ದೇವರಗುಡ್ಡ ಮಾಲತೇಶ ಮೈಲಾರಲಿಂಗ ಸ್ವಾಮಿಯ ಕಾರ್ಣಿಕದ ಸಂಪೂರ್ಣ ವಿಶ್ಲೇಷಣೆ
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ಮೈಲಾರಲಿಂಗ ಸ್ವಾಮಿಯ ಭವಿಷ್ಯವಾಣಿಯ ಅರ್ಥವೇನು ಎನ್ನುವುದನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ಸಂತೋಷ್ ಗುರೂಜಿಯವರು ವಿಶ್ಲೇಷಣೆಯನ್ನು ಮಾಡಿದ್ದಾರೆ.
ವಿಡಿಯೋ ಮೂಲಕ ಕಾರ್ಣಿಕದ ವಿಶ್ಲೇಷಣೆಯನ್ನು ಮಾಡಿರುವ ಗುರೂಜಿಗಳು ಕ್ಷೇತ್ರದಲ್ಲಿ ನುಡಿಯಲಾಗುವ ಭವಿಷ್ಯವಾಣಿ ಎಂದೂ ಸುಳ್ಳಾಗುವುದಿಲ್ಲ ಎಂದು ಹೇಳಿದ್ದಾರೆ. ವಿಜಯದಶಮಿಯ ಮುನ್ನಾದಿನ ಕ್ಷೇತ್ರದಲ್ಲಿ ಗೊರವಯ್ಯ ಕಾರ್ಣಿಕ ನುಡಿಯುವ ಸಂಪ್ರದಾಯವಿದೆ. ಗುರೂಜಿಯ ವಿಶ್ಲೇಷಣೆಯ ಪೂರ್ಣ ಪಾಠ ಇಂತಿದೆ:
ದೇವರಗುಡ್ಡ ಗೊರವಯ್ಯ ನುಡಿದ ಈ ವರ್ಷದ (2021) ದಸರಾ ಕಾರ್ಣಿಕ
"ದಸರಾ ಸಂದರ್ಭದಲ್ಲಿ ಕಾರ್ಣಿಕ ನುಡಿಯುವ ನಾಗಪ್ಪ ಗೊರವಯ್ಯನವರು 21 ಅಡಿ ಬಿಲ್ಲನ್ನು ಏರಿ ಆಯುಧಪೂಜೆಯ ದಿನದಂದು ಭವಿಷ್ಯ ನುಡಿದಿರುತ್ತಾರೆ. 'ಎರೆ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್' ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದರು. ಪ್ರತೀ ವರ್ಷ ನಿಜಾಂಶವನ್ನು ತಿಳಿಸುವಂತಹ ಭವಿಷ್ಯವಾಣಿ ಆಗಿರುತ್ತದೆ" ಎಂದು ಸಂತೋಷ್ ಗುರೂಜಿ ಹೇಳಿದ್ದಾರೆ.
"ಕಳೆದ ವರ್ಷ ವ್ಯಾಧಿ ಬೂದಿ ಆತಲೇ, ಸೃಷ್ಟಿ ಸಿರಿಯಾದಿತಲೇ ಪರಾಕ್ ಎನ್ನುವ ಭವಿಷ್ಯವಾಣಿಯನ್ನು ನುಡಿಯಲಾಗಿತ್ತು. ಕಾಯಿಲೆ ಬೂದಿಯಾಗುತ್ತದೆ, ದೇಶದ ಜನತೆ ನೆಮ್ಮದಿಯಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವುದು ಇದರ ಅರ್ಥವಾಗಿತ್ತು".
ದಸರಾ ವಿಶೇಷ: ಹನ್ನೆರಡು ರಾಶಿಗಳ ಶುಭ, ಅಶುಭಗಳ ಜ್ಯೋತಿಷ್ಯ ಫಲಾಫಲ
ಭವಿಷ್ಯವಾಣಿಯನ್ನು ರೈತಾಪಿ ವರ್ಗದ ಪರವಾಗಿ ವಿಶ್ಲೇಷಿಸಬೇಕಾಗುತ್ತದೆ
"ಈ ವರ್ಷ ನುಡಿಯಲಾದ ಭವಿಷ್ಯವನ್ನು ವಿಶ್ಲೇಷಣೆ ಮಾಡುವುದಾದರೆ, ಎರೆ ಅಂದರೆ ಮಣ್ಣು, ದೊರೆ ಅಂದರೆ ಮಣ್ಣಿನ ರಾಜ ಎಂದು ಕರೆಯಬಹುದು. ರೈತರಿಗೆ ಆದ್ಯತೆಯನ್ನು ಕೊಡಬೇಕಾಗಿರುವುದರಿಂದ, ಭವಿಷ್ಯವಾಣಿಯನ್ನು ರೈತಾಪಿ ವರ್ಗದ ಪರವಾಗಿ ವಿಶ್ಲೇಷಿಸಬೇಕಾಗುತ್ತದೆ. ರೈತ ಏನು ಬೆಳೆ ಬೆಳೆಯುತ್ತಾನೋ, ಅದು ದೊರೆಯಾಗುತ್ತದೆ. ಅಂದರೆ, ಬೆಳೆ ವೃದ್ದಿಯಾಗಿ ಫಲವನ್ನು ಕೂಡುತ್ತದೆ"ಎಂದು ಸಂತೋಷ್ ಗುರೂಜಿ ಹೇಳಿದ್ದಾರೆ.
ಕೊರೊನಾ ಮೂರನೇ ಅಲೆ ಬರತಕ್ಕಂತಹ ವಾತಾವರಣ ಇಲ್ಲ
"ಇನ್ನು, ದೈವ ದೊರೆಯಾದಿತಲೇ ಎಂದರೆ ದೇವರ ಕೃಪೆ ಎಲ್ಲರ ಮೇಲೆ ಇರಲಿದೆ. ಕೊರೊನಾ ಮೂರನೇ ಅಲೆ ಬರತಕ್ಕಂತಹ ವಾತಾವರಣ ಇಲ್ಲ. ರಾಜಕೀಯವಾಗಿಯೂ ಕಾರ್ಣಿಕದ ವಿಶ್ಲೇಷಣೆಯನ್ನು ಮಾಡಬೇಕಾಗುತ್ತದೆ. ಎರೆ ಅಂದರೆ ಕಟ್ಟಕಡೆ/ತುದಿ ಎಂದು ಹೇಳಬಹುದು. ದೊಡ್ಡದೊಡ್ಡ ಪಕ್ಷಗಳಿಗೆ ಪಕ್ಷೇತರರ ಬೆಂಬಲ ಬೇಕಾಗುತ್ತದೆ. ರಾಜ್ಯದ ರಾಜಕೀಯದಲ್ಲಿ ಪಕ್ಷೇತರರು ಪ್ರಮುಖ ಪಾತ್ರ ವಹಿಸುತ್ತಾರೆ" ಎಂದು ದೈವವಾಣಿಯನ್ನು ವಿಶ್ಲೇಷಿಸಬಹುದು ಎಂದು ಗುರೂಜಿ ಹೇಳಿದ್ದಾರೆ.
ಜನತೆ ಮತ್ತು ದೈವ ಮೆಚ್ಚುವಂತಹ ಆಡಳಿತವನ್ನು ಸರಕಾರ ಕೊಡುತ್ತದೆ
"ದೈವ ದೊರೆಯಾಕಿತಲೇ ಎಂದರೆ, ದೈವದ ಆಶೀರ್ವಾದ ಇರಲಿದೆ ಎಂದು ಮತ್ತು ಜನತೆ ಮತ್ತು ದೈವ ಮೆಚ್ಚುವಂತಹ ಆಡಳಿತವನ್ನು ಸರಕಾರ ಕೊಡುತ್ತದೆ ಎಂದು ಈ ಬಾರಿಯ ಕಾರ್ಣಿಕವನ್ನು ವಿಶ್ಲೇಷಣೆಯನ್ನು ಮಾಡಬಹುದು" ಎಂದು ಕ್ಷೇತ್ರದ ಪ್ರಧಾನ ಅರ್ಚಕರಾದಂತಹ ಸಂತೋಷ್ ಗುರೂಜಿ ಹೇಳಿದ್ದಾರೆ. ಆ ಮೂಲಕ, ಕೊರೊನಾ ಮಹಾಮಾರಿಯ ಕಾಟ ದೂರವಾಗಿ ಜನತೆ ನೆಮ್ಮದಿಯ ಜೀವನವನ್ನು ನಡೆಸಬಹುದು ಎಂದು ಭಕ್ತರು ನಂಬಿದ್ದಾರೆ.
ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು
"ಈ ಸಂವತ್ಸರದಲ್ಲಿ ಪ್ರೇತ ಕಾಣೆಯಾಗುತ್ತಾನೆ, ಪಂಚಭೂತಗಳಿಂದ ತೊಂದರೆ ಆಗಲಿದೆ. ಆಗಸ್ಟ್ ಮೂರನೇ ವಾರದಿಂದ ರೋಗ- ರುಜಿನಗಳು ಹೆಚ್ಚಾಗಲಿದೆ. ಜನವರಿಯವರೆಗೂ ರೋಗ ಬಾಧೆ ಇರಲಿದೆ. ಜನ ಭೀತಿಯಿಂದ ಸಾಯುತ್ತಿದ್ದಾರೆ ಹೊರತು, ಕಾಯಿಲೆಯಿಂದ ಸಾಯುವುದಿಲ್ಲ,'' ಎಂದು ಜುಲೈ ತಿಂಗಳಲ್ಲಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯವನ್ನು ನುಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.