ವೃಷಭದವರಿಗೆ ಪರಿಹಾರ, ಮಿಥುನದವರಿಗೆ ವರ್ಷಫಲ
ವೃಷಭ ರಾಶಿಯವರು ಈ ವರ್ಷ ಅನಿವಾರ್ಯವಾಗಿ ಸೂಕ್ತ ಪರಿಹಾರೋಪಾಯಗಳನ್ನು ಮಾಡಿಕೊಂಡು ಜೀವನ ಪಾವನ ಮಾಡಿಕೊಂಡು ಪುಣ್ಯವಂತರೆನ್ನಿಸಿಕೊಳ್ಳುವ ಯೋಗ ಹೊಂದಬೇಕು. ಮೊದಲಿಗೆ ಮಾಂಸ, ಮದಿರೆಯ ದಾಸರಾಗಿದ್ದವರು ಅವುಗಳಿಲ್ಲದೇ ಬದುಕಬಲ್ಲೇ ಎಂದುಕೊಂಡು ಹೊಸ ಜೀವನ ಆರಂಭಿಸಬೇಕು.
"ಓಂ ಗೋಪಾಲಾಯ ಉತ್ತರ ಧ್ವಜಾಯ ನಮಃ" ಎಂಬ ಮಂತ್ರವನ್ನು ತಪ್ಪಿಸದೇ ಪಠಿಸುವುದನ್ನು ರೂಢಿಸಿಕೊಳ್ಳಬೇಕು. ಇನ್ನು ಹಣದ ವಿಷಯಕ್ಕೆ ಸಂಬಂಧಪಟ್ಟಂತೆ ಲಾಭ ಪಡೆದುಕೊಳ್ಳಬೇಕೆಂದರೆ "ಓಂ ಭೃಗುಸುತಾಯ ವಿದ್ಮಹೇ | ಶಿಕ್ಷ್ಯ ವತ್ಸಲಾಯ ಧೀಮಹೀ | ತನ್ನೋ ಶುಕ್ರ ಪ್ರಚೋದಯಾತ್ |" ಈ ಮಂತ್ರವನ್ನು ಬರೆದಿಟ್ಟುಕೊಂಡು ಸಮಯ ಸಿಕ್ಕಾಗ ಪಠಿಸುತ್ತಿದ್ದರೆ ಶುಭಫಲ ಬರುತ್ತದೆ. [ವೃಷಭ ರಾಶಿಯ 2016 ವರ್ಷದ ಫಲಾಫಲ ಹೀಗಿದೆ]
ಇದೇ ರೀತಿ ಅನ್ನದಾಸೋಹದ ಸ್ಥಳಗಳಲ್ಲಿ ಹಿತ್ತಾಳೆಯ ಕೆಲ ಅಡುಗೆ ಸಾಮಗ್ರಿಗಳನ್ನು ಅನುಕೂಲ ಮಾಡಿಕೊಂಡು ದಾನ ನೀಡಿ. ಅನಾಥಾಶ್ರಮದ ಮಕ್ಕಳಿಗೆ ಸಾಧ್ಯವಾದರೆ ಪಠ್ಯದ ಸಲಕರಣೆಗಳನ್ನು ಕೊಡಿಸಿ. ಮನೆಯ ಹೆಂಗಸರನ್ನು ಒಂಚೂರು ನೋವಿಲ್ಲದಂತೆ ನೋಡಿಕೊಳ್ಳುವುದು ಆದ್ಯ ಕರ್ತವ್ಯ ಎಂದುಕೊಳ್ಳಿ. ಹಸಿರಾಗಲಿ, ಕಪ್ಪಾಗಲಿ ಒಟ್ಟಿನಲ್ಲಿ ಈ ಬಣ್ಣದ ಬಟ್ಟೆಗಳನ್ನು ಆದಷ್ಟು ಬಳಕೆ ಕಮ್ಮಿ ಮಾಡಿ. ಹೊಸದಾಗಿ ಬಟ್ಟೆ ಕೊಳ್ಳಬೇಕೆಂದರೂ ಈ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಬೇಡಿ. ಸಾಧ್ಯವಾದರೆ ಕೆಂಪನೆಯ ಹ್ಯಾಂಡ್ ಕರ್ಚೀಫ್ ಇಟ್ಟುಕೊಳ್ಳಿ ಬಳಿಯಲ್ಲಿ ಯಾವಾಗಲೂ.
ಸಾಧ್ಯವಾದಾಗೊಮ್ಮೆ ದತ್ತಾತ್ರೇಯ, ಗುರುರಾಘವೇಂದ್ರರು ಮತ್ತು ಸಾಯಿಬಾಬಾರ ದೇಗುಲಕ್ಕೆ ದರ್ಶನಕ್ಕೆಂದು ಭೇಟಿ ಕೊಡಿ. ಮನೆಯಲ್ಲಿ ಯಾವತ್ತೂ ನೆಲದ ಮೇಲೆ ಕುಳಿತೇ ಊಟ ಮಾಡುವುದನ್ನು ರೂಢಿಸಿಕೊಳ್ಳಿ. ಕುರುಡು-ಕುಂಟರಿಗೆ ಅನುಕೂಲವಿದ್ದಾಗ ಊಟಕ್ಕೆ ವ್ಯವಸ್ಥೆ ಮಾಡಿ. ಓಣಿಯಲ್ಲಿ ಕಸ ಗುಡಿಸುವ ಮತ್ತು ಪಾಯಖಾನೆ ತೊಳೆಯುವ ಕಾರ್ಮಿಕರಿಗೆ ಊಟಕ್ಕೆ ಸಿಹಿ ಮಾಡಿ ಕೊಡಿ. ಅವರು ತಿನ್ನಲು ಎಲ್ಲಿಯಾದರೂ. ಒಟ್ಟಿನಲ್ಲಿ ಮೇಲ್ಕಂಡ ಸಾಮಾನ್ಯ ಪರಿಹಾರೋಪಾಯಗಳನ್ನು ಮಾಡಿಕೊಳ್ಳಿ ಶುಭಫಲ ಬೇಕಿದ್ದರೆ.
ಮಿಥುನ ರಾಶಿಗೆ ವರ್ಷಫಲ : ಹೊಸ ವರ್ಷ ಮಿಥುನ ರಾಶಿಗೆ ಸಾಕಷ್ಟು ಶುಭಫಲವನ್ನು ನೀಡಲಿದೆ. ಒಂಥರಾ ಯೋಗಾಯೋಗ ಇವರಿಗೆನ್ನಬಹುದು. ಇಷ್ಟು ವರ್ಷ ಆಗದ್ದು ಒಮ್ಮೆಲೆ ಹೇಗೆ ಆದೀತು ಎನ್ನಬೇಡಿ. ಈ ರಾಶಿಯವರೆಲ್ಲರೂ ಹೀಗೇನೆ ಆಗುತ್ತದೆ ಎಂದು ಅಂದುಕೊಳ್ಳಬೇಕಿಲ್ಲ. ಸ್ವಂತ ಜಾತಕ ಪರಿಶೀಲಿಸಿಕೊಂಡಾಗ ಮಾತ್ರ ನಿಜ ವಿಷಯ ತಿಳಿಯಬಹುದು. ಏಕೆಂದರೆ ಒಬಾಬಾ ಮತ್ತು ಓಸಾಮಾ ಇಬ್ಬರದು ಒಂದೇ ರಾಶಿ. ಆದರೆ ಒಬ್ಬ ದೇಶರಕ್ಷಕನಾಗಿದ್ದರೆ ಇನ್ನೊಬ್ಬಾತ ಭಯೋತ್ಪಾದಕನಾಗಿದ್ದ. ಇದೇ ರಾಶಿಗಳ ಜನ ವಿವಿಧ ರೀತಿಯಲ್ಲಿ ಯಾಕೆ ಇರುತ್ತಾರೆ ಎಂಬುದಕ್ಕೆ ಸಾಕ್ಷಿ.
ಇನ್ನು ಮಿಥುನ ರಾಶಿಯವರು ನಗುಮುಖದಲ್ಲಿಯೇ ಯಾವಾಗಲೂ ಇರುವುದರಿಂದ ಇವರಿಗೇನೂ ನೋವಿಲ್ಲ ಎಂದುಕೊಳ್ಳುತ್ತಾರೆ ಹಲವರು. ಆದರೆ, ಮಾತಿನಲ್ಲಿ ಇರುವ ತೀಕ್ಷ್ಣತೆ ಇತರರಿಗೆ ಮೆಚ್ಚುವಂತಿರುತ್ತದೆ. ಸ್ವಲ್ಪ ಸಂಶಯ ಮತ್ತು ಅನುಮಾನ ಗುಣ ಇವರಲ್ಲಿ ಹುಟ್ಟಿನಿಂದಲೇ ಬಳುವಳಿಯಾಗಿ ಬಂದಿರುತ್ತದೆ. ಇವರಲ್ಲಿ ಬಹಳಷ್ಟು ಜನರು ವಿಶ್ವಾಸವಿಡಲು ಭಯಪಡುತ್ತಿರುತ್ತಾರೆ. ಯಾಕೆಂದರೆ ನಾವು ಮಾಡಿದ್ದೇ ಗ್ರೇಟ್ ಎನ್ನುವ ಇವರ ಸ್ವಭಾವ ಕೆಲವೊಮ್ಮೆ ಪೇಚಿಗೀಡು ಮಾಡುತ್ತದೆ.
ಒಟ್ಟಿನಲ್ಲಿ ಹೊಸ ವರ್ಷ ಮಿಥುನ ರಾಶಿಯವರಿಗೆ ಶುಭಫಲ ನೀಡಲಿದೆ.
ಮುಂದಿನ ಲೇಖನದಲ್ಲಿ : ಮಿಥುನ ರಾಶಿಯವರಿಗೆ ಪರಿಹಾರೋಪಾಯಗಳು ಮತ್ತು ಕರ್ಕ ರಾಶಿಯವರ ವರ್ಷಫಲ.