ಪರೀಕ್ಷೆಗೆ ಸಿದ್ಧವಾಗುವ ವಿದ್ಯಾರ್ಥಿಗಳಿಗೆ ಜ್ಯೋತಿಷ್ಯದ 5 ಅದ್ಭುತ ಟಿಪ್ಸ್
ಇನ್ನೇನು ನಾನಾ ಶೈಕ್ಷಣಿಕ ಪರೀಕ್ಷೆಗಳು ಶುರುವಾಗುತ್ತವೆ. ಈ ಲೇಖನ ಪ್ರಕಟ ಆಗುವ ಹೊತ್ತಿಗೆ ಕೆಲವರಿಗೆ ಈಗಾಗಲೇ ಆರಂಭ ಕೂಡ ಆಗಿರಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಎಷ್ಟರ ಮಟ್ಟಿಗೆ ಗಂಭೀರತೆಯನ್ನು ತರುತ್ತದೋ ಅದೇ ರೀತಿ ಪೋಷಕರಿಗೆ ಆತಂಕಕ್ಕೆ ಕಾರಣವಾಗುತ್ತದೆ. ಏಕೆ ಈ ಹಿಂದೆ ಓದಿದ್ದೆಲ್ಲ ಮಗ/ಮಗಳು ಮರೆತು ಹೋಗುತ್ತಿದ್ದಾರೋ ಎಂಬ ಚಿಂತೆ ಅವರದು.
ಸಣ್ಣ ವಯಸ್ಸಿನ ಮಕ್ಕಳನ್ನು ಮಾತ್ರ ನಿಮ್ಮ ಕಣ್ಣೆದುರು ತಂದುಕೊಳ್ಳಬೇಡಿ. ಪಿಯುಸಿ, ಪದವಿ, ಎಂಜಿನಿಯರಿಂಗ್, ವೈದ್ಯಕೀಯ, ಐಎಎಸ್, ಐಪಿಎಸ್...ಹೀಗೆ ಯಾವುದೇ ಬಗೆಯ ಶಿಕ್ಷಣ ಇರಬಹುದು. ಅಧ್ಯಯನದಲ್ಲಿ ತೊಡಗಿದವರಿಗೆ ತಮ್ಮದೇ ಸಮಸ್ಯೆಗಳು ಇರುತ್ತವೆ. ಅಂಥವರಿಗೆ ಅಂತಲೇ ಈ ದಿನ ಜ್ಯೋತಿಷ್ಯದಲ್ಲಿನ ಅದ್ಬುತವಾದ ಐದು ಟಿಪ್ಸ್ ಗಳನ್ನು ನೀಡಲಾಗುತ್ತಿದೆ.
ರಾಹು-ಕೇತು ಗ್ರಹಗಳ ಸ್ಥಾನ ಬದಲಾವಣೆ; ಯಾವ ರಾಶಿಗೆ ಏನು ಫಲ?
ಇವುಗಳೆಲ್ಲ ಸುಲಭಕ್ಕೆ ಅನುಸರಿಸಬಹುದಾದ ಸಲಹೆ. ಹೀಗೆ ಮಾಡುವುದರಿಂದ ಹಲವು ಸವಾಲುಗಳನ್ನು ಸುಲಭವಾಗಿ ದಾಟಬಹುದು. ಅಷ್ಟೇ ಅಲ್ಲ, ಹಾಕುವ ಶ್ರಮಕ್ಕೆ ಉತ್ತಮ ಫಲಿತಾಂಶವೂ ದೊರೆಯುತ್ತದೆ. ಒಟ್ಟಿನಲ್ಲಿ ಪರೀಕ್ಷಾ ಸಿದ್ಧತೆಯಲ್ಲಿ ಇರುವ ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತಾ ಈ ಸಲಹೆಗಳನ್ನು ನೀಡುತ್ತಿದ್ದೇನೆ.
ಈಶಾನ್ಯ ದಿಕ್ಕಿನ ಕೋಣೆ- ಪೂರ್ವ ದಿಕ್ಕಿನತ್ತ ಮುಖ
ಅಧ್ಯಯನ ಮಾಡುವ ಯಾವ ದಿಕ್ಕಿನಲ್ಲಿ ಕೂತಿದ್ದೀರಿ. ಯಾವ ದಿಕ್ಕಿಗೆ ಮುಖ ಮಾಡಿ ಕೂತಿದ್ದೀರಿ ಎಂಬುದು ಬಹಳ ಮುಖ್ಯವಾದದ್ದು. ಮನೆಯ ಈಶಾನ್ಯ ಭಾಗದಲ್ಲಿ ಇರುವ ಕೋಣೆಯಲ್ಲಿ ಓದುವುದು ಬಹಳ ಮುಖ್ಯವಾದದ್ದು. ಹಾಗೆ ಈಶಾನ್ಯ ಭಾಗದ ಕೋಣೆಯಲ್ಲಿ ಓದಲು ಕುಳಿತಾಗ ಒಂದೋ ಪೂರ್ವ ಅಥವಾ ಉತ್ತರ ದಿಕ್ಕಿಗೆ ನೀವು ಮುಖ ಮಾಡಿ ಕೂತು ವ್ಯಾಸಂಗ ಮಾಡಬೇಕು. ಇನ್ನೊಂದು ಮಾತು ಏನೆಂದರೆ ಉಷೋದಯ ಕಾಲದಲ್ಲಿ ಹಾಸಿಗೆ ಬಿಟ್ಟು ಎದ್ದೇಳಬೇಕು. ನೀವು ಓದುವ ಕೋಣೆಯೊಳಗೆ ಸೂರ್ಯನ ರಶ್ಮಿ ಪ್ರವೇಶಿಸುವಂತೆ ಇರಬೇಕು. ನೀವು ಕಿಟಕಿ ತೆರೆದು, ಆ ನಂತರವೇ ವಿದ್ಯಾಭ್ಯಾಸ ಶುರು ಮಾಡಬೇಕು.
ಗಣಪತಿ ಆರಾಧನೆಯಿಂದ ಉತ್ತಮ ಫಲ
ನಿಮಗೆ ಪ್ರಾಣಾಯಾಮ ಬರುತ್ತದೆ ಅನ್ನೋದಾದರೆ ಓದು ಆರಂಭಿಸುವ ಮೊದಲು ಹತ್ತು ನಿಮಿಷಗಳ ಕಾಲ ಪ್ರಾಣಾಯಾಮ ಮಾಡಿ. ಒಂದು ವೇಳೆ ನಿಮಗೆ ಬಾರದಿದ್ದರೆ ಪ್ರಾಣಾಯಾಮವನ್ನು ಕಲಿತುಕೊಳ್ಳಿ. ಕನಿಷ್ಠ ಹತ್ತು ನಿಮಿಷ ಮಾಡುವುದರಿಂದ ವ್ಯಕ್ತಿಯ ಉಸಿರಾಟ ವ್ಯವಸ್ಥೆ ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ. ಆ ಮೂಲಕ ಮೆದುಳಿನ ಚಟುವಟಿಕೆ ಚುರುಕಾಗುತ್ತದೆ. ನಿಮ್ಮ ವ್ಯಾಸಂಗದಲ್ಲಿ ಏಕಾಗ್ರತೆ ಸಾಧಿಸಲು ಇದರಿಂದ ಅನುಕೂಲ ಆಗುತ್ತದೆ. ಆದ್ದರಿಂದ ಪ್ರಾಣಾಯಾಮವನ್ನು ಅಭ್ಯಾಸ ಮಾಡಿ, ದಿನಕ್ಕೆ ಹತ್ತು ನಿಮಿಷವಾದರೂ ಅದನ್ನು ಮಾಡಿ. ಬದಲಾವಣೆಯನ್ನು ನೀವು ಖಂಡಿತಾ ಗಮನಿಸುತ್ತೀರಾ. ಇದರ ಜತೆಗೆ ವಿಶೇಷವಾಗಿ ಗಣಪತಿಯ ಆರಾಧನೆಯನ್ನು ಮಾಡಿ. ಇದಕ್ಕೆ ಬಹಳ ಸಮಯವೂ ಹಿಡಿಸುವುದಿಲ್ಲ.
ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ
ವಿದ್ಯಾರ್ಥಿಗಳಿಗೆ ಸಾತ್ವಿಕ ಆಹಾರ ಸೇವನೆ ಕೂಡ ಬಹಳ ಮುಖ್ಯವಾದ ವಿಚಾರ. ಮಾಂಸಾಹಾರವನ್ನು ಕಡ್ಡಾಯವಾಗಿ ಸೇವನೆ ಮಾಡಬಾರದು. ಇನ್ನು ತರಕಾರಿಗಳಲ್ಲೂ ತಾಮಸ ಗುಣವನ್ನು ಉತ್ತೇಜಿಸುವುದನ್ನು ಸೇವನೆ ಮಾಡಬಾರದು. ಉದಾಹರಣೆ ಈರುಳ್ಳಿ, ಬೆಳ್ಳುಳ್ಳಿ, ನುಗ್ಗೇಕಾಯಿ ಇತ್ಯಾದಿ. ಅದೇ ರೀತಿ ವಿಪರೀತ ಮಸಾಲೆ ಹಾಕಿರುವಂಥ, ಉಪ್ಪು-ಖಾರ ಹೆಚ್ಚಿನ ಪ್ರಮಾಣದಲ್ಲಿ ಬಳಸಿರುವಂಥ ಆಹಾರ ಪದಾರ್ಥಗಳನ್ನು ವರ್ಜಿಸಬೇಕು. ಅಧಿಕವಾದ ಆಹಾರ ಸೇವನೆ, ಜಂಕ್ ಫುಡ್, ಅತಿಯಾದ ಸಿಹಿ ಕೂಡ ಸೇವಿಸಬೇಡಿ. ದೇಹಕ್ಕೆ ಆಲಸ್ಯ ತರದಂತೆ, ಚಟುವಟಿಕೆಯಾಗಿ ಇರಲು ಎಷ್ಟು ಬೇಕೋ ಅಷ್ಟೇ ಆಹಾರ ಸೇವಿಸಬೇಕು.
ಧನು-ಸಿಂಹ ರಾಶಿಯವರಿಗೆ ನವಗ್ರಹ ಶಾಂತಿ
ಇನ್ನು ವಿದ್ಯಾರ್ಥಿಗಳ ಪೋಷಕರು ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ನಿಮ್ಮ ಮನೆಯಲ್ಲಿ ಸಿಂಹ ಅಥವಾ ಧನುಸ್ಸು ರಾಶಿಯ ಮಕ್ಕಳಿದ್ದರೆ ಅವರ ಬಗ್ಗೆ ಹೆಚ್ಚು ಗಮನ ವಹಿಸಿ. ಹೆಚ್ಚಿನ ಒತ್ತಡ ಹಾಕಬೇಡಿ. ನವಗ್ರಹ ಶಾಂತಿಯೊಂದನ್ನು ಅವರ ಹೆಸರಲ್ಲಿ ಮಾಡಿಸಿ. ಅದರಲ್ಲಿ ಗುರು ಹಾಗೂ ಶನಿ ಗ್ರಹದ ಜಪವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸಿ, ಹೋಮವನ್ನು ಮಾಡಿಸಿ. ಪರೀಕ್ಷೆಗೆ ಮುನ್ನವೇ ಮಾಡಿಸುವುದು ಉತ್ತಮ. ಯಾಕೆಂದರೆ, ಏನಾದರೂ ಸಮಸ್ಯೆಗಳು ಎದುರಾಗಿ ವಿದ್ಯಾ ಭಂಗ ಆಗುವ ಯೋಗ ಈ ಎರಡು ರಾಶಿಗಳವರಿಗೆ ಇರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಬೇಕು.
ಶ್ರೀಗಂಧ-ಪಚ್ಚ ಕರ್ಪೂರದಿಂದ ಅದ್ಬುತ ಫಲಿತಾಂಶ
ಈ ಸಲಹೆಯನ್ನು ಸುಲಭಕ್ಕೆ ಪಾಲಿಸಬಹುದು. ಅದರೆ ಒಂದಿಷ್ತು ಪ್ರಯತ್ನ ಹಾಗೂ ಶ್ರಮ ಅಗತ್ಯ. ಅದೇನೆಂದರೆ ಶ್ರೀಗಂಧವನ್ನು ಪಚ್ಚ ಕರ್ಪೂರದ ಜತೆ ಸೇರಿಸಿದ ತೇಯ್ದಿಟ್ಟುಕೊಳ್ಳಬೇಕು. ಅಧ್ಯಯನಕ್ಕೆ ಎಂದು ಕೂತುಕೊಳ್ಳುತ್ತೀರಲ್ಲಾ ಅದಕ್ಕೂ ಮುನ್ನ ತೇಯ್ದಿಟ್ಟುಕೊಂಡ ಗಂಧ-ಪಚ್ಚ ಕರ್ಪೂರವನ್ನು ಹಣೆಗೆ ಹಚ್ಚಿಕೊಳ್ಳಬೇಕು. ಮೇಲ್ನೋಟಕ್ಕೆ ಇವೆಲ್ಲ ಹೇಗೆ ಕೆಲಸ ಮಾಡುತ್ತವೆ ಅಂತ ನಿಮಗೆ ಅನ್ನಿಸಬಹುದು. ಆದರೆ ಒಳ್ಳೆ ಗುಣಮಟ್ಟದ ಶ್ರೀಗಂಧ ಹಾಗೂ ಪಚ್ಚಕರ್ಪೂರವನ್ನು ಖರೀದಿಸಿ, ಬಳಕೆ ಮಾಡಿ. ಆ ನಂತರ ನೀವಾಗಿಯೇ ಫಲಿತಾಂಶದ ಬಗ್ಗೆ ತಿಳಿಸಿ. ಒಟ್ಟಾರೆ ನಿಮ್ಮ ಪರೀಕ್ಷೆಗೆ ಶುಭ ಕಾಮನೆಗಳು. ಯಶಸ್ಸು ಸಿಗಲಿ.