಶ್ಚಿಕ ರಾಶಿಗೆ ಗೋಲ್ಡನ್ ಟೈಮ್, ಕಡೆಗೂ ಬಂದ ಗುರುಬಲ
ಸಾಡೇಸಾತಿಯಲ್ಲಿ ಕಷ್ಟನಷ್ಟ ಅನುಭವಿಸಿದ ವೃಶ್ಚಿಕ ರಾಶಿಯವರಿಗೆ ಕಡೆಗೂ ಗುರುಬಲ ಬಂದಿದೆ. ಗುರುಬಲ ಬಂದಿರುವುದು ಒಂದು ವರ್ಷದವರೆಗೂ ಇರುವುದರಿಂದ ಮುಖ್ಯವಾದ ಕೆಲಸಗಳನ್ನು ಮಾಡಿಟ್ಟುಕೊಳ್ಳಲು ಈಗಿನಿಂದಲೇ ಆರಂಭಿಸಬೇಕು. ಈ ಸಮಯದಲ್ಲಿ ಸಿಕ್ಕಾಪಟ್ಟೆ ಹಣ ದುಡಿಯುವ ಅವಕಾಶಗಳು ಬರುತ್ತವೆ.
ಹೀಗಾಗಿ ದಿನ 24 ಗಂಟೆಯಲ್ಲಿ ಅತೀ ಹೆಚ್ಚಿನ ಸಮಯವನ್ನು ಕಷ್ಟಪಟ್ಟು ದುಡಿಯಲಾರಂಭಿಸಬೇಕು. ಶನಿಸಾಡೇಸಾತಿಯಲ್ಲಿ ಸ್ವಲ್ಪ ಆಲಸ್ಯತನ ಮೈಗೂಡಿರುತ್ತದೆ. ಆದರೆ ಮೈ ಕೊಡವಿ ಮೇಲೆದ್ದು ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ನ್ಯಾಯವಾಗಿ ಮಾಡಿದರೆ ಗುರುಫಲ ಸಾಕಷ್ಟು ಆಗುತ್ತದೆ.
ಹಣದ ವಿಷಯವಷ್ಟೇ ಏಕೆ? ಕೌಟುಂಬಿಕ ಸಂತಸವೂ ಇಮ್ಮಡಿಗೊಳ್ಳುತ್ತದೆ. ಕೆಲವರಿಗೆ ಮದುವೆಯೋಗ ಬಂದರೆ, ಸಂತಾನಾಪೇಕ್ಷಿಗಳು ಫೇಡೆ ಹಂಚುವ ಸಮಯ ಬರುತ್ತದೆ. ಆಸ್ತಿಪಾಸ್ತಿ, ಇಷ್ಟಪಟ್ಟ ವಾಹನ, ಮನೆ ಮತ್ತಿತರೆ ವಸ್ತುಗಳನ್ನು ಖರೀದಿಸಲು ಹಣದ ಲಭ್ಯತೆಯಾಗುವುದರಿಂದ ಮುಖ್ಯ ಮತ್ತು ಅವಶ್ಯಕ ವಸ್ತುಗಳನ್ನು ಮಾತ್ರ ಖರೀದಿಸಿ. ಬರೀ ತೋರಿಕೆ ಐಷಾರಾಮಿ ವಸ್ತುಗಳನ್ನು ಖರೀದಿಸುವುದು ಬೇಡ. ಗುರುಬಲವಿದೆ, ಹಣದ ಹರಿವು ಚೆನ್ನಾಗಿದೆ ಎಂದುಕೊಂಡು ಸಿಕ್ಕಾಪಟ್ಟೆ ಸಾಲ ಸೋಲ ಮಾಡುವಂಗಿಲ್ಲ. ಮಾಡಿದರೆ ತೀರಿಸಲು ಒಂದೊತ್ತು ಊಟ ಬಿಟ್ಟು ಕುಳಿತುಕೊಳ್ಳುವ ಪರಿಸ್ಥಿತಿ ಬರಲಿದೆ ನೆನಪಿರಲಿ. [ವೃಶ್ಚಿಕ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ]
ಮೊದಲೇ ಸಿಟ್ಟು ಮತ್ತು ಅವಸರದ ಪ್ರವೃತ್ತಿಯವರಾದ ವೃಶ್ಚಿಕ ರಾಶಿಯವರು ಸ್ವಲ್ಪ ಮಾನಸಿಕ ಕಠೋರ ಸ್ವಭಾವವನ್ನೂ ಹೊಂದಿರುತ್ತಾರೆ. ಹೀಗಾಗಿ ಗುರುಬಲ ಬಂದಿರುವ ಈ ಸಮಯದಲ್ಲಿ ಆದಷ್ಟು ಆಸ್ತಿಕರಾಗಿ ದೈವಕೃಪೆಗೆ ದಿನವೂ ಒಂದಿಷ್ಟು ಸಮಯ ಮೀಸಲಿಡಲೇಬೇಕು.
ಹೊರ ದೇಶಗಳಿಗೆ ಅಥವಾ ಪರ ಊರುಗಳಿಗೆ ಕೆಲಸದ ನಿಮಿತ್ತ ಹೋಗುವ ಪ್ರಮೇಯ ಬಂದರೆ ಮೊದಲು ಎಸ್ ಎನ್ನಬೇಕು. ಏಕೆಂದರೆ ಇದರಿಂದಲೇ ಕೆಲವೊಂದು ರೀತಿಯ ಲಾಭಗಳನ್ನು ಕಾಣಬಹುದು. ಹೊಸದಾಗಿ ವ್ಯಾಪಾರ ಮತ್ತು ಹೊಸ ಯೋಜನೆಗಳನ್ನು ಆರಂಭಿಸಬೇಕೆನ್ನುವವರಿಗೆ ಈಗ ಗೋಲ್ಡನ್ ಟೈಮ್. ಹನ್ನೊಂದನೇ ಸ್ಥಾನದಲ್ಲಿ ಬಂದಿರುವ ಗುರು ಬರೀ ಲಾಭವನ್ನೇ ನೀಡುವದರಿಂದ ಬಂದಿದ್ದು ಪಡೆದುಕೊಂಡು ಸಾರ್ಥಕವಾಗಿಸಿಕೊಳ್ಳಬೇಕು ಜೀವನವನ್ನು.
ಆದರೆ, ಮೇಲೆ ಹೇಳಿದಂತೆ ಸಾಡೇಸಾತಿಗೆ ಸಂಬಂಧಪಟ್ಟಂತೆ ಪರಿಹಾರ ಮಾಡಿಕೊಂಡಲ್ಲಿ ವೃಶ್ಚಿಕ ರಾಶಿಯವರು ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡಿಯೂ ಲಾಭ ಗಳಿಸಬಹುದು. ಏಕೆಂದರೆ ಸುಲಭದಲ್ಲಿ ಕಷ್ಟವಿಲ್ಲದೇ ಹಣ ಬರುವ ದಾರಿ ಅದೊಂದೇ ಎಂಬುದು ನೆನಪಿಟ್ಟುಕೊಳ್ಳಿ. ಸ್ವಲ್ಪ ಶ್ರಮಪಟ್ಟು ನಂಬಿಕೆ ವಿಶ್ವಾಸವಿದ್ದವರಲ್ಲಿ ವ್ಯವಹಾರ ಮಾಡಿದರೆ ಲಾಭದ ನೋಟುಗಳನ್ನು ಕಣ್ತುಂಬ ನೋಡಬಹುದು. [ನಕ್ಷತ್ರ ಸರಣಿ : ಹಠಮಾರಿ ಸ್ವಭಾವದ ವಿಶಾಖಾ ನಕ್ಷತ್ರದವರು]
ಇನ್ನು, ಈ ರಾಶಿಯ ಹೆಂಗಸರು ಮಾತ್ರ ದೈಹಿಕ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು. ಏಕೆಂದರೆ ಹೆಂಗಸರಿಗೆ ಮಧುಮೇಹ ಬರುವುದು ಹೆಚ್ಚಿನ ಪ್ರಮಾಣದಲ್ಲಿ ಚಿಂತೆ ಮಾಡುವುದರಿಂದ. ಆದ್ದರಿಂದ 40 ವರ್ಷದ ಅಕ್ಕಪಕ್ಕ ಇರುವವರು ಒಮ್ಮೆ ಶುಗರ್ ಗಾಗಿ ರಕ್ತ ಮತ್ತು ಬಿಪಿಯನ್ನು ಚೆಕ್ ಮಾಡಿಸಿಟ್ಟುಕೊಳ್ಳುವುದು ಒಳ್ಳೆಯದು. ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಉದ್ಭವಿಸುವುದರಿಂದ ನಿತ್ಯ ವ್ಯಾಯಾಮ ಮಾಡುವುದು ಉತ್ತಮ.
ಒಟ್ಟಿನಲ್ಲಿ ಗುರುಬಲದಿಂದ ಸ್ವಲ್ಪ ತಲೆ ಎತ್ತಿ ಓಡಾಡುವಂತಾಗಿರುವ ವೃಶ್ಚಿಕ ರಾಶಿಯವರು ಹಣವನ್ನು ದುಂದುವೆಚ್ಚ ಮಾಡದೇ ಖುಷಿಯಾಗಿದ್ದು ದೈವಬಲವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಸಾಧ್ಯವಿದ್ದಲ್ಲಿ ಗುರು ರಾಯರ ಮಠಕ್ಕೆ ಪ್ರತಿ ಗುರುವಾರ ಹೋಗಿ ಬಂದರೆ ಶುಭಫಲ ಹೆಚ್ಚುತ್ತದೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]