2020: ಅಸಲಿಗೆ ಕೊರೊನಾ ಬಗ್ಗೆ ನುಡಿಯಲಾಗಿದ್ದ ಭವಿಷ್ಯ ನಿಜವಾಗಿದ್ದು ಈ ಮೂವರದ್ದು ಮಾತ್ರ
ಮಾರ್ಚ್ ತಿಂಗಳಿನಿಂದ ಆರಂಭವಾದ ಕೊರೊನಾದ ಹಾವಳಿ ವರ್ಷಾಂತ್ಯದತ್ತ ನಾವಿದ್ದರೂ ಅದರಿಂದ ಹೊರಬರಲಾಗುತ್ತಿಲ್ಲ. ಈ ವೈರಸ್ ನಿಂದ ಗುಣಮುಖರಾಗುವ ಲಸಿಕೆ ಸಿಕ್ಕಿರುವುದು ನೆಮ್ಮದಿ ತರುವ ವಿಚಾರ.
ಆರಂಭದಲ್ಲಿ ಕೊರೊನಾ ಮೇಲಿದ್ದ ಭಯ, ಕಾಯ್ದುಕೊಳ್ಳುತ್ತಿದ್ದ ಸಾಮಾಜಿಕ ಅಂತರ, ಬರಬರುತ್ತಾ ಮಾಯವಾಯಿತು. ಸಾರ್ವಜನಿಕರಿಗೆ ತಿಳಿ ಹೇಳಬೇಕಾದ ಜನಪ್ರತಿನಿಧಿಗಳೇ ತಮ್ಮ ರಾಜಕೀಯಕ್ಕಾಗಿ ಕೋವಿಡ್ ಮಾರ್ಗಸೂಚಿಯನ್ನು ಮುರಿಯಲಾರಂಭಿಸಿದರು.
2020ರ ಭವಿಷ್ಯ: ನಿಗೂಢ ಮಹಿಳೆ ಬಾಬಾ ವಂಗಾ ನುಡಿದ ಭವಿಷ್ಯವೇನು, ಆಗಿದ್ದೇನು!
ಕೊರೊನಾ ಆರಂಭಕ್ಕೆ ಮುನ್ನವೇ ಮದ್ದಿಲ್ಲದ ಕಾಯಿಲೆಯೊಂದು ವಿಶ್ವವನ್ನು ತಲ್ಲಣಗೊಳಿಸಲಿದೆ ಎನ್ನುವ ಭವಿಷ್ಯವನ್ನು ಕೋಡಿಮಠದ ಶ್ರೀಗಳು ನುಡಿದಿದ್ದರು. ಇದಾದ ನಂತರ, ಕೊರೊನಾದಿಂದ ಮುಕ್ತಿಯಾವಾವ ಎನ್ನುವುದರ ಬಗ್ಗೆಯೂ ಶ್ರೀಗಳು ಹೇಳಿದ್ದರು.
ಉಡುಪಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆ: ಸಾಕ್ಷಿ ಸಮೇತ ಅನಾವರಣಗೊಂಡ ದೈವ ಸಾನಿಧ್ಯ
ಏಪ್ರಿಲ್ ತಿಂಗಳಿನಿಂದ ಇದುವರೆಗೆ ಹತ್ತು ಹಲವು ಜ್ಯೋತಿಷಿಗಳು ಕೊರೊನಾದ ಬಗ್ಗೆ ಭವಿಷ್ಯವನ್ನು ನುಡಿದಿದ್ದರು. ಅಸಲಿಗೆ, ಹೀಗೆ ನುಡಿದವರ ಪೈಕಿ, ಮೂವರದ್ದು ಮಾತ್ರ ಭವಿಷ್ಯ ಬಹುತೇಕ ಸತ್ಯವಾಗಿದ್ದು, ಮಿಕ್ಕವರದೆಲ್ಲಾ ಪೊಳ್ಳೆಂದು ಸಾಬೀತಾಗಿದೆ. ಕೊರೊನಾ ಬಗ್ಗೆ ಯಾರ್ಯಾರು ಭವಿಷ್ಯ ನುಡಿದಿದ್ದರು? ಮುಂದೆ ಓದಿ..
ಸಂಜಯ್ ಜುಮಾನ್
"2020 ಸಂಖ್ಯಾ ಶಾಸ್ತ್ರದ ಪ್ರಕಾರ ಉತ್ತಮ ವರ್ಷವಲ್ಲ ಎನ್ನುವ ಮಾತನ್ನು ಹಿಂದೆನೂ ಹೇಳಿದ್ದೆ. ಗಡಿ ಸಮಸ್ಯೆ, ಆರೋಗ್ಯ ಸಮಸ್ಯೆ, ಹಣದುಬ್ಬರ, ನಿರುದ್ಯೋಗ ಎಲ್ಲವೂ ಹೆಚ್ಚಾಗಲಿದೆ. ಈ ವರ್ಷದಲ್ಲಿ ಕೊರೊನಾ ಹಾವಳಿ ಕಮ್ಮಿಯಾಗುವ ಸಾಧ್ಯತೆಯಿಲ್ಲ. ಕೆಲವರು ಮಾತ್ರ ಈ ಅವಧಿಯಲ್ಲಿ ಲಾಭವನ್ನು ಮಾಡಿಕೊಳ್ಳುತ್ತಾರೆ" ಎಂದು ಸಂಜಯ್ ಜುಮಾನ್ ಹೇಳಿದ್ದಾರೆ.
ಕೋಡಿಶ್ರೀಗಳ ಭವಿಷ್ಯ
"ಅಶ್ವಯುಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ ಹೆಚ್ಚಾಗಲಿದೆ. ಈ ವೈರಸ್ ಗಾಳಿಯಲ್ಲಿ ಸಂಚಾರ ಮಾಡೋದು ಕಡಿಮೆ. ಹೀಗಾಗಿ ಜನರು ಸುರಕ್ಷತೆ ಕಾಪಾಡಿಕೊಂಡರೆ ಕೊರೊನಾದಿಂದ ಪಾರಾಗಬಹುದು" ಎಂದು ಕೋಡಿಶ್ರೀಗಳು ಹೇಳಿದ್ದರು. ಅಶ್ವಯುಜ ಮಾಸ, ದೀಪಾವಳಿ ಅಮಾವಾಸ್ಯೆಯ ದಿನವಾದ ನವೆಂಬರ್ 15ರವರೆಗೆ ಇರಲಿದೆ. ನವೆಂಬರ್ 16, ಬಲಿಪಾಡ್ಯಮಿಯ ದಿನದ ನಂತರ ಕಾರ್ತಿಕ ಮಾಸ ಆರಂಭವಾಗಲಿದೆ. ಅಲ್ಲಿಂದ ಒಂದು ತಿಂಗಳು, ಅಂದರೆ, ಕಾರ್ತಿಕ ಮಾಸ ಮುಗಿದು, ಮಾರ್ಗಶಿರ ಮಾಸ ಆರಂಭವಾಗುವುದು ಡಿಸೆಂಬರ್ 15ಕ್ಕೆ.
ಡಾ. ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ
"ಏಪ್ರಿಲ್ 15ಕ್ಕೆ ಚತುರ್ ಗ್ರಹಗಳ ಸಮ್ಮಿಲನದಿಂದ ಇಡೀ ಜಗತ್ತು ಕೊರೊನಾ ವೈರಸ್ ವಿರುದ್ಧ ಹೋರಾಡುವ ಧನಾತ್ಮಕ ಶಕ್ತಿ ಸಿಗಲಿದೆ, ಕೊರೊನಾ ಬಲ ಕುಗ್ಗಲಿದೆ. ಗುರು ಗ್ರಹವು ಇದೇ ದಿನಾಂಕ ಏಪ್ರಿಲ್ 30ರಂದು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ಕೊರೊನಾ ಬಲಹೀನವಾಗಿ ಕಾಲಕ್ರಮೇಣ ನಶಿಸಲಿದೆ ಹಾಗೂ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳಲಿದೆ" ಎಂದು ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆ ಮಠ ಹಾಗೂ ಶ್ರೀ ಶಾಸ್ತ್ರ ಪೀಠದ ಶ್ರೀ ಡಾ. ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಹೇಳಿದ್ದರು.
ಪ್ರದ್ಯುಮಾನ್ ಭಟ್
"ನವಗ್ರಹಗಳಲ್ಲಿ ಒಂದಾದ ರಾಹು, ಆದ್ರಾ ನಕ್ಷತ್ರ, ಮಿಥುನ ರಾಶಿಯನ್ನು 11.09.19 ರಂದು ಪ್ರವೇಶಿಸಿದ್ದ ಮತ್ತು 20.05.20 ಇಲ್ಲಿಂದ ಪಥ ಬದಲಾಯಿಸಲಿದ್ದಾನೆ. ಹಾಗಾಗಿ, ಈ ಅವಧಿಯವರೆಗೆ, ಅಂದರೆ ಮೇ ಇಪ್ಪತ್ತರವರೆಗೆ ಕೊರೊನಾ ಇಂಪ್ಯಾಕ್ಟ್ ಇರಲಿದೆ. ಅನಿಷ್ಟವೂ ದೂರವಾಗುತ್ತಾ ಬರುತ್ತದೆ" ಎಂದು ಪ್ರದ್ಯುಮಾನ್ ಭಟ್ ಎನ್ನುವ ಜ್ಯೋತಿಷಿ ಭವಿಷ್ಯ ನುಡಿದಿದ್ದರು.
ಬಾಲ ಜ್ಯೋತಿಷಿ ಅಭಿಗ್ಯಾ ಆನಂದ್
"ಕಳೆದ ವರ್ಷ ಸೆಪ್ಟಂಬರ್ ನಲ್ಲೇ ನಾನು ಹೇಳಿದ್ದೆ. ಗುರುವು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದು ಗುರು ಮತ್ತು ಶನಿಯ ಸಂಘರ್ಷಕ್ಕೆ ಕಾರಣವಾಗಿರುತ್ತದೆ. ಇದು ಜಗತ್ತಿನಲ್ಲಿ ಹಲವು ಸಂಕಷ್ಟಕ್ಕೆ ಕಾರಣವಾಗುತ್ತದೆ. ಜುಲೈ ಮೊದಲ ವಾರದಿಂದ ಪ್ರಪಂಚ ಸಾಮಾನ್ಯ ಸ್ಥಿತಿಗೆ ಬರಲು ಆರಂಭವಾಗುತ್ತದೆ" ಎಂದು ಬಾಲ ಜ್ಯೋತಿಷಿ ಅಭಿಗ್ಯಾ ಆನಂದ್ ನುಡಿದಿದ್ದರು.
ಮನೀಜಾ ಅಹುಜಾ
"ಬೃಹಸ್ಪತಿ ಮತ್ತು ಕೇತು ಸಂಯೋಜನೆಯಿಂದ ಕೊರೊನಾ ವೈರಸ್ ಹೆಚ್ಚಾಗುತ್ತಿದೆ. ಸೆಪ್ಟಂಬರ್ 24ರಿಂದ ರಾಹುಕೇತುವಿನ ಗೋಚರ ವೃಶ್ಚಿಕ ರಾಶಿ ಕಡೆ ತಿರುಗಲಿದೆ. ಬೃಹಸ್ಪತಿ, ಧನು ರಾಶಿಯಲ್ಲೇ, ನವೆಂಬರ್ ಇಪ್ಪತ್ತರ ತನಕ ಇರಲಿದ್ದಾನೆ. ಅಲ್ಲಿಂದ ಮಕರ ರಾಶಿಗೆ ಹೋಗಲಿದ್ದಾನೆ. ಅಲ್ಲಿಂದ, ಕೊರೊನಾ ಹಾವಳಿ ಕಮ್ಮಿಯಾಗಲಿದೆ"ಎಂದು ಮನೀಜಾ ಅಹುಜಾ ಹೇಳಿದ್ದರು.
ಜ್ಯೋತಿಷಿ ನೀರಜ್ ಧಾಂಕೇರ್
"ಸೆಪ್ಟಂಬರ್ 25, 2020ಕ್ಕೆ ಕೇತು, ವೃಶ್ಚಿಕ ರಾಶಿಗೆ ಪ್ರವೇಶಿಸಿದ ನಂತರ, ಕೊರೊನಾ ವೈರಸ್ ಗೆ ಲಸಿಕೆ ಹೊರಬರುವ ಸುದ್ದಿ ಬರಲಾರಂಭಿಸಿದೆ. ನವೆಂಬರ್ 20, 2020ರ ನಂತರ ಲಸಿಕೆ ಬರುವ ವಿಚಾರ ಅಧಿಕೃತವಾಗುತ್ತದೆ. ಬಹುತೇಕ ಕಾರ್ತಿಕ ಮಾಸದ ಅಂತ್ಯಕ್ಕೆ ಕೊರೊನಾ ವೈರಸ್ ಕಾಟದಿಂದ ಜಗತ್ತು ನಿಧಾನವಾಗಿ ನಿರಾಳವಾಗಲಾರಂಭಿಸುತ್ತದೆ" ಎಂದು ಜ್ಯೋತಿಷಿ ನೀರಜ್ ಧಾಂಕೇರ್ ನುಡಿದಿದ್ದರು.