ಮಮತಾ ಬ್ಯಾನರ್ಜಿಗೆ ಗಂಡಾಂತರದ ಕಾಲ: ಜ್ಯೋತಿಷಿ ಅಮ್ಮಣ್ಣಾಯ ವಿಶ್ಲೇಷಣೆ
Recommended Video
ಪಶ್ಚಿಮ ಬಂಗಾಲದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ ಬಗ್ಗೆ ಈಚೆಗೆ ಸುದ್ದಿ ಬಾರದ/ಸುದ್ದಿ ಆಗದ ದಿನಗಳೇ ಇಲ್ಲ ಎಂಬಷ್ಟರ ಮಟ್ಟಿಗೆ ಚರ್ಚೆಯಲ್ಲಿರುವವರು. ಆಕೆಯ ಬಗೆಗಿನ ಕುತೂಹಲದಿಂದ ಜಾತಕ ವಿಮರ್ಶೆ ಮಾಡಿದಾಗ ಕುತೂಹಲಕಾರಿಯಾದ ವಿಷಯಗಳು ನನ್ನ ಗಮನಕ್ಕೆ ಬಂದವು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ನನಗೆ ಲಭ್ಯವಾದ ಜಾತಕದ ಮಾಹಿತಿಯ ಆಧಾರದಲ್ಲಿ ಭವಿಷ್ಯ ವಿಶ್ಲೇಷಣೆ ಮಾಡಿದ್ದೇನೆ. ಬಹಳ ಸಲ ಏನಾಗುತ್ತದೆ ಅಂದರೆ, ನಮಗೆ ದೊರೆಯುವ ಮಾಹಿತಿ ಸಮರ್ಪಕವಾಗಿ ಇರುವುದಿಲ್ಲ. ಆದರೆ ಮಮತಾ ಬ್ಯಾನರ್ಜಿ ಜಾತಕವನ್ನು ಗಮನಿಸಿ, ಗುಣ ವಿಶೇಷಗಳ ಜತೆ ತಾಳೆ ಹಾಕಿದರೆ ಅವರ ಜಾತಕ ಸರಿಯಾಗಿದೆ ಎಂಬುದು ವೇದ್ಯವಾಗುತ್ತದೆ.
ಸದಾ ಗಂಭೀರ ಮುಖ ಹೊತ್ತು ಕಾಣಿಸಿಕೊಳ್ಳುವ ಮಮತಾ ಅವರ ಹೆಸರಿಗೂ ಸ್ವಭಾವಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ. ಏಕೆಂದರೆ, ಇವರ ಗ್ರಹಸ್ಥಿತಿಯ ಕಾರಣದಿಂದಾಗಿ ಕ್ರೂರ ಮನಸ್ಥಿತಿಯನ್ನು ಕಾಣಬಹುದು. ಗ್ರಹಗಳನ್ನು ಮತ್ತು ಅವುಗಳ ಪರಿಣಾಮವನ್ನು ನಂಬುವ ನಮ್ಮಂಥವರಿಗೆ ವ್ಯಕ್ತಿಯ ಜತೆಗೆ ಅವರ ಜನ್ಮ ಕಾಲದಲ್ಲಿನ ಗ್ರಹ ಸ್ಥಿತಿಗಳು ಇವರನ್ನು ಏನೆಲ್ಲ ಮಾಡಿಸುತ್ತವಲ್ಲಾ ಎನಿಸುತ್ತದೆ.
ಕೃತ್ತಿಕಾ ನಕ್ಷತ್ರ, ವೃಷಭ ರಾಶಿಯ ಮಮತಾ ಬ್ಯಾನರ್ಜಿ
ಮೊದಲಿಗೆ ಮಮತಾ ಬ್ಯಾನರ್ಜಿ ಅವರ ಇಂಥ ಗುಣಗಳಿಗೆ ಕಾರಣ ಏನು ಅಂತ ನೋಡೋಣ. ಕೃತ್ತಿಕಾ ನಕ್ಷತ್ರ, ವೃಷಭ ರಾಶಿಯ ಮಮತಾ ಬ್ಯಾನರ್ಜಿ ಅವರಿಗೆ ಜನನ ಕಾಲದಲ್ಲಿ ಚಂದ್ರನಿಂದ ಮೂರನೇ ಮನೆಯಲ್ಲಿ ಗುರು ಇರುವುದರಿಂದ ಸ್ವಭಾವತಃ ಉದ್ವೇಗ ಇರುತ್ತದೆ. ಇನ್ನು ಚಂದ್ರನಿಂದ ದ್ವಿತೀಯದಲ್ಲಿ ಕೇತು ಸ್ಥಿತನಾಗಿರುವುದರಿಂದ ಅಶ್ಲೀಲ, ಅಸಂಬದ್ಧ ಮತ್ತು ಕೆಲ ಬಾರಿ ಕೆಟ್ಟ ಮಾತಿನ ಪ್ರಯೋಗ ಮಾಡುತ್ತಾರೆ. ಹಾಗಂದರೆ ವಿಪರೀತ ಎನಿಸುವಷ್ಟು ನಿಂದನೆಯ ಮಾತುಗಳನ್ನು ಆಡುತ್ತಾರೆ. ಚಂದ್ರಾಷ್ಟಮದಲ್ಲಿ ರಾಹು ಇರುವುದರಿಂದ ನಕಾರಾತ್ಮಕ ಚಿಂತನೆ ಹೆಚ್ಚು. ಅದೆಂಥ ವಿಚಾರದಲ್ಲೂ ತಪ್ಪು ಚಿಂತನೆ ಮಾಡುತ್ತಾರೆ. ಬುಧ- ರಾಹು ಅಥವಾ ಲಗ್ನ ತೃತೀಯ ಕೇತು ಇದ್ದರೆ ತಾಳ್ಮೆ ಇಲ್ಲ. ಅವಸರ ಜಾಸ್ತಿ. ಶ್ರವಣಾಸಕ್ತಿ, ಸದ್ವಿಚಾರಗಳ ಆಸಕ್ತಿ ಇಲ್ಲ. ಎಲ್ಲ ಸದ್ವಿಚಾರಗಳ ಬಗ್ಗೆಯೂ ತಿರಸ್ಕಾರ ಮಾಡುವಂಥ, ನಿರ್ಲಕ್ಷ್ಯ ಧೋರಣೆ ತೋರುವಂಥ ಸ್ವಭಾವ ಇರುತ್ತದೆ.
ಸಪ್ತಮದಲ್ಲಿ ಬಲಿಷ್ಠ ಶನಿಯಿಂದ ಮುತ್ಸದ್ದಿತನ
ಮಮತಾ ಅವರಿಗೆ ಸಪ್ತಮದಲ್ಲಿ ಬಲಿಷ್ಠ ಶನಿ ಇದೆ. ಅಂದರೆ ಮುತ್ಸದಿತನ ಇದೆ. ಆದರೆ ಅದರ ನಕಾರಾತ್ಮಕ ಪ್ರಭಾವವೂ ಇದೆ. ಹಾಗಾಗಿ ಉತ್ತಮ ಗೃಹಿಣಿ, ಮುತ್ತೈದೆಯಾಗುವ ಯೋಗವಿಲ್ಲ. ಶನಿಗೆ ದಿಗ್ಬಲ ಇದ್ದುದರಿಂದ ಹೀಗೆ. ರವಿ- ರಾಹು, ಬುಧ- ರಾಹು ಯೋಗ ಈ ಲಗ್ನಕ್ಕೆ ಇರುವುದರಿಂದ ಶಿಸ್ತು ಜಾಸ್ತಿ. ಆದರೆ ಹೊಂದಿಕೊಂಡು ಹೋಗುವ ಸ್ವಭಾವ ಇಲ್ಲ. ಶುಕ್ರನಿಂದ ಎರಡನೇ ಮನೆಯಲ್ಲಿ ರಾಹು, ಶುಕ್ರನ ಲಾಭಾಧಿಪತಿ ಬುಧ- ರಾಹು ಯೋಗ ಇರುವುದರಿಂದ ನಾನೇ ಎಂಬ ಅಹಂ ಜಾಸ್ತಿ ಇರುತ್ತದೆ. ಲಗ್ನ ಚತುರ್ಥದಲ್ಲಿ ಉಚ್ಚನಾದ ಗುರುವು ದೈವ ಭಕ್ತಿಯನ್ನು ನೀಡುತ್ತಾನೆ. ಅಷ್ಟೇ ಅಲ್ಲ, ಜ್ಞಾನವನ್ನೂ ಕೊಡುತ್ತಾನೆ. ಕುಜನ ಲಾಭದಲ್ಲಿ ರಾಹು ಇದೆ. ಮಮತಾರ ನಿರ್ಧಾರಕ್ಕೆ ಅಥವಾ ತೀರ್ಮಾನಕ್ಕೆ ಎದುರಾಡಿದರೆ ವಿಪರೀತ ಸಿಟ್ಟು ಬಂದು, ತಾನು ಆಡುತ್ತಿರುವ ಮಾತೇನು ಎಂಬುದನ್ನೂ ಯೋಚಿಸದೆ ಕೂಗಾಡುತ್ತಾರೆ. ಈ ಜಾತಕಕ್ಕೆ ಷಷ್ಟಾಧಿಪತಿ ಬುಧ- ರಾಹು ಯೋಗ ಇರುವುದರಿಂದ ಯಾವಾಗಲೂ ಶತ್ರುಗಳ ಬಗ್ಗೆಯೇ ಚಿಂತನೆ ಜಾಸ್ತಿ.
ಈ ಜಾತಕಕ್ಕೆ ಸಂಶಯ ಸ್ವಭಾವ ಜಾಸ್ತಿ
ಯಾವ ಕಾಲಕ್ಕೆ ಏನು ಮಾತನಾಡಬೇಕು ಎಂಬ ಸಂಯಮ ಇವರಿಗಿಲ್ಲ. ಕುಜನ ಸಪ್ತಮಾಧಿಪತಿ ರವಿಯು ರಾಹು ಸಂಬಂಧದಲ್ಲಿ ಇರುವುದರಿಂದ ಯಾವುದೋ ಪ್ರೇಮ ಪ್ರಕರಣದಲ್ಲಿ ವಂಚಿತರಾದಂತೆ ಸೂಚಿಸುತ್ತದೆ. ಆ ಮೂಲಕ ಪುರುಷ ದ್ವೇಷವನ್ನು ಸಹ ಸೂಚಿಸುತ್ತದೆ. ಇದು ಜಾತಕವು ಸೂಚಿಸುವ ಸಂಗತಿ. ಚಂದ್ರನ ಕರ್ಮಸ್ಥಾನದಲ್ಲಿ ಕುಜನಿರುವುದರಿಂದ ಸಂಶಯ ಮನೋಭಾವ ಜಾಸ್ತಿ. ಇದು ಒಂದು ರೀತಿಯ ಪೊಲೀಸರ ಸ್ವಭಾವ ಆಗುತ್ತದೆ. ವಿಪರೀತ ಸಂಶಯ, ತಪ್ಪಾಗಿ ಅರ್ಥೈಸಿಕೊಳ್ಳುವಿಕೆ, ಕೆಟ್ಟ ಮಾತು, ಹಿರಿಯರನ್ನು ಗೌರವಿಸುವ ಮನೋಭಾವ ಇಲ್ಲದಿದ್ದರೆ ಇಷ್ಟೆಲ್ಲ ಗುಣ ಹೊಂದಿದವರು ವ್ಯಾವಹಾರಿಕವಾಗಿ, ದಿನ- ವರ್ಷ ಗೋಚರದಲ್ಲಿ ಏನು ಅನುಭವಿಸಬಹುದು? ಈಗ ಚಂದ್ರಾಷ್ಟಮದಲ್ಲಿ ಶನಿ ಇದ್ದು, ಮಮತಾ ಅವರ ಪ್ರತಿಷ್ಠೆ, ಗೌರವಗಳು ತಮ್ಮ ಗುಣಗಳಿಂದಲೇ ಕಳೆದುಕೊಳ್ಳಲಿದ್ದಾರೆ ಎಂಬುದನ್ನು ಸೂಚಿಸುತ್ತಿದೆ. ಆದರೂ ಆ ಬಗ್ಗೆ ಎಚ್ಚೆತ್ತುಕೊಳ್ಳಲು ಅವಕಾಶ ಸಿಗುವುದಿಲ್ಲ.
ಹಗರಣದ ಸುಳಿಗೆ ಸಿಲುಕಿ ಬಂಧನ ಆಗಬಹುದು
ಮುಂದೆ ಜನವರಿ ನಂತರ ಹಣದ ವಿಚಾರದಲ್ಲಿ, ಹಗರಣಗಳಿಂದಾಗಿ ಬಂಧನಕ್ಕೆ ಒಳಗಾಗುವ ಸೂಚನೆಗಳು ಸಹ ಇವೆ. ಈಕೆಯ ನೀಗಡ ದ್ರೇಕ್ಕಾಣ ಮಕರದಲ್ಲಿ ಕರ್ಮ ಸ್ಥಾನದಲ್ಲಿ ಇರುವುದರಿಂದ, ಮಮತಾರ ಕರ್ಮಗಳೇ ಬಂಧನಕ್ಕೆ ಕಾರಣವಾಗುತ್ತವೆ. ಜಾತಕದಲ್ಲಿ ಭಾಗ್ಯ ವೀಕ್ಷಣೆ ಮಾಡುವ ತೃತೀಯ ವೀಕ್ಷಣೆಯ ಶನಿಯು ಇವರ ಭಾಗ್ಯವನ್ನು ಸಂಪೂರ್ಣ ನಾಶ ಮಾಡಲಿದ್ದಾನೆ. ಅಸ್ತಿತ್ವಕ್ಕೇ ಕುಂದು ಬಂದರೂ ಅಚ್ಚರಿ ಇಲ್ಲ. ಅಲ್ಲದೆ ಶನಿಯ ಮೂರನೆಯ ಪೂರ್ಣ ದೃಷ್ಟಿಯು ಪಂಚಮಾಧಿಪತಿ ಮತ್ತು ತೃತೀಯಾಧಿಪತಿ- ಷಷ್ಟಾಧಿಪತಿ (ರೋಗ ಕಾರಕ) ಬುಧನಿಗಿರುವುದರಿಂದ ಮಾನಸಿಕವಾಗಿ ಕುಗ್ಗುತ್ತಾರೆ. ನರಗಳ ದುರ್ಬಲತೆಯೇ ಇದಕ್ಕೆ ಕಾರಣವಾದೀತು. ಅಂದರೆ ಪಕ್ಷವಾತ ಬರಬಹುದು. ಇಷ್ಟೆಲ್ಲ ಆದರೂ ಗುರು ಹಂಸ ಮಹಾಯೋಗದಲ್ಲಿ ಇರುವುದರಿಂದ ಇದನ್ನು ಸರಿಪಡಿಸಿಕೊಳ್ಳಲೂ ಸಾಧ್ಯವಿದೆ. ಬಡವರ ಪಾಲಿಗೆ ಮಮತಾ ಸಜ್ಜನರು ಎಂಬುದನ್ನು ಜಾತಕ ಸೂಚಿಸುತ್ತದೆ. ಆದರೆ ಸಂಸ್ಕಾರವಂತ ಗುಣ ಇಲ್ಲ ಹಾಗೂ ಹಠಮಾರಿ ಸ್ವಭಾವ.
ಗೌರವಕ್ಕೆ ಹೊಡೆತ ಬೀಳುವ ಸಮಯ
2020ರ ಫೆಬ್ರವರಿ ನಂತರ ಈಕೆಗೆ ನಡೆಯುವ ಶನಿ ದಶೆಯಲ್ಲಿ ಅಷ್ಟಮಾಧಿಪತಿ, ಖರ ದ್ರೇಕ್ಕಾಣಾಧಿಪತಿ ಮರಣಕ್ಕೆ ಸಮಾನವಾದ ಯೋಗವನ್ನು ನೀಡುತ್ತಾರೆ. ಕುಜನ ಭುಕ್ತಿಯೂ, ತುಲಾ ರಾಶಿಯ ಶನಿಗೆ ಮಕರದಲ್ಲಿ ಸಂಚರಿಸುವ ಶನಿಯಿಂದ ಶನಿಗೆ ಚತುರ್ಥದಲ್ಲಿ ಶನಿ ಸಂಚಾರವು ಏಕಕಾಲದಲ್ಲಿ ಬಂದರೆ ಅಪಾಯ ನಿಶ್ಚಿತ. ಇದು 2020 ಜನವರಿಯಿಂದ ಮಾರ್ಚ್ ಒಳಗೆ ಸಂಭವಿಸಬಹುದು. ಇಲ್ಲಿ ಮರಣ ಸಮಾನವಾದ ಯೋಗ ಎನ್ನುವುದರ ಬಗ್ಗೆ ಒಂದಿಷ್ಟು ವಿವರಣೆ ಅಗತ್ಯ ಇದೆ. ಒಬ್ಬ ವ್ಯಕ್ತಿಗೆ ತನ್ನ ಗೌರವ, ಪ್ರತಿಷ್ಠೆಗಳು ಜೀವಕ್ಕೆ ಸಮಾನವಾದುದು. ಮತ್ತೂ ಕೆಲವರಿಗೆ ಅಧಿಕಾರ ಕೂಡ ತಮ್ಮ ಜೀವಕ್ಕೆ ಸಮವಾದುದು. ಅಂಥದ್ದರಲ್ಲಿ ಇವೆಲ್ಲಕ್ಕೂ ಬಲವಾದ ಪೆಟ್ಟು ಬಿದ್ದು, ತೆರೆ ಮರೆಗೆ ಸರಿಯುವಂತಾಗುವ ಯೋಗ ಇದೆ. ಮಮತಾ ಬ್ಯಾನರ್ಜಿ ಅವರ ಬಗ್ಗೆ ಇವುಗಳೆಲ್ಲದರ ಚಿಂತನೆ ಮಾಡಬಹುದು. ಬಹಳ ಮುಖ್ಯವಾಗಿ ಆರೋಗ್ಯ, ಅಧಿಕಾರ, ಗೌರವಕ್ಕೆ ಭಾರೀ ಹೊಡೆತ ಬೀಳುವ ಸಮಯವಿದು.