ರಾಜ್ಯದಲ್ಲಿ ಬಿಜೆಪಿಗೆ ಸರಳ ಬಹುಮತ: ಕಬ್ಯಾಡಿ ಜಯರಾಮಾಚಾರ್ಯ ಭವಿಷ್ಯ
Recommended Video
ಈ ಸಲದ ವಿಧಾನಸಭೆ ಚುನಾವಣೆಯ ದಿನಾಂಕವೇ ಅನಿಶ್ಚಿತತೆಯನ್ನು ಸೂಚಿಸುತ್ತಿದೆಯಾ? ಜ್ಯೋತಿಷ್ಯ ರೀತಿ ಹೇಳುವುದಾದರೆ ಹೌದು ಎನ್ನುತ್ತಾರೆ ಜ್ಯೋತಿಷಿ ಕಬ್ಯಾಡಿ ಜಯರಾಮಾಚಾರ್ಯ. ಸಾಮಾನ್ಯವಾಗಿ ತಾವಾಗಿಯೇ ರಾಜಕೀಯ ಕುರಿತು ಭವಿಷ್ಯ ನುಡಿಯದ ಅವರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿ, ಕೆಲವು ಪ್ರಶ್ನೆಗಳನ್ನು ಮುಂದಿಟ್ಟು, ಉತ್ತರ ಪಡೆದಿದೆ.
ಅವರು ನೀಡಿದ ಉತ್ತರ ಬಹಳ ಆಸಕ್ತಿಕರವಾಗಿದೆ. "ಕರ್ನಾಟಕದ ಈಗಿನ ರಾಜಕೀಯ ಸನ್ನಿವೇಶದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಸಿದ್ದರಾಮಯ್ಯ, ಯಡಿಯೂರಪ್ಪ, ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಎಲ್ಲರದೂ ವೃಶ್ಚಿಕ ರಾಶಿಯೇ. ಗೋಚಾರ ರೀತಿಯಲ್ಲಿ ಎಲ್ಲರ ಸ್ಥಿತಿಯೂ ಒಂದೇ ರೀತಿ ಇದೆ" ಎನ್ನುತ್ತಾರೆ.
ಜ್ಯೋತಿಷ್ಯ: ಜೆಡಿಎಸ್, ಬಿಜೆಪಿಯ ಅಚ್ಚರಿ ಸಿಎಂ ಕ್ಯಾಂಡಿಡೇಟ್
ಇನ್ನು ಕುಮಾರಸ್ವಾಮಿ ಅವರದು ಆರಿದ್ರಾ ನಕ್ಷತ್ರ, ಮಿಥುನ ರಾಶಿ ಆಗುತ್ತದೆ. ಗುರು ಬಲವೇನೋ ಇದೆ. ಆದರೆ ಅವರಿಗೆ ದ್ವಿತೀಯದಲ್ಲಿ ರಾಹು, ಅಷ್ಟಮದಲ್ಲಿ ಕೇತು ಇರುವುದರಿಂದ ಅಂಥ ಒಳ್ಳೆ ಫಲ ಸಿಗುವುದು ಸಾಧ್ಯವಿಲ್ಲ. ಆದರೆ ಜನ್ಮ ಜಾತಕ ರೀತಿ ನೋಡಿದರೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಯೋಗಗಳು ಬಹಳ ಪ್ರಬಲವಾಗಿವೆ.
ನರೇಂದ್ರ ಮೋದಿ ಅವರಿಗೆ ಉತ್ತಮ ಯೋಗಗಳ ಸಂಗಮ
ಯೋಗದ ವಿಚಾರಕ್ಕೆ ಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಕದಲ್ಲೂ ಕೆಲವು ಉತ್ತಮ ಯೋಗಗಳಿವೆ. ಆದರೆ ನರೇಂದ್ರ ಮೋದಿ ಅವರಿಗೆ ಶಶಿ-ಮಂಗಳ, ಪಂಚ ಮಹಾಪುರುಷ ಯೋಗ, ಮಹಾ ಸಾಮ್ರಾಜ್ಯ ಯೋಗ, ಬುದ್ಧಿ ಮಾತುರ್ಯ ಯೋಗ, ಗಜಕೇಸರಿ ಯೋಗ ಹೀಗೆ ಅಪರೂಪದಲ್ಲಿ ಅಪರೂಪ ಎನಿಸುವಂಥ ಉತ್ತಮ ಯೋಗಗಳ ಸಂಗಮವೇ ಇದೆ. ಇನ್ನು ಅಮಿತ್ ಶಾ ಅವರದು ಭರಣಿ ನಕ್ಷತ್ರ. ಅವರ ಜಾತಕದಲ್ಲೂ ಒಳ್ಳೆ ಯೋಗಗಳಿದ್ದು, ಅವರಿಬ್ಬರು ರಾಜ್ಯದ ಚುನಾವಣೆ ಪ್ರಚಾರದ ನೇತೃತ್ವ ವಹಿಸಿರುವುದರಿಂದ ಬಿಜೆಪಿಗೆ ಅನುಕೂಲವಾಗಲಿದೆ. ಕರ್ನಾಟಕದಲ್ಲಿ ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿರಬಹುದು. ಆದರೆ ಹಣಾಹಣಿ ಎಂದು ನಡೆಯುತ್ತಿರುವುದು ನರೇಂದ್ರ ಮೋದಿ ಹಾಗೂ ಸಿದ್ದರಾಮಯ್ಯ ಮಧ್ಯೆ. ಅಂದಹಾಗೆ ಸಿದ್ದರಾಮಯ್ಯ ಅವರ ಜಾತಕದಲ್ಲಿ ಒಳ್ಲೆ ಯೋಗಗಳು ಇರುವುದರ ಕಾರಣಕ್ಕೆ ಮೋದಿ ಎದುರು ಕಾದಾಡಲು ಸಾಧ್ಯವಾಗುತ್ತಿದೆ.
ರಾಜ್ಯದಲ್ಲಿ ಬಿಜೆಪಿಗೆ ಸರಳ ಬಹುಮತ
ಗೋಚಾರ ರೀತಿಯಲ್ಲಿ ನರೇಂದ್ರ ಮೋದಿ ಅವರಿಗೆ ಬಹಳ ಚೆನ್ನಾಗಿದೆ ಅಂತೇನೂ ಅಲ್ಲ. ಆದರೆ ಅವರ ಜನ್ಮ ಜಾತಕದ ಯೋಗಗಳು ಸಹಾಯ ಮಾಡುತ್ತವೆ. ಇನ್ನು ಅಮಿತ್ ಶಾ ಅವರಿಗೆ ಜನ್ಮ ಜಾತಕದಲ್ಲಿ ಗುರು ಬಲಿಷ್ಠನಾಗಿದ್ದಾನೆ. ಶನಿ ಅನುಕೂಲವಾಗಿದ್ದಾನೆ. ರವಿ ಗ್ರಹ ಒಳ್ಳೆ ಸ್ಥಿತಿಯಲ್ಲಿದೆ. ಈ ಎಲ್ಲ ಕಾರಣದಿಂದ ಕದನದ ಮುಂಚೂಣಿಯಲ್ಲಿರುವ ಅಮಿತ್ ಶಾ ಹಾಗೂ ಮೋದಿ ಜೋಡಿಯಿಂದಾಗಿ ರಾಜ್ಯದಲ್ಲಿ ಬಿಜೆಪಿಯು ಸರಳ ಬಹುಮತ ಪಡೆಯುವ ಸಾಧ್ಯತೆ ಇದೆ. ಆದರೆ ಇಲ್ಲೊಂದು ಸಮಸ್ಯೆ ಹೊಸದಾಗಿ ಉದ್ಭವಿಸಿದೆ.
ಅನಿಶ್ಚಿತತೆ ಸೂಚಿಸುತ್ತಿರುವ ಚುನಾವಣೆ ದಿನಾಂಕಗಳು
ಆದರೆ, ಚುನಾವಣಾ ಆಯೋಗ ಘೋಷಣೆ ಮಾಡಿರುವ ಮತದಾನ ಹಾಗೂ ಮತ ಎಣಿಕೆ ದಿನಾಂಕಗಳು ಅನಿಶ್ಚಿತತೆಯನ್ನು ಸೂಚಿಸುತ್ತಿವೆ. ಅದರರ್ಥ ಬಿಜೆಪಿಗೆ ಸರಳ ಬಹುಮತ ಬಂದ ಪಕ್ಷದಲ್ಲಿ ಯಾವಾಗಲೂ ಒಂದು ಆತಂಕ ಇದ್ದೇ ಇರುತ್ತದೆ. ಒಂದು ವೇಳೆ ಬಹುಮತಕ್ಕೆ ಕೆಲವೇ ಸ್ಥಾನಗಳು ಕೊರತೆ ಬಂದರೆ, ಅಂಥ ಸಾಧ್ಯತೆ ಕಡಿಮೆ. ಆದರೆ ಈಗಿನ ಚುನಾವಣೆ ದಿನಾಂಕದ ಪ್ರಕಾರ ಕೆಲ ಸ್ಥಾನಗಳ ಕೊರತೆ ಬಂದರೆ, ಆಗ ಪಕ್ಷೇತರರೋ ಅಥವಾ ಜೆಡಿಎಸ್ ನ ಬೆಂಬಲ ಕೇಳಬೇಕಾಗಬಹುದು. ಅಂಥ ಸಂದರ್ಭದಲ್ಲಿ ಒಂದು ಅನಿಶ್ಚಿತತೆ ಮುಂದಿನ ಬಿಜೆಪಿ ಅಧಿಕಾರಾವಧಿಯಲ್ಲಿ ಇಣುಕುತ್ತಲೇ ಇರುತ್ತದೆ.
ಕಬ್ಯಾಡಿ ಜಯರಾಮಾಚಾರ್ಯರ ಸಂಪರ್ಕ ಸಂಖ್ಯೆ
ಮತದಾನದಂದು ಶನಿವಾರ, ಉತ್ತರಾಭಾದ್ರ ನಕ್ಷತ್ರ, ಮೀನ ರಾಶಿ. ಇನ್ನು ಮತ ಎಣಿಕೆ ದಿನ ಆರಂಭದಲ್ಲಿ ಭರಣಿ, ಆ ನಂತರ ಕೃತ್ತಿಕಾ ನಕ್ಷತ್ರ ಇದೆ. ಎರಡೂ ದಿನ ರಾಜ್ಯದ ಭವಿಷ್ಯದ ದೃಷ್ಟಿಯಿಂದ ಅಂಥ ಶುಭ ಸೂಚಕವಲ್ಲ. ಚುನಾವಣೆ ಆಯೋಗವು ಮುಹೂರ್ತ ನೋಡಿಯೇನೂ ದಿನಾಂಕ ಘೋಷಣೆ ಮಾಡುತ್ತಾರಾ? ಇದು ವಿಧಿ ಲಿಖಿತ. ಅವರಿಗೆ ಹಾಗೆ ಪ್ರೇರಣೆ ನೀಡಿದೆ. ಆ ಪ್ರೇರಣೆ ಏನನ್ನು ಸೂಚಿಸುತ್ತದೆ ಎಂದು ತಿಳಿಸುವುದಷ್ಟೇ ನನ್ನಂಥ ಜ್ಯೋತಿಷಿ ಕೆಲಸ. ಇದು ಕೂಡ ನೀವಾಗಿ ಕೇಳಿದ್ದಕ್ಕೆ ಹೇಳುತ್ತಿದ್ದೇನೆ ವಿನಾ ಪ್ರಚಾರವೋ ಮತ್ತೊಂದೋ ನನ್ನ ಉದ್ದೇಶವಲ್ಲ. ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ, ರಾಜ್ಯದಲ್ಲಿ ಸ್ಥಿರ ಸರಕಾರ ಬರಲಿ. ಅಭಿವೃದ್ಧಿಗೆ ಪೂರಕ ಆಗಲಿ.