ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ...; ಬೀರೂರು ಮೈಲಾರಲಿಂಗಸ್ವಾಮಿ ನುಡಿದ ಕಾರ್ಣಿಕ!
ಚಿಕ್ಕಮಗಳೂರು, ಅಕ್ಟೋಬರ್ 16: ನಾಡಿನ ಸುಪ್ರಸಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರಿನ ಮೈಲಾರಲಿಂಗಸ್ವಾಮಿ ಕಾರ್ಣಿಕ ಭವಿಷ್ಯವನ್ನು ಗೊರವಯ್ಯ ದಶರಥ ಪೂಜಾರ್ ನುಡಿದಿದ್ದಾರೆ.
ಕಡೂರು ತಾಲೂಕಿನ ಬೀರೂರಿನ ಮೈಲಾರಲಿಂಗ ಸ್ವಾಮಿ ನುಡಿಯುವ ಕಾರ್ಣಿಕ ಭವಿಷ್ಯವು ರಾಜ್ಯ ರಾಜಕೀಯ, ಮಳೆ, ಆರೋಗ್ಯದ ಕುರಿತಾಗಿದೆ. ಈ ಬಾರಿಯ ಮೈಲಾರಲಿಂಗೇಶ್ವರಸ್ವಾಮಿಯ ಭವಿಷ್ಯವಾಣಿ ಹೀಗಿದೆ.
"ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ಸಿಂಹಾಸನಕ್ಕೆ ಗಿಳಿಗಳು ಕುಟುಕಿವು, ದಾನವರು ಮಾನವರಿಗೆ ಕಂಟಕವಾದರು, ರಾಮರಾಜ್ಯಕ್ಕೆ ಸರ್ವರು ಹೊಡೆ ಹೊಡೆದರು, ಸರ್ವರು ಎಚ್ಚರದಿಂದರಬೇಕು.''
ಬೀರೂರು ಮೈಲಾರಲಿಂಗೇಶ್ವಸ್ವಾಮಿಯ ಭವಿಷ್ಯವಾಣಿಯ ಮೇಲೆ ನಾಡಿನ ಜನರಿಗೆ ಅಪಾರವಾದ ನಂಬಿಕೆಯಾಗಿದೆ. ಶುಕ್ರವಾರ ರಾತ್ರಿ ಮೈಲಾರಲಿಂಗ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಿತು. ನಂತರ ಗೊರವಯ್ಯ ದಶರಥ ಪೂಜಾರ್ ಎಂಬುವವರು ಮೈಲಾರಲಿಂಗ ಸ್ವಾಮಿಯ ಕಾರ್ಣಿಕವನ್ನು ನುಡಿದರು.
ಇನ್ನು ವಿಜಯದಶಮಿಯ ಮುನ್ನಾ ದಿನ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡ (2021) ದಸರಾ ಕಾರ್ಣಿಕ ನುಡಿದಿರುವ ಗೊರವಯ್ಯ, 'ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್' ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಇದು ನಾಡು ಸುಭಿಕ್ಷವಾಗುವ, ರೈತರ ಬಾಳು ಹಸನಾಗುವ ಕಾರ್ಣಿಕ ಎಂದು ಅರ್ಥೈಸಲಾಗುತ್ತಿದೆ. ಕಾರ್ಣಿಕದ ಬಗ್ಗೆ ದೇವಾಲಯದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿಯವರು ವಿಶ್ಲೇಷಣೆಯನ್ನು ಮಾಡಿ, ಮಾಧ್ಯಮದವರಿಗೆ ವಿವರಿಸಿದ್ದಾರೆ.
"ಮುಂದಿನ ಆರು ತಿಂಗಳಲ್ಲಿ ಈ ಸರ್ಕಾರ ಬೀಳಲಿದೆ, ಗಡ್ಡಧಾರಿಯೊಬ್ಬರು ಮುಂದೆ ಸಿಎಂ ಆಗಲಿದ್ದಾರೆ,'' ಎಂದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಲಿಂಗೇಶ್ವರನ ಸನ್ನಿಧಾನದ ಧರ್ಮದರ್ಶಿ ವೆಂಕಟಪ್ಪ ಒಡೆಯರ್ ಹೇಳಿದ್ದರು. ಇದೆಲ್ಲಾ, ಸುಳ್ಳು ಕಾರ್ಣಿಕವನ್ನು ವರ್ಷಕ್ಕೊಮ್ಮೆ ಮಾತ್ರ ನುಡಿಯುವುದು ಎಂದು ಕಾರ್ಣಿಕ ನುಡಿಯುವ ಗೊರವಯ್ಯ ಅಕ್ರೋಶ ವ್ಯಕ್ತಪಡಿಸಿದ್ದರು.