ಜ್ಯೋತಿಷ್ಯ: ಬಾಲ ಗ್ರಹ ಪೀಡೆ ಎಂದರೇನು? ಪರಿಹಾರ ಏನು?
ಕೆಲವು ವ್ಯಕ್ತಿಗಳನ್ನು ಮತ್ತು ಅವರ ಮಾತುಗಳನ್ನು ಗಮನಿಸಿದರೆ, ಅವರ ನಡವಳಿಕೆ ನೋಡಿದರೆ ಕೆಲವು ಯೋಗ ಅಥವಾ ದೋಷಗಳನ್ನು ಜಾತಕ ಸಹ ನೋಡದೆ ಹೇಳಬಹುದು. ಏಕೆಂದರೆ, ಜ್ಯೋತಿಷಿಯಾಗಿ ದಕ್ಕಿರುವ ಅನುಭವವು ಕಂಪ್ಯೂಟರ್ ನ ಸಾಫ್ಟ್ ವೇರ್ ನ ಥರ ಹೊಂದಾಣಿಕೆ ಮಾಡಿ, ಓಹ್, ಹೀಗೆ ಎಂದು ತಾನಾಗಿಯೇ ಸೂಚಿಸುತ್ತಾ ಸಾಗುತ್ತದೆ.
ಈ ದಿನ ನಿಮಗೆ ಒಂದು ದೋಷದ ವಿಚಾರವಾಗಿ ತಿಳಿಸಿಕೊಡುತ್ತೇನೆ. ಎಲ್ಲ ತಂದೆ-ತಾಯಿಗಳು ಈ ಲೇಖನವನ್ನು ಓದಿಕೊಂಡರೆ ಮಕ್ಕಳ ವಿಚಾರದಲ್ಲಿ ಸಿಟ್ಟು ಮಾಡಿಕೊಳ್ಳುವುದಿಲ್ಲ. ಅತಿಯಾದ ನಿರೀಕ್ಷೆ ಮಾಡುವುದಿಲ್ಲ. ಏಕೆಂದರೆ, ಗ್ರಹಗಳ ಸ್ಥಿತಿಯ ಆಧಾರದಲ್ಲಿ ಮಕ್ಕಳ ನಡವಳಿಕೆ ಇರುತ್ತದೆ ಹೊರತು ಅವರೇ ಹೊಣೆಯಾಗಿರುವುದಿಲ್ಲ.
ಜ್ಯೋತಿಷ್ಯ: ಹರಕೆ ತೀರಿಸದಿದ್ದರೆ ಏನೆಲ್ಲ ತೊಂದರೆ ಮತ್ತು ಪರಿಹಾರೋಪಾಯ
ಇನ್ನು ಜೀವನ ಪೂರ್ತಿ ಒಂದಲ್ಲ ಒಂದು ರೀತಿಯಲ್ಲಿ ಆ ಗ್ರಹಗಳ ಪ್ರಭಾವ ಅನುಸರಿಸಿಕೊಂಡು ಬರುತ್ತಲೇ ಇರುತ್ತದೆ. ದೋಷದ ಹೆಸರು ಏನು ಗೊತ್ತಾ? ಬಾಲ ಗ್ರಹ ಪೀಡೆ. ಏನಿದು ದೋಷ? ಇದರ ಮಹತ್ವ ಏನು? ಯಾರಿಗೆ ದೋಷ ಬರುತ್ತದೆ? ಅದರಿಂದ ಅವರಿಗೆ ಏನಾಗುತ್ತದೆ? ಪರಿಹಾರ ಏನು ಎಂಬುದನ್ನು ತಿಳಿದುಕೊಳ್ಳಿ.
ಏನಿದು ಬಾಲ ಗ್ರಹ ಪೀಡೆ?
ಯಾವುದೇ ವ್ಯಕ್ತಿಯ ಜೀವನದಲ್ಲಿ ಅಂದರೆ ನೀವು ಜನ್ಮ ಜಾತಕ ನೋಡಿದರೆ ಗೊತ್ತಾಗುತ್ತದೆ: ಆ ಜಾತಕಕ್ಕೆ ಹನ್ನೆರಡು ವರ್ಷಕ್ಕೆ ಮೊದಲು ರಾಹು ದಶೆ ಬಂದರೆ (ಬಾಲ್ಯದಲ್ಲಿ ರಾಹು ದಶೆ, ವೃದ್ಧರಾದ ಮೇಲೆ ಕೇತು ದಶೆ ಬರಬಾರದು ಎಂಬ ಮಾತಿದೆ), ಲಗ್ನಾತ್ ಚತುರ್ಥದಲ್ಲಿ ರಾಹು ಅಥವಾ ಕೇತು ಇದ್ದರೆ ಅಥವಾ ಚಂದ್ರಾತ್ ಚತುರ್ಥದಲ್ಲಿ ರಾಹು ಅಥವಾ ಕೇತು ಇದ್ದರೆ, ಚಂದ್ರನ ಜತೆಗೆ ರಾಹು ಅಥವಾ ಕೇತು ಇದ್ದರೆ, ಶುಕ್ರನ ಜತೆಗೆ ರಾಹು ಅಥವಾ ಕೇತು ಇದ್ದರೆ, ಲಗ್ನದಲ್ಲಿ ರಾಹು ಅಥವಾ ಕೇತು ಇದ್ದರೆ, ಲಗ್ನಾಧಿಪತಿಯೇ ರಾಹು ಅಥವಾ ಕೇತು ಜತೆ ಇದ್ದರೆ, ಚಂದ್ರ ರಾಶ್ಯಾಧಿಪತಿ ಜತೆಗೆ ರಾಹು ಅಥವಾ ಕೇತು ಇದ್ದರೆ ಈ ದೋಷ ಬರುತ್ತದೆ.
ವಿಪರೀತ ಸುಖ ಬಯಸುತ್ತಾರೆ
ಯಾರಿಗೆ ಈ ರೀತಿ ಬಾಲ ಗ್ರಹ ಪೀಡೆಯು ಇರುತ್ತದೋ ಅಂಥವರಿಗೆ ಪ್ರಬುದ್ಧತೆ ಬರುವುದು ಬಹಳ ಕಷ್ಟ. ಈ ಜಾತಕರು ವಿಪರಿತ ಎನಿಸುವಷ್ಟು ಸುಖವನ್ನು ಬಯಸುತ್ತಾರೆ. ಒಂದೇ ಸಮಯಕ್ಕೆ ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿಸುತ್ತಾರೆ. ಒಂದೇ ಸಮಯಕ್ಕೆ ಒಂದಕ್ಕಿಂತ ಹೆಚ್ಚು ವಿಷಯವನ್ನು ಚಿಂತಿಸುತ್ತಾರೆ. ವಿದ್ಯಾರ್ಥಿನಾಂ ನ ಸುಖಾ ನ ನಿದ್ರಾ ಎಂಬ ಮಾತಿದೆ. ಸುಖ, ನಿದ್ರೆ ಎರಡೂ ಈ ಜಾತಕರನ್ನು ವಿಪರೀತವಾಗಿ ಕಾಡುತ್ತದೆ. ಯಾವಾಗ ಅದು ಸಿಗುವುದಿಲ್ಲವೋ ಖಿನ್ನತೆ ಕಾಡುತ್ತದೆ. ವಿದ್ಯೆಯಲ್ಲಿ ಅಡಚಣೆ ಆಗುತ್ತದೆ. ಶರೀರ ಪೀಡೆ ಕಾಡುತ್ತದೆ. ಇವರಿಗೆ ಆತ್ಮ ತೃಪ್ತಿ ಕಡಿಮೆ ಪಡುತ್ತದೆ.
ಮೂಲಾ ನಕ್ಷತ್ರದಲ್ಲಿ ಹುಟ್ಟಿದವರ ಯೋಗಾಯೋಗ, ಶಾಂತಿ-ಪರಿಹಾರಗಳು
ಆಹಾರ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
ಯಾವುದೇ ದಶೆಯ ರಾಹು ಅಥವಾ ಕೇತು ಭುಕ್ತಿ ಅಥವಾ ರಾಹು ಅಥವಾ ಕೇತು ದಶೆಯಲ್ಲಿ ದೋಷದ ಪ್ರಭಾವ ಗೊತ್ತಾಗುತ್ತದೆ. ಇಂಥ ಜಾತಕದವರು ಆಹಾರ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಅಮಲು ಬರುವ ಆಹಾರ ಪದಾರ್ಥ ಅಥವಾ ಪಾನೀಯದಿಂದ ದೂರ ಇರಬೇಕು. ಉದಾಹರಣೆಗೆ ಉದ್ದು, ಗಸಗಸೆ ಇತ್ಯಾದಿ ಆಹಾರ ಪದಾರ್ಥಗಳ ವಿಪರೀತ ಸೇವನೆ ಮಾಡಬಾರದು. ಈ ರೀತಿಯ ದೋಷ ಇರುವ ಜಾತಕದ ಶರೀರದೊಳಗೆ ವಿಪರೀತ ವಿಷ ಉತ್ಪತ್ತಿ ಆಗುತ್ತದೆ. ಆದ್ದರಿಂದ ಸೂಕ್ತ ಪರಿಹಾರೋಪಾಯಗಳನ್ನು ಪಾಲಿಸಲೇಬೇಕು.
ಬಾಲ ಗ್ರಹ ಪೀಡೆಗೆ ಪರಿಹಾರ ಏನು?
ಯಾವಾಗ ಜಾತಕದಲ್ಲಿ ಬಾಲಗ್ರಹ ಪೀಡೆ ಇದೆ ಎಂಬ ಸಂಗತಿ ಗೊತ್ತಾಗುತ್ತದೋ ಆಗ ಕಡ್ಡಾಯವಾಗಿ ರಾಹು-ಕೇತು ಶಾಂತಿಯನ್ನು ಮಾಡಿಸಿಕೊಳ್ಳಲೇ ಬೇಕು. ಇನ್ನು ನಾಗಾರಾಧನೆ, ದುರ್ಗಾರಾಧನೆ, ಸುಬ್ರಹ್ಮಣ್ಯಾರಾಧನೆ ಮಾಡುವುದರಿಂದಲೂ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಈ ಶಾಂತಿಯಿಂದ ಏನು ಪ್ರಯೋಜನ ಅಂದರೆ, ಜಾತಕರಿಂದ ತಪ್ಪು ಆಗುವ ಸನ್ನಿವೇಶದಲ್ಲಿ ಎಚ್ಚರಿಕೆ ಮೂಡುತ್ತದೆ. ಮಾತು ಆಡುವ ವೇಳೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿ ಆಗುತ್ತಾರೆ. ವಿದ್ಯಾಭ್ಯಾಸದ ಸಂದರ್ಭದಲ್ಲಿ ಏಕಾಗ್ರತೆ ಸಾಧಿಸಲು ನೆರವಾಗುತ್ತದೆ. ನೆನಪಿಡಿ, ಯಾವುದೇ ದೋಷವನ್ನು ಸಂಪೂರ್ಣ ನಿವಾರಣೆ ಮಾಡಿಕೊಳ್ಳಲು ದೈವದ ಆಶೀರ್ವಾದ ಕೇಳುವುದಲ್ಲ. ಅದೆಂಥ ದೋಷ-ಸಮಸ್ಯೆಗೆ ಎದುರಾಗಿಯೂ ನಮ್ಮ ಶ್ರಮ ಹಾಕಲು ಪ್ರೇರಣೆ ದೊರೆಯುವಂತೆ ಆ ದೇವರನ್ನು ಬೇಡಿಕೊಳ್ಳಬೇಕು. ಆ ಶ್ರಮ ಸಾರ್ಥಕ ಆಗುವಂತೆ ಕೇಳಿಕೊಳ್ಳಬೇಕು.