ಪ್ರಮಾಣ ವಚನದ ಮುಹೂರ್ತ ಹಾಗೂ ಯಡಿಯೂರಪ್ಪ ಜಾತಕ ವಿಶ್ಲೇಷಣೆ
Recommended Video
"ಕರ್ನಾಟಕದಲ್ಲಿ ರಾಜ್ಯ ಸರಕಾರ ಬದಲಾಗಲಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವ ಕಾಲ ಸನ್ನಿಹಿತವಾಗಿದೆ" ಎಂದು ಲೋಕಸಭೆ ಚುನಾವಣೆ ಫಲಿತಾಂಶ ಬಂದ ವೇಳೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷ್ಯ ವಿದ್ವಾನ್ ಕಬ್ಯಾಡಿ ಜಯರಾಮಾಚಾರ್ಯ ಅವರು ಶುಕ್ರವಾರ ಸಂಜೆ ಪ್ರಮಾಣ ವಚನ ಸ್ವೀಕರಿಸುತ್ತಿರುವ ಮುಹೂರ್ತದ ಬಗ್ಗೆ ವಿಶ್ಲೇಷಣೆ ಮಾಡಿದ್ದು, ಗ್ರಹ ಸ್ಥಿತಿ ಬಗ್ಗೆ ವಿವರಣೆ ನೀಡಿ, ಪರಿಹಾರವನ್ನೂ ತಿಳಿಸಿದ್ದಾರೆ. ಅದು ಹೀಗಿದೆ.
"ಇವತ್ತು ಯಡ್ಯೂರಪ್ಪನವರಿಗೆ ಸಂಜೆ 6.30ಕ್ಕೆ ಪ್ರಮಾಣ ವಚನ ಮಾಡಲು ಹೇಳಿದ ಜ್ಯೋತಿಷಿ ಬಗ್ಗೆ ಕನಿಕರವಿದೆ. ಅವರ ಶಾಸ್ತ್ರ ಜ್ಞಾನದ ಬಗ್ಗೆ ಚಿಂತೆಯಿದೆ. ಇಂದು ಬೆಂಗಳೂರಿಗೆ ಅನ್ವಯಿಸಿ ಸಂಜೆ 6.08ರಿಂದ ಚರವಾದ ಮಕರ ಲಗ್ನ. ಭರಣಿ ನಿತ್ಯ ನಕ್ಷತ್ರ. ಯಾವ ಶುಭ ಕಾರ್ಯಕ್ಕೂ ವಿಹಿತವಲ್ಲದ ನಕ್ಷತ್ರ, ಗಂಡವೆಂಬ ಅಶುಭ ಯೋಗದ ದಿನ, ಗರಿಜವೆಂಬ ಮಧ್ಯಮ ಫಲದಾಯಕ ಕರಣದ ದಿನ.
ಜ್ಯೋತಿಷ್ಯ: ಮೋದಿ ಅವರಿಗಿರುವ ಮಹಾಸಿಂಹಾಸನಾಧೀಶ್ವರ ಯೋಗದ ಫಲ ಏನು?
"ಮಕರ ಚರ ಲಗ್ನ, ಲಗ್ನಾಧಿಪತಿ ಶನಿಯು ಕೇತುವಿನೊಂದಿಗೆ ದ್ವಾದಶದಲ್ಲಿರುವುದು, ಸಪ್ತಮದಲ್ಲಿ ಪಾಪಿ ಗ್ರಹರಾದ ರವಿ, ಕುಜ ಹಾಗೂ ಅವರೊಂದಿಗೆ ಸೇರಿ ಪಾಪಿಯಾದ ಬುಧ ಹಾಗೂ ಶುಕ್ರನಿರುವುದು. ಚಂದ್ರ ಚತುರ್ಥದಲ್ಲಿರುವುದು. ಅಷ್ಟಮದಲ್ಲಿ ಮಾಂದಿಯಿರುವುದು. ಇವೆಲ್ಲ ತೀರಾ ಅಶುಭದಾಯಕವಾಗಿದೆ.
"ನಿತ್ಯ ಅಭದ್ರತೆ, ಸ್ವಜನರಿಂದ ಕಿರಿಕಿರಿ, ಶತ್ರು ಪ್ರಾಬಲ್ಯ, ಮಾನಸಿಕ ಕಿರಿಕಿರಿ, ಅನಾರೋಗ್ಯದ ತೊಂದರೆ, ವರಿಷ್ಠರ ಬೆಂಬಲದ ಕೊರತೆ, ಆಂತರಿಕ ಬಾಹ್ಯ ಭಿನ್ನಾಭಿಪ್ರಾಯ, ಅಕಾಲಿಕ ಸ್ಥಾನ ಚ್ಯುತಿ ಮೊದಲಾದ ಸರ್ವ ರಗಳೆಗಳು ಬರಬಹುದಾಗಿದೆ. 9ರಲ್ಲಿ 7 ಗ್ರಹರು ಹಾಗೂ ಮಾಂದಿ ಅಶುಭ ಸ್ಥಾನದಲ್ಲಿರುವ ಚರಲಗ್ನದ ಹೊತ್ತನ್ನು ಏಕಾದಶದಲ್ಲಿ ಗುರು ಗ್ರಹನೊಬ್ಬ ಅನುಕೂಲನಾಗಿದ್ದಾನೆ.
ವ್ಯಕ್ತಿಚಿತ್ರ: "ಶಿಸ್ತಿನ ಸಿಪಾಯಿ" ಯಡಿಯೂರಪ್ಪ ರಾಜಕೀಯ ಬದುಕಿನ ಚಿತ್ರಣ
"ಇದೊಂದೇ ಕಾರಣದೊಂದಿಗೆ (ಷಷ್ಠದ ರಾಹು ರೋಗಾದಿ ತೊಂದರೆಗಳನ್ನು ಕೊಡಬಲ್ಲನಾದುದರಿಂದ ಅವನೂ ಬಹಳ ಶುಭನೇನೂ ಅಲ್ಲ.) ಪ್ರಮಾಣವಚನಕ್ಕೆ ಮುಹೂರ್ತವಾಗಿ ನೀಡಿರುವ ಪುಣ್ಯಾತ್ಮ ಯಡ್ಯೂರಪ್ಪನ ಹಿತಚಿಂತಕನಂತೂ ಅಲ್ಲ. ಇನ್ನು ಅದರ ಹಿಂದಿನ ಧನುಸ್ಸು ಲಗ್ನ ಮಕರಕ್ಕಿಂತಲೂ ಅಪಾಯಕಾರಿ.
"ಹಾಗಾಗಿ ಬಿಜೆಪಿ ಹಾಗೂ ನರೇಂದ್ರ ಮೋದಿ ಅಭಿಮಾನಿಗಳಾದ ನಾವೆಲ್ಲ ಯಡ್ಯೂರಪ್ಪನವರ ಸರಕಾರ ಸ್ಥಿರವಾಗಿ ಯಶಸ್ವಿಯಾಗಿರಲು ಈ ಮುಹೂರ್ತ ದೋಷದಿಂದ ಅವರನ್ನು ರಕ್ಷಿಸಿರಿ ದೇವರೇ ಎಂದು "ಕಲೌ ದುರ್ಗಾ ವಿನಾಯಕೌ" ಎಂಬಂತೆ ಕಲಿಯುಗದಲ್ಲಿ ಕ್ಷಿಪ್ರ ಅನುಗ್ರಹದಾಯಕರಾದ ಗಣಪತಿ, ದುರ್ಗೆಯರನ್ನು, ನಮ್ಮ ಇಷ್ಟ ದೇವರುಗಳನ್ನು ಹಾಗೂ ನವಗ್ರಹರನ್ನು ನಿತ್ಯ ಪ್ರಾರ್ಥಿಸೋಣ".
ಗುರು ಬಲ ಇದೆ, ಶನಿ ಕಾಟ ಮುಗಿದಿದೆ
ಮಾನ್ಯ ಶ್ರೀ ಯಡ್ಯೂರಪ್ಪನವರ ಜಾತಕ ವಿಮರ್ಶೆ ಮಾಡಿದಾಗ ಧನೂ ಲಗ್ನ, ಅನುರಾಧಾ ನಕ್ಷತ್ರ. ಈಗ ಹಾಗೂ ಮುಂದಿನ ವರ್ಷವೂ ಗುರು ಬಲವಿದೆ. ಏಳೂವರೆ ಶನಿಯ ಕಾಟದ ಕಾಲ ಮುಗಿದಿದೆ (ಸಾಡೇಸಾತಿ ಪೂರ್ಣವಾಗಿ 2020ರ ಜನವರಿ24ಕ್ಕೆ ಬಿಡುಗಡೆಯಾಗುತ್ತದೆ). ಚಂದ್ರ ದಶೆಯಲ್ಲಿ ಶುಕ್ರ ಭುಕ್ತಿ ಪ್ರಾರಂಭವಾಗುವ ಕಾಲ ಸನ್ನಿಹಿತವಾಗಿದ್ದು, ರಾಜಕೀಯ ವರ್ಚಸ್ಸು ವೃದ್ಧಿಯಾಗುವ ಕಾಲ ಸನ್ನಿಹಿತವಾಗಿದೆ.
ಅಧಿಕಾರಾವಧಿ ಗೌರವದೊಂದಿಗೆ ಪೂರೈಸಬಹುದಾದ ಯೋಗ
ಅವರ ಮೂಲ ಜಾತಕದಲ್ಲಿ ಜನನ ಲಗ್ನ ಹಾಗೂ ಸುಖಾಧಿಪತಿ ಗುರು ಸಪ್ತಮ ಸ್ಥಾನದಲ್ಲಿ ಉಚ್ಚಾಭಿಲಾಶಿ ಕ್ಷೇತ್ರದಲ್ಲಿದ್ದು, ಲಾಭಾಧಿಪ ಶುಕ್ರನು ಸುಖ ಸ್ಥಾನದಲ್ಲಿ ಉಚ್ಚನಾಗಿ, ಮಾಲವ್ಯ ಮಹಾಪುರುಷ ಯೋಗದಾಯಕ ಆಗಿರುವುದರಿಂದ ಹಾಗೂ ವಾಕ್ ಸ್ಥಾನದಲ್ಲಿ ಬುಧನೂ ಇರುವುದರಿಂದ ಜಾಗೃತರಾಗಿ ಎಲ್ಲರನ್ನು ಸಂಭಾಳಿಸಿಕೊಂಡು ವಿವೇಕಯುತ ಹೆಜ್ಜೆಯೊಂದಿಗೆ ನಾಯಕತ್ವ ನಿಭಾಯಿಸಿ, ಇನ್ನುಳಿದ ಅವಧಿ ಅತ್ಯಂತ ಗೌರವದೊಂದಿಗೆ ಪೂರೈಸಬಹುದಾದ ಯೋಗವಿದೆ.
BS Yeddyurappa Journey: ಟೊರಿನೋ ಫ್ಯಾಕ್ಟರಿಯ ಸಾಲದಿಂದ ಸಿಟ್ಟಿನ ದಿನಗಳ ತನಕ
ಮಾನಸಿಕ ಸಮತೋಲನ ಹಾಳು ಮಾಡದಂತೆ ಎಚ್ಚರ ಅಗತ್ಯ
ದ್ವಾದಶದ ನೀಚ ಚಂದ್ರ ಇರುವುದರಿಂದ ಮಾನಸಿಕ ಸಮತೋಲನ ಹಾಳು ಮಾಡದಂತೆ ಎಚ್ಚರ ಅಗತ್ಯ. ಉಚ್ಚಾಭಿಲಾಶಿಯಾದ ಲಗ್ನದ ಕುಜ, ಷಷ್ಟದ ಶನಿ, ತೃತೀಯದ ರವಿ- ಕೇತು ಇವರನ್ನು ಛಲವಾದಿಯಾಗಿಸಿದ್ದಾರೆ. ಮುಂಗೋಪಿಯಾಗದಿದ್ದರೆ ಈ ಎಲ್ಲ ಗ್ರಹರು ಇವರನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಬಲ್ಲರು. ಮಧ್ಯಂತರದ ಕೆಲ ಅಪಾಯಗಳೂ ಇವೆ.
ದಕ್ಷ- ಪ್ರಾಮಾಣಿಕ ಆಡಳಿತದೊಂದಿಗೆ ಯಶಸ್ವಿ ಆಗುವ ಯೋಗ ಇದೆ
ಒಟ್ಚಂದದಲ್ಲಿ ಎಚ್ಚರಿಕೆಯ ಹೆಜ್ಜೆ, ವಿವೇಕಯುತ ರಾಜಕೀಯ ತಂತ್ರಗಾರಿಕೆ, ದಕ್ಷ- ಪ್ರಾಮಾಣಿಕ ಆಡಳಿತದೊಂದಿಗೆ ಯಶಸ್ವಿಯಾಗುವ ಯೋಗವಿದೆ. ಯಡ್ಯೂರಪ್ಪನವರು ಯಶಸ್ಸು- ಗೌರವಗಳೊಂದಿಗೆ ಕೀರ್ತಿವಂತರಾಗಿ ಆದರ್ಶ ಮುಖ್ಯಮಂತ್ರಿ ಎಂಬ ಹೆಸರು ಗಳಿಸುವಂತಾಗಲೆಂದು ಶುಭ ಹಾರೈಸುತ್ತೇನೆ.