ಜ್ಯೋತಿಷ್ಯ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ, ಎಚ್ ಡಿಕೆ ಸಿಎಂ
Recommended Video
"ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಆಗುತ್ತದೆ. ಕಾಂಗ್ರೆಸ್-ಜೆಡಿಎಸ್ ಸೇರಿ ಸರಕಾರವನ್ನು ರಚಿಸುತ್ತವೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ಕಾಂಗ್ರೆಸ್ ನಿಂದ ದಿನೇಶ್ ಗುಂಡೂರಾವ್ ಉಪ ಮುಖ್ಯಮಂತ್ರಿ ಆಗುವ ಸಾಧ್ಯತೆಗಳಿವೆ" ಎಂದು ಅಚಲವಾದ ವಿಶ್ವಾಸದಿಂದ ಭವಿಷ್ಯ ನುಡಿದರು ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ.
ಗುಜರಾತ್ ಫಲಿತಾಂಶ, ಬಿಜೆಪಿಗೆ 'ಹೀನಾಯ ಗೆಲುವು': ಕುಮಾರಸ್ವಾಮಿ
ಗುಜರಾತ್ ಚುನಾವಣೆ ಫಲಿತಾಂಶದ ಬಗ್ಗೆ ಒಂದು ದಿನ ಮೊದಲೇ ಹೀಗೇ ಆಗುತ್ತದೆ ಎಂದು ನಿಖರವಾಗಿ ಭವಿಷ್ಯ ನುಡಿದಿದ್ದರು ಪ್ರಕಾಶ್ ಅಮ್ಮಣ್ಣಾಯ. "ನಾಳೆ ಗುಜರಾತಿನಲ್ಲಿ ಬೆಳಗ್ಗೆ 7.17ಕ್ಕೆ ಧನು ಲಗ್ನದಲ್ಲಿ ಸೂರ್ಯೋದಯ ಆಗಲಿದೆ. ಲಗ್ನಾಧಿಪತಿ ಲಾಭ ಸ್ಥಾನದಲ್ಲಿ ಪಂಚಮಾಧಿಪತಿ ಜತೆಗೆ ಇದ್ದಾನೆ".
"ಆದರೆ ಲಗ್ನದಲ್ಲಿ ರವಿ- ಶನಿ ಗ್ರಹ ಯುದ್ಧ ಸ್ಥಿತಿ. ಪರಿಣಾಮ- ಬಹಳ ಯುದ್ಧ ಸ್ಥಿತಿ ಸುಮಾರು ಹತ್ತು ಗಂಟೆವರೆಗಿದೆ. ಬಿಜೆಪಿಯ ಹಿನ್ನಡೆಗಳೇ ಎದ್ದು ಕಾಣಬಹುದು. ಹತ್ತು ಗಂಟೆ ನಂತರ ಎಲ್ಲಾ ಮಾಧ್ಯಮಗಳ ಲೆಕ್ಕಾಚಾರ ಬುಡ ಮೇಲಾಗಬಹುದು. ಪೊರಕೆಗಳಿಗೆ ಡಿಮಾಂಡ್ ಹೆಚ್ಚಾದೀತು. ಕೊನೆಗೆ ಫಲಶ್ರುತಿ...sweeping BJPಗೆ" ಫೇಸ್ ಬುಕ್ ಪೋಸ್ಟ್ ಹಾಕಿದ್ದರು.
ಫಲಿತಾಂಶ ಏನಾಯಿತು, ಹೇಗಾಯಿತು ಎಂಬುದು ಈಗ ಎಲ್ಲರಿಗೂ ತಿಳಿದಿದೆ. ಆದರೆ ಇಷ್ಟು ನಿಖರವಾಗಿ ಅವರು ಹೇಳಿದ ಭವಿಷ್ಯದ ವಿಚಾರ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಒನ್ಇಂಡಿಯಾ ಕನ್ನಡದ ಜತೆ ಉಡುಪಿಯ ಕಾಪುವಿನಲ್ಲಿರುವ ಪ್ರಕಾಶ್ ಅಮ್ಮಣ್ಣಾಯ ಮಾತನಾಡಿದ್ದಾರೆ. ಆ ಬಗೆಗಿನ ಇಂಟರೆಸ್ಟಿಂಗ್ ವಿವರಗಳು ಇಲ್ಲಿವೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ಗೆಲ್ಲುತ್ತಿದ್ದರು
ರವಿಯ ಪ್ರಭಾವ ಬಲವಾಗಿ ಇದ್ದುದರಿಂದ ಹೊತ್ತು ಏರಿದಂತೆಲ್ಲ ಬಲವಾಗುತ್ತಾ ಹೋಯಿತು. ರವಿ ಅಂದರೆ ಸರಕಾರವನ್ನು ಸೂಚಿಸುತ್ತದೆ. ಕೇಂದ್ರದಲ್ಲಿ ಯಾವ ಪಕ್ಷವು ಅಧಿಕಾರದಲ್ಲಿರುತ್ತದೋ ಆ ಪಕ್ಷಕ್ಕೆ ಗೆಲ್ಲುವ ಅವಕಾಶ ಇದ್ದದ್ದು. ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಆ ಪಕ್ಷ ಗೆದ್ದಿರುತ್ತಿತ್ತು.
ಕರ್ನಾಟಕದ ಚುನಾವಣೆ ಏನಾಗುತ್ತದೆ?
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದಿಲ್ಲ. ಜೆಡಿಎಸ್- ಕಾಂಗ್ರೆಸ್ ಸೇರಿ ಮೈತ್ರಿ ಸರಕಾರವನ್ನು ರಚಿಸುತ್ತವೆ. ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ಕಾಂಗ್ರೆಸ್ ನ ದಿನೇಶ್ ಗುಂಡೂರಾವ್ ಉಪ ಮುಖ್ಯಮಂತ್ರಿ ಆಗುತ್ತಾರೆ.
ಸಿದ್ದರಾಮಯ್ಯ ಅವರಿಗೆ ಅನಾರೋಗ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಫೆಬ್ರವರಿ ಹೊತ್ತಿಗೆ ಅನಾರೋಗ್ಯ ಕಾಡಲಿದೆ. ಇನ್ನು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜೆಡಿಎಸ್ ಗಿಂತ ಹೆಚ್ಚು ಸ್ಥಾನಗಳೇ ಬಂದರೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಇಂಥದ್ದೊಂದು ಮೈತ್ರಿ ಮಾಡಿಕೊಳ್ಳುತ್ತದೆ.
ಎಂಟೇ ತಿಂಗಳು ಸರಕಾರದ ಆಯುಷ್ಯ
ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಬಿಜೆಪಿಯೇ. ಆದರೆ ಆ ಮೈತ್ರಿ ಸರಕಾರಕ್ಕೆ ಎಂಟು ತಿಂಗಳು ಮಾತ್ರ ಆಯುಷ್ಯ. ಆ ನಂತರ ಮೈತ್ರಿ ಸರಕಾರ ಬಿದ್ದು ಹೋಗುತ್ತದೆ. ಲೋಕಸಭೆ ಚುನಾವಣೆ ಜತೆಗೆ ಕರ್ನಾಟಕದ ವಿಧಾನಸಭೆ ಚುನಾವಣೆ ನಡೆಯುತ್ತದೆ. ಆಗ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕುತ್ತದೆ.
ಆರೆಸ್ಸೆಸ್ ಸೂಚಿಸಿದ ವ್ಯಕ್ತಿ ಮುಖ್ಯಮಂತ್ರಿ
ಬಿಜೆಪಿ ಸ್ಪಷ್ಟ ಬಹುಮತ ಪಡೆದ ನಂತರ ಆರೆಸ್ಸೆಸ್ ಸೂಚಿಸಿದ ಬ್ರಹ್ಮಚಾರಿ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕೆ ಏರುತ್ತಾರೆ. ಅವರ ಜಾತಕ ಇನ್ನೂ ಕೈ ಸೇರಬೇಕಿದೆ. ಆಗ ಅವರ ಹೆಸರನ್ನೂ ಬಹಿರಂಗ ಪಡಿಸುತ್ತೇನೆ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದರು.