ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ವಿಠ್ಠಲ ಭಟ್ ಜ್ಯೋತಿಷ್ಯ
Recommended Video
ಪರೀಕ್ಷೆಗಳು ಹತ್ತಿರ ಬಂದಿವೆ. ಮನೆಯಲ್ಲಿ ಶಾಲೆ- ಕಾಲೇಜುಗಳಿಗೆ ಹೋಗುವ ಹುಡುಗ- ಹುಡುಗಿಯರಿದ್ದರೆ ಪೋಷಕರು ಹೆಚ್ಚು ಗೊಂದಲದಲ್ಲಿ ಇರುತ್ತಾರೆ. ನನ್ನೆದುರೇ ಗಂಟೆಗಟ್ಟಲೆ ಓದುತ್ತಾನೆ/ಳೆ. ಆದರೆ ಪರೀಕ್ಷೆಯಲ್ಲಿ ಸರಿಯಾಗಿ ಬರೆಯುವುದಕ್ಕೆ ಆಗಲ್ಲ. ಓದಿದ್ದೆಲ್ಲ ಮರೆತು ಹೋಗುತ್ತದೆ ಎಂಬ ಉತ್ತರ ಕೊಟ್ಟರೆ ನಾವಾದರೂ ಏನು ಮಾಡುವುದಕ್ಕೆ ಸಾಧ್ಯ ಎಂಬುದು ಹಲವರ ಪ್ರಶ್ನೆ.
ಇದಕ್ಕೆ ಮನೋವೈಜ್ಞಾನಿಕ ಕಾರಣವೂ ಒಳಗೊಂಡಂತೆ ಜ್ಯೋತಿಷ್ಯ, ವಾಸ್ತು ಕಾರಣಗಳೂ ಇರಬಹುದು. ಗೊತ್ತಿಲ್ಲದೆ ಏನೋ ಸಮಸ್ಯೆ ಆಗುತ್ತಿದೆ. ಮಗು ಮೇಲೆ ಒತ್ತಡ ಹಾಕಿ, ಅದು ಕಳಾಹೀನ ಆಗುತ್ತಿರಬಹುದು. ಆದ್ದರಿಂದ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಇಂದಿನ ಲೇಖನ ನಿಮ್ಮ ಮುಂದೆ ಇಡಲಾಗಿದೆ.
ದೈವ ಕೋಪ ಅಂದರೇನು, ಅದರ ಪರಿಹಾರ ಹೇಗೆ?
ಹೋದ ವರ್ಷದವರೆಗೆ ಚೆನ್ನಾಗಿ ಓದುತ್ತಿದ್ದ, ಓದುತ್ತಿದ್ದಳು. ಆದರೆ ಇದ್ದಕ್ಕಿದ್ದ ಹಾಗೆ ಯಾಕೋ ಓದಿನಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂಬುದು ಸೇರಿದಂತೆ ಚಿಂತೆಯಲ್ಲಿ ಇರುವವರಿಗೆ ಈ ಲೇಖನದಲ್ಲಿ ಕ್ಷೇತ್ರ ದರ್ಶನ, ವಾಸ್ತು ಟಿಪ್ಸ್ ಹಾಗೂ ರತ್ನಧಾರಣೆ ವಿಷಯವಾಗಿ ಕೆಲವು ಮಾಹಿತಿಯನ್ನು ನೀಡಲಾಗುತ್ತದೆ. ಇನ್ನುಳಿದಂತೆ ಇವುಗಳನ್ನು ಅನುಸರಿಸುವುದು, ಬಿಡುವುದು ನಿಮ್ಮ ವೈಯಕ್ತಿಕ ವಿಚಾರ. ಇದರಲ್ಲಿ ಯಾವುದೇ ಬಲವಂತ ಇಲ್ಲ.
ಯಾವಾಗ ಓದಿಗೆ ತೊಂದರೆ?
ಮೊದಲಿಗೆ ನಿಮ್ಮ ಮಗ ಅಥವಾ ಮಗಳ ಜಾತಕವನ್ನು ನೋಡಿಕೊಳ್ಳಿ. ಅವರದು ವೃಷಭ, ಸಿಂಹ, ಕನ್ಯಾ, ಮಕರ, ಮೀನ ರಾಶಿಗಳಾಗಿದ್ದಲ್ಲಿ ಈ ಸಲದ ಶಾಲೆ- ಕಾಲೇಜಿನ ಪರೀಕ್ಷೆಗಳು ಒಂದಿಷ್ಟು ಕಷ್ಟ ಆಗುವ ಸಾಧ್ಯತೆ ಇದೆ. ಇನ್ನು ಜನನ ಕಾಲದಲ್ಲಿ ಬುಧ ಮೀನ ರಾಶಿಯಲ್ಲಿದ್ದರೆ ಅಥವಾ ಗುರು ಮಕರ ರಾಶಿಯಲ್ಲಿದ್ದರೆ, ಲಗ್ನದಿಂದ ಅಥವಾ ಚಂದ್ರನಿಂದ ನಾಲ್ಕನೇ ಮನೆಯ ಅಧಿಪತಿಯೇ ಆರು, ಎಂಟು ಅಥವಾ ಹನ್ನೆರಡನೇ ಮನೆಯಲ್ಲಿದ್ದರೆ ಓದಿನ ಸಮಸ್ಯೆ ಆಗುತ್ತದೆ.
ಸರ್ಪ ದೋಷ ಇದೆಯೇ ಎಂಬುದನ್ನು ಪರಿಶೀಲಿಸಿ
ಮಕ್ಕಳ ಜಾತಕದಲ್ಲಿ ಸರ್ಪ ದೋಷ ಇದ್ದರೆ ಆದಷ್ಟು ಬೇಗ ನಿವಾರಣೆ ಮಾಡಿಕೊಳ್ಳಿ. ಏಕೆಂದರೆ ಈಗಾಗಲೇ ಫೆಬ್ರವರಿ ಬಂದುಬಿಟ್ಟಿದೆ. ಮಕ್ಕಳು ಓದಲು ಶ್ರಮ ಹಾಕುತ್ತಿರುವುದು ಕಣ್ಣೆದುರೇ ಇದ್ದರೂ ಅದರಿಂದ ಫಲಿತ ಸಿಕ್ಕುತ್ತಿಲ್ಲ ಎಂಬುದು ಗೊತ್ತಾದ ತಕ್ಷಣ ಜಾತಕವನ್ನು ಜ್ಯೋತಿಷಿಗಳಿಂದ ಪರಿಶೀಲಿಸಿ, ಸರ್ಪ ದೋಷ ಇದ್ದಲ್ಲಿ ತಕ್ಷಣ ಪರಿಹಾರ ಮಾಡಿಸಿ.
ಆಗ್ನೇಯ ಮೂಲೆ ಕೋಣೆ ಬೇಡ
ನಿಮ್ಮ ಮನೆಯಲ್ಲಿ ಈಶಾನ್ಯ ಭಾಗದಲ್ಲಿ ಕೋಣೆಯಿದ್ದರೆ ಮಕ್ಕಳು ಅಲ್ಲಿರಬೇಕು. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕುಳಿತು ಓದಲಿ. ಮನೆ ಪಾಠಕ್ಕೆ ತೆರಳುತ್ತಿದ್ದರೆ ಪಾಠ ಮಾಡುವವರು ದಕ್ಷಿಣ ದಿಕ್ಕಿಗೆ, ಮಗು ಉತ್ತರ ದಿಕ್ಕಿಗೆ ಕೂರಬೇಕು. ಮನೆಯಲ್ಲಿ ಆಗ್ನೇಯಕ್ಕೆ ರೂಮ್ ಇದ್ದು, ಅಲ್ಲಿ ಮಕ್ಕಳ ವಾಸ ಅನ್ನೋದಾದರೆ ಕನಿಷ್ಠ ಇನ್ನು ನಾಲ್ಕೈದು ತಿಂಗಳಾದರೂ ಅಲ್ಲಿರುವುದು ಬೇಡ.
ಕರಿಕಾನ ಪರಮೇಶ್ವರಿ ದರ್ಶನ
ಇನ್ನು ಕ್ಷೇತ್ರ ದರ್ಶನದ ವಿಚಾರಕ್ಕೆ ಬಂದರೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಅರೆಯಂಗಡಿ ಎಂಬಲ್ಲಿ ಬೆಟ್ಟ ಇದೆ. ಅಲ್ಲಿ ಕರಿಕಾನ ಪರಮೇಶ್ವರಿ ದೇವಸ್ಥಾನ ಇದೆ. ಅದು ಸಾಕ್ಷಾತ್ ಸರಸ್ವತಿ ಸಾನ್ನಿಧ್ಯ ಎಂಬುದು ನಂಬಿಕೆ. ಅದು ಉದ್ಭವ ಮೂರ್ತಿ. ಅಲ್ಲಿ ಮಗುವಿನ ಕೈಯಲ್ಲಿ ಎರಡು ಕೇಜಿ ಅರಿಶಿನ ಕೊಡಿಸಿ. ಅದರಲ್ಲಿ ದೇವಿಗೆ ಮುಖವಾಡ ಮಾಡುತ್ತಾರೆ. ಈ ಕ್ಷೇತ್ರ ದರ್ಶನ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಾಡಿಸಿ, ಆ ತಾಯಿಯಲ್ಲಿ ಪ್ರಾರ್ಥನೆ ಮಾಡಿ.
ಸಪ್ತಶತಿ ಪಾರಾಯಣ
ಕ್ಷೇತ್ರ ದರ್ಶನ ಸಾಧ್ಯವಾಗದಿದ್ದಲ್ಲಿ ಮನೆಯಲ್ಲೋ ಅಥವಾ ಮನೆಯ ಹತ್ತಿರ ಇರುವ ದೇಗುಲದಲ್ಲೋ ಸಪ್ತ ಶತಿ ಚಂಡಿಕಾ ಪಾರಾಯಣವನ್ನು ಸಂಪುಟಿ ವಿಧಾನದಲ್ಲಿ ಮಾಡಿಸಬೇಕು. ವಿದ್ಯಾಂದೇಹಿ, ಧನಂ ದೇಹಿ ಇತ್ಯಾದಿ ಶ್ಲೋಕಗಳಿಂದ ಪೂಜೆ ಮಾಡಿಸಬೇಕು. ಇನ್ನು ಮನೆಯಲ್ಲೇ ಸರಸ್ವತಿ ಅಷ್ಟೋತ್ತರ ಪಠಣ ಮಾಡಬಹುದು. ಆಯುರ್ವೇದದ ಹಿನ್ನೆಲೆಯಲ್ಲಿ ಹೇಳಬೇಕೆಂದರೆ, ಬ್ರಾಹ್ಮಿ ಅಂತ ಸಿಗುತ್ತದೆ. ಅದನ್ನು ಬಳಸಬಹುದು. ಜತೆಗೆ ಖಾಲಿ ಹೊಟ್ಟೆಯಲ್ಲಿ ಎರಡು ದಳ ತುಳಸಿ ಸೇವಿಸಿದರೂ ಜ್ಞಾಪಕ ಶಕ್ತಿ ಚುರುಕಾಗುತ್ತದೆ.
ದೃಷ್ಟಿ ದೋಷ ಪರಿಹಾರಕ್ಕೆ ವ್ಯಾಘ್ರ ನೇತ್ರ ಮಾಲೆ ಧಾರಣೆ
ಮಕ್ಕಳಿಗೆ ದೃಷ್ಟಿ ದೋಷ ಆಗಿದ್ದರೆ, ಅದರ ಪರಿಹಾರ ಆಗಬೇಕು ಅಂದರೆ ವ್ಯಾಘ್ರ ನೇತ್ರ ರತ್ನ ಮಾಲೆಯನ್ನು ರುದ್ರ ಮಂತ್ರಗಳಿಂದ ಅಭಿಮಂತ್ರಿಸಿ, ಹಾಕಿಕೊಂಡರೆ ತುಂಬ ಪರಿಣಾಮಕಾರಿಯಾಗಿರುತ್ತದೆ. ಇದರಿಂದ ದೃಷ್ಟಿ ದೋಷ ಪರಿಹಾರವಾಗಿ ಓದಿನಲ್ಲಿ ಆಸಕ್ತಿ ಮೂಡುತ್ತದೆ. ಸಕಾರಾತ್ಮಕ ಬದಲಾವಣೆ ಆಗುತ್ತದೆ.