ಜ್ಯೋತಿಷ್ಯ: ಈ 6 ರಾಶಿಯವರಿಗೆ ಅದೃಷ್ಟವೋ ಅದೃಷ್ಟ
ಜ್ಯೋತಿಷ್ಯ ನಂಬುವವರ ಪೈಕಿ ಬಹುಸಂಖ್ಯಾತರು ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ವಿದೇಶ ಪ್ರಯಾಣ... ಈ ವಿಚಾರಗಳ ಬಗ್ಗೆ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಈ ವರ್ಷದ ಮಟ್ಟಿಗಾದರೂ ಏನಾಗುತ್ತದೆ ತಿಳಿಸಿ ಎಂಬುದೇ ಹಲವರ ಮನವಿ ಆಗಿರುತ್ತದೆ. ಹೇಗೂ ಹೊಸ ವರ್ಷದ ಆರಂಭದಲ್ಲೇ ಇದ್ದೀವಿ ಆದ್ದರಿಂದ ನಿರ್ದಿಷ್ಟವಾಗಿ ಕೆಲ ರಾಶಿಯವರಿಗೆ ಆಗಬಹುದಾದ ಒಳ್ಳೆಯದನ್ನು ತಿಳಿಸುವ ಉದ್ದೇಶ ಇರುವ ಲೇಖನ ಇದು.
ಶುಭ ಫಲ ಅಂದರೆ ಯಾವ ರಾಶಿಗೆ ಮತ್ತು ಅದು ಯಾವ ರೀತಿಯ ಶುಭ ಫಲ ಎಂಬುದು ಖಂಡಿತಾ ನಿಮ್ಮ ಮುಂದಿನ ಪ್ರಶ್ನೆ ಆಗಿರುತ್ತದೆ. ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಸಮಸ್ಯೆ ಅಥವಾ ಶುಭ ಫಲ ಕಡಿಮೆ ಆಗುತ್ತದೆ ಎಂಬುದು ಬಿಟ್ಟರೆ ಏಳೆಂಟು ತಿಂಗಳು ಉತ್ತಮ ಫಲ ಪಡೆಯುತ್ತೀರಿ.
ಈ ಆರು ರಾಶಿಯವರು ಕಡ್ಡಾಯವಾಗಿ ಓದಲೇಬೇಕಾದ ಶನಿ ಸಂಚಾರದ ಫಲ
ಮೇಷ, ಮಿಥುನ, ಸಿಂಹ, ವೃಶ್ಚಿಕ, ಕುಂಭ ರಾಶಿಯವರು ಈ ಬಗ್ಗೆ ಒಂದಿಷ್ಟು ಗಮನ ನೀಡಿ ಓದಿಕೊಳ್ಳಿ. ನಿರ್ದಿಷ್ಟ ವಿಷಯಗಳಲ್ಲಿ ಪ್ರಯತ್ನ ಪಟ್ಟರೆ ಯಶಸ್ಸು ನಿಮ್ಮದಾಗುತ್ತದೆ. ನೆನಪಿರಲಿ, ನಿರ್ದಿಷ್ಟವಾಗಿ ಈ ವಿಚಾರಗಳಿಗೇ ಪ್ರಯತ್ನಿಸಿದರೆ ಯಶಸ್ಸು. ಉತ್ತಮ ಸಮಯ ಅಲ್ಲವಾ? ಮುಟ್ಟಿದ್ದೆಲ್ಲ ಚಿನ್ನ ಎಂಬ ಭಾವನೆ ಬೇಡ.
ಮೇಷ
ಪಿತ್ರಾರ್ಜಿತವಾದ ಆಸ್ತಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಸರಿಯಾದ ಸಮಯ ಇದು. ಹೊಸದಾಗಿ ವ್ಯಾಪಾರ- ವ್ಯವಹಾರ ಶುರು ಮಾಡುವುದಕ್ಕಿಂತ ಕೌಟುಂಬಿಕ ಉದ್ಯಮಗಳು ಇದ್ದಲ್ಲಿ ಮುಂದುವರಿಸಿಕೊಂಡು ಹೋಗಲು ಸರಿಯಾದ ಸನ್ನಿವೇಶ ಸೃಷ್ಟಿಯಾಗಲಿದೆ. ವಿದೇಶದಲ್ಲಿ ಹಣ ಹೂಡಿಕೆ ಅಥವಾ ವಿದೇಶ ವ್ಯವಹಾರ ಮಾಡುವುದಿದ್ದಲ್ಲಿ ಕೂಡ ಪ್ರಯತ್ನ ಮಾಡಿ. ತಂದೆ ಕಡೆಯ ಸಂಬಂಧಿಕರು ನೆರವಿಗೆ ಬರುತ್ತಾರೆ. ಶೈಕ್ಷಣಿಕ ಸಂಸ್ಥೆಗಳು ನಡೆಸುತ್ತಿರುವವರಿಗೆ ದೀರ್ಘಾವಧಿಯ ಆಲೋಚನೆಗಳನ್ನು ಅನುಷ್ಠಾನ ಮಾಡಬಹುದು. ಭೂಮಿ ಖರೀದಿ ಸಹ ಮಾಡಬಹುದು.
ಮಿಥುನ
ನಿಮ್ಮ ರಾಶಿಯವರಿಗೆ ಎಂಟನೇ ಮನೆಯಲ್ಲಿ ಶನಿ ಇದ್ದರೂ ವೈವಾಹಿಕ ವಿಚಾರದಲ್ಲೂ ಪ್ರಯತ್ನಗಳು ಸಫಲವಾಗುವ ಸಾಧ್ಯತೆ ಇದೆ. ಇನ್ನು ಪಾರ್ಟನರ್ ಷಿಪ್ ವ್ಯವಹಾರಗಳಲ್ಲಿ ಯಶಸ್ಸು ಸಾಧಿಸಲು ಅವಕಾಶ ಇದೆ. ದಂಪತಿ ಮಧ್ಯೆ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಬಗೆಹರಿಸಿಕೊಳ್ಳಿ. ವಿದೇಶ ವ್ಯಾಸಂಗಕ್ಕೆ ಅವಕಾಶಗಳು ಇದ್ದಲ್ಲಿ ಪೂರ್ವಾಪರ ಚೆನ್ನಾಗಿ ವಿಚಾರಿಸಿ. ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಈ ಏಳೆಂಟು ತಿಂಗಳು ಉತ್ತಮ ಸಮಯ. ಆದ್ದರಿಂದ ಮದುವೆ, ನಿಶ್ಚಿತಾರ್ಥ, ಪ್ರೇಮ ನಿವೇದನೆ, ಪಾರ್ಟನರ್ ಷಿಪ್ ವ್ಯವಹಾರಗಳಿದ್ದಲ್ಲಿ ಈ ಸಮಯದಲ್ಲಿ ಮಾಡಿ.
Saturn Transit 2020: ಮಕರದಲ್ಲಿ ಶನಿ ಸಂಚಾರ- ದ್ವಾದಶ ರಾಶಿ ಫಲಾಫಲ
ಸಿಂಹ
ಮಕ್ಕಳ ಮದುವೆ, ಉಪನಯನ ಇತ್ಯಾದಿ ಶುಭ ಕಾರ್ಯ- ದೇವತಾರಾಧನೆ ಮಾಡುವುದಕ್ಕೆ ಸರಿಯಾದ ಸಮಯ ಇದು. ಸಂತಾನ ಅಪೇಕ್ಷಿತ ದಂಪತಿ ಪ್ರಯತ್ನಿಸಿದರೆ ಯತ್ನ ಫಲಿಸುವ ಅವಕಾಶ ಹೆಚ್ಚಿರುತ್ತದೆ. ಶೈಕ್ಷಣಿಕವಾಗಿಯೂ ಅತ್ಯುತ್ತಮವಾದ ಪ್ರಗತಿಯನ್ನು ಕಾಣಬಹುದು. ಕಟ್ಟಿರುವ ಮನೆಯನ್ನು ಖರೀದಿ ಮಾಡುವುದಿದ್ದರೆ ಇದು ಉತ್ತಮ ಸಮಯ. ಕೋರ್ಟ್ ವ್ಯಾಜ್ಯಗಳಿದ್ದಲ್ಲಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು. ಅಥವಾ ನಿಮ್ಮ ಪರವಾಗಿಯೇ ತೀರ್ಪು ಬಂದು, ಲಾಭದಾಯಕವಾಗುವ ಅವಕಾಶಗಳಿವೆ. ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ನಿವಾರಣೆ ಆಗಲಿವೆ.
ವೃಶ್ಚಿಕ
ಸಾಲ ಕೊಟ್ಟಿದ್ದಲ್ಲಿ ಅದು ಹಿಂತಿರುಗುವ ಅವಕಾಶಗಳಿವೆ. ಷೇರು- ರಿಯಲ್ ಎಸ್ಟೇಟ್ ಮೇಲೆ ಹಣ ಹೂಡಿಕೆ ಮಾಡಿದ್ದಲ್ಲಿ ದೊಡ್ಡ ಮಟ್ಟದ ಲಾಭ ದೊರೆಯುವ ಅವಕಾಶ ಇದೆ. ನಿಮ್ಮ ಮಾತಿಗೆ ಸಮಾಜದಲ್ಲಿ ಗೌರವ- ಮನ್ನಣೆ ದೊರೆಯಲಿದೆ. ಮಕ್ಕಳ ಸಲುವಾಗಿ ಹಣ ಹೂಡಿಕೆ ಮಾಡಬಹುದು ಅಥವಾ ಚಿನ್ನಾಭರಣವನ್ನು ಖರೀದಿಸಬಹುದು. ಕುಟುಂಬದ ಜತೆಗೆ ಆರಾಮದಾಯಕವಾಗಿ ಸಮಯ ಕಳೆಯಲು ವಿದೇಶ ಪ್ರಯಾಣಕ್ಕೆ ತೆರಳಲಿದ್ದೀರಿ. ಉದ್ಯೋಗ ನಿಮಿತ್ತವಾಗಿ ಕೆಲ ಸಮಯ ವರ್ಗಾವಣೆ ಆಗುವ ಸಾಧ್ಯತೆ ಕೂಡ ಇದೆ. ಮುಖ್ಯವಾಗಿ ವಿದೇಶ ಮೂಲದಿಂದ ಹಣ ಬರುವ ಯೋಗ ಇದೆ.
ಕುಂಭ
ವ್ಯಾಪಾರ- ಉದ್ಯಮದಲ್ಲಿ ಲಾಭ ಇದೆ. ಹೊಸದಾಗಿ ಉದ್ಯಮ ಸ್ಥಾಪನೆ ಮಾಡುವುದಕ್ಕೆ ಸರಿಯಾದ ಸಮಯ ಇದು. ಪಿತ್ರಾರ್ಜಿತವಾದ ಆಸ್ತಿ ನಿಮ್ಮ ಪಾಲಿಗೆ ಬರಬೇಕಿದ್ದಲ್ಲಿ ಅದು ಬರಬಹುದು. ಹೊಸ ಗ್ಯಾಜೆಟ್, ಟಿವಿ, ವಾಷಿಂಗ್ ಮಷೀನ್ ಇತ್ಯಾದಿ ಮನೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಈ ಹಿಂದೆ ಪಡೆದ ಸಾಲಗಳನ್ನು ತೀರಿಸಲು ಸಾಧ್ಯವಾಗುತ್ತದೆ. ಬಹಳ ಸಮಯದಿಂದ ನಿರೀಕ್ಷೆ ಮಾಡುತ್ತಿದ್ದ ಬಡ್ತಿ ದೊರೆಯುವ ಅವಕಾಶಗಳಿವೆ. ನಿಮ್ಮ ಮಾತಿನ ಬಗ್ಗೆ ಎಚ್ಚರವಾಗಿರಿ. ಹಿರಿಯ ಅಧಿಕಾರಿಗಳ ಜತೆಗೆ ಉತ್ತಮ ಬಾಂಧವ್ಯ ಇರಲಿ. ನಿಮ್ಮ ಕನಸುಗಳು ಈಡೇರಲಿವೆ.
ಮೀನ
ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರು, ಬದಲಾವಣೆ ಎದುರು ನೋಡುತ್ತಿರುವವರಿಗೆ ಉತ್ತಮ ಅವಕಾಶ ದೊರೆಯಲಿದೆ. ಬಡ್ತಿ, ವೇತನ ಹೆಚ್ಚಳವನ್ನು ನಿರೀಕ್ಷೆ ಮಾಡಬಹುದು. ಈ ಹಿಂದಿನ ನಿಮ್ಮ ಪರಿಶ್ರಮಕ್ಕೆ ಈಗ ಸೂಕ್ತ ಪ್ರತಿಫಲ ದೊರೆಯಲಿದೆ. ಸಂಗಾತಿ ಮೂಲಕ ಆಸ್ತಿ- ಧನಲಾಭ ಆಗುವ ಯೋಗ ಇದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಲೇಖಕರು, ಭಾಷಣಕಾರರು, ರಾಜಕಾರಣಿಗಳಿಗೆ ವೃತ್ತಿ ಬದುಕಿನಲ್ಲಿ ಏಳ್ಗೆ ಇದೆ. ಚಿನ್ನಾಭರಣ ಖರೀದಿ, ಮನೆಯಲ್ಲಿ ದೇವತಾರಾಧನೆ ಮಾಡಲಿದ್ದೀರಿ. ಪ್ರಮುಖವಾದ ಜವಾಬ್ದಾರಿಯೊಂದು ನಿಮ್ಮ್ ಪಾಲಿಗೆ ಬರಲಿದ್ದು, ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದೀರಿ.