ಕುಂಭ ನವಾಂಶಕ್ಕೆ ಗುರು ಸಂಚಾರ; ಸೆ. 25ರೊಳಗೆ ರಾಜ್ಯ ಸರಕಾರಕ್ಕೆ ಸಂಚಕಾರ?!
ಈ ಬಾರಿ ಕರ್ನಾಟಕ ರಾಜಕಾರಣದಲ್ಲಿ ಗುರು ಗ್ರಹದ ಸಂಚಾರ ಸಂಚಲನ ಉಂಟು ಮಾಡುತ್ತದೆಯೇ? ಈ ಪ್ರಶ್ನೆಗೆ ಜ್ಯೋತಿಷಿಗಳು 'ಹೌದು' ಎನ್ನುತ್ತಿದ್ದಾರೆ. ಈ ಹಿಂದೆ ಚಂದ್ರಗ್ರಹಣ ಸಂಭವಿಸಿದ ನಲವತ್ತೆಂಟು ದಿನಗಳ ಒಳಗಾಗಿ ರಾಜ್ಯದಲ್ಲಿನ ಮೈತ್ರಿ ಸರಕಾರ ಬಿದ್ದು ಹೋಗುತ್ತದೆ ಎಂಬ ರೀತಿಯಲ್ಲಿ ಒನ್ ಇಂಡಿಯಾ ಕನ್ನಡದ ಜತೆ ಮಾತನಾಡುವಾಗ ಉಡುಪಿಯ ಕಾಪು ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದರು.
ಇದೀಗ ಗುರು ಗ್ರಹವು ಕುಂಭ ರಾಶಿಯನ್ನು ಪ್ರವೇಶ ಮಾಡುವವನಿದ್ದು ಸೆಪ್ಟೆಂಬರ್ ಇಪ್ಪತ್ತೈದನೇ ತಾರೀಕು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಭಾರೀ ಗಂಡಾಂತರ ಎದುರಾಗಲಿದೆ. ಆ ಸಮಯದೊಳಗೆ ಈಗಿನ ಸರಕಾರ ಪತನವಾದರೂ ಅಚ್ಚರಿಯಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ ಜ್ಯೋತಿಷಿಗಳು.
ಪ್ರಮಾಣ ವಚನದ ಮುಹೂರ್ತ ಹಾಗೂ ಯಡಿಯೂರಪ್ಪ ಜಾತಕ ವಿಶ್ಲೇಷಣೆ
ಈ ವಿಚಾರವಾಗಿ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಮಾತನಾಡಿಸಿದಾಗ, " ಗುರು ಗ್ರಹವು ಕುಂಭ ನವಾಂಶ ಪ್ರವೇಶ ಮಾಡುವವನಿದ್ದು, ಈಗಿನ ಬಿಜೆಪಿ ಸರಕಾರ ಪತನ ಆಗುವ ಸೂಚನೆಗಳು ಇರುವುದು ನಿಜ. ಆದರೆ ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವ ಮೂಲಕ ಉಳಿಸಿಕೊಳ್ಳಬಹುದು. ಆದರೆ ಅದು ಕೂಡ ಬಹಳ ಸಮಯ ಸಾಧ್ಯವಿಲ್ಲ. ದಯವಿಟ್ಟು ಇದಕ್ಕಿಂತ ಹೆಚ್ಚಿಗೆ ನನ್ನನ್ನು ಕೇಳಬೇಡಿ" ಎಂದರು.
ಕರ್ನಾಟಕ ರಾಜಕೀಯದ ಈಚೆಗಿನ ಬೆಳವಣಿಗೆ ಹಾಗೂ ಜ್ಯೋತಿಷ್ಯ ರೀತಿಯ ಭವಿಷ್ಯ ಜತೆಜತೆಗೆ ಸಾಗುತ್ತಿರುವಂತೆ ಕಾಣುತ್ತಿದೆ. ರಾಜ್ಯದ ಪ್ರಮುಖ ಪಕ್ಷಗಳಲ್ಲಿ ಇರುವ ನಾಯಕರು ಕೆಲವರಿಗೆ ಜ್ಯೋತಿಷ್ಯದ ಮೇಲೆ ಇರುವ ನಂಬಿಕೆ ಇದಕ್ಕೆ ಕಾರಣ. ಆದ್ದರಿಂದಲೇ ಸರಕಾರ ರಚನೆ, ವಿಶ್ವಾಸ ಮತ ಮಂಡನೆ, ಸಂಪುಟ ರಚನೆ, ವಿಸ್ತರಣೆ ಇತ್ಯಾದಿಯನ್ನು ಜ್ಯೋತಿಷ್ಯವನ್ನು ನಂಬಿಯೇ ಮಾಡುತ್ತಿದ್ದಾರೆ.
ಜ್ಯೋತಿಷ್ಯ: ಮೈತ್ರಿ ಸರಕಾರಕ್ಕೆ ನವೆಂಬರ್ ತನಕವೇ ಆಯುಷ್ಯ; ಆಮೇಲೆ ಮತ್ತೊಮ್ಮೆ ಚುನಾವಣೆ!
ಯಾವುದೇ ಸರಕಾರದ ಅಳಿವು- ಉಳಿವು ಪಂಚಾಂಗದಿಂದ ನಿರ್ಧಾರ ಆಗುತ್ತದೆ ಎಂಬ ನಂಬಿಕೆ ಒನ್ ಇಂಡಿಯಾ ಕನ್ನಡದ್ದಲ್ಲ. ಆದರೆ ಈ ಹಿಂದಿನ ಹಲವು ಉದಾಹರಣೆಗಳು ಜ್ಯೋತಿಷ್ಯಕ್ಕೂ ರಾಜಕಾರಣದಲ್ಲಿ ಒಂದು ಸ್ಥಾನವನ್ನು ಒದಗಿಸಿಕೊಟ್ಟಿದೆ. ಆದ್ದರಿಂದ ಜ್ಯೋತಿಷಿಗಳ ಅಭಿಪ್ರಾಯಕ್ಕೂ ಒಂದು ವೇದಿಕೆ ಒದಗಿಸಲಾಗುತ್ತಿದೆ, ಅಷ್ಟೆ.