ಸಿಸೇರಿಯನ್ ಹೆರಿಗೆ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ: ವಿಠ್ಠಲ ಭಟ್ ವಿಶ್ಲೇಷಣೆ
ಈಚೆಗೆ ಸಿಸೇರಿಯನ್ ಆಪರೇಷನ್ ಮೂಲಕ ಹೆರಿಗೆ ಆಗುವ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ಅಥವಾ ವೈದ್ಯರು ಅನಿವಾರ್ಯ ಸಂದರ್ಭಗಳಲ್ಲಿ ಆಪರೇಷನ್ ಮೂಲಕ ಹೆರಿಗೆ ಮಾಡಿಸುತ್ತಾರೆ. ತಂದೆ-ತಾಯಿಗಳಲ್ಲಿ ಈ ಬಗ್ಗೆ ಆತಂಕ ಇದ್ದರೂ ಅನುಕೂಲವಾದ, ಅರ್ಥಾತ್ ಶುಭ ದಿನದಲ್ಲಿ ಮಗುವಿನ ಜನನ ಆಗಲಿ ಅನ್ನೋದು ಅಪೇಕ್ಷೆ ಆಗಿರುತ್ತದೆ.
ಕೃಷ್ಣ ಪಕ್ಷದ ಚತುರ್ದಶಿ, ಅಮಾವಾಸ್ಯೆ, ಇನ್ನೂ ಕೆಲವರಿಗೆ ಇಂಥ ವಾರಗಳು ಬೇಡ ಎಂದಿರುತ್ತದೆ. ಮತ್ತೆ ಕೆಲವರು ಮದುವೆ ಮುಹೂರ್ತಗಳನ್ನು ಹೇಳುವ ರೀತಿಯಲ್ಲಿ ದ್ವಿತೀಯಾ, ತೃತೀಯಾ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿ, ಸೋಮವಾರ-ಬುಧವಾರ-ಗುರುವಾರ-ಶುಕ್ರವಾರಗಳ ಪೈಕಿ ಯಾವುದಾದರೂ ಒಂದು ದಿನ ಹೆರಿಗೆ ಆಗಲಿ ಎನ್ನುವ ಜ್ಯೋತಿಷಿಗಳಿದ್ದಾರೆ.
ನಿಮ್ಮ ರಾಶಿಯ ಚಿಹ್ನೆಯ ಪ್ರಕಾರ ಗುಣ- ಸ್ವಭಾವ ತಿಳಿದುಕೊಳ್ಳಿ
ತೀರಾ ತುರ್ತು ಇರುವ ಸಂದರ್ಭದಲ್ಲಿ ತಾಯಿ- ಮಗುವಿನ ಜೀವ ಮುಖ್ಯವೇ ಹೊರತು ಮತ್ಯಾವುದಕ್ಕೂ ಪ್ರಾಮುಖ್ಯ ಇಲ್ಲ ಎಂಬುದನ್ನು ದಯವಿಟ್ಟು ನೆನಪಿಡಿ. ವೈದ್ಯರು ತುರ್ತು ಹೆರಿಗೆ ಆಗಬೇಕು ಅಂದಾಗ ಬೇರೆ ಲೆಕ್ಕಾಚಾರದಲ್ಲಿ ತೊಡಗಿ, ಜೀವಗಳನ್ನು ಅಪಾಯಕ್ಕೆ ಒಡ್ಡಬೇಡಿ. ಆದರೆ ಇನ್ನು ನಾಲ್ಕೈದು ದಿನದಲ್ಲಿ ಆಪರೇಷನ್ ಆಗಲೇಬೇಕು ಅಥವಾ ನಾಳೆ ಆಪರೇಷನ್ ಮಾಡ್ತಿದ್ದೇವೆ, ನಿಮಗೆ ಯಾವ ಸಮಯದಲ್ಲಿ ಆಗಬೇಕು ಎಂಬ ಅಪೇಕ್ಷೆ ಇದೆ ಎಂದು ತಿಳಿಸಿ ಎಂಬುದನ್ನು ಅವರಾಗಿಯೇ ಕೇಳುವ ಸಾಧ್ಯತೆ ಇದೆ.
ನಕ್ಷತ್ರ, ರಾಶಿ, ಲಗ್ನ ಬಹಳ ಮುಖ್ಯ
ಕೆಲವರಿಗೆ ತಮ್ಮ ಮಗು ಇಂಥದ್ದೇ ದಿನ ಹುಟ್ಟಬೇಕು ಎಂದಿರುತ್ತದೆ. ಆಗ ಉದ್ದೇಶಪೂರ್ವಕವಾಗಿ ಆಪರೇಷನ್ ಮಾಡುವುದು ತಪ್ಪು. ಇನ್ನು ಅನಿವಾರ್ಯ ಸಂದರ್ಭದಲ್ಲಿ- ಆಪರೇಷನ್ ನ ಸಮಯ ನಿಮಗೆ ನಿರ್ಧರಿಸುವುದಕ್ಕೆ ಅವಕಾಶ ಸಿಕ್ಕರೆ ಕೆಲವು ಮೂಲಭೂತ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅಲ್ಲಿ ದೊಡ್ಡ ಮಟ್ಟದ ದೋಷ- ಪಾಪಗಳನ್ನು ತಡೆಯಲು ಆ ದೇವರೇ ಒಂದು ಅವಕಾಶ ನೀಡಿದ್ದಾನೆ ಎಂದು ಭಾವಿಸಿಕೊಳ್ಳಿ. ಕೃಷ್ಣ ಪಕ್ಷದ ಚತುರ್ದಶಿ, ಅಮಾವಾಸ್ಯೆಯಂದು ಸಾಧ್ಯವಾದಷ್ಟೂ ಬೇಡ. ಇನ್ನು ಜನನ ಕಾಲದಲ್ಲಿ ಯಾವ ನಕ್ಷತ್ರ, ರಾಶಿ, ಲಗ್ನ ಇದೆ ಎಂಬುದು ಬಹಳ ಮುಖ್ಯ.
ಆಯುಷ್ಯ, ಆರೋಗ್ಯ, ಭಾಗ್ಯ ಸ್ಥಾನಗಳನ್ನು ಗಮನಿಸಿ
ಆಯುಷ್ಯ ಸ್ಥಾನ (ಲಗ್ನದಿಂದ ಎಂಟನೆ ಮನೆ), ಆರೋಗ್ಯ ಸ್ಥಾನ (ಲಗ್ನದಿಂದ ಆರನೇ ಮನೆ), ಭಾಗ್ಯ ಸ್ಥಾನ (ಲಗ್ನದಿಂದ ಒಂಬತ್ತನೇ ಮನೆ) ಹೀಗೆ ಕೆಲವು ಮುಖ್ಯವಾದ ಮನೆಗಳಲ್ಲಿ ಯಾವ ಗ್ರಹಗಳಿವೆ ಹಾಗೂ ಆ ಮನೆಗಳ ಅಧಿಪತಿ ಎಲ್ಲಿವೆ ಎಂಬುದು ನೋಡಬೇಕು. ಇನ್ನು ಎರಡು ಅಥವಾ ಎರಡಕ್ಕಿಂತ ಹೆಚ್ಚು ಗ್ರಹಗಳು ಒಂದೇ ಸ್ಥಾನದಲ್ಲಿ ಇದ್ದರೆ ಅವೆರಡು ಒಟ್ಟಿಗೆ ಇರುವುದರಿಂದ ಆಗುವ ಫಲ ಏನು ಎಂಬುದು ಗಮನಿಸಬೇಕು.
ಪ್ರಮುಖ ದೋಷಗಳ ಬಗ್ಗೆ ಎಚ್ಚರಿಕೆ ಅಗತ್ಯ
ಜತೆಗೆ ಕಾಳಸರ್ಪ ದೋಷವು (ರಾಹು ಹಾಗೂ ಕೇತು ಗ್ರಹಗಳ ಮಧ್ಯೆ ಏಳು ಗ್ರಹಗಳು ಇದ್ದರೆ) ಏರ್ಪಡಬಹುದಾ ಎಂಬುದು ಸಹ ಎಚ್ಚರಿಕೆಯಿಂದ ನೋಡಬೇಕಾದ ಸಂಗತಿ. ಇನ್ನೂ ಕೆಲವರಿಗೆ ಏಕ ನಕ್ಷತ್ರ ದೋಷ ವಿಚಾರ ಗೊತ್ತಿರುವುದಿಲ್ಲ. ನನ್ನ ನಕ್ಷತ್ರ 'ಅದೇ' ಅಗಿರುವುದರಿಂದ ಮಗುವೂ 'ಅದೇ' ನಕ್ಷತ್ರ ಆಗಿರಲಿ ಎಂದು ಗೊತ್ತಿಲ್ಲದೆ ತೊಂದರೆಗೆ ಸಿಲುಕಿಕೊಳ್ಳುತ್ತಾರೆ.
ಗ್ರಹ ಸ್ಥಿತಿ ನೋಡಿ ಮಾರ್ಗದರ್ಶನ ಮಾಡುತ್ತಾರೆ
ಆದ್ದರಿಂದ ಸಿಸೇರಿಯನ್ ಆಪರೇಷನ್ ಮೂಲಕ ಹೆರಿಗೆ ಮಾಡಿಸುವಾಗ ಕೂಲಂಕಷವಾಗಿ ಆಲೋಚಿಸಿ, ಸಲಹೆ ನೀಡಬಲ್ಲ ಜ್ಯೋತಿಷಿಗಳ ಬಳಿ ಸಮಯವನ್ನು ಕೇಳಿ ತಿಳಿದುಕೊಳ್ಳಿ. ಅವರು ನಿಮಗೆ ಗ್ರಹಸ್ಥಿತಿ ಇತ್ಯಾದಿ ನೋಡಿ, ಸರಿಯಾದ ಮಾರ್ಗದರ್ಶನ ಮಾಡುತ್ತಾರೆ. ಪುಸ್ತಕ- ಇಂಟರ್ ನೆಟ್ ನೋಡಿ, ಸ್ವಯಂ ವೈದ್ಯ ಅನ್ನೋ ರೀತಿ ಸ್ವಯಂ ಜ್ಯೋತಿಷ್ಯ ಕೂಡ ಬಹಳ ಅಪಾಯಕಾರಿ. ಹಾಗಾಗಿ ಅರೆಬರೆ ಜ್ಯೋತಿಷ್ಯ ಜ್ಞಾನ ಇರುವವರು ನಮ್ಮ ಮನೆ ದೇವರ ವಾರ, ನಮ್ಮ ಮಗನದೇ ನಕ್ಷತ್ರ, ಶುಕ್ರವಾರ ಲಕ್ಷ್ಮಿ ವಾರ ಅಂತೆ ಹೀಗೆಲ್ಲ ತಪ್ಪು ದಾರಿ ತುಳಿಯದಿರಿ.