ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಶಿಗನುಗುಣವಾಗಿ ವರ್ಷ ಭವಿಷ್ಯ - 2013

By ಸುಬ್ರಮಣ್ಯ ಜೋಯಿಸ, ಕೊಪ್ಪ
|
Google Oneindia Kannada News

ಶ್ರೀ ಗುರುಭ್ಯೋನ್ನಮಃ. ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಮುಖವಾಗಿ ಸಂವತ್ಸರ ಆಧಾರಿತ ಜ್ಯೋತಿಷ್ಯ ನುಡಿಯಲಾಗುತ್ತದೆ. ಸೂರ್ಯನ ಸಿದ್ಧಾಂತ ಅನುಸರಿಸಿ ಚಂದ್ರನ ಚಲನೆ ಆಧರಿಸಿದ ಚಾಂದ್ರಮಾನ ಭವಿಷ್ಯ ಹೇಳಲಾಗುವುದು.

ಈಗ ನಾವು ನಂದನನಾಮ ಸಂವತ್ಸರದಲ್ಲಿ ಇದ್ದೇವೆ. ಬರುವ ಯುಗಾದಿಯಿಂದ ವಿಜಯನಾಮ ಸಂವತ್ಸರ ಆರಂಭ. ಸಂವತ್ಸರದಿಂದ ಸಂವತ್ಸರಕ್ಕೆ ಭವಿಷ್ಯ ನುಡಿಯುವುದು ಶಾಸ್ತ್ರ ಸಮ್ಮತ ಪದ್ದತಿಯಾದರೂ ಕ್ಯಾಲಂಡರ್ ಆಧಾರಿತ ಭವಿಷ್ಯ ನುಡಿಯಲು ಅಡ್ಡಿಯಿರುವುದಿಲ್ಲ.

ಒಬ್ಬ ವ್ಯಕ್ತಿಯ ಭವಿಷ್ಯ ಹೇಳಬೇಕಾದರೆ ಜ್ಯೋತಿಷ್ಯಕಾರರಿಗೆ ವ್ಯಕ್ತಿಯ ಜಾತಕ ಅಂದರೆ ಹುಟ್ಟಿದ ದಿನ, ಸಮಯ, ರಾಶಿ ಮತ್ತು ನಕ್ಷತ್ರದ ವಿವರಗಳು ಅಗತ್ಯ. ಇದು ಲಭ್ಯವಿಲ್ಲದಿರುವಾಗ 2013ರ ಜನವರಿಯಿಂದ ಡಿಸೆಂಬರ್ ವರೆಗಿನ, ರಾಶಿಚಕ್ರ ಆಧಾರಿತ ಫಲಾಫಲಗಳನ್ನು ನುಡಿಯಲಾಗಿದೆ.

ಇಸವಿ 2013ರಲ್ಲಿ ನಿಮ್ಮ ನಿಮ್ಮ ರಾಶಿಗನುಗುಣವಾಗಿ, ಸಂಕ್ಷಿಪ್ತವಾಗಿ ಭವಿಷ್ಯವನ್ನು ಇಲ್ಲಿ ಬರೆದಿರುತ್ತೇನೆ. ಸಂಪಾದಕರ ಸೂಚನೆಯಂತೆ, ಸ್ಥಳಾಭಾವದಿಂದಾಗಿ ವಿವರಗಳು ಕ್ಲುಪ್ತವಾಗಿವೆ. ಏಳುಬೀಳುಗಳ ಜತೆಗೆ ಕೆಲವು ಪರಿಹಾರ ಸೂಚಕ ಮಾಹಿತಿಯೂ ಉಂಟು.

ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೊಸ ವರ್ಷವು ಸಂಪತ್ತು, ಸಮೃದ್ಧಿ ಹಾಗೂ ಶಾಂತಿಯನ್ನು ನೀಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸಕಲ ಜನ ಸುಖಿನೋಭವಂತು, ಸಮಸ್ತ ಸನ್ಮಂಗಳಾನಿ ಭವಂತು.

ಮಿಥುನ

ಮಿಥುನ

ಭವಿಷ್ಯ ಶುಭದಾಯಕ ಮತ್ತು ಫಲಪ್ರದ. ಇದನ್ನು ಸದುಪಯೋಗಿಸಿಕೊಳ್ಳುವತ್ತ ನಿಮ್ಮ ಆಲೋಚನೆಗಳಿರಲಿ. ಹಣ ಗಳಿಸುವುದಕ್ಕೆ ಇದು ಹೇಳಿ ಮಾಡಿಸಿದ ವರ್ಷ. ಎಲ್ಲವೂ ಸರಿಯಿರುವಾಗ ಅನಗತ್ಯ ಮಾನಸಿಕ ಕಿರಿಕಿರಿಗೆ ತಲೆಬಾಗಬೇಡಿ. ಇನ್ನು, ಅಪಘಾತಗಳ ಬಗ್ಗೆ ಸ್ವಲ್ಪ ಎಚ್ಚರ ಇರಲಿ. ನಿವೇಶನ ಕೊಳ್ಳಲು ಸರಿಯಾದ ವರ್ಷ. ವರ್ಷಾಂತ್ಯಕ್ಕೆ ಒಂದಷ್ಟು ಚಿಂತೆ ಕಾಡಲಿದೆ. ಶತ್ರುಗಳು ನಿಮ್ಮ ಪತನಕ್ಕಾಗಿ ಹೊಂಚುಹಾಕುತ್ತಾರೆ. ದಿಢೀರನೆ ನಷ್ಟವುಂಟಾಗಬಹುದು. ಆರೋಗ್ಯ ಏರುಪೇರಾಗಬಹುದು. ವೈಯಕ್ತಿಕ ಸಂಬಂಧಗಳೂ ಸರಿಹೋಗವು. ವರ್ಷ ವಿಶೇಷ : ಸ್ವಂತ ಮನೆ ಯೋಗ.

ಕರ್ಕಾಟಕ

ಕರ್ಕಾಟಕ

ಮಿಶ್ರ ಫಲ. ಕೆಲವು ಕಡೆಗಳಿಂದ ಲಾಭವಿದೆ. ಆದರೆ ಇತರೆಡೆಯಿಂದ ಕೆಡುಕೂ ಇದೆ. ತೀರಾ ನಿರಾಶರಾಗಬೇಡಿ. ಅತಿಯಾದ ಆತ್ಮವಿಶ್ವಾಸ ಬೇಡ. ಪ್ರವಾಸದಿಂದ ನಷ್ಟ. ಮನೆಯಲ್ಲಿ ಜಗಳಕ್ಕಿಳಿದಿರೋ ಶಾಂತಿ ಕದಡುತ್ತದೆ. ನಿಮ್ಮ ಶಕ್ತಿ ಸಾಮರ್ಥ್ಯಗಳನ್ನು ಸಂಸಾರಕ್ಕಾಗಿ ಒಂದಷ್ಟು ಮೀಸಲಿಡಿ. ಸಮಯ ಕಳೆಯುತ್ತಿದ್ದಂತೆ ಒಂದೊಂದೇ ನಿಮ್ಮ ಪರ ಆಗಲಿದೆ. ಆದರೆ ಇದನ್ನೂ ನಿಮ್ಮತ್ತ ತಿರುಗಿಸಿಕೊಳ್ಳುವಷ್ಟು ಚೈತನ್ಯ ನಿಮ್ಮಲ್ಲಿ ಉಳಿದಿರುವುದಿಲ್ಲ. ಬೇಸರಿಡಿಕೊಳ್ಳದಿರಿ ಮುನ್ನುಗ್ಗಿ. ಕೊನೆಗೆ ಕಳೆದುಕೊಂಡಿದ್ದನ್ನು ವಾಪಸ್ ಪಡೆಯುತ್ತೀರಿ. ವರ್ಷ ವಿಶೇಷ : ಉದ್ಯೋಗದಲ್ಲಿ ಉನ್ನತಿ.

ವೃಷಭ

ವೃಷಭ

ಯಶಸ್ಸು ಸಂತಸದ ಹೊಳೆ ನಿಮ್ಮುಂದೆ ಹರಿಯಲಿದೆ. ಉದ್ಯೋಗಿಗಳಿಗೆ ಬಡ್ತಿ, ಪ್ರವಾಸ ಯೋಗ, ಸೋದರ/ರಿಯರಿಂದ ಸಹಾಯ, ವೃತ್ತಿ ಬದಲಾಯಿಸಬೇಡಿ. ಸಿಕ್ಕ ಅವಕಾಶ ಬಿಡಬೇಡಿ. ಖರ್ಚು ವೆಚ್ಚ ಅಧಿಕ, ಕೈ ತುಂಬಾ ಹಣ ಒಳ್ಳೆ ಮನ್ನಣೆ. ಆರೋಗ್ಯ ಕೊಂಚ ಬಾಧಿಸಲಿದೆ. ಕೆಮ್ಮು, ಕಣ್ಣು ನೋವು, ಜ್ವರ ಆಗಾಗ್ಗೆ ಕಾಡಲಿದೆ. ಅನಗತ್ಯ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಿ. ಹಿತ ಶತ್ರುಗಳ ಬಗ್ಗೆ ನಿಗಾ ಇಡಿ. ಆರೋಗ್ಯ ಕ್ಷೀಣಿಸಿದಾಗ ಆಧಾತ್ಮದತ್ತ ಹೊರಳುವ ಲಕ್ಷಣವಿದೆ. ವರ್ಷ ವಿಶೇಷ : ದೈವಭಕ್ತಿ ವೃದ್ಧಿ.

ವೃಶ್ಚಿಕ

ವೃಶ್ಚಿಕ

ಸುಯೋಗದ ವರ್ಷ. ಕನಸುಗಳು ನನಸಾಗುವ ಕಾಲ. ಹೆಚ್ಚಿನ ಜ್ಞಾನ ಸಂಪಾದನೆಗೆ, ಕಲಿಕೆಗೆ ಸೂಕ್ತ ಸಮಯ. ಮೆಚ್ಚುಗೆಗೆ, ಸಫಲತೆಗೆ ಮಕ್ಕಳು ಪಾತ್ರರಾಗುತ್ತಾರೆ. ವಿದ್ಯಾರ್ಥಿಗಳಿಗೆ ಯಶಸ್ಸು. ಗೆಲುವಿನ ಕುದುರೆ ಏರುವಿರಿ. ಆದಾಯ ವೃದ್ಧಿ. ಜೀವನ ಸಂಗಾತಿಯಿಂದ ಸಂತಸ ಹೆಚ್ಚಲಿದೆ. ಹಠಾತ್ ಆರ್ಥಿಕ ನಷ್ಟ ಸಂಭವಿಸಲಿದೆ. ಮಾನಸಿಕ ಕ್ಷೋಭೆಗೆ ಒಳಗಾಗುವಿರಿ. ಸಿಕ್ಕ ಯಾವುದೇ ಅವಕಾಶಗಳನ್ನು ಕೈಬಿಡಬೇಡಿ. ದೈಹಿಕ ಆರೋಗ್ಯ ಕೈಕೊಡಲಿದೆ. ಎದೆಗುಂದದೆ ಎಚ್ಚರಿಕೆಯಿಂದ ಮುಂದಡಿ ಇಟ್ಟರೆ ಸಮೃದ್ಧ ಜೀವನ ನಿಮ್ಮದು. ವರ್ಷ ವಿಶೇಷ : ವಾಗ್ದೇವಿಯ ಕೃಪೆ.

ಮೇಷ

ಮೇಷ

ಕುಟುಂಬದ ಜೊತೆಗಿದ್ದರೆ ಪರಮಾನಂದ, ಕೈ ತುಂಬಾ ಝಣ ಝಣ ಕಾಂಚಾಣ, ಕೆಲಸದಲ್ಲಿ ಪ್ರೊಮೋಷನ್ ಪಕ್ಕಾ, ಬಹುಕಾಲ ಕಷ್ಟಪಟ್ಟಿದ್ದಕ್ಕೆ ಸಾರ್ಥಕತೆ, ಯಶಸ್ಸು ಬೆನ್ನು ಹತ್ತಲಿದೆ. ಆರ್ಥಿಕ ಸ್ಥಿತಿ ಫುಲ್ ಜೂಮ್ ನಲ್ಲಿರಲಿದೆ. ಪ್ರವಾಸ ಕೂಡಾ ಲಾಭದಾಯಕ. ಸ್ವಲ್ಪ ಇಮೇಜ್ ಗೆ ಧಕ್ಕೆಯಾಗಲಿದೆ. ನಾಲಗೆ ಬಿಗಿಗೊಳಿಸಿಕೊಳ್ಳಿ. ದೀರ್ಘಕಾಲದ ಯೋಜನೆಗಳಿಗೆ ಬ್ರೇಕ್ ಹಾಕಿ. ಆರೋಗ್ಯ ಮುಖ್ಯ ಸ್ವಾಮಿ. ಸಿಟ್ಟು ಹೆಚ್ಚಾದರೆ ದೊಡ್ಡ ಕಾಯಿಲೆ ಬಾಗಿಲು ಬಡಿಯುತ್ತೆ, ಜೋಪಾನ. ವರ್ಷ ವಿಶೇಷ : ಸಟ್ಟಾ ವ್ಯವಹಾರದಲ್ಲಿ ಲಾಭ.

ಸಿಂಹ

ಸಿಂಹ

ಸಿಂಹ ರಾಶಿಯವರಿಗೆ ಈ ವರ್ಷ ಮಿಶ್ರಫಲ. ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆಗೆ ತಕ್ಕಂತೆ ಬೆವರು ಸುರಿಸಿ, ಮೈಬಗ್ಗಿಸಿ ಕೆಲಸ ಮಾಡಿದರೆ ಫಲ ಗ್ಯಾರಂಟಿ. ಇಲ್ಲದಿದ್ದರೆ ಸೋಲು. ಅನಗತ್ಯ ಖರ್ಚು, ಅಪವಾದಗಳು ತಲೆಮೇಲೇರುವ ಸಾಧ್ಯತೆಯಿದೆ. ತಾಳ್ಮೆಯಿಂದ ಮತ್ತು ಅಳೆದುತೂಗಿ ಜೀವನ ಸಾಗಿಸಿದರೆ ಎಲ್ಲ ತೊಂದರೆ ನಿವಾರಣೆ ಸಾಧ್ಯ. ಕುಟುಂಬ ನಿಮ್ಮ ಬೆಂಬಲಕ್ಕಿರಲಿದೆ. ಕೆಲಸಕ್ಕೆ ಸಂಬಂಧಿಸಿದ ಪ್ರವಾಸ ಹೆಚ್ಚಿನ ಲಾಭವನ್ನು ತಂದುಕೊಡಲಿದೆ. ಅನಿರೀಕ್ಷಿತ ಸಂತಸದ ಘಳಿಗೆ ಅಚ್ಚರಿ ತರಲಿದೆ. ದೇವರಲ್ಲಿ ನಂಬಿಕೆಯಿಟ್ಟರೆ ದೇವರು ಕೈಬಿಡುವುದಿಲ್ಲ. ವರ್ಷ ವಿಶೇಷ : ಫಲಾಫಲಗಳು 50-50.

ಕನ್ಯಾ

ಕನ್ಯಾ

ಅನಗತ್ಯ ಖರ್ಚು ವೆಚ್ಚ ಮತ್ತು ಆರೋಗ್ಯದ ಬಗ್ಗೆ ನಿಗಾ ಇಟ್ಟರೆ ಈ ವರ್ಷ ಲಾಭದಾಯಕ. ದುಬಾರಿ ವಸ್ತುಗಳ ಮೇಲಿನ ಖರ್ಚು ಒಂದೆಡೆಯಾದರೆ, ಪ್ರವಾಸಕ್ಕೆ ಮತ್ತು ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಜೇಬಿಗೆ ತೂತು. ರಿಸ್ಕ್ ತೆಗೆದುಕೊಳ್ಳದಿರುವುದು ಉತ್ತಮ, ತೆಗೆದುಕೊಂಡರೆ ನಷ್ಟ ಊಹಿಸುವುದು ಕಷ್ಟ. ಹಿರಿಯರ ಆಸೆಗಳನ್ನು ಪೂರೈಸದಿರುವುದು ಮತ್ತು ಅಭದ್ರತೆ ಕಾಡಲಿದೆ. ಕಾಲ ಸರಿದಂತೆ ಗಾಯಗಳು ಮಾಯಲಿವೆ. ಕೌಟುಂಬಿಕ ಸಂಬಂಧ ಬಲವಾಗಲಿದೆ, ಆಧ್ಯಾತ್ಮ, ಧಾರ್ಮಿಕತೆಯಲ್ಲಿ ಮನ ಹರಿಯಲಿದೆ. ಉತ್ತಮ ಕೆಲಸ ಕೈಗೊಂಡರೆ ಬದುಕಿನ ದಿಕ್ಕು ಬದಲಾಗಲಿದೆ. ವರ್ಷ ವಿಶೇಷ : ತಾಯಿನಾಡಿಗೆ ಮರಳುವ ಯೋಗ.

ತುಲಾ

ತುಲಾ

ಆಶಾದಾಯಕ ವರ್ಷ. ಅದೃಷ್ಟದ ಬಾಗಿಲು ತೆರೆಯುತ್ತದೆ. ಬಿಂದಾಸ್ ಲೈಫ್ ನಿಮ್ಮದು. ಹೆಚ್ಚುವರಿ ಆದಾಯ ಹರಿದುಬರಲಿದೆ. ಹಿರಿಯ ಅಧಿಕಾರಿಗಳ ಅನುಕಂಪ. ಗೆಳೆಯರು, ಕುಟುಂಬಿಕರು ಹಾಗೂ ಸಹೋದ್ಯೋಗಿಗಳೊಂದಿಗೆ ಎಚ್ಚರಿಕೆಯಿಂದಿರಿ. ಹೊಸ ವ್ಯವಹಾರಗಳಿಗೆ ಸೂಕ್ತ ಕಾಲವಲ್ಲ. ಭಾರಿ ಹೂಡಿಕೆ ತರವಲ್ಲ. ವೃತ್ತಿಜೀವನದಲ್ಲಿ ಯಶಸ್ಸು ಶತಃಸಿದ್ಧ. ವ್ಯಯ ಅಧಿಕ. ಮಾನಸಿಕ ಒತ್ತಡ ಹಾಗೂ ಶ್ರಮ ಬಾಧಿಸಲಿದೆ. ಹೊಸ ಸಾಹಸಕ್ಕೆ ಕೈ ಹಾಕಬೇಡಿ. ಪ್ರೇಮದ ವಿಚಾರದಲ್ಲಿ ತುಂಬಾ ಎಚ್ಚರಿಕೆ ಅಗತ್ಯ. ಒಟ್ಟಾರೆಯಾಗಿ ಈ ವರ್ಷ ಮಿಶ್ರಫಲ. ವರ್ಷ ವಿಶೇಷ : ಪ್ರೀತಿಸಿ ಮೋಸ ಹೋಗದಿರಿ.

ಮೀನ

ಮೀನ

ಮಿಶ್ರಫಲ. ಮಾನಸಿಕವಾಗಿ, ದೈಹಿಕವಾಗಿ ಹಲವು ಸಮಸ್ಯೆ ಎದುರಾಗುವವು. ಆರೋಗ್ಯ ಸಮಸ್ಯೆ ಮಾನಸಿಕ ಅಶಾಂತಿಗೆ ಕಾರಣವಾದೀತು. ನಿರ್ಲಕ್ಷ್ಯ ಸಲ್ಲದು. ಶತ್ರುಗಳ ಜತೆ ಜಟಾಪಟಿ ಆಗದಂತೆ ಎಚ್ಚರವಹಿಸಿ. ಕೆಲವೊಂದು ಹಗರಣ ಅಥವಾ ವಿವಾದಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಯಿದೆ. ಆರ್ಥಿಕವಾಗಿ ಕಷ್ಟ ಕಾಲವೇ. ಯಶಸ್ಸಿಗಾಗಿ ನಿರಂತರ ಪ್ರಯತ್ನ ಅಗತ್ಯ. ಸಂಗಾತಿಯ ಅನಾರೋಗ್ಯದ್ದೇ ದೊಡ್ಡ ಚಿಂತೆ. ಕ್ರಮೇಣ ಚಿಂತೆಗಳೆಲ್ಲ ದೂರವಾಗತ್ತೆ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯದ ಒಳಹರಿವಿದೆ. ನಿಮ್ಮ ಹೆಸರು ಹಾಗೂ ಖ್ಯಾತಿ ಸಮಯದೊಂದಿಗೆ ಬೆಳೆಯತ್ತೆ. ವರ್ಷ ವಿಶೇಷ : ರಾಜಕೀಯದಲ್ಲಿ ಏಳಿಗೆ.

ಧನಸ್ಸು

ಧನಸ್ಸು

ಈ ವರ್ಷವು ನಿಮಗೆ ಸಮೃದ್ಧಿಯ ವರ್ಷವೇ. ಆದರೂ ಕೆಲವೊಂದು ಏಳು-ಬೀಳುಗಳು ಕಂಡು ಬರಲಿದೆ. ಅವುಗಳನ್ನು ಎದುರಿಸಿದರೆ ಮುಂದೆ ಅದೃಷ್ಟ ದೇವತೆ ಒಲಿಯುತ್ತಾಳೆ. ತುಂಬಾ ರಿಸ್ಕ್ ತೆಗೆದುಕೊಳ್ಳಬೇಡಿ. ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ. ನಿಮ್ಮವರೇ ನಿಮಗೆ ತೊಂದರೆಯನ್ನುಂಟು ಮಾಡಬಹುದು. ಆರೋಗ್ಯದ ಸಮಸ್ಯೆ ಕೂಡ ಕಂಡು ಬರಬಹುದು. ಕೌಟುಂಬಿಕ ಜಗಳವೂ ನಿಮ್ಮ ನೆಮ್ಮದಿಗೆ ಭಂಗ ತರಬಹುದು. ನಿಮ್ಮ ಒರಟು ನಡವಳಿಕೆ ನಿಮಗೇ ತೊಂದರೆ ತರಬಹುದು. ಆದ್ದರಿಂದ ಎಚ್ಚರ. ವರ್ಷ ವಿಶೇಷ : ಗಣಪತಿ ಸ್ತೋತ್ರ ಭಜಿಸಿರಿ.

ಮಕರ

ಮಕರ

ಈ ವರ್ಷ ಬಹುತೇಕ ಉತ್ತಮ. ವೃತ್ತಿ ಜೀವನದ ಮೆಟ್ಟಿಲುಗಳನ್ನು ಏರುವಿರಿ. ಸಹವರ್ತಿಗಳಿಂದ ಲಾಭ- ಪ್ರಯೋಜನ ಸಿಗತ್ತೆ. ವ್ಯಾಪಾರದಲ್ಲಿ ಲಾಭ ಹಾಗೂ ವಿದೇಶ ಪ್ರವಾಸ ಯೋಗವೂ ಉಂಟು. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಬರಬಹುದು, ಜಾಗರೂಕತೆಯಿಂದ ಇರಿ. ನಿಮ್ಮ ಪಾಸಿಟಿವ್ ಆಟಿಟ್ಯೂಡ್ ಪಾಸಿಟಿವ್ ಪ್ರತಿಫಲಗಳನ್ನೇ ನೀಡುತ್ತವೆ. ಜೀವನದ ಪ್ರತಿ ಹಂತದಲ್ಲೂ ಸಫಲತೆ ಉಂಟಾಗಲಿದ್ದು ಒಳ್ಳೆಯ ಉದ್ಯೋಗ, ಗೌರವ, ಬಡತಿ ನಿಮ್ಮದಾಗಲಿದೆ. ಆಧ್ಯಾತ್ಮದಲ್ಲಿ ಆಸಕ್ತಿ ಹಾಗು ಕೆಲವು ತೀರ್ಥಕ್ಷೇತ್ರ ದರ್ಶನ ಭಾಗ್ಯವಿದೆ. ಒಟ್ಟಾರೆ ನಿಮಗೆ ಇದು ಲಕ್ಕಿ ಸಂವತ್ಸರ. ವರ್ಷ ವಿಶೇಷ : ವಿಲಾಸಿ ಜೀವನ.

ಕುಂಭ

ಕುಂಭ

ಚಲ್ತಾ ಹೈ ಅಟಿಟ್ಯೂಡ್ ಬದಲಾಯಿಸಿಕೊಳ್ಳದಿದ್ದರೆ ಈ ವರ್ಷ ಸಂಕಷ್ಟ ಖಚಿತ. ಸಂಕಷ್ಟ ಬರುತ್ತದೆಂದು ಯತ್ನಕ್ಕೆ ಕೈಹಾಕದಿರುವುದೂ ತರವಲ್ಲ. ಮಾಡುವ ಕೆಲಸ ನಿಯತ್ತಾಗಿಯೇ ಮಾಡುತ್ತ, ಹಿತಶತ್ರುಗಳು ಹತ್ತಿರ ಸುಳಿಯದಂತೆ ನೋಡಿಕೊಂಡರೆ ಆಯಿತು. ತುಸು ಎಡವಿದರೆ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ತೊಂದರೆ. ಇದರಿಂದ ಪಾರಾಗಲು ಒಂದೇ ಮದ್ದು, ದುಡಿಮೆಯತ್ತ ಮನಸ್ಸು ಹರಿಸುವುದು. ಹಣ ಅನೇಕ ಮೂಲಗಳಿಂದ ಹರಿದುಬರಲಿದೆ. ಇದೇ ದುಡ್ಡು ಕುಟುಂಬವನ್ನೂ ಬೆಸೆಯಲಿದೆ. ಇಷ್ಟಾದರೆ, ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ. ವರ್ಷ ವಿಶೇಷ : ಸಂಬಂಧವನ್ನು ಬೆಸೆಯುವ ಹಣ.

English summary
In this competitive world, you may find astrology 2013 predictions at many places, but there are very few options you can rely on. Karnataka astrologer Sri Subramanya Jois provides 100% authentic astrological solutions. These predictions are based on your Moon sign for FREE for each one of You, 12 signs of Zodiac.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X