ಜ್ಯೋತಿಷ್ಯ: ಈ 4 ರಾಶಿಯವರು ಎಂಥ ಸಾಧನೆಯನ್ನಾದರೂ ಮಾಡಬಲ್ಲರು
Recommended Video
ಹುಟ್ಟುವಾಗ ನಿಮ್ಮ ಆರ್ಥಿಕ ಸ್ಥಿತಿ ಹೇಗಿತ್ತು ಎಂಬುದಕ್ಕಿಂತ ವಯಸ್ಸಾಗುತ್ತಾ ನೀವು ಸಂಪಾದಿಸಿದ್ದೇನು, ಪಡೆದುಕೊಂಡಿದ್ದೇನು ಎಂಬುದು ಬಹಳ ಮುಖ್ಯವಾಗುತ್ತದೆ. ಯಾಕೆ ಈ ಮಾತು ಹೇಳುತ್ತಿದ್ದೀನಿ ಅಂದರೆ, ರಾಶಿ ಚಕ್ರದಲ್ಲಿನ ಈ ನಾಲ್ಕು ರಾಶಿಗಳವರ ಬಾಲ್ಯ ಹೇಗಾದರೂ ಇರಲಿ, ಇಪ್ಪತ್ತು- ಇಪ್ಪತ್ತೈದರ ನಂತರ, ಮತ್ತು ಒಂದು ನಿರ್ದಿಷ್ಟ ರಾಶಿಯವರು ಮಧ್ಯ ವಯಸ್ಸಿನ ನಂತರ ಅದ್ಭುತ ಯಶಸ್ಸನ್ನು ಪಡೆಯುತ್ತಾರೆ.
ಇಲ್ಲಿ ಅದ್ಭುತ ಯಶಸ್ಸು ಅನ್ನೋದನ್ನು ತೀರಾ ಎತ್ತರಕ್ಕೆ ಹೋಲಿಸಿಕೊಂಡು ನೋಡಬೇಡಿ. ಈ ರಾಶಿಯವರ ಬಾಲ್ಯ, ಯೌವನಾವಸ್ಥೆಗೆ ಹೋಲಿಸಿದರೆ ಅದ್ಭುತ ಎಂಬಂಥ ಸ್ಥಿತಿ ಆಗಿರುತ್ತದೆ. ಕೇವಲ ರಾಶಿಯನ್ನು ನೋಡಿ ಹೀಗೆ ಹೇಳುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆ ಬರಬಹುದು. ಇದುವರೆಗೆ ಸಾವಿರಾರು ಜಾತಕಗಳನ್ನು ನೋಡಿ, ಫಲ ನುಡಿದಿರುವ ನನ್ನ ಅನುಭವ ಮತ್ತು ಗುರುಗಳ ಆಶೀರ್ವಾದ ನೀಡಿರುವ ವರ ಇದು.
Saturn Transit 2020: ಮಕರದಲ್ಲಿ ಶನಿ ಸಂಚಾರ- ದ್ವಾದಶ ರಾಶಿ ಫಲಾಫಲ
ರಾಶಿ, ನಕ್ಷತ್ರ, ಹುಟ್ಟಿದ ಇಸವಿ ಇವಿಷ್ಟನ್ನು ಹೇಳಿದರೆ ಮುಂದಿನ ಭವಿಷ್ಯ- ಈಗಿನ ಸ್ಥಿತಿಯನ್ನು ತಿಳಿದುಕೊಳ್ಳುವುದು ಕಷ್ಟದ ಸಂಗತಿ ಏನಲ್ಲ. ಆದರೆ ಪರಿಹಾರವನ್ನು ಸೂಚಿಸಬೇಕು ಅಂದರೆ ಆ ವ್ಯಕ್ತಿಯೇ ಎದುರಿಗೆ ಕೂರಬೇಕು ಅಥವಾ ಕನಿಷ್ಠ ಅವರ ಮುಖ ನೋಡಬೇಕು, ಧ್ವನಿ ಕೇಳಬೇಕು. ಇರಲಿ, ಆರಂಭದಲ್ಲಿ ಪ್ರಸ್ತಾವ ಮಾಡಿದಂತೆ ಜೀವನದಲ್ಲಿ ದೊಡ್ಡ ಎತ್ತರಗಳನ್ನು ತಲುಪುವ ಆ ನಾಲ್ಕು ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಮಿಥುನ
ಈ ರಾಶಿಯವರು ಅದ್ಯಾವ ಪರಿಯಲ್ಲಿ ಮಹತ್ವಾಕಾಂಕ್ಷಿಗಳು ಅಂದರೆ, ಎಂಥ ಎತ್ತರದ ಬೆಟ್ಟ ಏರಿದ ನಂತರವೂ ಹೊಸ ಗುರಿಯನ್ನು ಹುಡುಕಿಕೊಂಡು ಹೊರಡುತ್ತಾರೆ. ಇತರರು ಇವರ ಬಗ್ಗೆ ಹೊಗಳುತ್ತಿರುವ- ಮೆಚ್ಚುತ್ತಿರುವ ಹೊತ್ತಿನಲ್ಲೇ ಹೊಸ ಎತ್ತರ- ಗುರಿ ಮುಂದೆ ಯಾವುದಿದೆ ಎಂಬುದನ್ನು ಚಿಂತಿಸುತ್ತಿರುತ್ತಾರೆ. ಇವರ ರಾಶ್ಯಾಧಿಪತಿ ಬುಧ. ಬುದ್ಧಿ- ಮನಸ್ಸು ಪಾದರಸದಂತೆ ಓಡುತ್ತಲೇ ಇರುತ್ತದೆ. ಬಾಲ್ಯದಿಂದಲೂ ಆಳವಾದ ಆಲೋಚನೆಯನ್ನು ರೂಢಿಸಿಕೊಳ್ಳುವ ಇವರು, ತಂದೆ- ತಾಯಿ ಅಥವಾ ಇನ್ಯಾರದೇ ಗುರುತಿನ ಮೂಲಕ ತಾವು ಬೆಳೆಯಬೇಕು ಎಂಬ ಮನೋಭಾವದವರಲ್ಲ. ಆದ್ದರಿಂದ ತಮ್ಮ ಬೆಳವಣಿಗೆಗೆ ಅಗತ್ಯ ಇರುವುದನ್ನೆಲ್ಲ ಇಪ್ಪತ್ತು- ಇಪ್ಪತ್ತೈದನೇ ವಯಸ್ಸಿನ ತನಕ ಸಂಗ್ರಹಿಸುತ್ತಾ, ಕಲಿಯುತ್ತಾ ಹೋಗುತ್ತಾರೆ. ದಾರಿಯುದ್ದಕ್ಕೂ ಎದುರಾಗುವ ಅವಮಾನಗಳನ್ನು ನುಂಗಿಕೊಂಡು, ಸುಮ್ಮನಾಗುತ್ತಾರೆ. ಒಂದು ಜಂಪಿಂಗ್ ಬೋರ್ಡ್ ಇವರಿಗೆ ಸಿಗುತ್ತಿದ್ದಂತೆಯೇ ತಲೆ ತಗ್ಗಿಸಿ- ಮೈ ಬಗ್ಗಿಸಿ ಕೆಲಸ ಮಾಡುತ್ತಾ ಸಾಗುತ್ತಾರೆ. ಒಂದು ಮುಗಿಯುತ್ತಿದ್ದಂತೆ ಮತ್ತೊಂದು, ಅದಾಗುತ್ತಿದ್ದಂತೆ ಇನ್ನೊಂದು ಎತ್ತರಕ್ಕೆ ಏರುತ್ತಾ ಸಾಗುತ್ತಾರೆ. ಇವರು ಹುಟ್ಟುವ ಸಂದರ್ಭದಲ್ಲಿ ಮನೆಯಲ್ಲಿ ಎಂಥ ಆರ್ಥಿಕ ಅನನುಕೂಲ ಇದ್ದರೂ ಇವರ ದುಡಿಮೆಯಿಂದ, ಬುದ್ಧಿವಂತಿಕೆಯಿಂದ ಅವೆಲ್ಲ ದೂರವಾಗುತ್ತವೆ.
ಕರ್ಕಾಟಕ
ಪುನರ್ವಸು ನಕ್ಷತ್ರದ ನಾಲ್ಕನೇ ಪಾದ, ಪುಷ್ಯ ಹಾಗೂ ಆಶ್ಲೇಷಾ ನಕ್ಷತ್ರದ ನಾಲ್ಕೂ ಪಾದಗಳು ಕರ್ಕಾಟಕ ರಾಶಿ ಆಗುತ್ತವೆ. ಯಾರದಾದರೂ ಆಶ್ಲೇಷಾ ನಕ್ಷತ್ರ ಅಂದರೆ ಅವರಿಗೆ ಸರ್ಪ ದೋಷ ಇರುತ್ತದೆ ಎಂಬುದು ನಿಶ್ಚಿತ. ಹಾಗಂತ ಇದನ್ನು ನೆಗೆಟಿವ್ ಆದ ಧ್ವನಿಯಲ್ಲಿ ಹೇಳುತ್ತಿಲ್ಲ. ಏಕೆಂದರೆ, ಜಾತಕ ಅಂದರೇನೇ ಹೋದ ಜನ್ಮದಲ್ಲಿ ಮಾಡಿದ ಪಾಪ- ಪುಣ್ಯಗಳ ಫಲಿತಾಂಶ. ಆದ್ದರಿಂದ ಈ ನಕ್ಷತ್ರದವರಿಗೆ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದ ಅಗತ್ಯ ಇರುತ್ತದೆ. ಈ ನಕ್ಷತ್ರದ ನೆರಳು ಪುಷ್ಯ ನಕ್ಷತ್ರದ ಮೇಲೂ ಬೀಳುವುದರಿಂದ ಇದೇ ಪ್ರಭಾವ ಇರುತ್ತದೆ. ಈ ರಾಶಿಯವರಿಗೆ ಅಂಥದ್ದು ಏನಾಗುತ್ತದೆ? ಬಾಲ್ಯದಿಂದಲೂ ಉತ್ತಮ ವಾತಾವರಣ ಸಿಗುವುದಿಲ್ಲ. ಇವರ ಸಾಮರ್ಥ್ಯದ ಬಗ್ಗೆ ಕುಹಕ ಕೇಳಿಸಿಕೊಳ್ಳುತ್ತಾ ಬೆಳೆಯುತ್ತಾರೆ. ಪೆಟ್ಟು ಬಿದ್ದು ಬಿದ್ದು, ಅದೇ ಇವರ ಪಾಲಿಗೆ ಪಾಠ ಹೇಳಿಕೊಟ್ಟಿರುತ್ತದೆ. ಆ ಪಾಠದ ಮೂಲಕ ಇವರು ವಿಪರೀತ ಹಠವಾದಿಗಳಾಗುತ್ತಾರೆ. ಸಾಧಿಸಬೇಕಾದ್ದನ್ನು ಮೊಂಡುತನದಿಂದಲಾದರೂ ಸಾಧಿಸುತ್ತಾರೆ. ಅದು ಬೇಕು ಅಂದರೆ ಬೇಕು ಅಷ್ಟೇ. ದಕ್ಕಿಸಿಕೊಳ್ಳುವ ತನಕ ಬಿಡುವ ಅಸಾಮಿಗಳು ಇವರಲ್ಲ. ಆಶ್ಲೇಷಾ ನಕ್ಷತ್ರದ ಬಗ್ಗೆಯೇ ಈ ಹಿಂದೆ ಒನ್ ಇಂಡಿಯಾ ಕನ್ನಡದಲ್ಲಿ ಬಂದಿದ್ದ ಲೇಖನವನ್ನು ಓದಿ. ಇನ್ನಷ್ಟು ಸ್ಪಷ್ಟವಾಗುತ್ತದೆ.
ಕನ್ಯಾ
ಇವರ ರಾಶ್ಯಾಧಿಪತಿ ಬುಧ. ಕನ್ಯಾ ರಾಶಿಯವರೆಂದರೆ ಪರ್ಫೆಕ್ಷನಿಸ್ಟ್ ಗಳು. ಆಂದುಕೊಂಡ ಕೆಲಸಗಳನ್ನು ಅಂದುಕೊಂಡ ರೀತಿಯಲ್ಲೇ ಮಾಡಿ ಮುಗಿಸುವಂಥವರು. ಯಾವುದೇ ರಿಸ್ಕ್ ಮೈ ಮೇಲೆ ಹಾಕಿಕೊಳ್ಳುವಂಥವರಲ್ಲ. ಇವರಿಗೂ ಸಣ್ಣ ವಯಸ್ಸಿನಿಂದ ನೋಡಿದ ಬಡತನವು ಚೆನ್ನಾಗಿ ಪಾಠ ಕಲಿಸಿರುತ್ತದೆ. ಇವರಲ್ಲೂ ತಮ್ಮ ಸಾಧನೆಯ ಬಗ್ಗೆ ಸದಾ ಅಸಂತೃಪ್ತಿ ಇರುತ್ತದೆ. ಹೊಸದನ್ನು ಕಲಿಯುವುದರಲ್ಲಿ ಮಹಾನ್ ಚುರುಕು. "ನಿನ್ನಿಂದ ಇದನ್ನು ಮಾಡಲಿಕ್ಕೆ ಆಗಲ್ಲ" ಎಂಬ ಮಾತನ್ನು ಕೇಳಿಸಿಕೊಂಡು ಬೆಳೆಯುವ ಇವರಲ್ಲಿ ಹಟವು ಆಲದ ಮರವಾಗಿ ಬೆಳೆದಿರುತ್ತದೆ. ತಮ್ಮ ಕುಟುಂಬದ ಬಗ್ಗೆ ವಿಪರೀತ ಕಾಳಜಿ ಇರುವ ಇವರು, ತಾವು ಪಟ್ಟ ಕಷ್ಟ ಕುಟುಂಬದಲ್ಲಿ ಇನ್ಯಾರೂ ಪಡಬಾರದು ಎಂಬ ಕಾರಣಕ್ಕೆ ನಾನಾ ಪ್ರಯತ್ನಗಳನ್ನು ಪಟ್ಟು, ಮೇಲಿನ ಹಂತಕ್ಕೆ ಹೋಗುತ್ತಾರೆ. ಇವರ ಜೀವನದಲ್ಲಿ ಅದೃಷ್ಟಕ್ಕಿಂತ ಪ್ರಯತ್ನದ ಫಲಿತಾಂಶವೇ ಹೆಚ್ಚಾಗಿರುತ್ತದೆ. ಮೂವತ್ತನೇ ವಯಸ್ಸಿನ ನಂತರ ಇವರ ಪಾಲಿಗೆ ಭಾಗ್ಯೋದಯ ಆಗುತ್ತದೆ. ಸಮಾಜದಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರ ಸಂಪರ್ಕ ದೊರೆಯುತ್ತದೆ. ಬುಧನ ಕಾರಕತ್ವ ಇರುವಂಥ ಕ್ಷೇತ್ರದಲ್ಲಿ ಮುಂದುವರಿದು, ದೊಡ್ಡ ಮಟ್ಟದ ಯಶಸ್ಸನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ವೃಶ್ಚಿಕ
ಈ ರಾಶಿಯವರಿಗೆ ಚಂದ್ರ ನೀಚ. ಅಂದರೆ ಉತ್ತಮ ಫಲಗಳನ್ನು ನೀಡಲ್ಲ. ಬಾಲ್ಯದಲ್ಲಿ ತಾಯಿ ಪ್ರೀತಿಯಿಂದ ವಂಚಿತರಾಗುತ್ತಾರೆ. ಚಂದ್ರ ಮನಸ್ಸಿನ ಕಾರಕ ಕೂಡ ಹೌದು. ಆದ್ದರಿಂದ ಮನಸ್ಸಿನ ಮೇಲೆ ಪದೇಪದೇ ಘಾತ ಆಗುತ್ತದೆ. ಪೆಟ್ಟು ಬಿದ್ದು, ವಂಚನೆಗೆ ಸಿಲುಕಿಕೊಂಡು, ಅವಮಾನಗಳನ್ನು ಎದುರಿಸಿ ಮೇಲೇಳುವ ಹೊತ್ತಿಗೆ ನಲವತ್ತು ವರ್ಷದ ಹೊಸ್ತಿಲಲ್ಲಿ ಇರುತ್ತಾರೆ. ಅಲ್ಲಿಂದ ಶುರುವಾಗುತ್ತದೆ ಇವರ ಜೈತ್ರ ಯಾತ್ರೆ. ಈ ರಾಶಿಯವರು ಇಲ್ಲಿಗೆ ಮಾತ್ರ ತಲುಪುತ್ತಾರೆ, ಇಷ್ಟೇ ಇವರ ಮಿತಿ ಎನ್ನಲು ಸಾಧ್ಯವೇ ಇಲ್ಲ. ಏಕೆಂದರೆ ಅಂಥ ಯಾವ ಮಿತಿಯೂ ಇವರಿಗಿಲ್ಲ. ಆದರೆ ನಲವತ್ತು ವರ್ಷ ಕಳೆಯುವ ತನಕ ಯಶಸ್ಸು ಪಡೆಯಲು ಇವರು ಮಾಡುವ ಎಲ್ಲ ಪ್ರಯತ್ನಗಳಿಂದಲೂ ಸೀಮಿತವಾದ ಫಲ ಅಥವಾ ಯಾವುದೇ ಫಲ ಸಿಗದೇ ಇರುವ ಸಾಧ್ಯತೆಯೂ ಇದೆ. ಮಹಾನ್ ಹಟವಾದಿಗಳಾದ ಇವರದು ಶುದ್ಧ ಸೈನಿಕನ ಮನಸ್ತತ್ವ. ಹೋರಾಟದ ಮನೋಭಾವ. ಇವರಿಂದ ಏನನ್ನೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹಾಗೆಲ್ಲ ಸುಲಭಕ್ಕೆ ಬಗ್ಗುವ ಜಾಯಮಾನವೂ ಇವರದಲ್ಲ. ಕೌಟುಂಬಿಕ ಹಿನ್ನೆಲೆ, ಬಾಲ್ಯದಲ್ಲಿ ಕಲಿತ ಪಾಠ, ಬಿದ್ದ ಪೆಟ್ಟಿನಿಂದ ಮಾನಸಿಕ ವಿಪರೀತ ಗಟ್ಟಿ ಆಗಿರುತ್ತಾರೆ.