ಸುಮಲತಾ ವರ್ಸಸ್ ನಿಖಿಲ್ ಕುಮಾರಸ್ವಾಮಿ; ಯಾರಿಗುಂಟು ಗ್ರಹ ಬಲ?
Recommended Video
ಈ ಸಲದ ಲೋಕಸಭೆ ಚುನಾವಣೆ ಬಗ್ಗೆ ಸಾಧ್ಯವಾದಷ್ಟೂ ಭವಿಷ್ಯ ಹೇಳಬಾರದು ಎಂಬುದು ನನ್ನ ನಿಲುವು. ಆ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಕೆಲವು ವ್ಯಕ್ತಿಗಳ ಜಾತಕವನ್ನು ಆಧರಿಸಿ ಗುಣಾವಗುಣಗಳನ್ನು ಹೇಳಬಹುದಲ್ಲಾ ಎಂದು ಕೆಲವು ಆಪ್ತರು ಒತ್ತಾಯ ಮಾಡಿದ್ದರಿಂದ ಈ ಲೇಖನ ನೀವು ಓದುತ್ತಿದ್ದೀರಿ.
ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಈಗ ವಿಪರೀತ ಚರ್ಚೆ ಆಗುತ್ತಿದೆ. ಒಂದು ಕಡೆ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಹಾಗೂ ಮತ್ತೊಂದು ಕಡೆಯಿಂದ ಪಕ್ಷೇತರರಾಗಿ ಸುಮಲತಾ ಅವರು ಅಖಾಡದಲ್ಲಿ ಇದ್ದಾರೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ, ಇದು ಖಂಡಿತಾ ಜಿದ್ದಾಜಿದ್ದಿನ ಹೋರಾಟ. ಏಕೆಂದರೆ, ಇಬ್ಬರದೂ ವೃಶ್ಚಿಕ ರಾಶಿ. ಎರಡೂ ಜಾತಕದಲ್ಲಿ ಶನಿ ಬಲಿಷ್ಠ ಹಾಗೂ ಚಂದ್ರ ದುರ್ಬಲ.
ದೇವರ ದಯೆಯಿಂದ ಸುಸೂತ್ರವಾಗಿ ಚುನಾವಣೆ ನಡೆಯಲಿ: ಅಮ್ಮಣ್ಣಾಯ
ಆದರೆ, ಸುಮಲತಾ ಅವರ ಪಾಲಿಗೆ ಕೆಲವು ಮೂಲಸಂಗತಿಗಳು ಅನುಕೂಲಕರ ಆಗಿವೆ. ಯಾರ ಜಾತಕದಲ್ಲಿ ಚಂದ್ರ ನೀಚನಾಗಿರುತ್ತಾನೋ ಅಂದರೆ ವೃಶ್ಚಿಕ ರಾಶಿಯವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು ನಲವತ್ತರ ವಯಸ್ಸಿನ ನಂತರ. ಆ ವರೆಗೆ ಅವರು ತಲುಪಿದ ಎತ್ತರ ಒಂದು ತೂಕದ್ದಾದರೆ, ಆ ನಂತರ ಏರುವ ಎತ್ತರ ಮತ್ತೊಂದು ಬಗೆಯದು. ಮತ್ತೊಂದು ಶಿಖರ ಅದು.
ಪಕ್ಷೇತರ ಸ್ಪರ್ಧೆಯಿಂದ ಸುಮಲತಾಗೆ ಪ್ಲಸ್
ನಿಖಿಲ್ ಕುಮಾರಸ್ವಾಮಿ ಅವರದು ಸುಮ್ಮನೆ ತೆಗೆದು ಹಾಕುವಂಥ ಜಾತಕವೂ ಅಲ್ಲ್, ವ್ಯಕ್ತಿತ್ವವೂ ಅಲ್ಲ. ಆದರೆ ಈ ರಾಶಿಯವರಿಗೆ ದೊಡ್ಡ ಮಟ್ಟದ ಅದೃಷ್ಟ ಪ್ರಾಪ್ತಿ ಆಗುವುದು ತಮ್ಮ ನಲವತ್ತನೇ ವಯಸ್ಸಿನ ನಂತರ. ಅಷ್ಟರಲ್ಲಿ ಬಹಳ ಮಾಗಿ, ಬಾಗಿ, ಏರಿಳಿತ ಕಂಡು ಅದೆಂಥ ದೊಡ್ಡ ಜವಾಬ್ದಾರಿಯನ್ನಾದರೂ ಹೊರುವ ಸಾಮರ್ಥ್ಯ, ಚೈತನ್ಯ ಇವರಿಗೆ ಬಂದಿರುತ್ತದೆ. ಈಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪರಸ್ಪರ ಎದುರಾಗಿರುವವರು ಇಬ್ಬರು ವೃಶ್ಚಿಕ ರಾಶಿಯವರು. ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರದೂ ಒಂದೇ ರಾಶಿ. ಹತ್ತಿರ ಹತ್ತಿರ ಒಂದೇ ಬಗೆಯ ಗ್ರಹ ಸ್ಥಿತಿ ಕೂಡ. ಆದರೆ ಈಗಾಗಲೇ ಹೇಳಿದಂತೆ ನಲವತ್ತು ವಯಸ್ಸು ದಾಟಿರುವ ಸುಮಲತಾ ಅವರಿಗೆ ಗ್ರಹ ಸ್ಥಿತಿಗಳು ಪೂರಕವಾಗುತ್ತವೆ. ಯಾವುದೇ ಪಕ್ಷದ ಚಿಹ್ನೆ ಅಡಿಯಲ್ಲಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದು ಪ್ಲಸ್ ಆಗಲಿದೆ. ಏಕೆಂದರೆ ಅವರ ಗ್ರಹ ಸ್ಥಿತಿಯ ಪರಿಣಾಮವೇ ಸಂಪೂರ್ಣ ಕೆಲಸ ಮಾಡುತ್ತದೆ ವಿನಾ ಉಳಿದ ಅಂಶಗಳು ಪರಿಣಾಮ ಬೀರುವುದಿಲ್ಲ.
ವಿಚಿತ್ರ ಬೆಳವಣಿಗೆ, ಸನ್ನಿವೇಶಗಳಿಗೆ ಸಾಕ್ಷಿ
ಈ ವಿಷಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಚುನಾವಣೆ ಭವಿಷ್ಯದ ಮೇಲೆ ಪರಿಣಾಮ ಬೀರುವ ಅಂಶಗಳು ಸಾಕಷ್ಟಿವೆ. ಏಕೆಂದರೆ, ಅವರು ಜೆಡಿಎಸ್ ಚಿಹ್ನೆ ಅಡಿ ನಿಲ್ಲುತ್ತಿದ್ದಾರೆ. ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡ ನಂತರ ಇವರನ್ನು ಅಭ್ಯರ್ಥಿ ಮಾಡಲಾಗಿದೆ. ಆದ್ದರಿಂದ ನಾನಾ ಅಂಶಗಳು, ವ್ಯಕ್ತಿಗಳು ಪರಿಣಾಮ ಬೀರುತ್ತಾರೆ. ಇನ್ನು ಮಾರ್ಚ್ 31ರಿಂದ ಏಪ್ರಿಲ್ 23ರ ತನಕ ಧನುಸ್ಸು ರಾಶಿಯಲ್ಲಿ ಗುರು ಗ್ರಹ ಸಂಚಾರ ಆಗುತ್ತದೆ. ಅದೇ ಸಮಯದಲ್ಲಿ ಅಲ್ಲಿ ಕೇತು, ಶನಿ ಗ್ರಹಗಳು ಇರುತ್ತವೆ. ಈ ಅವಧಿಯು ತೀರಾ ಕೆಳ ಮಟ್ಟದ ರಾಜಕಾರಣಕ್ಕೆ ಸಾಕ್ಷಿ ಆಗುತ್ತದೆ. ಜನರು ಯಾರನ್ನು ಸಂಭಾವಿತರು, ಮುತ್ಸದ್ದಿಗಳು ಎಂದು ಭಾವಿಸಿದ್ದಾರೋ ಗೌರವಿಸುತ್ತಿದ್ದಾರೋ ಅಂಥವರಿಂದಲೇ ಅಪಶಬ್ದಗಳು ಬರುತ್ತವೆ. ಗುರುವಿನ ಸ್ವ ಕ್ಷೇತ್ರ ಧನುಸ್ಸು ರಾಶಿಯೇ ಆದರೂ ಉತ್ತಮ ಫಲ ನೀಡುವ ಬಲ ದೇವ ಗುರುವಿಗೆ ಇರುವುದಿಲ್ಲ. ಏಕೆಂದರೆ ಶನಿ ಹಾಗೂ ಕೇತುವಿನ ಜತೆಯಲ್ಲಿ ಗುರು ಇರುವುದರಿಂದ ವಿಚಿತ್ರ ಬೆಳವಣಿಗೆಗಳು, ಹೇಳಿಕೆಗಳು, ಸಂಗತಿಗಳು ನೋಡಬೇಕಾದ-ಕೇಳಬೇಕಾದ ಸನ್ನಿವೇಶ ಇದೆ.
ಒಂದು ತಲೆಮಾರಿನ ರಾಜಕಾರಣಿಗಳು ವೃತ್ತಿ ಬದುಕು ಅಂತ್ಯ
ತೇಜೋವಧೆ ಮಾಡುವ ಹೇಳಿಕೆಗಳು ಹೆಚ್ಚು ಕೇಳಿಬರಲಿದ್ದು, ಅದರ ಲಾಭ ಹಾಗೆ ಹೇಳಿಕೆ ನೀಡುವವರ ವಿರೋಧಿ ಬಣಕ್ಕೆ ದೊರೆಯಲಿದೆ. ಹಿರಿಯರ ಮಾತು, ಅನುಭವ, ಮಾರ್ಗದರ್ಶನವನ್ನು ಧಿಕ್ಕರಿಸಿ, ನಾನೇ ಸರಿ- ನನಗೆ ಎಲ್ಲ ಗೊತ್ತಿದೆ ಎಂಬ ಭಾವನೆ ವಯಸ್ಸಿನಲ್ಲಿ ಕಿರಿಯರಾದವರಿಗೆ ಬರುತ್ತದೆ. ಕೆಲವು ಒತ್ತಡದ ಸನ್ನಿವೇಶದಲ್ಲಿ ಬಾಯಿ ತಪ್ಪಿ ಆಡುವ ಮಾತುಗಳಿಂದ ಜನರ ಮಧ್ಯೆ ನಿಂದೆಗೆ ಗುರಿ ಆಗಬೇಕಾಗುತ್ತದೆ. ಇದೊಂದು ಬಗೆಯಲ್ಲಿ ಯುದ್ಧ ಸ್ಥಿತಿಯನ್ನು ಸೂಚಿಸುತ್ತಿದ್ದು, ಇಡೀ ದೇಶದಲ್ಲಿ ಇಂಥದ್ದೇ ಸನ್ನಿವೇಶ ನಿರ್ಮಾಣ ಆಗುತ್ತದೆ. ಒಂದು ತಲೆಮಾರಿನ ಹಿರಿಯ ರಾಜಕಾರಣಿಗಳ ವೃತ್ತಿ ಬದುಕು ಈ ಚುನಾವಣೆಯೊಂದಿಗೆ ಕೊನೆ ಆಗಲಿದ್ದು, ಕೆಲವರು ಅವಮಾನ ಎದುರಿಸುವ ಸಾಧ್ಯತೆಗಳಿವೆ.
ಸೋಲೂ ಇಲ್ಲ, ಗೆಲುವೂ ಇಲ್ಲ ಟೈ ಆಗಬಹುದಾ?
ಒಟ್ಟಾರೆ ಹೇಳಬೇಕೆಂದರೆ, ಸುಮಲತಾ ಹಾಗೂ ನಿಖಿಲ್ ಇಬ್ಬರದ್ದೂ ಅನೂರಾಧ ನಕ್ಷತ್ರ. ಒಂದೇ ರಾಶಿ. ಸ್ಪರ್ಧೆ ಒಂದೇ ಕ್ಷೇತ್ರ. ಅದು ಮಂಡ್ಯ. ಇಬ್ಬರೂ ಚಿತ್ರ ನಟರು. ಒಬ್ಬರು ಹಳಬರು, ಇನ್ನೊಬ್ಬರು ಹೊಸಬರು. ಇಬ್ಬರೂ ರಾಜಕೀಯಕ್ಕೆ ಹೊಸಬರು! ಇವರ ಸ್ಪರ್ಧೆಯ ಫಲ ಏನಾದೀತು? ಒಬ್ಬರು ಸ್ವತಂತ್ರ ಅಭ್ಯರ್ಥಿ. ಇನ್ನೊಬ್ಬರು ಜೆಡಿಎಸ್ ಅಭ್ಯರ್ಥಿ. ಒಬ್ಬರಿಗೆ ಗಾಡ್ ಫಾದರ್ ಸದ್ಯ ಯಾರೂ ಇಲ್ಲ. ಇನ್ನೊಬ್ಬರಿಗೆ ತಾತ, ತಂದೆ, ದೊಡ್ಡಪ್ಪ, ಅಮ್ಮ- ಚಿಕ್ಕಮ್ಮರ ಬಲ ಇದೆ. ಇನ್ನೊಬ್ಬರಿಗೆ ಅಭಿಮಾನಿಗಳ ಬಲ ಮಾತ್ರ ಇರುವುದು. ಹಾಗಿದ್ದರೆ ವಿಜಯ ಮಾಲೆ ಯಾರ ಕೊರಳಿಗೆ? ಸುಮಲತಾ ಜಾತಕದಲ್ಲಿ ಬಲಿಷ್ಠ ಶನಿ ಸ್ವಕ್ಷೇತ್ರದಲ್ಲೇ ಇದ್ದಾನೆ. ನಿಖಿಲ್ ಜಾತಕದಲ್ಲೂ ಬಲಿಷ್ಠ ಶನಿ ಅಗ್ನಿತತ್ವದ ರಾಶಿಯಲ್ಲೇ ಇದ್ದಾನೆ. ಹಾಗಾದರೆ ಇಲ್ಲಿ ಸೋಲೂ ಇಲ್ಲ ಗೆಲುವೂ ಇಲ್ಲ. ಹಾಗಾದರೆ ಟೈ? ನಂತರ ಲಾಟರಿ?
ವೃಶ್ಚಿಕ ರಾಶಿಯವರ ಯಶಸ್ಸು ಲೆಕ್ಕಾಚಾರ ಹೀಗೆ
ಇಲ್ಲ, ಹಾಗಾಗುವುದಿಲ್ಲ. ಯಾರಿಗೆ ಜಾತಕದಲ್ಲಿ ಚಂದ್ರನು ನೀಚನೋ ಅವರ ಜೀವಿತದ ಉತ್ತರಾರ್ಧದಲ್ಲೇ ಅಧಿಕಾರಕ್ಕೆ ಬರುವುದು. ಮೋದಿ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಇವರೆಲ್ಲರಿಗೂ ನೀಚ ಚಂದ್ರ. ಈ ತತ್ವ ನೋಡಿದಾಗ ನಿಖಿಲ್ ಕುಮಾರಸ್ವಾಮಿಗೆ ಇದು ಕಾಲ ಪಕ್ವವಲ್ಲ. ಅಭಿಮಾನಿಗಳ ಒತ್ತಡಕ್ಕೆ ಮಣಿದು ನಿಲ್ಲುವುದು ತನ್ನ ವರ್ಚಸ್ಸನ್ನು ಹಾಳುಮಾಡಿಕೊಳ್ಳುವಂತದ್ದಾಗಿದೆ. ಒಂದು ವೇಳೆ ಇವರು ಈಗ ರಾಜಕೀಯದಲ್ಲಿ ಕೆಲಸ, ಪಕ್ಷದ ಕೆಲಸ ಮಾಡಿ ಇನ್ನೊಂದು ಹತ್ತು ವರ್ಷದ ಬಳಿಕ ಚುನಾವಣೆಗೆ ನಿಂತರೆ ಅತ್ಯಂತ ಬಲಿಷ್ಠರಾಗಬಹುದು. ಈಗ ಕಷ್ಟ ಆದೀತು.