2021ರ 'ವರ್ಷ ಭವಿಷ್ಯ' ನುಡಿದ ಖ್ಯಾತ ಜ್ಯೋತಿಷಿ: ಏಷ್ಯಾದಲ್ಲೇ ಬಲಾಢ್ಯವಾಗುವತ್ತ ಭಾರತ
ಕೊರೊನಾ ವೈರಸ್ ಇಡೀ 2020ನ್ನು ಆಪೋಸನ ತೆಗೆದುಕೊಂಡು, ಸಾರ್ವಜನಿಕರನ್ನು ಹೈರಾಣವನ್ನಾಗಿ ಮಾಡಿತ್ತು. ಈ ಸೋಂಕಿನ ಹಾವಳಿ ಕಮ್ಮಿಯಾಗುತ್ತಾ ಬಂತು ಎನ್ನುವಷ್ಟರಲ್ಲಿ ಬ್ರಿಟನ್ ವೈರಸ್ ದಾಂಗುಡಿಯಿಟ್ಟಿದೆ.
ಈ ವರ್ಷದಲ್ಲಾದರೂ ಜಗತ್ತಿಗೆ ಶಾಂತಿ ಸಿಗಲಿದೆಯೇ, ಜನರು ನೆಮ್ಮದಿಯಿಂದ ಬದುಕಲು ಸಾಧ್ಯವೇ, ಕೊರೊನಾ ಹಾವಳಿ ಇರಲಿದೆಯೇ, ನೆಲಕಚ್ಚಿರುವ ಆರ್ಥಿಕತೆ ಮೇಲಕ್ಕೆ ಏಳುವುದೇ ಎನ್ನುವುದರ ಬಗ್ಗೆ ಆಸ್ಟ್ರೋ ಜಿಂದಗಿ ಸಂಸ್ಥೆಯ ಮಾಲೀಕರಾದ ನೀರಜ್ ಧಾಂಕರ್ ಭವಿಷ್ಯವನ್ನು ನುಡಿದಿದ್ದಾರೆ.
ನಿಗೂಢ ಮಹಿಳೆ ಬಾಬಾ ವಂಗಾ 2021ರ ಭವಿಷ್ಯ: ಇನ್ನಷ್ಟು ಭಯಾನಕ, ವಿನಾಶ
ಬಲ್ಗೇರಿಯಾ ಮೂಲದ ಕಣ್ಣಿಲ್ಲದ ಮಹಿಳೆ ಬಾಬಾ ವಂಗಾ ನುಡಿದಿದ್ದ ಭವಿಷ್ಯದ ಪ್ರಕಾರ ಈ ವರ್ಷದಲ್ಲಿ "ಜನರು ತಮ್ಮ ನಂಬಿಕೆಯನ್ನು ಕಳೆದುಕೊಳ್ಳಲ್ದಿದ್ದಾರೆ, ಮಾನವೀಯತೆಗೆ ಬೆಲೆ ಇರುವುದಿಲ್ಲ. ವಿನಾಶಕಾರಿ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಲಿದೆ. ಜನರು ಒಬ್ಬರು ಇನ್ನೊಬ್ಬರ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳಲಿದ್ದಾರೆ"ಎಂದು ಹೇಳಿದ್ದರು.
ದೇವಸ್ಥಾನದ ಗರ್ಭಗುಡಿಯ ದೇವರ ಪ್ರಭಾವಳಿಯಲ್ಲಿರುವ ರಾಕ್ಷಸ ಮುಖದ ಹಿಂದಿದೆ ಅದ್ಭುತ ರಹಸ್ಯ!
ನೀರಜ್ ನುಡಿದಿರುವ ಭವಿಷ್ಯದ ಪ್ರಕಾರ, ಕಳೆದ ಒಂದು ವರ್ಷದಿಂದ ಪಾತಾಳಕ್ಕೆ ಬಿದ್ದಿರುವ ಆರ್ಥಿಕತೆಯಲ್ಲಿ ಮತ್ತೆ ಚೇತರಿಕೆ ಕಾಣಲಿದೆ. ಹಲವು ರಂಗಗಳು ಪುಟಿದೇಳಲಿವೆ. ಅವರು ನುಡಿದ ಭವಿಷ್ಯದ ಪ್ರಮುಖಾಂಶ ಇಂತಿದೆ:
ದೇಶದಲ್ಲಿ ಶೇ. 8ರಷ್ಟು ಆರ್ಥಿಕ ಉತ್ತೇಜನಗೊಳ್ಳುವ ಸಾಧ್ಯತೆ
ಮುಂಬರುವ ಏಪ್ರಿಲ್ 6 ರವರೆಗೆ, ಗುರು ರಾಶಿಯು ದುರ್ಬಲಗೊಳ್ಳುವ ಮಕರ ರಾಶಿಯಲ್ಲಿ ಶನಿಯೊಂದಿಗೆ ಇರಲಿದೆ. 2020ರ ಅಂತ್ಯದ ವೇಳೆ ಆರ್ಥಿಕತೆ ದಾರಿಗೆ ಬರುವ ಲಕ್ಷಣಗಳು ತೋರಿದ್ದರೂ, ಜನವರಿ-ಮಾರ್ಚ್ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಉತ್ತೇಜನ ತಕ್ಕಮಟ್ಟಿಗೆ ಮಾತ್ರ ಇರಲಿದೆ. ದುರ್ಬಲ ಗುರು ಮತ್ತು ಬಲವಾದ ಶನಿಯ ಕಾರಣದಿಂದಾಗಿ, ಭಾರತದ ಆರ್ಥಿಕತೆಯಲ್ಲಿ ತುಂಬಾ ಬದಲಾವಣೆಯಾಗುವ ಸಾಧ್ಯತೆ ಕಮ್ಮಿ. ಇದಾದ ನಂತರ, ಗುರು ರಾಶಿಯ ಪಥ ಬದಲಾವಣೆ ಆಗುವುದರಿಂದ ಆರ್ಥಿಕತೆ ವೇಗವಾಗಿ ವೃದ್ದಿಗೊಳ್ಳಲಿದೆ. ಸೆಪ್ಟಂಬರ್ - ನವೆಂಬರ್ ಮಧ್ಯದಲ್ಲಿ ಆರ್ಥಿಕತೆಗೆ ಕೊಂಚ ಹಿನ್ನಡೆಯಾಗಲಿದೆ. ಒಟ್ಟಾರೆಯಾಗಿ, ಏಷ್ಯಾದಲ್ಲೇ ಭಾರತ ಉತ್ತಮ ಪ್ರಗತಿ ಸಾಧಿಸಲಿದೆ.
ಕೊರೊನಾ ಹಾವಳಿಯಿಂದ ಸಂಪೂರ್ಣವಾಗಿ ಮುಕ್ತವಾಗಲು ಇನ್ನೂ ಆರು ತಿಂಗಳು
ಕೊರೊನಾ ಹಾವಳಿಯಿಂದ ಸಂಪೂರ್ಣವಾಗಿ ಮುಕ್ತವಾಗಲು ಇನ್ನೂ ಆರು ತಿಂಗಳು ಬೇಕಾಗಲಿದೆ. ಜನವರಿಯಿಂದ ಮಾರ್ಚ್ ವರೆಗಿನ ಅವಧಿ ನಿರ್ಣಾಯಕವಾಗಲಿದೆ. ಈ ಅವಧಿಯಲ್ಲಿ ಈ ವೈರಸ್ ಗೆ ಲಸಿಕೆ ಲಭ್ಯವಾಗಲಿದೆ. ಜೂನ್ ತಿಂಗಳ ನಂತರ ವಿಶ್ವ ಬಹುತೇಕ ಕೊರೊನಾ ಮುಕ್ತವಾಗಲಿದ್ದು, ಇದಾದ ನಂತರ ಜನಜೀವನ ಸಂಪೂರ್ಣ ಸಹಜ ಸ್ಥಿತಿಗೆ ಬರಲಿದೆ.
ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರುವ ಸಾಧ್ಯತೆ ಹೆಚ್ಚು
ಮೊದಲಾರ್ಧದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರುವ ಸಾಧ್ಯತೆ ಹೆಚ್ಚು. ದೇಶದ ಜಾತಕದ ಪ್ರಕಾರ ಜುಲೈ ತಿಂಗಳವರೆಗೆ ಶನಿಯ ಪ್ರಭಾವ ಹೆಚ್ಚಾಗಿರುವುದರಿಂದ ಈ ಉದ್ಯಮ ಉಚ್ಚ್ರಾಯ ಸ್ಥಿತಿಗೆ ತಲುಪಲಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಉತ್ತಮವಾಗಿ ಈ ಸೆಕ್ಟರ್ ಮೇಲಕ್ಕೆ ಬರಲಿದೆ. ಇದರಿಂದಾಗಿ, ಇದಕ್ಕೆ ಹೊಂದಿಕೊಂಡಿರುವ ಸ್ಟೀಲ್, ಸಿಮೆಂಟ್ ಮುಂತಾದ ಉದ್ಯಮಗಳೂ ವೇಗವನ್ನು ಪಡೆದುಕೊಳ್ಳಲಿದೆ.
ರಿಟೇಲ್ ಮತ್ತು ಗ್ರಾಹಕ ಸರಕುಗಳ ಸಂಸ್ಥೆ
ರಿಟೇಲ್ ಮತ್ತು ಗ್ರಾಹಕ ಸರಕುಗಳ ಸಂಸ್ಥೆಗಳ ವ್ಯಾಪರವೂ ಏಪ್ರಿಲ್ ತಿಂಗಳ ನಂತರ ಚೇತರಿಕೆ ಕಾಣಲಿದೆ. ಈ ಉದ್ಯಮಗಳ ವ್ಯಾಪಾರ ಡಬಲ್ ಡಿಜಿಟ್ ವೃದ್ದಿಗೊಳ್ಳಲಿದೆ. ಆ ಮೂಲಕ, ದೇಶದ ಆರ್ಥಿಕ ಚೇತರಿಕೆಗೆ ತನ್ನ ಕೊಡುಗೆಯನ್ನು ನೀಡಲಿದೆ. ಟೆಲಿಕಮ್ಯೂನಿಕೇಶನ್ ರಂಗವೂ ಏಪ್ರಿಲ್ ಅಥವಾ ಮೇ ತಿಂಗಳ ನಂತರ ಚೇತರಿಸಿಕೊಳ್ಳಲಿದೆ. ಬಹುತೇಕ ಹೆಚ್ಚಿನ ರಂಗಗಳು ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವುದರಿಂದ ಜಾಬ್ ಮಾರ್ಕೆಟ್ ಕೂಡಾ ವೇಗ ಪಡೆದುಕೊಳ್ಳಲಿದೆ.
ಭಾರತದಲ್ಲಿನ ಜಾಗತಿಕವಾಗಿ ಪ್ರಭಾವವನ್ನು ಬೀರಲಿದೆ
ಮಕರ ರಾಶಿಯು ದೇಶವನ್ನು ಮುನ್ನಡೆಸುತ್ತಿರುವುದರಿಂದ ಭಾರತದಲ್ಲಿನ ಆರ್ಥಿಕ ಬೆಳವಣಿಗೆ ಅಮೆರಿಕಾ, ಚೀನಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಭಾವವನ್ನು ಬೀರಲಿದೆ. ಜುಲೈ ತಿಂಗಳ ನಂತರ ಜಾಗತಿಕ ವೇದಿಕೆಯಲ್ಲಿ ಭಾರತ ಬಲಾಢ್ಯವಾಗಿ ಹೊರಹೊಮ್ಮಲಿದೆ. ಒಟ್ಟಾರೆಯಾಗಿ, 2021 ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ, ಎಲ್ಲರಿಗೂ ಅದೃಷ್ಟ ಮತ್ತು ಸಮೃದ್ಧಿಯನ್ನು ನೀಡಲಿದೆ.