ಸಂಸತ್ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ? ಅಮ್ಮಣ್ಣಾಯ ಭವಿಷ್ಯ
Recommended Video
ಮುಂದಿನ ವರ್ಷದ ಫೆಬ್ರವರಿ ತನಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಯ ಚೆನ್ನಾಗಿಲ್ಲ. ಆ ಬಗ್ಗೆ ಈ ಹಿಂದೆ ಕೂಡ ತಿಳಿಸಿದ್ದೆ. ಕರ್ನಾಟಕ ವಿಧಾನಸಭೆ ಸೇರಿದ ಹಾಗೆ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿ ಅವರಿಗೆ ಪೂರಕ ಆಗಿಲ್ಲ. ಹಾಗೂ ಕೆಲ ಮಟ್ಟಿಗಿನ ಅವಮಾನ ಎದುರಿಸಬೇಕಾಗುತ್ತದೆ ಅಂತ ಕೂಡ ಹೇಳಿದ್ದೆ ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಬಗ್ಗೆ ಮಾತನಾಡಿದ ಅವರು, ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಅವಕಾಶ ಹೆಚ್ಚಿದೆ. ಇನ್ನು ಮುಂದಿನ ಫೆಬ್ರವರಿ ನಂತರ ಮೋದಿ ಅವರಿಗೆ ಉತ್ತಮ ಕಾಲ ಬರಲಿದೆ. ಮುಂಬರುವ ಲೋಕಸಭಾ ಚುನಾವಣೆಯು ಬಿಜೆಪಿಯ ಪರವಾಗಿಯೇ ಇರುತ್ತದೆ. ಕನಿಷ್ಠ ವಿರೋಧ ಪಕ್ಷಗಳು ಈಗಿನ ಪರಿಸ್ಥಿತಿಯನ್ನೇ ವಾಸ್ತವ ಎಂದುಕೊಂಡು, ಮೈ ಮರೆಯದೆ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.
ಜಾತಕ ವಿಮರ್ಶೆ: ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶದಲ್ಲಿ ಮೋದಿಗೆ ಕಷ್ಟ
ಮುಂಬರುವ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 285 ಸ್ಥಾನಗಳಲ್ಲಿ ಜಯ ಗಳಿಸಿ, ಮತ್ತೊಂದು ಅವಧಿಗೆ ಅಧಿಕಾರದ ಗದ್ದುಗೆಗೆ ಏರುವುದು ನಿಶ್ಚಿತ. ಈಗ ಕೇಳಿಬರುತ್ತಿರುವ ಮಹಾಘಟಬಂಧನ್ ಎಂಬುದು ಸಾಧ್ಯವಾಗದ ಮಾತಾಗುತ್ತದೆ. ಮುಖ್ಯವಾಗಿ ಆ ಗುಂಪಿನ ಮಧ್ಯೆಯೇ ಒಡಕು ಮೂಡುತ್ತದೆ. ನಮಗೆ ಹೇಗೆ ಪ್ರಬಲವಾದ ಆಡಳಿತ ಪಕ್ಷ ಬೇಕೋ, ಅದೇ ರೀತಿ ಬಲಿಷ್ಠವಾದ ಪ್ರತಿಪಕ್ಷವೂ ಬೇಕು. ಹಾಗೆ ಸಿಗುವಂತಾಗಲಿ ಎಂದರು.