ಕೆಕೆಆರ್ ಕೊರಳಿಗೆ ಐಪಿಎಲ್ ಟ್ರೋಫಿ : ಭವಿಷ್ಯವಾಣಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 5) ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಮೇ 27ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಂಜೆ 8 ಗಂಟೆಗೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಟ್ರೋಫಿಗಾಗಿ ಕಾದಾಡಲಿವೆ. ಲೇಡಿ ಲಕ್ ಯಾರಿಗೆ ಒಲಿಯಲಿದೆ?
ಒಂದೆಡೆ ಇದೇ ಟೀಮ್ ಗೆಲ್ಲುತ್ತದೆಂದು ಭಾರೀ ಬೆಟ್ಟಿಂಗ್ ನಡೆದಿದ್ದರೆ, ಮತ್ತೊಂದೆಡೆ ಕ್ರಿಕೆಟ್ ಪ್ರೇಮಿಗಳು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಟೂರ್ನಿಯುದ್ದಕ್ಕೂ ಭರ್ಜರಿಯಾಗಿ ಆಡುತ್ತಿರುವ ಬಂದಿರುವ ಕಿಂಗ್ ಶಾರುಖ್ ಖಾನ್ ಒಡೆತನದ ಕೆಕೆಆರ್ ಗೆಲ್ಲುತ್ತದೆಂದು ಕೆಲವರು ಬಾಜಿ ಕಟ್ಟಿದ್ದರೆ, ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಒಡೆತನದ ಸಿಎಸ್ಕೆ ಹ್ಯಾಟ್ರಿಕ್ ಸಾಧಿಸಲಿದೆ ಎಂದು ಕ್ರಿಕೆಟ್ ಪ್ರೇಮಿಗಳು ಹೇಳುತ್ತಿದ್ದಾರೆ.
ಆದರೆ, ಲಖನೌನ ಜ್ಯೋತಿಷಿ ಪಂಡಿತ್ ಅನುಜ್ ಕೆ. ಶುಕ್ಲಾ ಅವರು ತಮ್ಮದೇ ಲೆಕ್ಕಾಚಾರದ ದಾಳಗಳನ್ನು ಉರುಳಿಸಿಬಿಟ್ಟಿದ್ದಾರೆ. ಅದೃಷ್ಟಲಕ್ಷ್ಮಿ ಯಾರಿಗೆ ಒಲಿಯದಿದೆ, ವಿಜಯದುಂಧುಬಿ ಯಾರು ಮೊಳಗಿಸಲಿದ್ದಾರೆ, ಯಾವ ರಾಶಿ ಯಾರಿಗೆ ಶುಭಕರವಾಗಿದೆ, ಗ್ರಹಗತಿಗಳು ಏನು ಹೇಳುತ್ತವೆ, ಸಂಖ್ಯಾಶಾಸ್ತ್ರ ಏನು ನುಡಿಯುತ್ತದೆ ಎಂಬ ಅಂಶಗಳನ್ನು ಅಧ್ಯಯನ ಮಾಡಿ ಲೆಕ್ಕ ಹಾಕಿ ಭವಿಷ್ಯ ನುಡಿದಿದ್ದಾರೆ.
ಅವರ ಭವಿಷ್ಯದ ಪ್ರಕಾರ, ಈ ಬಾರಿ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದ ಶಾರುಖ್ ಖಾನ್ ಶರ್ಟ್ ಬಿಚ್ಚಿ ಚೆಪಾಕ್ ಸ್ಟೇಡಿಯಂನಲ್ಲಿ ನರ್ತಿಸುವುದು ಖಚಿತ. ಅದರೆ, ವಿಜಯಲಕ್ಷ್ಮಿ ಕೋಲ್ಕತಾ ನೈಟ್ ರೈಡರ್ಸ್ಗೆ ಒಲಿಯಲಿದೆ. ಯಾವ ತಂಡ ಕಷ್ಟಪಟ್ಟು ಮೇಲೆ ಬಂದಿದೆಯೋ ಅದಕ್ಕೇ ಜಯ ಲಭಿಸಲಿದೆ. ಆದರೆ, ಎಲ್ಲಾ ಗ್ರಹಗಳು ಕೆಕೆಆರ್ ಪರವಾಗಿ ಚಲಿಸುತ್ತಿವೆ ಎಂಬುದು ಅವರ ಉವಾಚ. ತಮ್ಮ ಭವಿಷ್ಯವಾಣಿಗೆ ಅವರು ನೀಡಿರುವ ಕಾರಣಗಳು ಕೆಳಗಿನಂತಿವೆ.
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಯ ರಾಶಿ ಸಿಂಹ. ಆದರೆ, ಸಿಂಹದ ಮೇಲೆ ಶನಿ ಗ್ರಹ ಈಗಾಗಲೆ ವ್ಯತಿರಿಕ್ತ ಪರಿಣಾಮ ಬೀರಲು ಪ್ರಾರಂಭಿಸಿದೆ. ಸಿಎಸ್ಕೆಯ ರಾಶಿ ಮೇಷ. ಸಿಂಹ ತನ್ನ ಮನೆಯನ್ನು ಗಟ್ಟಿಯಾಗಿ ಹಿಡಿದು ಕುಳಿತುಬಿಟ್ಟಿದ್ದರೆ ಮೇಷ ಚಾಲನೆಯಲ್ಲಿದೆ. ಈ ಕಾರಣಕ್ಕಾಗಿಯೇ ಸಂಘಟಿತ ಆಟ, ಸ್ವಲ್ಪ ಅದೃಷ್ಟದಿಂದ ಚೆನ್ನೈಗೆ ಪ್ಲೇಆಫ್ ನಲ್ಲಿ ಜಯ ಲಭಿಸಲಿದೆ (ಚೆನ್ನೈ ಈಗಾಗಲೆ ಫೈನಲ್ ತಲುಪಿದೆ.) ಫೈನಲ್ನಲ್ಲಿ ಮಾತ್ರ ಚೆನ್ನೈಗೆ ಅದೃಷ್ಟ ಕೈಕೊಡಲಿದೆ. ಕೆಕೆಆರ್ ವಿರುದ್ಧ ಹೀನಾಯವಾಗಿ ಸೋಲಲಿದೆ.
ಕೆಕೆಆರ್ ನಾಯಕ ಗೌತಮ್ ಗಂಭೀರ್ ಅವರ ರಾಶಿ ಕುಂಭ ಮತ್ತು ಕೆಕೆಆರ್ ರಾಶಿ ಮಿಥುನ ರಾಶಿ. ಇವೆರಡು ರಾಶಿಗಳ ಅಧಿಪತಿ ಶನಿ ಮತ್ತು ಈ ಗ್ರಹ ಬುಧ ಗ್ರಹದ ಜಿಗರಿ ದೋಸ್ತ್. ಸಮಯ ಕುಂಡಲಿಯಲ್ಲಿ ಮಿಥುನ ರಾಶಿ ಈಗ ಐದನೇ ಮನೆಯಲ್ಲಿರುವುದು ತಂಡವನ್ನು ಉತ್ಸಾಹದಿಂದ ಪುಟಿದೇಳುವಂತೆ ಮಾಡಲಿದೆ. ಐದನೇ ಮನೆಯಲ್ಲಿ ಮಿಥುನ ಇರುವುದು ಕೆಕೆಆರ್ಗೆ ಅದೃಷ್ಟವನ್ನು ಬೊಗಸೆಯಲ್ಲಿ ತಂದು ಕೊಡಲಿದೆ. ಈ ಎಲ್ಲ ಅಂಶಗಳು ಚೆನ್ನೈಗೆ ವ್ಯತಿರಿಕ್ತವಾಗಿದ್ದರೆ, ಕೆಕೆಆರ್ ತಂಡಕ್ಕೆ ಪೂರಕವಾಗಿ ಬರಲಿವೆ.
ಸಂಖ್ಯಾಶಾಸ್ತ್ರವೂ ಗೌತಮ್ ಗಂಭೀರ್ ಪರವಾಗಿಯೇ ಇದೆ. ಗಂಭೀರ್ ಅವರ ಮೂಲಾಂಕ 5. ಐಪಿಎಲ್ 2012ರ ಮೂಲಾಂಕವೂ 5 (2+0+1+2=5). ಫೈನಲ್ ಪಂದ್ಯದಲ್ಲಿ ಮೊದಲು ಆಡುವ ತಂಡ 139 ರನ್ ಗುರಿ ನೀಡಲಿದೆ. ಈ ಗುರಿಯನ್ನು ಕೆಕೆಆರ್ ಸುಲಭವಾಗಿ ದಾಟುವುದಾ? ಅಥವಾ ಕೋಲ್ಕತಾ ನೈಟ್ ರೈಡರ್ಸ್ ನೀಡಿದ ಈ ಗುರಿಯನ್ನು ತಲುಪಲು ಚೆನ್ನೈ ಸೂಪರ್ ಕಿಂಗ್ಸ್ ವಿಫಲವಾಗುವುದಾ? ಜ್ಯೋತಿಷಿಗಳ ಲೆಕ್ಕಾಚಾರ ಏನೇ ಇರಲಿ, ಬುಕ್ಕಿಗಳ ಲೆಕ್ಕಾಚಾರ ಏನಿದೆಯೋ ಬಲ್ಲವರಾರು? ಫೈನಲ್ ಪಂದ್ಯ 'ಫಿಕ್ಸ್' ಆಗಿದ್ದು ಚೆನ್ನೈನೇ ಗೆಲುವಿನ ನಗೆ ಬೀರಲಿದೆ ಎಂದು ಹೇಳಲಾಗುತ್ತಿದೆ. ಏನಾಗುತ್ತದೋ ಕಾದು ನೋಡೋಣ.