ಜ್ಯೋತಿಷ್ಯ: ಮೈತ್ರಿ ಸರಕಾರಕ್ಕೆ ನವೆಂಬರ್ ತನಕವೇ ಆಯುಷ್ಯ; ಆಮೇಲೆ ಮತ್ತೊಮ್ಮೆ ಚುನಾವಣೆ!
Recommended Video
ಈ ಬಾರಿ ಲೋಕಸಭಾ ಚುನಾವಣೆ ಜತೆಗೇ ರಾಜ್ಯ ವಿಧಾನಸಭಾ ಚುನಾವಣೆಯೂ ನಡೆಯುವಂಥ ಯೋಗ ಇದ್ದ ಬಗ್ಗೆ ಈ ಹಿಂದೆ ನಾನು ತಿಳಿಸಿದ್ದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಕ್ಕೇ ಕನಿಷ್ಠ 285 ಸ್ಥಾನಗಳು ಬರುತ್ತವೆ ಅಂತಲೂ ಹೇಳಿದ್ದೆ. ಅದ್ಯಾವ ಯೋಗವೋ ಮೈತ್ರಿ ಸರಕಾರ ಎಂಬ ಈ ದುರ್ಬಲ ಬಾಳೆ ಗಿಡವನ್ನು ರಕ್ಷಿಸುತ್ತಿದೆ.
ಆದರೆ, ಇದರ ಸ್ಥಿತಿ ಏನು ಎಂದು ನಾನು ಹೇಳುವುದಕ್ಕಿಂತ ನೀವೇ ಕಣ್ಣೆದುರು ನೋಡುತ್ತಾ ಇದ್ದೀರಿ. ಗುರುವಾರದಂದು ಲೋಕಸಭಾ ಚುನಾವಣೆಯ ಫಲಿತಾಂಶ ಬಂದಾಗಿನಿಂದ ರಾಜ್ಯ ಸರಕಾರವನ್ನು ಕೆಡವುವ ಅಥವಾ ಅದು ತಾನಾಗಿಯೇ ಬೀಳುವ ಮಾತುಗಳು ಕೇಳಿಬರುತ್ತಿವೆ. ಹೌದು, ಹೀಗೇ ಆಗುತ್ತದೆ ಎನ್ನುವ ರಾಜಕೀಯ ವಿಶ್ಲೇಷಕರು, ಜ್ಯೋತಿಷಿಗಳು ಸಿಗಬಹುದು.
ಮಮತಾ ಬ್ಯಾನರ್ಜಿಗೆ ಗಂಡಾಂತರದ ಕಾಲ: ಜ್ಯೋತಿಷಿ ಅಮ್ಮಣ್ಣಾಯ ವಿಶ್ಲೇಷಣೆ
ಒಂದು ಮಾತು ಸ್ಪಷ್ಟವಾಗಿ ಹೇಳುತ್ತೇನೆ: ಈಗ ಅಸ್ತಿತ್ವದಲ್ಲಿ ಇರುವ ಮೈತ್ರಿ ಸರಕಾರ ಈ ವರ್ಷದ ನವೆಂಬರ್ ತನಕ 'ಐಸಿಯುನಲ್ಲಿ ಇರುವ ಕಾಯಿಲೆ ವ್ಯಕ್ತಿ'ಯ ರೀತಿಯಲ್ಲಿ ಅಸ್ತಿತ್ವದಲ್ಲಿ ಇರುತ್ತದೆ. ಆ ನಂತರ ಉಳಿಸಿಕೊಳ್ಳುವುದು -ಉಳಿಯುವುದು ಕಷ್ಟ ಕಷ್ಟ ಕಷ್ಟ. ಇನ್ನೂ ಒಂದು ಸಾಧ್ಯತೆ ಇದೆ, ಅದನ್ನು ಹಲವರು ನಿರಾಕರಿಸಬಹುದು.
ಸರಕಾರ ರಚಿಸಲು ಮುಂದಾದರೆ ಮುಖಭಂಗ
ಆದರೆ, ಸ್ವತಃ ಕುಮಾರಸ್ವಾಮಿ ಅವರೇ ಈ ಸರಕಾರವನ್ನು ವಿಸರ್ಜಿಸುವ ಅವಕಾಶ ಕೂಡ ಇದೆ. ಕಾಂಗ್ರೆಸ್ ನಿಂದ ಯಾರಾದರೂ ಮುಖ್ಯಮಂತ್ರಿ ಆಗಿ, ಜೆಡಿಎಸ್ ನಿಂದ ಯಾರಾದರೂ ಉಪ ಮುಖ್ಯಮಂತ್ರಿ ಆಗಿ ಸರಕಾರವನ್ನು ಉಳಿಸಿಕೊಳ್ಳುತ್ತೇವೆ ಎಂದು ಮುಂದಾದರೆ ಅವಮಾನಕ್ಕೆ ಗುರಿ ಆಗುವುದು ನಿಶ್ಚಿತ. ಅಷ್ಟೇ ಅಲ್ಲ, ಬಿಜೆಪಿಯಿಂದ ಯಡಿಯೂರಪ್ಪ ಅವರು ಅತ್ಯುತ್ಸಾಹದಿಂದ ಸರಕಾರ ರಚಿಸಲು ಪ್ರಯತ್ನ ಪಟ್ಟರೆ ಇನ್ನೊಮ್ಮೆ ಮುಖಭಂಗಕ್ಕೆ ಈಡಾಗಬೇಕಾಗುತ್ತದೆ. ಏಕೆಂದರೆ, ಅವರ ಜಾತಕದಲ್ಲಿನ ಯೋಗಗಳು ಆ ರೀತಿ ಇವೆ. ಮುಖ್ಯಮಂತ್ರಿ ಆಗುವ ಯೋಗ ಇಲ್ಲದ ಸಂದರ್ಭದಲ್ಲಿ ಬಲವಂತವಾಗಿ ಪ್ರಯತ್ನಪಟ್ಟರೆ ಅವಮಾನವೇ ತಾನೇ?
ಬಿಜೆಪಿಗೆ ನಿಚ್ಚಳ ಬಹುಮತ ಬರುವ ಅವಕಾಶ ಹೆಚ್ಚು
ಕರ್ನಾಟಕವು ಇನ್ನೊಂದು ಬಾರಿ ವಿಧಾನ ಸಭಾ ಚುನಾವಣೆಯನ್ನು ಎದುರಿಸುವುದು ಬಹುತೇಕ ನಿಶ್ಚಿತ. ಮತ್ತು ಅಂಥ ಸಂದರ್ಭದಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಬರುವ ಅವಕಾಶಗಳು ಹೆಚ್ಚಿವೆ. ಆದರೆ ಇಲ್ಲಿ ಒಂದು ಮಾತು ನೆನಪಿಟ್ಟುಕೊಳ್ಳಬೇಕು; ಯಡಿಯೂರಪ್ಪ ಅವರಿಗೆ ಮಾತ್ರ ಮುಖ್ಯಮಂತ್ರಿ ಆಗುವ ಯೋಗ ಇಲ್ಲ. ಹೈ ಕಮಾಂಡ್ ನಿಂದ ಸೂಚಿಸಿದ, ಈ ತನಕ ಮುಖ್ಯಮಂತ್ರಿ ಸ್ಥಾನದಲ್ಲಿ ಹೆಸರು ಕಾಣದೇ ಇದ್ದ ವ್ಯಕ್ತಿಯೊಬ್ಬರಿಗೆ ಅವಕಾಶ ಸಿಗಲಿದೆ. ಒಂದು ವೇಳೆ ಆತುರ ಪಟ್ಟು ಈ ಸಲವೇ ಸರಕಾರ ರಚನೆ ಮಾಡುತ್ತೇವೆ ಎಂದು ಬಿಜೆಪಿ ಹೊರಟರೆ ಅದು ಸಾಧ್ಯವೂ ಆಗುವುದಿಲ್ಲ. ಜತೆಗೆ ಮುಂದಿನ ಉತ್ತಮ ಅವಕಾಶವನ್ನು ಕೈ ಚೆಲ್ಲಿದಂತೆ ಆಗುತ್ತದೆ.
ಕುಮಾರಸ್ವಾಮಿ ಅವಮಾನದ ಪಾಲಾಗಬೇಕಾಗುತ್ತದೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮ ಸ್ಥಾನದಿಂದ ಗುರು ಆರನೇ ಮನೆಯಲ್ಲಿ, ಶನಿ ಏಳನೇ ಮನೆಯಲ್ಲಿ ಇದ್ದರೂ ಇಷ್ಟು ಕಾಲ ಅವರನ್ನು ಕಾಯ್ದುಕೊಂಡು ಬರುತ್ತಿರುವ 'ಬಲ' ನವೆಂಬರ್ ಗೆ ಕೊನೆ ಆಗುತ್ತದೆ. ಶತ್ರು ಕಾಟ, ಮಿತ್ರರ ಮಧ್ಯೆ ಸಾಮರಸ್ಯದ ಕೊರತೆ, ಮನೆಯವರೇ ವಿರೋಧಿಗಳಾಗುವ ಸಾಧ್ಯತೆ ಹಾಗೂ ಇವೆಲ್ಲದರ ಜತೆಗೆ ಅನಾರೋಗ್ಯ ಸಮಸ್ಯೆ ಅವರನ್ನು ಕಾಡುವ ಸಾಧ್ಯತೆ ಇದೆ. ರಾಹು ಜನ್ಮ ಸ್ಥಾನದಲ್ಲಿ ಇದ್ದು, ಸಪ್ತಮದಲ್ಲಿ ಶನಿಯೊಂದಿಗೆ ಇರುವ ಕೇತು ನೆಮ್ಮದಿಯನ್ನು ಪೂರ್ತಿಯಾಗಿ ಹಾಳು ಮಾಡುತ್ತಾನೆ. ಎಲ್ಲದರಲ್ಲೂ ನಂಬಿಕೆ ಕಳೆದುಕೊಂಡು, ಅವಮಾನದ ಪಾಲಾಗಬೇಕಾಗುತ್ತದೆ.
ವಿಕಾರಿ ಸಂವತ್ಸರದಲ್ಲಿ ಹಲವರ ರಾಜಕಾರಣ ಕೊನೆ
ಇಷ್ಟೆಲ್ಲ ತಿಳಿಸಿದ ಮೇಲೆ ಇನ್ನೊಂದು ವಿಚಾರವನ್ನೂ ಖಾತ್ರಿ ಪಡಿಸಬೇಕು. ಈ ವಿಕಾರಿ ಸಂವತ್ಸರದ ಫಲವೇ ಅಂಥದ್ದು. ಪ್ರಮುಖ ರಾಜಕಾರಣಿಗಳ ರಾಜಕಾರಣ ಈ ಸಂವತ್ಸರಕ್ಕೆ ಕೊನೆ ಆಗುತ್ತದೆ. ಈ ಮಾತನ್ನು ಹಿಂದೆ ಸಹ ತಿಳಿಸಿದ್ದೆ. ಅದು ಕೂಡ ಅವಮಾನಕ್ಕೆ ಗುರಿಯಾಗಿಯೇ ರಾಜಕಾರಣದಿಂದ ದೂರವಾಗುವ ಸನ್ನಿವೇಶ ಸೃಷ್ಟಿ ಆಗಲಿದೆ. ಈಗಿನ ಗ್ರಹ ಸ್ಥಿತಿಯು ಹಿಂದೆ ಯಾವಾಗ ಬಂದಿತ್ತು ಮತ್ತು ಎಂಥ ಪ್ರಭಾವ ಬೀರಿತ್ತು ಎಂಬುದನ್ನು ಒನ್ ಇಂಡಿಯಾ ಕನ್ನಡದಲ್ಲೇ ವಿವರಿಸಿದ್ದೆ. ಆದರೂ ಭವಿಷ್ಯ ಆ ಭಗವಂತನ ನಿರ್ಧಾರ. ಅವನು ಆಡಿಸಿದಂತೆ, ಮಾತನಾಡಿಸಿದಂತೆ ಆಡುವ ನಿಮ್ಮಿತ್ತ ಮಾತ್ರರು ನಾವು.