ಮಿಥುನ ರಾಶಿಯ ಅದ್ಭುತ ಶಕ್ತಿ ಬಗ್ಗೆ ನಿಮಗೆಷ್ಟು ಗೊತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ
Recommended Video
ಮಿಥುನ ರಾಶಿಯವರ ಗುಣ-ಸ್ವಭಾವ ಇತ್ಯಾದಿ ವಿಚಾರಗಳನ್ನು ತಿಳಿಸಿಕೊಡುವ ಲೇಖನ ಇದು. ಯಾರ್ಯಾರೆಲ್ಲ ಮಿಥುನ ರಾಶಿಯವರು ಇದ್ದೀರಿ ಹಾಗೂ ನಿಮಗೆ ಆಪ್ತರಾದ ಮಿಥುನ ರಾಶಿಯ ವ್ಯಕ್ತಿಗಳು ಇದ್ದಾರೆ, ಅವರಿಗೆ ಈ ಲೇಖನ ಮೀಸಲು. ಮೃಗಶಿರಾ ನಕ್ಷತ್ರದ ಮೂರು, ನಾಲ್ಕನೇ ಪಾದ, ಆರಿದ್ರಾ ನಕ್ಷತ್ರದ ಒಂದರಿಂದ ನಾಲ್ಕನೇ ಪಾದ, ಪುನರ್ವಸು ನಕ್ಷತ್ರ ಒಂದು ಹಾಗೂ ಎರಡನೇ ಪಾದ ಸೇರಿ ಮಿಥುನ ರಾಶಿ ಆಗುತ್ತದೆ.
ಈ ರಾಶಿಯವರ ಅಧಿಪತಿ ಬುಧ ಹಾಗೂ ಇದು ವಾಯುತತ್ವದ ರಾಶಿ. ಮಿಥುನ ರಾಶಿಯವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಇವರಿಗೆ ಬಹಳ ವಿಶೇಷವಾದ ಗುಣಗಳನ್ನು ಆ ಭಗವಂತ ನೀಡಿರುತ್ತಾನೆ. ಇನ್ನು ಬುಧ ಗ್ರಹ ಅಧಿಪತಿಯಾದ್ದರಿಂದ ಬುದ್ಧಿ ಬಹಳ ಚುರುಕಾಗಿರುತ್ತದೆ. ಜತೆಗೆ ಇವರು ಕೂಡ ಬಹಳ ಚಟುವಟಿಕೆಯಿಂದ ಇರುತ್ತಾರೆ.
ಜನ್ಮ ದಿನಕ್ಕೂ ಹೆಸರಿಗೂ ಎಂಥ ನಂಟು? ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಗೊತ್ತಾ?
ಬೆರಳು ತೋರಿಸಿದರೆ ಹಸ್ತ ನುಂಗುತ್ತಾರೆ ಅನ್ನೋ ಮಾತಿದೆಯಲ್ಲಾ, ಅದು ಇವರಿಗೆ ಸರಿಯಾಗಿ ಒಪ್ಪುತ್ತದೆ. ಇವರು ಯಾವುದೇ ಕೆಲಸಕ್ಕೆ ಕೈಯಿಟ್ಟರೂ ಯಶಸ್ವಿಯಾಗಿ ಪೂರೈಸುತ್ತಾರೆ. ಸ್ವಭಾವತಃ ವಿದ್ಯೆಯಲ್ಲಿ ಆಸಕ್ತಿ ಹೆಚ್ಚಿಗೆ ಇರುತ್ತದೆ. ತರ್ಕಬದ್ಧವಾದ ಚಿಂತನೆ ಇವರದು. ಪ್ರಶ್ನೆ ಮಾಡದೆ, ಆಧಾರ ಕೇಳದೆ ಏನನ್ನೂ ಒಪ್ಪದ ಜಾಯಮಾನದವರು. ಇವರ ಜೀವನದಲ್ಲಿ ನಿಧಾನ ಪ್ರಗತಿ ಇರುತ್ತದೆ. ಆದರೆ ಪಟ್ಟು ಬಿಡದೆ ಸಾಧನೆ ಮಾಡುವ ಗುಣ ಇರುತ್ತದೆ.
ಎಂಥ ಪರಿಸ್ಥಿತಿಗೂ ಹೊಂದಿಕೊಳ್ಳುವ ಸ್ವಭಾವ
ಲಲಿತ ಕಲೆಗಳಲ್ಲಿ ಇವರಿಗೆ ಆಸಕ್ತಿ ಹೆಚ್ಚಾಗಿ ಇರುತ್ತದೆ. ಈ ರಾಶಿಯವರಿಗೆ ಮೊದಲು ಜೀವನದಲ್ಲಿ ನೆಲೆ ಕಾಣುವುದೇ ಪ್ರಾಶಸ್ತ್ಯ. ಆ ಕಾರಣಕ್ಕೆ ಉತ್ತಮ ಉದ್ಯೋಗ, ಬ್ಯಾಂಕ್ ನಲ್ಲಿ ಬ್ಯಾಲೆನ್ಸ್ ಹಾಗೂ ಸ್ವಂತ ಮನೆ...ಹೀಗೆ ಎಲ್ಲ ಒಂದು ಹಂತಕ್ಕೆ ಇದೆ ಅಂದ ನಂತರವೇ ವಿವಾಹವಾಗುತ್ತಾರೆ. ಬಹಳ ಸೂಕ್ಷ್ಮ ಸ್ವಭಾವದ ವ್ಯಕ್ತಿತ್ವ ಇವರದು. ಯಾವುದೇ ವಿಚಾರದ ಆರಂಭ ಗೊತ್ತಾದರೆ ಸಾಕು, ಅದರ ತುದಿ ಹೀಗೆ ಎಂದು ನಿರ್ಧರಿಸಬಲ್ಲ ಶಕ್ತಿ ಇರುತ್ತದೆ. ಮಾತು ಬಹಳ ಸ್ಪಷ್ಟವಾಗಿರುತ್ತದೆ. ಉತ್ತಮವಾದ ಧ್ವನಿ ಇರುತ್ತದೆ. ಮನಸಿಗೆ ತಕ್ಕಂತೆಯೇ ಜೀವನದಲ್ಲೂ ಬದಲಾವಣೆ ಕಾಣುತ್ತಾ ಬರುತ್ತಾರೆ. ಎಂಥ ಪರಿಸ್ಥಿತಿಗೂ ಹೊಂದಿಕೊಳ್ಳುವ ಸ್ವಭಾವ. ನಾನು ಹಾಗೂ ನನ್ನ ಕುಟುಂಬದವರು ಚೆನ್ನಾಗಿರಬೇಕು ಎಂಬ ಅಭಿಲಾಷೆ ಇರುತ್ತದೆ. ಸಮಾಜಕ್ಕೆ ಹೆದರಿ ನಡೆಯುವಂಥ ಸ್ವಭಾವದವರು. ಮಾನ-ಮರ್ಯಾದೆಗೆ ಅಂಜುತ್ತಾರೆ. ಸಾಧ್ಯವಾದಷ್ಟು ಜಗಳ-ಕಲಹದಿಂದ ದೂರ ಉಳಿಯುತ್ತಾರೆ.
ಬಂಡೆಗೆ ತಲೆ ಚಚ್ಚಿಕೊಳ್ಳುವಂಥ ಹಠದ ಸ್ವಭಾವ
ಆದರೆ, ಬಂಡೆಗೆ ತಲೆ ಚಚ್ಚಿಕೊಳ್ಳುವುದು ಅಂತಾರಲ್ಲ, ಹಾಗೆ ಅಸಂಭವವನ್ನು ಸಾಧಿಸುವ ಯತ್ನದಲ್ಲಿ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಇವರು ಬುದ್ಧಿವಂತರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಆತುರದ ಸ್ವಭಾವದವರು. ಈ ರಾಶಿಯವರಿಗೆ ಸರಕಾರದಿಂದ ತೊಂದರೆ ಆಗುವಂಥ (ರಾಜ ಭಯ) ಸಾಧ್ಯತೆ ಹೆಚ್ಚು. ಇಷ್ಟಾದರೂ ಕಾನೂನಿನ ಚೌಕಟ್ಟು ಮೀರುವ ಸ್ವಭಾವ ಇವರದಲ್ಲ. ವಾತ-ಪಿತ್ತ-ಕಫ ಹೀಗೆ ಮೂರೂ ಬಗೆಯ ದೋಷ ಇವರನ್ನು ಬಾಧಿಸುತ್ತದೆ. ಅದರರ್ಥ ಆರೋಗ್ಯದಲ್ಲಿ ಏರುಪೇರು ಜಾಸ್ತಿ ಆಗುತ್ತಿರುತ್ತದೆ. ಭುಜಕ್ಕೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆಗಳು ಜಾಸ್ತಿ ಇರುತ್ತವೆ. ಯಾವುದೇ ಕೆಲಸವನ್ನಾಗಲೀ ಗುಪ್ತವಾಗಿ ಮಾಡಲು ಬಯಸುವಂಥ ಜನರಿವರು. ಇವರಿಗೆ ಪಶ್ಚಿಮ ಹಾಗೂ ಆಗ್ನೇಯ ದಿಕ್ಕು ಶುಭ. ವಿಷ್ಣು ಸಹಸ್ರನಾಮ ಪಠಣ ಮಾಡುವುದರಿಂದ ಜೀವನದಲ್ಲಿ ಒಳ್ಳೆ ಅದೃಷ್ಟ ಪಡೆಯಬಹುದು. ಗಣಪತಿ ಪೂಜೆ ಮಾಡುವುದರಿಂದ ಹೆಚ್ಚು ಯಶಸ್ಸು ಪಡೆಯಬಹುದು.
ಮಿಥುನ ರಾಶಿಯವರಿಗೆ ಅದೃಷ್ಟ ಕೈ ಜಾರಿದ ಸಮಯ, ಎಚ್ಚರ ಎಚ್ಚರ!
ಪಚ್ಚೆ, ನೀಲ ಚೆನ್ನಾಗಿ ಆಗಿಬರುವ ರತ್ನ
ಸಾಮಾನ್ಯವಾಗಿ (ಜನ್ಮ ಲಗ್ನವೂ ಈ ವಿಚಾರದಲ್ಲಿ ಮುಖ್ಯ) ಮಿಥುನ ರಾಶಿಯವರು ಸೌಂದರ್ಯವಂತರಾಗಿರುತ್ತಾರೆ. ಪಚ್ಚೆ, ನೀಲ ಚೆನ್ನಾಗಿ ಆಗಿಬರುವ ರತ್ನ (ಜಾತಕ ಪರಿಶೀಲನೆ ಕಡ್ಡಾಯವಾಗಿ ಮಾಡಿಸಿ, ಆ ನಂತರ ರತ್ನ ಧರಿಸಿ). ಈ ರಾಶಿಯವರು ಯಾವುದೇ ವಿಷಯವನ್ನು ಮನಸು ಬಿಚ್ಚಿ ಮಾತನಾಡುವುದಿಲ್ಲ. ನೋವಾದರೂ ತಾವೇ ಕೊರುಗುತ್ತಾರೆ. ಸಂತೋಷವಾದರೂ ಮನಸ್ಸಿನಲ್ಲೇ ಸಂತೋಷ ಪಡುತ್ತಾರೆ. ಈ ಸ್ವಭಾವವನ್ನು ಕಡ್ಡಾಯವಾಗಿ ಬಿಡಬೇಕು. ಇವರು ಶಾಂತಿಪ್ರಿಯರು. ಗಣಿತ, ಲೆಕ್ಕ ಪರಿಶೋಧನೆ, ವಿಜ್ಞಾನ, ಜ್ಯೋತಿಷ್ಯ, ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ಆದ್ದರಿಂದ ಈ ಕ್ಷೇತ್ರಗಳಿಗೆ ಸಂಬಂಧಿಸಿದಂಥ ಕೋರ್ಸ್ ಗಳನ್ನು ಮಾಡುವುದು ಉತ್ತಮ. ಆದರೆ ಕೆಲ ಬಾರಿ ಕೆಲಸ-ಕಾರ್ಯಗಳನ್ನು ಮುಂದಕ್ಕೆ ಹಾಕುವ ಸ್ವಭಾವ ಇವರದು. ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಗೊಂದಲ ಹೆಚ್ಚಾಗಿರುತ್ತದೆ.
ಬಹುತೇಕರು ಶ್ರೀಮಂತರಾಗುತ್ತಾರೆ
ಈ ರಾಶಿಯಲ್ಲಿ ಜನಿಸಿದವರು ಬಹುತೇಕ ಶ್ರೀಮಂತರಾಗುತ್ತಾರೆ. ಭವಿಷ್ಯದ ಬಗ್ಗೆ ವಿಪರೀತ ಕನಸು ಕಾಣುವ ಜನ ಇವರು. ಆತ್ಮವಿಶ್ವಾಸ, ಆತ್ಮಾಭಿಮಾನ ಹೆಚ್ಚಿರುವ ಜನ ಇವರು. ಇವರಿಗೆ ಚರ್ಮ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ತಲೆ ನೋವು, ಗಂಟಲು ನೋವು, ಕಫ ಕಾಣಿಸಿಕೊಳ್ಳುತ್ತದೆ. ಇನ್ನು ಜನ್ಮ ಜಾತಕದಲ್ಲಿ ಕುಜ-ಶನಿ ಒಂದೇ ಮನೆಯಲ್ಲಿ ಇದ್ದರೆ ಅಂಥವರಿಗೆ ದೃಷ್ಟಿ ದೋಷ ಕಾಣಿಸಿಕೊಳ್ಳುತ್ತದೆ. ವೈವಾಹಿಕ ಜೀವನದಲ್ಲೂ ತೊಂದರೆ ಆಗುತ್ತದೆ. ವಿಚ್ಛೇದನ ಕೂಡ ಆಗಬಹುದು. ಕುಜ, ಗುರು, ರಾಹು, ಕೇತು ಜನ್ಮ ಜಾತಕದಲ್ಲಿ ಎಲ್ಲಿದೆ ಎಂಬುದನ್ನು ಸರಿಯಾದ ವಿಶ್ಲೇಷಣೆ ಮಾಡಬೇಕು. ಈ ಗ್ರಹಗಳು ಹೆಚ್ಚಿನ ಸಮಸ್ಯೆ ತರುತ್ತವೆ. ಬುಧ ಮಿಥುನ ರಾಶಿಯ ಅಧಿಪತಿಯಾದ್ದರಿಂದ ಈಗಿನ ದಿನ ಮಾನಕ್ಕೆ ತಕ್ಕಂತೆ ಇನ್ಫರ್ಮೇಷನ್ ಟೆಕ್ನಾಲಜಿ, ಇವೆಂಟ್ ಮ್ಯಾನೇಜ್ ಮೆಂಟ್, ರೇಡಿಯಾಲಜಿಸ್ಟ್, ವೈದ್ಯಕೀಯ ಕ್ಷೇತ್ರದಲ್ಲೇ ಉನ್ನತವಾದ ಅಭ್ಯಾಸ ಮಾಡಬಹುದು. ವಿದೇಶದಲ್ಲಿ ವ್ಯಾಸಂಗ ಮಾಡುವಂಥ ಅವಕಾಶಗಳು ದೊರೆಯುತ್ತವೆ.
ನೀವು ಹುಟ್ಟಿದ ದಿನ ಹೇಳಿ, ನಿಮ್ಮ ಸ್ವಭಾವ ನಾವ್ ಹೇಳ್ತೀವಿ!
ಜ್ಯೋತಿಷಿಗಳ ಬಳಿ ಜಾತಕ ತೋರಿಸಿ
ಮೃಗಶಿರಾ ನಕ್ಷತ್ರಕ್ಕೆ ಹುಟ್ಟುತ್ತಾ ಕುಜ ದಶೆ, ಆರಿದ್ರಾ ನಕ್ಷತ್ರಕ್ಕೆ ರಾಹು ದಶೆ. ಆದ್ದರಿಂದ ಮಿಥುನ ರಾಶಿಯ ಈ ಎರಡೂ ನಕ್ಷತ್ರಗಳು ಗ್ರಹ ಸಂಧಿ ಶಾಂತಿಗಳ ಸಮಯವನ್ನು ಸರಿಯಾಗಿ ನೋಡಿ, ಶಾಂತಿ ಮಾಡಿಸಲೇಬೇಕು. ಮೃಗಶಿರಾ ಅವರಿಗೆ ಕುಜ-ರಾಹು ಹಾಗೂ ರಾಹು-ಬೃಹಸ್ಪತಿ ಸಂಧಿ ಶಾಂತಿ ಹಾಗೂ ಆರಿದ್ರಾ ನಕ್ಷತ್ರದವರಿಗೆ ರಾಹು-ಬೃಹಸ್ಪತಿ ಸಂಧಿ ಶಾಂತಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಲೇ ಬೇಕು. ಇಲ್ಲದಿದ್ದರೆ ಆರೋಗ್ಯ ಸಮಸ್ಯೆ, ವಿದ್ಯಾ ಭಂಗ, ಉದ್ಯೋಗ ಸಮಸ್ಯೆ, ಅಪಯಶಸ್ಸು, ಅಪಕೀರ್ತಿ... ಹೀಗೆ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಶಾಂತಿಯನ್ನು ಯಾವಾಗ ಮಾಡಿಸಬೇಕು ಎಂಬುದಕ್ಕೆ ಸಮಯ ಕೂಡ ಅಷ್ಟೇ ಮುಖ್ಯ. ಆದ್ದರಿಂದ ನಿಮ್ಮ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸಿದ ನಂತರವೇ ಮುಂದಿನ ಹೆಜ್ಜೆಗಳನ್ನು ಇಡಿ.
ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.