ಡಿಕೆಶಿ- ರೇವಣ್ಣ ಜಗಳ ಹತ್ತಲ್ಲ, ಹರಿಯಲ್ಲ ಏಕೆ? ಜ್ಯೋತಿಷ್ಯ ವಿಶ್ಲೇಷಣೆ
Recommended Video
ಇಂದಿನ ಜ್ಯೋತಿಷ್ಯ ಲೇಖನದಲ್ಲಿ ಬಹಳ ಆಸಕ್ತಿಕರವಾದ ವಿಷಯವೊಂದನ್ನು ಕಾರಣಗಳ ಸಹಿತ ನಿಮ್ಮ ಮುಂದಿಡಲಾಗುತ್ತಿದೆ. ಅಧ್ಯಯನಾಸಕ್ತರಿಗಂತೂ ಇದರಿಂದ ಮತ್ತೂ ಸಹಾಯ ಆಗುತ್ತದೆ. ಏನು ಆ ವಿಷಯ? ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಡಿ.ಕೆ.ಶಿವಕುಮಾರ್ ಏನಾಗುತ್ತಾರೆ? ಸಚಿವರಾಗುತ್ತಾರಾ? ಕೆಪಿಸಿಸಿ ಅಧ್ಯಕ್ಷರಾಗುತ್ತಾರಾ?
ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಶಿವಕುಮಾರ್ ಮೇಲೆ ಇರುವ ಸಿಟ್ಟಿಗೆ ಏನೂ ಮಾಡಲು ಬಿಡುವುದಿಲ್ಲ ನೋಡಿ ಎಂದು ಮಾತನಾಡುವವರು ಇದ್ದಾರೆ. ಇನ್ನು ಎಚ್.ಡಿ.ರೇವಣ್ಣ ಅವರ ಹೆಸರು ಭಾರೀ ಜೋರಾಗಿಯೇ ಹರಿದಾಡುತ್ತಿದೆ. ಇಂಧನ ಹಾಗೂ ಲೋಕೋಪಯೋಗ ಖಾತೆ ಎರಡೂ ನನಗೆ ಬೇಕು. ಕೊಟ್ಟರೆ ಎರಡೂ ಕೊಡಿ, ಇಲ್ಲದಿದ್ದರೆ ಎರಡೂ ಬೇಡ ಎನ್ನುತ್ತಿದ್ದಾರಂತೆ ರೇವಣ್ಣ ಎಂಬ ಸುದ್ದಿ ಬೇರೆ.
ಜಾತಕ ವಿಮರ್ಶೆ: ಎಚ್.ಡಿ.ರೇವಣ್ಣ ರಾಜಕೀಯ ಔನ್ನತ್ಯಕ್ಕೆ ಕಾಲ ಸನ್ನಿಹಿತ
ಡಿ.ಕೆ.ಶಿವಕುಮಾರ್ ಹಾಗೂ ರೇವಣ್ಣ ಮಧ್ಯ ಮಾತಿನ ಪೈಪೋಟಿ ಹಾಗೂ ಈಗ ಕುರ್ಚಿ ಪೈಪೋಟಿ ಇವೆಲ್ಲ ಈ ಪರಿಯ ಬಿರುಸು ಪಡೆಯುವುದು ಏಕೆ ಎಂಬುದರ ಹಿಂದೆ ಜ್ಯೋತಿಷ್ಯ ಕಾರಣಗಳಿವೆ. ಶಿವಕುಮಾರ್ ಅವರದು ಕೃತ್ತಿಕಾ ನಕ್ಷತ್ರ ವೃಷಭ ರಾಶಿ. ಇನ್ನು ರೇವಣ್ಣ ಅವರದು ಸ್ವಾತಿ ನಕ್ಷತ್ರ ತುಲಾ ರಾಶಿ. ಇಬ್ಬರ ರಾಶ್ಯಾಧಿಪತಿಯೂ ಶುಕ್ರ.
ಜ್ಯೋತಿಷ್ಯದಲ್ಲಿ ಷಷ್ಟಾಷ್ಟಕ ಎಂದು ಕರೆಯಲಾಗುತ್ತದೆ
ಇನ್ನು ಶಿವಕುಮಾರ್ ಜನ್ಮ ರಾಶಿಯಿಂದ ರೇವಣ್ಣ ಅವರ ಜನ್ಮ ರಾಶಿ ಆರನೇ ಮನೆ (ಷಷ್ಠ) ಹಾಗೂ ರೇವಣ್ಣ ಅವರ ಜನ್ಮ ರಾಶಿಯಿಂದ ಶಿವಕುಮಾರ್ ರಾಶಿ ಎಂಟನೇ ಮನೆ (ಅಷ್ಟಕ) ಆಗುತ್ತದೆ. ಇದನ್ನು ಜ್ಯೋತಿಷ್ಯದಲ್ಲಿ ಷಷ್ಟಾಷ್ಟಕ ಎಂದು ಕರೆಯಲಾಗುತ್ತದೆ. ವಿವಾಹದ ವಿಚಾರದಲ್ಲಿ ಇದಕ್ಕೆ ವಿಶೇಷ ಪ್ರಾಶಸ್ತ್ಯ. ವಧು- ವರರ ಮಧ್ಯೆ ಅದೆಷ್ಟೇ ಗುಣ- ಕೂಟ ಚೆನ್ನಾಗಿ ಕೂಡಿ ಬಂದರೂ ಈ ರೀತಿ ಷಷ್ಟಾಷ್ಟಕ ಆಗಿಬಿಟ್ಟರೆ ಮದುವೆ ನಿಷಿದ್ಧ. ಏಕೆಂದರೆ ಇಬ್ಬರ ಮಧ್ಯೆ ಶಾಶ್ವತವಾಗಿ ಹೊಂದಾಣಿಕೆ ಸಾಧ್ಯವಾಗುವುದೇ ಇಲ್ಲ. ಇಲ್ಲೂ ಅಷ್ಟೇ, ಎರಡು ಪಕ್ಷಗಳಲ್ಲಿರುವ ಇವರ ಮಧ್ಯೆ ಶಾಶ್ವತ ಮೈತ್ರಿ ಸಾಧ್ಯವೇ ಇಲ್ಲ. ಹೊಂದಾಣಿಕೆ ಅಸಾಧ್ಯದ ಮಾತು.
ಶನಿ ಶಾಂತಿ ಮಾಡಿಸಿಕೊಳ್ಳುವುದು ಅನಿವಾರ್ಯ
ಇನ್ನು ಡಿ.ಕೆ.ಶಿವಕುಮಾರ್ ಅವರು ಗೋಚಾರದಲ್ಲಿ ಅಷ್ಟಮ ಶನಿಯ ಪ್ರಭಾವದಲ್ಲಿ ಇದ್ದಾರೆ. ಇವರು ಅದ್ಯಾವ ದೇವಸ್ಥಾನ, ಗುಡಿ- ಗುಂಡಾರಗಳನ್ನು ಸುತ್ತಾಡಿದರೂ ಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ. ಈ ವರ್ಷದ ಅಕ್ಟೋಬರ್ ತನಕ ವಿಪರೀತ ಒಳ್ಳೆಯದನ್ನು ನಿರೀಕ್ಷೆ ಮಾಡುವುದು ಸಹ ಅತಿಯಾಗುತ್ತದೆ. ಈಗ ಆತುರ ಮಾಡದೆ ಸುಮ್ಮನಿದ್ದು, ಶನಿ ಪ್ರೀತ್ಯರ್ಥವಾಗಿ ಶಾಂತಿ ಮಾಡಿಕೊಳ್ಳಬೇಕು. ಅಕ್ಟೋಬರ್ ನಲ್ಲಿ ಗುರು ಏಳನೇ ಮನೆಗೆ ಬಂದಾಗ ಸ್ವಲ್ಪ ಮಟ್ಟಗಿನ ಅನುಕೂಲ ನಿರೀಕ್ಷೆ ಮಾಡಬಹುದು. ಅದು ಸ್ವಲ್ಪ ಪ್ರಮಾಣ ಮಾತ್ರ. ಇನ್ನು ಅವರಿಗೆ ಈಗ ಶನಿ ಮಹರ್ದಶೆ ನಡೆಯುತ್ತದೆ. ಜನ್ಮ ಜಾತಕದಲ್ಲಿ ಲಗ್ನದಿಂದ ಹತ್ತನೇ ಮನೆ (ಮಕರ)ಯಲ್ಲಿ ಶನಿ ಇದೆ. ಇನ್ನು ರಾಶಿಯಿಂದ ಒಂಬತ್ತನೇ ಮನೆಯಲ್ಲಿದೆ. ಈ ಅನುಕೂಲಕರ ಸ್ಥಿತಿಯ ಕಾರಣಕ್ಕೆ ಎಂಥ ಸವಾಲಿನ ಸನ್ನಿವೇಶದಲ್ಲೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಆದರೆ ಎಂಟನೇ ಮನೆಯ ಶನಿ ಪರೀಕ್ಷೆಗಳನ್ನು ಮಾಡುತ್ತಿದ್ದಾನೆ. ಜತೆಗೆ ಶತ್ರುಗಳ ಮುಂದೆ ಅವಮಾನ ಎದುರಿಸಬೇಕಾಗುತ್ತದೆ.
ಅಕ್ಟೋಬರ್ ನಂತರ ತಾತ್ಕಾಲಿಕವಾಗಿ ಬಿಕ್ಕಟ್ಟು ಶಮನ
ನನಗೆ ಯಾವ ಖಾತೆಯೂ ಬೇಡ, ಮುಜರಾಯಿ ಖಾತೆ ಕೊಟ್ಟುಬಿಡಿ. ದೇವಸ್ಥಾನಗಳನ್ನು ಸುತ್ತುಕೊಂಡು ಇದ್ದುಬಿಡ್ತೀನಿ ಅಂದರು ಡಿ.ಕೆ.ಶಿವಕುಮಾರ್. ಈ ಮಾತು ಆ ದೇವರೇ ಅವರಲ್ಲಿ ನಿಂತು ನುಡಿಸಿದ್ದಾನೆ. ಈಗ ಶಿವಕುಮಾರ್ ಅವರು ತುರ್ತಾಗಿ ಶನಿ ಶಾಂತಿ ಹವನಗಳನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕು. ಇನ್ನು ರೇವಣ್ಣ ಹಾಗೂ ಶಿವಕುಮಾರ್ ಮಧ್ಯದ ರಾಜಕೀಯ ಮೇಲಾಟಕ್ಕೆ ಕೊನೆಯೇ ಇಲ್ಲ. ಆದರೂ ಅಕ್ಟೋಬರ್ ನಂತರ ತಾತ್ಕಾಲಿಕವಾದ ರಾಜಿ- ಸಂಧಾನ ಆಗುತ್ತದೆ. ರೇವಣ್ಣ ಅವರಿಗೆ ಎರಡನೇ ಮನೆಯ ಗುರು ಹಾಗೂ ಶಿವಕುಮಾರ್ ರ ಏಳನೇ ಮನೆಯ ಗುರು ಇಬ್ಬರ ಮಧ್ಯೆ ತಾತ್ಕಾಲಿಕ ಬಿಕ್ಕಟ್ಟು ಶಮನಕ್ಕೆ ಕಾರಣವಾಗುತ್ತದೆ.
ಮೈತ್ರಿ ಸರಕಾರ ಮುಜುಗರ ತಪ್ಪಿಸಲು ಹೀಗೆ ಮಾಡಬೇಕು
ಇಲ್ಲಿ ಇನ್ನೂ ಒಂದು ವಿಚಾರ ಇದೆ. ರೇವಣ್ಣ ಹಾಗೂ ಶಿವಕುಮಾರ್ ಇಬ್ಬರ ರಾಶ್ಯಾಧಿಪತಿಯೂ ಶುಕ್ರ. ಇಬ್ಬರ ಮಧ್ಯ ರಾಜಕೀಯ ಮೇಲಾಟಕ್ಕೆ ಒಬ್ಬ ಸ್ತ್ರೀ ಕಾರಣ ಆಗಿರುವ ಸಾಧ್ಯತೆ ಇದೆ. ಅದು ನಿವಾರಣೆ ಆಗಬೇಕು ಅಂದರೂ ಅದು ಮಹಿಳೆ ಮೂಲಕ ಆಗುವ ಸಾಧ್ಯತೆ ಇರುತ್ತದೆ. ಏಕೆಂದರೆ, ಶುಕ್ರ ಅಂದರೆ ಸ್ತ್ರೀ ಸೂಚಕ. ಸ್ತ್ರೀಯೊಬ್ಬರ ಸ್ವಾಭಿಮಾನವೋ, ಹಠವೋ, ಸಿಟ್ಟೋ ಈ ಯಾವುದಾದರೂ ಒಂದು ಕಾರಣಕ್ಕೋ ಅಥವಾ ಈ ಎಲ್ಲ ಕಾರಣಕ್ಕೋ ಅಸಮಾಧಾನ ಭುಗಿಲೇಳುತ್ತಿರುತ್ತದೆ. ಆದ್ದರಿಂದ ಇಬ್ಬರ ಮಧ್ಯೆ ಸ್ವಲ್ಪವಾದರೂ ಸಂಬಂಧ ಸುಧಾರಿಸಿ, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರಕ್ಕೆ ಮುಜುಗರ ಆಗಬಾರದು ಅಂದರೆ ಇಷ್ಟಾದರೂ ಗಮನ ವಹಿಸಬೇಕು.