'ಪಾಪದ ಫಲ ಉಣ್ಣುವಿರಿ': ಶ್ರೀಗುರು ಚಕ್ರವರ್ತಿ ಮಠದ ಯುಗಾದಿ ಕಾರ್ಣಿಕ
ವಿಜಯಪುರ ತಾಲೂಕಿನ ಕತಕನಹಳ್ಳಿ ಗ್ರಾಮದ ಶ್ರೀ ಗುರುಚಕ್ರವರ್ತಿ ಸದಾಶಿವ ಮಠದ ಪೀಠಾಧಿಪತಿ ಶಿವಯ್ಯ ಸ್ವಾಮೀಜಿಯವರು ಯುಗಾದಿ ಭವಿಷ್ಯವನ್ನು ನುಡಿದಿದ್ದಾರೆ. ಯುಗಾದಿ ಹೊಸತೊಡಕಿನ ಮರುದಿನ ನುಡಿಯಲಾಗುವ ಭವಿಷ್ಯ ಇಂದಿಗೂ ನಿಜವಾಗುತ್ತ ಬಂದಿವೆ ಎನ್ನುವುದು ಭಕ್ತಕೋಟಿಗಳ ನಂಬಿಕೆ.
ಹಣಮಸಾಗರ, ಸಾರವಾಡ, ಕತಕನಹಳ್ಳಿ, ಚಮಕೇರಿ, ಇಟ್ನಾಳ ಮತ್ತು ಅರಂಭಾವಿಯಲ್ಲಿ ಶಾಖಾ ಮಠವನ್ನು ಹೊಂದಿದ್ದು, ಕತಕನಹಳ್ಳಿ ಮಠದ ಶ್ರೀ ಶಿವಯ್ಯ ಸ್ಚಾಮೀಜಿಯವರು ಕಾರ್ಣಿಕವನ್ನು ನುಡಿದಿದ್ದಾರೆ. ಐನೂರು ವರ್ಷಗಳ ಸಂಪ್ರದಾಯ ಈ ಮಠಕ್ಕೆ ಇದೆ.
Ugadi Bhavishya 2022: ಶುಭಕೃತ್ ನಾಮ ಸಂವತ್ಸರ ಯುಗಾದಿಯ ಮೇಷದಿಂದ ಮೀನದ ತನಕ ದ್ವಾದಶ ರಾಶಿ ಫಲ
ಅದ್ದೂರಿ ವಾರ್ಷಿಕ ಜಾತ್ರೆಯ ನಡುವೆ ವಾರ್ಷಿಕ ಭವಿಷ್ಯವಾಣಿಯನ್ನು ನುಡಿಯಲಾಗಿದ್ದು, ಸದ್ಯ ರಾಜ್ಯ ಎದುರಿಸುತ್ತಿರುವ ಮತೀಯ ಅಶಾಂತಿಯನ್ನು ಸ್ವಾಮೀಜಿಯವರು ಎಚ್ಚರ ಎನ್ನುವ ಮೂಲಕ ಪರೋಕ್ಷವಾಗಿ ಎಚ್ಚರಿಸಿದ್ದಾರೆ.
ಮಂಗಳವಾದ್ಯ, ಮೆರವಣಿಗೆಯ ಜೊತೆ ಆಗಮಿಸುವ ಶಿವಯ್ಯ ಸ್ವಾಮೀಜಿಯವರು, ಪ್ರತ್ಯೇಕವಾಗಿ ಇರಿಸಲಾಗಿರುವ ಸಂಪ್ರದಾಯದ ಆಸನದಲ್ಲಿ ಕೂತು ಕಾರ್ಣಿಕವನ್ನು ನುಡಿಯುತ್ತಾರೆ. ಈ ಭಾಗದಲ್ಲಿ ಭವಿಷ್ಯವಾಣಿಯ ಬಗ್ಗೆ ಅಪಾರ ನಂಬಿಕೆ ಇರುವುದರಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.
ಮದ್ಯವನ್ನೇ ಭಕ್ತರು ಗದ್ದುಗೆಗೆ ಅರ್ಪಿಸಿ ಅದನ್ನೇ ನೈವೇದ್ಯ ಎಂದು ಸೇವಿಸುತ್ತಾರೆ
ವಿಶ್ವದಲ್ಲಿ ಮುಂದೆ ನಡೆಯುವ, ಘಟಿಸಬಹುದಾದ ದುರಂತಗಳು, ಮಳೆ, ಬೆಳೆ, ಪ್ರಳಯ ಮತ್ತಿತರ ಘಟನೆಗಳನ್ನು ಇಲ್ಲಿನ ಭವಿಷ್ಯವಾಣಿಯಲ್ಲಿ ಹೇಳುವುದು ವಾಡಿಕೆ. ಇಲ್ಲಿನ ಭವಿಷ್ಯ ಕರಿ ಕಲ್ಲಿನ ಮೇಲೆ ಬಿಳಿಗೆರೆ ಹೇಳಿದಷ್ಟೇ ನಿಖರವಾಗಿರುತ್ತದೆ ಎನ್ನುವುದು ಭಕ್ತರ ನಂಬಿಕೆ. ಮಠದ ಹಿಂದಿನ ಸಿದ್ಧಿ ಪುರುಷರಾದ ಚಿಕ್ಕಪ್ಪಯ್ಯನವರು ಸಣ್ಣ ಪ್ರಮಾಣದಲ್ಲಿ ಮದ್ಯವನ್ನು ಸೇವಿಸಿ ಸಿದ್ಧಿಗಾಗಿ ಕುಳಿತುಕೊಳ್ಳುತ್ತಿದ್ದರು. ಹಾಗಾಗಿ, ಇಲ್ಲಿ ಮದ್ಯವನ್ನೇ ಭಕ್ತರು ಗದ್ದುಗೆಗೆ ಅರ್ಪಿಸಿ ಅದನ್ನೇ ನೈವೇದ್ಯ ಎಂದು ಸೇವಿಸುತ್ತಾರೆ.
ಈ ವರ್ಷ ಶುಭಕೃತನಾಮ ಸಂವತ್ಸರವಿದೆ ಹಾಗಾಗಿ ಎಲ್ಲರಿಗೂ ಒಳಿತಾಗುತ್ತದೆ
"ಈ ವರ್ಷ ಶುಭಕೃತನಾಮ ಸಂವತ್ಸರವಿದೆ ಹಾಗಾಗಿ ಎಲ್ಲರಿಗೂ ಒಳಿತಾಗುತ್ತದೆ. ಪಾಪ ಮತ್ತು ಪುಣ್ಯದ ಲೆಕ್ಕಾಚಾರ ಅವರವರಿಗೆ ಬಿಟ್ಟಿದ್ದು. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳೆಲ್ಲಾ ಉಳಿದದ್ದೇ ಹೆಣ್ಣುಮಕ್ಕಳಿಂದ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಹಾಗಾಗಿ, ಹೆಣ್ಣುಮಕ್ಕಳನ್ನು ಬಂಗಾರದ ಆಭರಣ ಕಾಪಾಡಿದಂತೆ ಕಾಪಾಡಿಕೊಳ್ಳಬೇಕು"ಎಂದು ಕತಕನಹಳ್ಳಿ ಮಠದ ಶ್ರೀ ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಈ ಸಂವತ್ಸರದಲ್ಲಿ ನೀವು ಕೆಟ್ಟ ಕೆಲಸ ಮಾಡಿದ್ದರೆ ಅದರ ಫಲವನ್ನು ನೀವೇ ಉಣ್ಣುವಿರಿ
"ಈ ಸಂವತ್ಸರದಲ್ಲಿ ನೀವು ಕೆಟ್ಟ ಕೆಲಸ ಮಾಡಿದ್ದರೆ ಅದರ ಫಲವನ್ನು ನೀವೇ ಉಣ್ಣುವಿರಿ. ಜಾತಿಯನ್ನೂ ಬಿಡಬಾರದು, ನೀತಿಯನ್ನು ಬಿಡಬಾರದು, ಪ್ರೀತಿಯನ್ನು ಬಿಡಬಾರದು, ಪದ್ದತಿ ಮತ್ತು ಸಂಸ್ಕ್ರತಿಯನ್ನೂ ಬಿಡಬಾರದು. ಜಾತಿಗೊಂದು ಧ್ವಜ, ಧ್ವಜಕ್ಕೊಂದು ಅಜೆಂಡಾ ಕೊನೆಗೆ ಹಾದಿಗೊಂದು ಬೀದಿಗೊಂದು ಆಗುತ್ತವೆ. ಅದಕ್ಕಾಗಿ, ಯಾರೂ ಮೆಚ್ಚಬಾರದು, ಜಾತಿ ಮಾಡುವವರೆಲ್ಲಾ ಉಳಿಯಲ್ಲ" ಎಂದು ಶ್ರೀಮಠದ ಸ್ವಾಮೀಜಿಗಳು ಯುಗಾದಿ ಭವಿಷ್ಯವನ್ನು ನುಡಿದಿದ್ದಾರೆ.
ಬಿಸಿಲು ಹೆಚ್ಚಾಗಲಿದೆ, ಮೂರು ಪ್ರಕಾರದ ಮಳೆಯಾಗುತ್ತದೆ
"ಜಾತಿ ಮನೆಯೊಳಗೆ ಇರಲಿ, ಬಾಗಿಲು ದಾಟಿದ ಬಳಿಕ ಪ್ರೀತಿ ಇರಲಿ. ಸಮಾಜಕ್ಕೆ ಬಂದರೆ ನೀತಿ ಇರಲಿ, ಸೇವೆಗೆ ಬಂದಾಗ ಪದ್ದತಿ ಇರಲಿ. ಹಣಕ್ಕೆ ಮತ ಹಾಕಬೇಡಿ, ಗುಣಕ್ಕೆ ಮತ ಹಾಕಿ. ರಾಜಕೀಯ ಭವಿಷ್ಯ ಬಹಳ ಗೊಂದಲವಿದೆ. ಕೈ ತಿದ್ದಿಕೋಬೇಕು ಎನ್ನುತ್ತದೆ, ಮುಂದಿನ ಜಾತ್ರೆಯಲ್ಲಿ ಅದರ ಭವಿಷ್ಯ ಸ್ಪಷ್ಟವಾಗುತ್ತದೆ. ಬಿಸಿಲು ಹೆಚ್ಚಾಗಲಿದೆ, ಮೂರು ಪ್ರಕಾರದ ಮಳೆಯಾಗುತ್ತದೆ. ಒಂದು ಪ್ರಕಾರದ ಮಳೆ ಹರಕು ಮಳೆ, ಮುರುಕು ಹಪ್ಪಳದಂತೆ, ಮತ್ತೊಂದೆಡೆ ಟೊಳ್ಳು ಟುಸ್ಸು ಎಂಬಂತೆ ಇರುತ್ತದೆ. ಮಲೆನಾಡು ಹೋಗಿ ಬೆಳವಲ ನಾಡು, ಬೆಳವಲ ನಾಡು ಹೋಗಿ ಮಲೆನಾಡು ಆಗಲಿದೆ"ಎಂದು ಶ್ರೀ ಶಿವಯ್ಯ ಸ್ಚಾಮೀಜಿ ಕಾರ್ಣಿಕ ನುಡಿದಿದ್ದಾರೆ.