ಹೊಟ್ಟೆಕಿಚ್ಚು ಪಡುವಂತೆ ಬದುಕುವ ರೋಹಿಣಿ ನಕ್ಷತ್ರದವರು
ದೇವರನ್ನು ನಂಬುವ ಆಸ್ತಿಕರಾಗಲಿ, ಜೀವವಿಲ್ಲದ ದೇವರೆಲ್ಲಿದ್ದಾನೆ ಎನ್ನುವ ನಾಸ್ತಿಕರಿರಲಿ, ಎಲ್ಲರೂ "ರೋಹಿಣಿ" ಎಂಬ ಶಬ್ದವನ್ನು ಕೇಳಿಯೆ ಇರುತ್ತಾರೆ. ಹೌದು, ಈ ಶಬ್ದದಲ್ಲೇನೋ ಒಂಥರಾ ವಿಶೇಷತೆ ಅಡಗಿದೆ ಎನ್ನಿಸುತ್ತದೆಯಲ್ಲವೇ. ಏಕೆಂದರೆ ಇದು ವಿಷ್ಣುವಿನ ಅವತಾರ ಶ್ರೀಕೃಷ್ಣನ ಜನ್ಮನಕ್ಷತ್ರವಾಗಿದೆ. ಹೀಗಾಗಿಯೇ ಎಲ್ಲರೂ ಬೇರೆ ನಕ್ಷತ್ರಗಳಿಗಿಂತ ರೋಹಿಣಿ ನಕ್ಷತ್ರದ ಕುರಿತು ಹೆಚ್ಚು ಕೇಳಿರುತ್ತಾರೆ.
ರೋಹಿಣಿ ನಕ್ಷತ್ರದ ಎಲ್ಲ ಪಾದಗಳಲ್ಲಿ ಜನಿಸಿದವರು ವೃಷಭ ರಾಶಿಯವರಾಗಿರುತ್ತಾರೆ. ಈ ನಕ್ಷತ್ರಕ್ಕೆ ಒ, ವಾ, ವೀ, ವೂ ಎಂದು ಕ್ರಮವಾಗಿ ಚರಣಗಳಿಗುಣವಾಗಿ ಜನ್ಮನಾಮ ಬರುತ್ತದೆ. ಈ ರಾಶಿ ಅಧಿಪತಿ ಶುಕ್ರನಾಗಿರುವುದರಿಂದ ಸಹಜವಾಗಿ ಇವರಲ್ಲಿ ಯಾವುದಾದರೊಂದು ಕಲೆ ಹುಟ್ಟಿದಾಗಿನಿಂದಲೇ ಬಂದಿರುತ್ತದೆ. ಅದನ್ನು ಜಾತಕದ ಮೂಲಕ ತಂದೆ-ತಾಯಿ ತಿಳಿದುಕೊಂಡು ಮಕ್ಕಳನ್ನು ಬೆಳೆಸಿ ನಾಡಿಗೆ ಉತ್ತಮ ಕಲಾವಿದರ ಕೊಡುಗೆ ನೀಡಬಹುದು. ಆದರೆ ಈಗೆಲ್ಲಾ ಅದನ್ನೆಲ್ಲಾ ಯಾರೂ ನೋಡುವುದಿಲ್ಲ. ಆದರೆ ಯಾವ ಸ್ಕೂಲ್ಗೆ ಸೇರಿಸಬೇಕು ಎಂಬುದನ್ನು ಮಾತ್ರ ಯೋಚನೆ ಮಾಡುತ್ತಿರುತ್ತಾರೆ.
ಕೆಲವೊಮ್ಮೆ ಈ ನಕ್ಷತ್ರದಲ್ಲಿ ಜನಿಸಿದವರು ಅನಾಚಾರದ ಕೆಲಸ ಮಾಡಲು ಹೋಗಿ ಸಿಕ್ಕಿಹಾಕಿಕೊಂಡು ನಡ ಕೂಡ ಮುರಿಸಿಕೊಂಡಿರುತ್ತಾರೆ. ಅಷ್ಟೊಂದು ಮಹತ್ವ ಈ ಶಕ್ತಿಯುತ ನಕ್ಷತ್ರಕ್ಕಿದೆ! ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಒಳ್ಳೆಯತನವನ್ನೇ ಮೈಗೂಡಿಸಿಕೊಂಡಿರುತ್ತಾರೆ. ಎಷ್ಟೊಂದು ಒಳ್ಳೆಯತನವೆಂದರೆ ಎಲ್ಲರೂ ಇವರ ಗುಣ, ಸ್ವಭಾವ ನೋಡಿ ಹೊಟ್ಟೆಕಿಚ್ಚು ಪಡುತ್ತಿರುತ್ತಾರೆ. ಆದರೆ ವಿಪರ್ಯಾಸವೆಂದರೆ ರೋಹಿಣಿ ನಕ್ಷತ್ರದವರಿಗೆ ಮತ್ತೊಬ್ಬರನ್ನು ಕಂಡರೆ ಹೊಟ್ಟೆಕಿಚ್ಚು ಪಡೋದು ಹುಟ್ಟುಗುಣವಾಗಿರುತ್ತದೆ!
ಎಲ್ಲರಿಗಿಂತ ಸಮಾಧಾನ, ಸಹಕಾರ, ಪ್ರೋತ್ಸಾಹಕರದಂತಹ ಒಳ್ಳೆಯ ಗುಣಗಳು ಇವರಲ್ಲಿ ತುಂಬಿ ತುಳುಕುತ್ತಿರುತ್ತವೆ. ಜಗತ್ತಿನ ಪ್ರಕೃತಿ ಸೌಂದರ್ಯ ಸವಿಯುವವರು ಇವರಂಥವರು ಮತ್ತೊಬ್ಬರಿಲ್ಲವೆನ್ನಬಹುದು. ಅಷ್ಟೊಂದು ಸೌಂದರ್ಯಾಧಾರಕರಿವರು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಾಲ್ಯದಿಂದಲೇ ಇವರು ಮುಂದಿರುತ್ತಾರೆ. ಇವರಲ್ಲಿರುವ ಕಲೆ ನೋಡಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಮನಃಪೂರ್ವಕವಾಗಿ ಸೌಂದರ್ಯ ಸವಿಯುವ ಗುಣವಿರುವ ಇವರಿಗೆ ಬರವಣಿಗೆ ಕಲೆಯೂ ಒಲಿದಿದ್ದರೆ ಮುಗೀತು. [ವೃಷಭ ರಾಶಿಗೆ ಒಳ್ಳೆಯ ಸಮಯ]
ಇವರು ಹೃದಯದಿಂದ ಬರುವಂತಹ ಶಬ್ದಗಳಿಂದ ಸುಂದರ ಕವಿತೆ ರಚಿಸುವಂತಹ ಸಾಮರ್ಥ್ಯ ಹೊಂದಿರುತ್ತಾರೆ. ಗಂಡಸರಾದರೆ ತಮ್ಮ ಪ್ರೀತಿಯ ಹುಡುಗಿಗೆ ಪ್ರೇಮ ಪತ್ರ ತುಂಬಾ ಅರ್ಥಪೂರ್ಣವಾಗಿ ಬರೆಯುತ್ತಾರೆ. ಆದರೆ ಒಂದು ಮಜವಾದ ವಿಷಯವೆಂದರೆ, ಇವರ ಹೃದಯಪೂರ್ವಕ ಪ್ರೇಮಪತ್ರ ಹುಡುಗಿಯರಿಗೆ ಅರ್ಥಮಾಡಿಕೊಳ್ಳಲು ಕಷ್ಟವಾಗಿರುತ್ತದೆ. ಏಕೆಂದರೆ ಸಾಮಾನ್ಯವಾಗಿ ಹುಡುಗಿಯರಿಗೆ ಸೌಂದರ್ಯಾರಾಧನೆ ಕಮ್ಮಿಯಿರುತ್ತದೆ. ತಮ್ಮ ಸೌಂದರ್ಯವನ್ನೇ ಎಲ್ಲರೂ ಆರಾಧನೆ ಮಾಡಬೇಕು ಎನ್ನುವ ದುರ್ಗುಣವಿರುತ್ತದೆ. ಇರಲಿ ಅವರವವರ ಗುಣ ಅವರನ್ನೇ ತಿನ್ನುತ್ತದೆ ಎಂಬ ಮಾತೇ ಚಾಲ್ತಿಯಲ್ಲಿದೆಯಲ್ಲ. [ಈ ಗುಣ ಗಂಡು ಹೆಣ್ಣು ಅರ್ಥ ಮಾಡಿಕೊಂಡರೆ]
ಸಾಮಾಜಿಕ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುವ ಇವರು, ಮುತ್ತಿನಂತಹ ಮಾತಿನಿಂದ ಎಲ್ಲರನ್ನೂ ಮರುಳು ಮಾಡುವಷ್ಟು ಶುದ್ಧ ಮನಸ್ಸಿನವರಾಗಿರುತ್ತಾರೆ. ಮತ್ತೊಬ್ಬರಿಗೆ ಸಹಾಯ, ಸಹಕಾರ ಮಾಡುವುದರಲ್ಲಿ ಇವರಿಗೆ ತುಂಬಾ ನೆಮ್ಮದಿ ಸಿಗುತ್ತಿರುತ್ತದೆ. ತಮ್ಮ ಮನೆಯಿಂದಲಾದರೂ ತೆಗೆದುಕೊಂಡು ಹೋಗಿ ತೊಂದರೆಯಲ್ಲಿರುವವರಿಗೆ ಸಹಾಯ ಮಾಡುವಷ್ಟು ಉದಾರ ಸ್ವಭಾವ ಇವರಿಗಿರುತ್ತದೆ.
ಈ ನಕ್ಷತ್ರದ ಮೊದಲನೇ ಪಾದದಲ್ಲಿ ಜನಿಸಿದವರು ಹೆಚ್ಚು ಚಿಂತೆ ಮಾಡುತ್ತಿರುತ್ತಾರೆ. ಎಷ್ಟೇ ಸಂತೋಷವಿರಲಿ ತಾವು ಮಾತ್ರ ಕೊರಗುತ್ತಿರುತ್ತಾರೆ. ಆದ್ದರಿಂದ ಅವರಿವರ ವಿಷಯಕ್ಕೆ ತಲೆ ಕೆಡಿಸಿಕೊಳ್ಳದೆ ತಮ್ಮ ಜೀವನ ಮೊದಲು ನೋಡಿಕೊಳ್ಳಬೇಕು. ಚಿಕ್ಕಪುಟ್ಟ ಕಳ್ಳತನ ಮಾಡುವ, ಸುಳ್ಳು, ವಂಚನೆ ಮಾಡುವಂತಹ ದಗಲಬಾಜಿ ಕಿರಾತಕರ ಸ್ನೇಹ ಬಿಡಬೇಕು. ಇಲ್ಲವಾದರೆ ಮುಂದೊಂದು ದಿನ ಇವರನ್ನು ದೊಡ್ಡ ಕಳ್ಳರಾಗುವುದನ್ನು ಯಾರೂ ತಪ್ಪಿಸಲಾಗುವುದಿಲ್ಲ. ಸಂಗತಿ ಸಹವಾಸದಿಂದ ಈ ರೀತಿಯಾಗುತ್ತದೆ. ಯಾರದಾದರೂ ಸಹವಾಸವನ್ನು ಕೇವಲ ಒಂದೇ ದಿನ ಮಾಡಿದರೆ ಸಾಕು ಅವರ ಸುಗುಣ ಮತ್ತು ದುರ್ಗುಣಗಳ ಪರಿಚಯವಾಗುತ್ತದೆ. ಅದರಲ್ಲಿ ಸುಗುಣವೆಷ್ಟು, ದುರ್ಗುಣವೆಷ್ಟು ಎಂದು ತಿಳಿದುಕೊಳ್ಳಬೇಕು ಇವರು.
2ನೇ ಪಾದದಲ್ಲಿ ಜನಿಸಿದವರು ತುಂಬಾ ಸುಂದರವಾಗಿ ಎಲ್ಲರಿಗೂ ಕಾಣುತ್ತಿರುತ್ತಾರೆ. ಇವರಿಗೆ ಯಾವಾಗಲೂ ಮೇಕಪ್ ಮಾಡಿಕೊಂಡೆ ಹೊರಗೆ ಹೋಗಬೇಕು ಎನ್ನುವ ಅಚಲ ನಂಬಿಕೆಯಿರುತ್ತದೆ. ವಿವಿಧ ಕಲೆಗಳಲ್ಲಿ ಪರಿಣತಿ ಸಾಧಿಸಲು ಪ್ರಯತ್ನಿಸುತ್ತಾರೆ. ಕಲೆಗೆ ಬೆಲೆ ಕೊಡುತ್ತಾರೆ. ಊಟದಲ್ಲಿ ಯಾವುದೂ ಕಮ್ಮಿಯಾಗಬಾರದು. ತಟ್ಟೆಯಲ್ಲಿ ಎಲ್ಲವೂ ಬಿಸಿಬಿಸಿಯಾಗಿಯೇ ಇರಬೇಕು ಎಂದು ಬಯಸುತ್ತಾರೆ. ಸಂತೋಷಕೂಟಗಳಲ್ಲಿ ಊಟದ ಮಜಾ ಸವಿಯಲು ತುದಿಗಾಲಲ್ಲೇ ನಿಂತಿರುತ್ತಾರೆ.
3ನೇ ಪಾದದಲ್ಲಿ ಜನಿಸಿದವರು ಸ್ವಲ್ಪ ಗೊಂದಲಮಯವಾಗಿಸಿಕೊಳ್ಳುವ ಸ್ವಭಾವ ಹೊಂದಿರುತ್ತಾರೆ. ಉದ್ವೇಗ, ಆತಂಕ ಕಮ್ಮಿ ಮಾಡಿಕೊಳ್ಳಬೇಕಿವರು. ಯಾವುದಕ್ಕೂ ಉತ್ತೇಜನಗೊಳ್ಳದೆ ಸುಮ್ಮನಿರಲು ಪ್ರಯತ್ನಿಸಬೇಕು. ಸಾಕಷ್ಟು ವಿದ್ವಾನ್ರೆನ್ನಿಸಿಕೊಳ್ಳುವ ಇವರು, ಹಲವಾರು ವಿದ್ಯೆಗಳಲ್ಲಿ ಪರಿಣತಿ ಸಾಧಿಸಿಕೊಂಡು ಎಲ್ಲರಲ್ಲಿ ವಿಶಿಷ್ಟ ರೀತಿಯ ಪ್ರಭಾವ ಹೊಂದಿರುತ್ತಾರೆ. ಲೆಕ್ಕಾಚಾರದಲ್ಲಿ ಮುಂದಿರುವ ಇವರು ಏನೇ ಮಾಡಲಿ ಕರೆಕ್ಟ್ ಆಗಿಯೇ ಕ್ಯಾಲಕ್ಯುಲೇಶನ್ ಮಾಡುತ್ತಿರುತ್ತಾರೆ. ಇವರ ಈ ಟ್ಯಾಲೆಂಟ್ ನೋಡಿ ಎಲ್ಲರೂ ಇವರನ್ನು ಹೊಗಳುತ್ತಿರುತ್ತಾರೆ.
4ನೇ ಪಾದದಲ್ಲಿ ಜನಿಸಿದವರು ಸ್ವಲ್ಪ ಅವಸರ ಪ್ರವೃತ್ತಿಯಿಂದ ಏನೋ ಮಾಡಲು ಹೋಗಿ ಏನೋ ಮಾಡಿ ಎಡವಟ್ಟು ಮಾಡಿಕೊಳ್ಳುತ್ತಿರುತ್ತಾರೆ. ಹೀಗಾಗಿ ಚಂಚಲ ಸ್ವಭಾವ ಬಿಡಬೇಕಿವರು. ಏಕೆಂದರೆ ಇವರಿಗೆ ಶ್ರೀಮಂತಿಕೆ ಕಮ್ಮಿಯಿರಲ್ಲ. ಕುಟುಂಬದಲ್ಲಿ ಎಲ್ಲರಿಗೂ ಇವರೆಂದರೆ ಅತೀವ ಪ್ರೀತಿಯಿರುತ್ತದೆ. ಭಾರಿ ಬುದ್ಧಿವಂತಿಕೆ ಹೊಂದಿರುವ ಇವರು ಮತ್ತೊಬ್ಬರ ಸಹಾಯಕ್ಕೆ ಯಾವಾಗಲೂ ಕೈ ಚಾಚುತ್ತಿರುತ್ತಾರೆ. ಕೆಲವರಿಗೆ ಇವರು ದೇವರೇ ಆಗಿರುತ್ತಾರೆ.
ಎಲ್ಲರೂ ಇವರ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಏಕೆಂದರೆ ಏನಾದರೊಂದು ಹೊಸತನ್ನು ಮಾಡುವುದು ಇವರಿಗೆ ಸುಲಭವಾಗಿರುತ್ತದೆ. ಇವರು ತಮ್ಮ ಕುಟುಂಬದ ಎಲ್ಲರನ್ನೂ ಪ್ರೀತಿಸುತ್ತಿರುತ್ತಾರೆ. ಎಲ್ಲೇ ಹೋಗಲಿ ಮನೆಯವರೊಬ್ಬರು ಜೊತೆಯಿರಬೇಕು ಇವರಿಗೆ. ಅಷ್ಟೊಂದು ಅಟ್ಯಾಚ್ಮೆಂಟ್ ಇವರಿಗೆ ಮನೆಮಂದಿಯೊಂದಿಗೆ ಇರುತ್ತದೆ. ಸ್ನೇಹಿತರ ಬಳಗವನ್ನು ಸಾಕಷ್ಟು ಹೊಂದಿರುತ್ತಾರೆ. ಯಾವುದೇ ಜವಾಬ್ದಾರಿ ವಹಿಸಲಿ ಏನೂ ತೊಂದರೆಯಾಗದಂತೆ ಕೆಲಸ ಮಾಡಿಕೊಡುತ್ತಾರೆ. ಎಲ್ಲರೊಂದಿದೆ ನಗು ನಗುತ್ತಾ ಮಾತನಾಡುವುದೇ ಇವರ ಪ್ಲಸ್ಪಾಯಿಂಟ್. ವಿದ್ಯೆ, ಬುದ್ಧಿಯನ್ನು ಸಮತೋಲನವಾಗಿಟ್ಟುಕೊಳ್ಳುವುದು ಇವರಿಗೆ ಚಿಟಿಕೆ ಹೊಡೆದಷ್ಟು ಸುಲಭ. ಕೆಲವೊಮ್ಮೆ ಸಹಾಯ ಬೇಡಿ ಬಂದವರನ್ನು ದುರುಪಯೋಗ ಮಾಡಿಕೊಳ್ಳುವುದನ್ನು ಕಮ್ಮಿ ಮಾಡಿಕೊಳ್ಳಬೇಕು. ತುಂಬಾ ಸೂಕ್ಷ್ಮ ಸ್ವಭಾವವನ್ನು ಬಿಡಬೇಕು.
ತರಕಾರಿ, ಹೂವು ಬೆಳೆಸುವುದು ಇವರಿಗೆ ತುಂಬಾ ಇಷ್ಟ. ಹೆಚ್ಚಾಗಿ ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಛಾಫು ಮೂಡಿಸಬೇಕೆನ್ನುತ್ತಿರುತ್ತಾರೆ. ಆದರೆ ಇಷ್ಟೆಲ್ಲಾ ಸುಗುಣವಿರುವ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಜಾತಕದ ಮೂಲಕ ಎಲ್ಲವನ್ನೂ ತಿಳಿದುಕೊಂಡು ಇನ್ನೂ ಏನಾದರೂ ಈ ಸಮಾಜಕ್ಕೆ ಒಳ್ಳೆಯದನ್ನು ಮಾಡಬಹುದು ಎಂಬುದು ತಿಳಿದುಕೊಂಡು ಈ ಭೂಮಿಯ ಋಣ ತೀರಿಸಲು ಪ್ರಯತ್ನಿಸಬೇಕು.
"ಮೃಗಶಿರಾ ನಕ್ಷತ್ರ" ವಿಶೇಷ ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ನಕ್ಷತ್ರ ಟಿಪ್ಸ್ : ಇತರರ ಏಳ್ಗೆಯನ್ನು ನೋಡಿ ಹೊಟ್ಟೆಕಿಚ್ಚು ಪಡೋ ಗುಣವನ್ನು ಈ ನಕ್ಷತ್ರದವರು ಬಿಡಬೇಕು.
ದೈವಕೃಪೆಗೆ : ದೂರದ ದೇವರಿಗೆ ಹೋಗುವಾಗ ಪರಿಚಯದ ತೊಂದರೆಯಲ್ಲಿರುವವರನ್ನು ಆರ್ಥಿಕ ಸಾಮರ್ಥ್ಯವಿದ್ದರೆ ಕರೆದುಕೊಂಡು ಹೋಗಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)