ಮಾರ್ಚ್ 5ರೊಳಗೆ ಮೈತ್ರಿ ಸರಕಾರ ಪತನ ಎಂದು ಭವಿಷ್ಯ ನುಡಿದ ಹುಬ್ಬಳ್ಳಿ ಜ್ಯೋತಿಷಿ
Recommended Video
ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾವಾಗಿಯೇ ರಾಜೀನಾಮೆ ನೀಡಿ, ಈ ಸರಕಾರ ಪತನ ಆಗಲಿದೆ. ಇನ್ನು ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಗಣೇಶ ಹೆಗಡೆ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.
ಕುಮಾರಸ್ವಾಮಿ ಅವರದು ಆರಿದ್ರಾ ನಕ್ಷತ್ರ, ಮಿಥುನ ರಾಶಿ ಹಾಗೂ ಮಿಥುನ ಲಗ್ನ. ಅವರಿಗೆ ಮಾರ್ಚ್ ನಲ್ಲಿ ಜನ್ಮ ರಾಶಿಗೆ ರಾಹು ಪ್ರವೇಶ ಆಗುತ್ತದೆ. ಸಪ್ತಮದಲ್ಲಿ ಕೇತು ಇರುತ್ತದೆ. ಇನ್ನು ಈಗಾಗಲೇ ಶನಿ ಏಳನೇ ಮನೆಯಲ್ಲಿ ಇದ್ದಾನೆ. ಇನ್ನು ಸದ್ಯದ ಗ್ರಹ ಸ್ಥಿತಿ ನೋಡಿದರೆ, ಅಷ್ಟಮದಲ್ಲಿ ರವಿ- ಕೇತು ಇರುವುದರಿಂದ ಆರೋಗ್ಯದಲ್ಲಿ ತೊಂದರೆ ನೀಡುತ್ತದೆ.
ಕರ್ನಾಟಕದ ರಾಜಕೀಯ ಪರಿಸ್ಥಿತಿ ಏನಾಗಲಿದೆ? ಏನು ಹೇಳುತ್ತದೆ ಜ್ಯೋತಿಷ್ಯ?
ಗುರು-ಶನಿ ಮತ್ತಿನ್ಯಾವುದೇ ಗ್ರಹ ಬಲ ಇಲ್ಲದೆ ಅವರು ಅಧಿಕಾರದಲ್ಲಿ ಮುಂದುವರಿಯುವುದು ಸಾಧ್ಯವೇ ಇಲ್ಲ. ಆರೋಗ್ಯ ಕೂಡ ಕೈ ಕೊಡುವುದನ್ನು ಮುನ್ಸೂಚನೆ ನೀಡುತ್ತಿದೆ. ಇನ್ನು ಸಿದ್ದರಾಮಯ್ಯ ಅವರ ಗ್ರಹ ಸ್ಥಿತಿಗಳ ಆಧಾರದಲ್ಲಿ ಬಲಿಷ್ಠರಾಗುತ್ತಾರೆ. ಕುಮಾರಸ್ವಾಮಿ ಅಧಿಕಾರದಲ್ಲಿ ಮುಂದುವರಿಯುವುದಕ್ಕೆ ಅವರು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ರಾಹು-ಕೇತು ಬದಲಾವಣೆಗೆ ಮುನ್ನ ಸರಕಾರ ಪತನ
ಮೂಲತಃ ಹುಬ್ಬಳ್ಳಿಯವರಾದ ಗಣೇಶ್ ಹೆಗಡೆ, ಈ ಸಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗುವ ಯೋಗವಿದೆ. ಆರನೇ ಮನೆಯಲ್ಲಿನ ಬಲಿಷ್ಠ ಕುಜನು ಯಡಿಯೂರಪ್ಪನವರಿಗೆ ಅಧಿಕಾರ ಯೋಗ ನೀಡುತ್ತಾನೆ ಎಂದು ಅವರು ಅಭಿಪ್ರಾಯ ಪಟ್ಟರು. ಈ ಭವಿಷ್ಯ ನುಡಿಯಲು ಇರುವ ಆಧಾರದ ಬಗ್ಗೆ ಪ್ರಶ್ನೆ ಮಾಡಿದಾಗ, ನಮ್ಮ ಸಂಸ್ಥೆಯ ಬಳಿ ಎಲ್ಲ ನಾಯಕರ ಜನ್ಮ ಜಾತಕ ಇರುವುದರಿಂದ ದಶಾ-ಭುಕ್ತಿ ಸಹಿತ ಗೋಚಾರ ಫಲದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿಯೇ ಈ ಭವಿಷ್ಯ ನುಡಿಯುತ್ತಿದ್ದೇನೆ. ಮಾರ್ಚ್ ಐದನೇ ತಾರೀಕಿನ ಒಳಗೆ ಅಂದರೆ ರಾಹು-ಕೇತು ಬದಲಾವಣೆ ಆಗುವ ಮುನ್ನವೇ ರಾಜ್ಯ ಸರಕಾರ ಬದಲಾವಣೆ ಆಗುತ್ತದೆ. ಕುಮಾರಸ್ವಾಮಿ ಅವರಂತೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ತೆಗೆದುಕೊಳ್ಳಲೇಬೇಕು ಎಂದರು.
ಈ ಹಿಂದೆ ನುಡಿದಿದ್ದ ಭವಿಷ್ಯ
ಇಪ್ಪತ್ತರಿಂದ ನಲವತ್ತು ಸ್ಥಾನವನ್ನು ರಾಜ್ಯದಲ್ಲಿ ಜೆಡಿಎಸ್ ಗೆಲ್ಲಬಹುದಷ್ಟೇ ಎಂದು ಸಮೀಕ್ಷೆಗಳು ಹೇಳುತ್ತಿದ್ದ ದಿನಗಳಲ್ಲೇ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ನಾನು ಭವಿಷ್ಯ ನುಡಿದಿದ್ದೆ. ಆದರೆ ಅದು ತಾತ್ಕಾಲಿಕ ಅಷ್ಟೇ ಎಂಬುದು ಸಹ ತಿಳಿಸಿದ್ದೆ. ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಕ್ಕರೂ ಅಧಿಕಾರಕ್ಕೆ ಏರುವುದು ಸಾಧ್ಯವಿಲ್ಲ ಎಂದು ಸಹ ನುಡಿದಿದ್ದೆ ಎಂದು ಹೇಳಿದರು.
ಜ್ಯೋತಿಷ್ಯ: ಕುಮಾರಸ್ವಾಮಿ ಪಾಲಿನ ಯೋಗದ ದಿನಗಳು ಮುಗಿದು ಹೋದವೆ?
ಭವಿಷ್ಯ ಸುಳ್ಳಾದಲ್ಲಿ ಬಹಿರಂಗವಾಗಿ ಕ್ಷಮೆ ಯಾಚನೆ
ಈಗ ನಾನು ಹೇಳಿರುವಂತೆ ಮಾರ್ಚ್ ಐದನೇ ತಾರೀಕಿನ ಒಳಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಬೀಳದಿದ್ದರೆ, ನಮ್ಮ ಜ್ಯೋತಿಷ್ಯ ಸುಳ್ಳಾದಲ್ಲಿ ಬಹಿರಂಗವಾಗಿಯೇ ಕ್ಷಮೆ ಕೇಳುತ್ತೇವೆ. ದೇವೇಗೌಡರ ಕುಟುಂಬದವರು ಈ ಸರಕಾರ ಉಳಿಸಿಕೊಳ್ಳಲು ಅದೆಂಥ ಪ್ರಯತ್ನವನ್ನೇ ಮಾಡಿದರೂ ಏನೂ ಪ್ರಯೋಜನ ಆಗುವುದಿಲ್ಲ ಎಂದರು.
ಕೇಂದ್ರದಲ್ಲಿ ಎನ್ ಡಿಎಗೆ 285+ ಸ್ಥಾನಗಳು ಲಭಿಸುತ್ತವೆ
ಕೇಂದ್ರದಲ್ಲಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗುವುದು ಸಹ ಅಷ್ಟೇ ಸತ್ಯ ಎಂದ ಅವರು, ಕನಿಷ್ಠ ಇನ್ನೂರಾ ಎಂಬತ್ತೈದು ಸ್ಥಾನಗಳಲ್ಲಿ ಎನ್ ಡಿಎ ಮಿತ್ರ ಪಕ್ಷಗಳು ಜಯ ಸಾಧಿಸುತ್ತವೆ. ಈ ಗೆಲುವಿಗೆ ಕಾರಣ ಆಗುವುದು ಚುನಾವಣೆ ನಡೆಯುವ ಕಾಲದ ಗ್ರಹ ಸ್ಥಿತಿ ಹಾಗೂ ಮೋದಿಯವರ ಜಾತಕ ಎಂದು ಗಣೇಶ ಹೆಗಡೆ ಹೇಳಿದರು.
2019ರ ಲೋಕಸಭೆ ಚುನಾವಣೆ ಸಮೀಕ್ಷೆಗಳೆಲ್ಲವನ್ನೂ ಉಲ್ಟಾ ಮಾಡಲಿದೆಯೇ ಮೋದಿ ಜಾತಕ ಫಲ?