ರಾಶಿಗಳಿಗನುಗುಣವಾಗಿ ಗುರುಬಲ ಹೀಗಿದೆ
ಮೇಷ : ಅರ್ಧಾಷ್ಟಮ ಶನಿಕಾಟದಿಂದಾಗಿ ಸ್ವಲ್ಪ ಆರೋಗ್ಯದಲ್ಲಿ ಪೆಟ್ಟು ತಿನ್ನುತ್ತಿರುವ ಈ ರಾಶಿಯವರಿಗೆ ಈಗ ಗುರುಬಲದ ಸಮಯ. ಪಂಚಮ ಸ್ಥಾನದಲ್ಲಿ ಗುರು ಬಂದಿರುವುದರಿಂದ ಹಣಕಾಸಿನ ಸ್ಥಿತಿಯಲ್ಲಿ ಗಣನೀಯವಾಗಿ ಏರಿಕೆಯಾಗಲಿದೆ. ಹಾಕಿಕೊಂಡ ಯೋಜನೆಗಳು ಯಶಸ್ಸುಗೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಆಸೆ ಈಡೇರುತ್ತದೆ. ಕೆಲಸದಲ್ಲಿದ್ದವರಿಗೆ ಹೊಸ ಹುದ್ದೆಯ ಲಾಭವಾದರೆ, ಬಡ್ತಿ ಯೋಗವೂ ಲಭಿಸಿ ಸಹೋದ್ಯೋಗಿಗಳಲ್ಲಿ ಮತ್ತು ಕುಟುಂಬದವರಲ್ಲಿ ಗೌರವ ಹೆಚ್ಚಳಗೊಳ್ಳುತ್ತದೆ. [2015 ವರ್ಷ ಭವಿಷ್ಯ : ಮೇಷ ರಾಶಿಗೆ ಫಿಫ್ಟಿ ಫಿಫ್ಟಿ]
ದೈವದೆಡೆಗೆ ಆಕರ್ಷಣೆ ಹೆಚ್ಚಾಗಿ ಸದ್ಗುಣ ಸಂಪನ್ನರು, ಆಸ್ತಿಕರೊಂದಿಗೆ ಒಡನಾಟ ಹೆಚ್ಚುತ್ತದೆ. ಕಂಕಣ ಮತ್ತು ಸಂತಾನ ಭಾಗ್ಯಕ್ಕಾಗಿ ಪರಿತಪಿಸಿದವರಿಗೆ ಈಗ ಸುಸುಮಯವೆನ್ನಬಹುದು. ಆದರೆ, ಅಷ್ಟಮ ಶನಿಕಾಟದ ಕುರಿತು ತುಂಬಾ ಜಾಗೃತೆ ವಹಿಸಿಕೊಳ್ಳಬೇಕು. ಜಾತಕವನ್ನೊಮ್ಮೆ ಪರಿಶೀಲಿಸಿಕೊಂಡು ಹುಷಾರಾಗಿದ್ದರೆ ಅಷ್ಟಮಶನಿಕಾಟದ ಕ್ರೂರ ಪ್ರಭಾವವನ್ನು ತಡೆದುಕೊಳ್ಳುವ ಶಕ್ತಿ ಪಡೆದುಕೊಳ್ಳಬಹುದು. [ಅಂತೂ ಇಂತೂ ಗುರುಬಲ ಬಂತು : ಯಾರಿಗುಂಟು, ಯಾರಿಗಿಲ್ಲ]
ವೃಷಭ : ಈಗಾಗಲೇ ಗುರುಬಲದ ಫಲವನ್ನು ಅನುಭವಿಸಿ ಸುಖ ಜೀವನ ಸಾಗಿಸಿದ ಈ ರಾಶಿಯವರಿಗೆ ಈಗ ಗುರುಬಲವಿಲ್ಲದೆ ಸ್ವಲ್ಪ ಕೊರಗುವಂತಾಗುತ್ತದೆ. ಆದರೇನು ಮಾಡೋಕೆ ಆಗೋದಿಲ್ಲ, ಬಂದಿದ್ದನ್ನು ಅನುಭವಿಸಲೇಬೇಕು. ಇದು ಆಸ್ತಿಕರಿಗೆ ಮಾತ್ರ ಅನ್ವಯಿಸುವ ಮಾತು. ನಾಸ್ತಿಕರಂತೂ ಗುರುವೂ ಇಲ್ಲ, ಶನಿಯೂ ಇಲ್ಲ ಎನ್ನುವುದರಿಂದ ಅವರಂತೂ ಈ ಮಾತು ಕಿವಿಗೆ ಹಾಕಿಕೊಳ್ಳದಿರುವುದೇ ಲೇಸು.
ಗುರುಬಲವಿದ್ದ ಈ ರಾಶಿಯವರಿಗೆ ಇಷ್ಟು ದಿನ ಜೊತೆಗಿದ್ದವರೇ ಪೈಪೋಟಿಗಿಳಿಯುತ್ತಾರೆ. ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಚಿಕ್ಕಪುಟ್ಟ ತಪ್ಪುಗಳನ್ನೂ ಎತ್ತಿ ತೋರಿಸುವುದರಿಂದ, ತಪ್ಪು ಮಾಡದೇ ಜೀವನ ಸಾಗಿಸಲು ಕಲಿತುಕೊಳ್ಳುವುದುತ್ತಮ. ಅನವಶ್ಯಕ ವಿಷಯಗಳಿಗೆ ಸಿಟ್ಟು ಮಾಡಿಕೊಳ್ಳುವುದು, ಸುಮ್ಸುಮ್ನೆ ಸಿಕ್ಕ ಸಿಕ್ಕವರ ಮೇಲೆ ಕೋಪ ಮಾಡಿಕೊಳ್ಳುವುದು ಶ್ರೇಯಸ್ಸಲ್ಲ. ಯಾವುದೇ ಹೊಸ ಯೋಜನೆ ಆರಂಭಿಸಬೇಕೆಂದರೂ ಒಮ್ಮೆ ಜಾತಕವನ್ನು ಪರಿಶೀಲಿಸಿಕೊಂಡೇ ಮುನ್ನುಗ್ಗಬೇಕು. ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಲು ಪ್ರತಿನಿತ್ಯ 40 ನಿಮಿಷ ವಾಕಿಂಗ್, 20 ನಿಮಿಷ ಯೋಗಾಭ್ಯಾಸ ಜೀವನದಂಗವಾಗಬೇಕು. ಹಣವನ್ನು ಹೂಡಿಕೆ ಮಾಡುವಾಗ ಹತ್ತತ್ತು ಬಾರಿ ಯೋಚಿಸಿಯೇ ಮುಂದಡಿಯಿಡಬೇಕು. [2015 ವರ್ಷ ಭವಿಷ್ಯ : ವೃಷಭ ರಾಶಿಗೆ ಎಚ್ಚರಿಗೆ ಗಂಟೆ]
ಮಿಥುನ : ಕಳೆದ ವರ್ಷದವರೆಗೂ ಪಂಚಮ ಶನಿಯ ಪೀಕಲಾಟದಲ್ಲಿ ಸಿಲುಕಿ ಜೀವನವೇ ಹುಣ್ಣೆಂದುಕೊಂಡಿದ್ದ ಈ ರಾಶಿಯವರಿಗೆ ಈ ವರ್ಷದಾರಂಭ ಸುಸಮಯವಾಗಿತ್ತು. ಅಂದರೆ ಅದೃಷ್ಟವೇ ಬೆನ್ನತ್ತಿದೆ ಎಂದೆನ್ನುವ ಶುಭದಿನಗಳಿದ್ದವು. ಏಕೆಂದರೆ ಶನಿಬಲ ಬಲು ಜೋರಾಗಿದೆ. ಜೊತೆಗೆ ಗುರುಬಲವೂ ಇತ್ತು. ಇನ್ನೇನು ಬೇಕು ಜೀವನಕ್ಕೆ ಎಂಬಂಥ ಮನೋಭಾವವಿತ್ತು ಈ ರಾಶಿಯವರಿಗೆ. ಆದರೆ, ಈಗ ಗುರುಬಲವು ಹೋಗುವುದರಿಂದ ಸ್ವಲ್ಪ ತೊಳಲಾಟ ಆರಂಭ. ಆದರೆ ಬೆದರುವಂಥದ್ದೇನೂ ಇಲ್ಲ. ಏಕೆಂದರೆ ಶನಿಬಲವಿದ್ದೇ ಇದೆ. ಕೆಲವೊಮ್ಮೆ ಗುರುವು ತನ್ನ ಫಲ ನೀಡದೇ ಇರಬಹುದು. ಆದರೆ ಶನಿ ಮಾತ್ರ ಫಲ ನೀಡುವುದು ಮಾತ್ರ ತಪ್ಪಿಸಲ್ಲ.
ಗುರುಬಲವಿಲ್ಲದಿರುವುದರಿಂದ ಕೌಟುಂಬಿಕ ಕುರಿತಾದ ಜಗಳಗಳು ತಾರಕಕ್ಕೇರುತ್ತವೆ. ನಂಬಿದವರೂ ಕೂಡ ಕೈ ಕೊಡುತ್ತಾರೆ ಅಥವಾ ಸಮಯಕ್ಕಾಗಲ್ಲ. ಯಾವುದೇ ಯೋಜನೆಗಳಿರಲಿ, ಎಷ್ಟೇ ಮುಂಜಾಗೃತೆ ವಹಿಸಿಕೊಂಡಿರಲಿ ಅವುಗಳ ಯಶಸ್ಸಿಗೆ ಹಗಲಿರುಳು ಶ್ರಮಿಸಬೇಕಾಗುತ್ತದೆ. ಕೆಲಸದಲ್ಲಿದ್ದವರಿಗೆ ಹೊಸ ಊರು ನೋಡುವ ಸೌಭಾಗ್ಯವಾದರೆ, ಇನ್ನು ಕೆಲವರಿಗೆ ಕೆಲಸವೇ ಬೇಡವೆನಿಸಬಹುದು. ಮನೆಯ ಸದಸ್ಯರು ಮತ್ತು ಸಂಬಂಧಿಕರು ಕೂಡ ನಿರ್ಲಕ್ಷ್ಯ ಮಾಡುವುದರಿಂದ ಒಂಥರಾ ಮನಸಿಗೆ ನೋವಿನನುಭವ. ಅನವಶ್ಯಕವಾಗಿ ಪ್ರಯಾಣ ತಪ್ಪಿಸಿ. ಅಕಸ್ಮಾತ್ ಹೋಗಲೇ ಬೇಕೆಂದರೆ ಒಳ್ಳೆ ದಿನ ನೋಡಿಕೊಂಡೇ ಹೋಗುವುದೊಳಿತು. ಮನಸ್ಸು ಚಿಂತೆಗಳ ಗೂಡಾಗುವುದರಿಂದ ಪ್ರತಿನಿತ್ಯ ಯೋಗದ ಮೊರೆ ಹೋಗಬೇಕು, ಮಾತ್ರೆಗಳ ಮೊರೆ ಹೋಗಬಾರದು. [2015 ವರ್ಷ ಭವಿಷ್ಯ : ಮಿಥುನ ರಾಶಿಗೆ ಬಂಪರ್!]
ಕಟಕ : ಈ ಹಿಂದೆ ಅರ್ಧಾಷ್ಟಮ ಶನಿಕಾಟದ ಜೊತೆ ಜೊತೆಗೆ ಬಂದ ಜನ್ಮಗುರು. ಅದರೊಂದಿಗೇನೆ ಕೂಡಿಕೊಂಡ ಪಂಚಮ ಶನಿಕಾಟ ಈ ಎಲ್ಲವುಗಳಿಂದ ಕಟಕ ರಾಶಿಯವರು ಜೀವನವೆಂದರೆ ಇಷ್ಟು ಕೆಟ್ಟದ್ದಿರುತ್ತದೆಯಾ ಎಂದು ತಮ್ಮಷ್ಟಕ್ಕೇ ತಾವೇ ಅಂದುಕೊಂಡಿದ್ದಾರೆ. ಆದರೆ ಜೀವನ ಸುಂದರವಾಗಿಯೂ ಇರುತ್ತದೆ ಎಂಬುದನ್ನು ಅರಿತುಕೊಳ್ಳುವ ಸಮಯ ಈಗ ಬಂದಿದೆ. ಏಕೆಂದರೆ ಗುರು ದ್ವಿತೀಯ ಸ್ಥಾನಕ್ಕೆ ಬಂದಿದ್ದಾನೆ ರಾಶಿಯಿಂದ. ಇದು ತುಂಬಾ ಶುಭಕರ. ಮೇಲಾಗಿ ದೈವಬಲವೇ ನಿಮಗಿದೆ ಎಂದೆನ್ನಬಹುದು. ಈ ಸಮಯದಲ್ಲಿ ಅಂದರೆ ಮುಂಬರುವ ಒಂದು ವರ್ಷದವರೆಗೂ ಗುರುಬಲವಿರುವುದರಿಂದ ಅಂದುಕೊಂಡಿದ್ದನ್ನು ಸಾಧಿಸಿಕೊಳ್ಳುವ ಸಂದರ್ಭವಿದು. ಮಾಡಿದ ಸಾಲ ತೀರಿಸಿ ಮತ್ತಷ್ಟು ಉಳಿಸಿಕೊಳ್ಳುವ ಸದವಕಾಶಗಳು ಬರುತ್ತವೆ. ಹಣದ ಹರಿವು ಹೇರಳವಾಗಿರುವುದರಿಂದ ಮನಸ್ಸು ಪ್ರಫುಲ್ಲತೆಯಿಂದ ಕೂಡಿರುತ್ತದೆ.
ಏನೇ ಯೋಜನೆಗಳನ್ನು ಹಾಕಿಕೊಂಡರೂ ಯಶಸ್ಸು ಕಟ್ಟಿಟ್ಟುಕೊಂಡ ಬುತ್ತಿ. ದೇಹಾರೋಗ್ಯ ನಳನಳಿಸುತ್ತದೆ. ಇನ್ನಷ್ಟು ನಳನಳಿಸುವಂತಾಗಬೇಕಾದರೆ ದಿನನಿತ್ಯ ಯೋಗಾಭ್ಯಾಸ ಮಾಡಲಾರಂಭಿಸಬೇಕು. ಮದುವೆಯ ನಿರೀಕ್ಷೆಯಲ್ಲಿರುವವರಿಗೆ ಹೊಸ ಜೋಡಿಯೊಂದಿಗೆ ಜೀವನ ಸಾಗಿಸುವ ಕಾಲ ಬಂದಿದೆ ಎಂದರ್ಥ. ಸಂತಾನಕ್ಕಾಗಿ ಹಾತೊರೆದು ನೊಂದವರಿಗೆ ಈಗ ಸಿಹಿಸುದ್ದಿ ನೀಡುವ ಸುಯೋಗ. ಕೌಟುಂಬಿಕವಾಗಿ ಮತ್ತು ಸಂಬಂಧಿಕರೊಂದಿಗೆ ಅತ್ಯುತ್ತಮ ಹೊಂದಾಣಿಕೆಯಿಂದ ಎಲ್ಲರ ಮುಂದೆ ತುಂಬಾ ಒಳ್ಳೆಯವರು ಎನ್ನಿಸಿಕೊಳ್ಳುವ ಭಾಗ್ಯ. ಆದರೆ, ಗುರುಬಲ ಬಂದಿದೆ ಎಂದು ಹೆಚ್ಚು ಬೀಗಬೇಕಾಗಿಲ್ಲ. ಪಂಚಮಶನಿಕಾಟ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ, ಆದ್ದರಿಂದ ಜಾತಕವನ್ನೊಮ್ಮೆ ಪರಿಶೀಲಿಸಿಕೊಳ್ಳುವುದು ಶುಭ.