ವೃಷಭ ರಾಶಿಯ 2016 ವರ್ಷದ ಫಲಾಫಲ ಹೀಗಿದೆ
ದಣಿವಿಲ್ಲದ ದುಡಿಮೆ ಮಾಡುತ್ತ ಸುಂದರ ವ್ಯಕ್ತಿತ್ವ ಮತ್ತು ರೂಪ ಹೊಂದಿ ಐಷಾರಾಮಿ ಜೀವನ ಯಾರು ನಡೆಸುತ್ತಿರುತ್ತಾರೋ ಅವರನ್ನು ಸುಲಭವಾಗಿ ವೃಷಭ ರಾಶಿಯವರೆಂದು ಗುರುತಿಸಬಹುದು. ಅಷ್ಟೊಂದು ವಿಶೇಷತೆ ಈ ರಾಶಿಯವರದು. ತಮ್ಮ ಕಣ್ಣುಗಳಿಂದಲೇ ಜಗತ್ತನ್ನು ಮರಳು ಮಾಡುವಂತಹ ಹಣವಾದಿಗಳಾದ ವೃಷಭ ರಾಶಿಯು ಹೊಸ ವರ್ಷ ಯಾವ ರೀತಿ ಫಲಾಫಲ ನೀಡಲಿದೆ ಎಂಬುದನ್ನು ನೋಡೋಣ ಈಗ.
ಈ ವರ್ಷದ ಆಗಸ್ಟ್ ವರೆಗೆ ತೊಂದರೆಗಳ ಸರಮಾಲೆಗಳಲ್ಲಿ ಸುತ್ತಿಹಾಕಿಕೊಳ್ಳಲಿರುವ ಈ ರಾಶಿಯವರು ತಮ್ಮ ಸೌಮ್ಯ ಸ್ವಭಾವವನ್ನು ಸ್ವಲ್ಪ ಕಮ್ಮಿ ಮಾಡಿಕೊಂಡು ಸ್ವಾಭಿಮಾನ ಮತ್ತು ಆತ್ಮಾಭಿಮಾನ ಹೆಚ್ಚಿಸಿಕೊಳ್ಳಬೇಕು. ಏನೇ ವಸ್ತುಗಳನ್ನು ತೆಗದುಕೊಂಡರು ಬಿಳಿ ಮತ್ತು ನೀಲಿ ಬಣ್ಣಗಳಿಗೆ ಹೆಚ್ಚು ಮಹತ್ವ ಕೊಡಬೇಕು. ವಸ್ತ್ರಗಳಾದರೂ ಸರಿ ಉಪಯೋಗಿಸುವ ಸಲಕರಣೆಗಳಾದರೂ ಸರಿ ಓಡಾಡಲು ಬಳಸುವ ವಾಹನವಾದರೂ ಸರಿ. ಒಟ್ಟಿನಲ್ಲಿ ಮೇಲ್ಕಂಡ ಬಣ್ಣಗಳದ್ದಿರಬೇಕು.
ಮುಖ್ಯವಾದ ಕೆಲಸಗಳನ್ನು ಶುಕ್ರವಾರ ಮತ್ತು ಶನಿವಾರಗಳಂದೇ ಮಾಡಿಕೊಳ್ಳುವಂಥಹ ವ್ಯವಸ್ಥೆ ಮಾಡಿಕೊಳ್ಳಬೇಕು. ಕನಿಷ್ಠ ವಾರಕ್ಕೆರಡು ಬಾರಿಯಾದರೂ ಮಹಾಲಕ್ಷ್ಮೀ ದೇವಿಯ ಆರಾಧನೆ ಮಾಡುತ್ತಿರಬೇಕು ತಪ್ಪಿಸದೇ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳಬೇಕೆಂದರೆ ದೇವಿ ಆರಾಧನೆ ಮಿಸ್ ಮಾಡಂಗಿಲ್ಲ. ಇಲ್ಲವಾದಲ್ಲಿ ವಿಶ್ ಮಾಡಲು ಕೂಡ ದುಡ್ಡು ಇರಲ್ಲ ಈ ವರ್ಷ ನೆನಪಿರಲಿ. ಹೆಚ್ಚಾಗಿ 6 ಮತ್ತು 9 ಸಂಖ್ಯೆಯನ್ನು ಬಳಸಿದರೆ ಶುಭಫಲ. ತಿಂಗಳಿನ 6, 15, 24ನೇ ತಾರೀಖಿನಂದು ಮಹತ್ವದ ಕೆಲಸಗಳನ್ನಿಟ್ಟುಕೊಂಡರೂ ತಪ್ಪೇನಿಲ್ಲ. [ಮೇಷ ವರ್ಷ ಭವಿಷ್ಯ : ಫಲ ಮತ್ತು ಪರಿಹಾರ]
ತೊಂದರೆಯಲ್ಲಿದ್ದಾಗ ಮಕರ ಮತ್ತು ಕುಂಭ ರಾಶಿಯವರು ಸಹಾಯಹಸ್ತ ಚಾಚುವುದರಿಂದ ಆ ರಾಶಿಯವರೊಂದಿಗೆ ಬಾಂಧವ್ಯ ಕೆಡಿಸಿಕೊಳ್ಳದಂತಿರಬೇಕು. ಸಿಂಹ, ಧನುಸ್ಸು ಮತ್ತು ಮೀನ ರಾಶಿಯವರೊಂದಿಗೆ ಅಷ್ಟಕ್ಕಷ್ಟೇ ಇದ್ದರೆ ಸಾಕು. ಏಕೆಂದರೆ ಇವರು ಕೆಲವೊಮ್ಮೆ ತೊಂದರೆಗೀಡು ಮಾಡುವಂತಹ ಪರಿಸ್ಥಿತಿ ಬರುತ್ತದೆ. ಹೀಗಾಗಿ ಎಚ್ಚರಿಕೆ ಇರಲಿ ಈ ರಾಶಿಯವರೊಂದಿಗೆ.
ಅತಿಯಾದ ವಿನಯತೆ ಮತ್ತು ವಿಧೇಯತೆ ನಿಮ್ಮ ದೌರ್ಬಲ್ಯವಾಗಿರುವುದರಿಂದ ಇದನ್ನು ಎಲ್ಲರಿಗೂ ತೋರಿಸದಂತಿರುವುದು ಒಳ್ಳೆಯದು. ಇಲ್ಲವಾದಲ್ಲಿ ನಿಮ್ಮಲ್ಲಿದ್ದ ಸದ್ಗುಣವೇ ದುರ್ಗುಣರಿಗೆ ಅಸ್ತ್ರವಾಗುತ್ತದೆ ನಿಮ್ಮ ದುರುಪಯೋಗಪಡಿಸಿಕೊಳ್ಳಲು ಎಚ್ಚರದಿಂದಿರಿ.
ಈ ವರ್ಷದ ಆಗಸ್ಟ್ ವರೆಗೂ ತೊಂದರೆಗಳು ಬಂದರೂ, ನಂತರದ ದಿನಗಳು ಸುಖಕರವಾಗಿರುತ್ತವೆ. ಹೆಚ್ಚಿನ ಖರ್ಚು ಮಾಡದೇ ಹಣ ವಿಷಯದಲ್ಲಿ ಅತೀ ಕಟ್ಟುನಿಟ್ಟು ಪಾಲಿಸಿಕೊಂಡು ಹೋಗಬೇಕು. ಇಲ್ಲವಾದಲ್ಲಿ ಹಣಕ್ಕಾಗಿ ಸಾಲದ ಮೊರೆ ಹೋಗಿ ಮೋರೆ ಕೆಡಿಸಿಕೊಳ್ಳಬೇಕಾಗುತ್ತದೆ.
ಕಚೇರಿಯಲ್ಲಿನ ಕೆಲಸಗಳನ್ನು ಚೆನ್ನಾಗಿ ಮಾಡಿ ಮುಗಿಸಿ ಮುಂದಿನ ಕೆಲಸ ಮಾಡಿ ಮುಗಿಸುವೆ ಎನ್ನುವ ಹುರುಪು ಬೆಳೆಸಿಕೊಳ್ಳಬೇಕು. ಆಲಸ್ಯತನ ಮತ್ತು ಸೋಮಾರಿತನದಿಂದ ಕೆಲಸಕ್ಕೆ ಕುತ್ತು ಬರಬಹುದು ಜ್ಞಾಪಕದಲ್ಲಿರಲಿ. ಬಂಧು -ಬಾಂಧವರೊಂದಿಗೆ ಅವಶ್ಯವಿದ್ದಲ್ಲಿ ಮಾತ್ರ ಮಾತನಾಡಿ, ಸುಖಾಸುಮ್ಮನೇ ತಮ್ಮೆಲ್ಲ ಸಮಸ್ಯೆಗಳನ್ನು ಕೇಳುತ್ತಾರೆಂದು ಹೇಳಿಕೊಂಡು ಮರ್ಯಾದೆಗೇಡಾಗುವ ಪ್ರಸಂಗ ಬರಬಹುದು. ಯಾರ ಮೇಲೂ ಸೇಡು ಇಟ್ಟುಕೊಳ್ಳಬೇಡಿ. ಸೇಡಿಟ್ಟಿದ್ದರೆ ಅದನ್ನು ಈಗಲೇ ಬಿಟ್ಟು ಬಿಡಿ. ಆ ಸೇಡಿನ ಸ್ವಭಾವದಿಂದಲೇ ಮುಂದೆ ದೊಡ್ಡ ಸಮಸ್ಯೆ ಹುಟ್ಟಿಕೊಳ್ಳಬಹುದು.
ಗುರುಬಲ ಆಗಸ್ಟ್ ನಂತರ ಬರುವುದರಿಂದ ಅಲ್ಲಿಯವರೆಗೂ ಶುಭಕಾರ್ಯಗಳಿಗೆ ಕಾಯುತ್ತಿರುವವರು ಸಮಾಧಾನದಿಂದಿರಿ. ರಾಹು-ಕೇತುಗಳ ಫಲವೂ ಅಷ್ಟೇನೂ ಸುಖಕರವಾಗಿಲ್ಲ. ಹೀಗಾಗಿ ಆಗಸ್ಟ್ ವರೆಗೆ ಗಪ್ ಚುಪ್ ಆಗಿ ಇರುವುದು ಮುಖ್ಯ ಈ ರಾಶಿಯವರಿಗೆ.
ಮುಂದಿನ ಲೇಖನದಲ್ಲಿ : ವೃಷಭ ರಾಶಿಗೆ ಪರಿಹಾರ, ಮಿಥುನದವರ ವರ್ಷಫಲ.