ಕೆಲವೇ ದಿನಗಳಲ್ಲಿ'ಕೊರೊನಾ ದಿ ಎಂಡ್': ಗುಜರಾತಿನ ಖ್ಯಾತ ಜ್ಯೋತಿಷಿಯ ಭವಿಷ್ಯ
ಜಗತ್ತು ಎದುರಿಸುತ್ತಿರುವ ಈ ಸಂಕಷ್ಟದ ವೇಳೆ, ಹಲವು ಜ್ಯೋತಿಷಿಗಳು/ ಸ್ವಾಮೀಜಿಗಳು, ಕೊರೊನಾ ವೈರಸ್ ವಿಚಾರದಲ್ಲಿ ನಾಡಿನ ಮುಂದಿನ ಭವಿಷ್ಯ ಏನು ಎನ್ನುವುದರ ಬಗ್ಗೆ, ತಮ್ಮ ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಹೇಳುತ್ತಿದ್ದಾರೆ.
Recommended Video
ಅಭಿಗ್ಯಾ ಆನಂದ್ ಎನ್ನುವ ಬಾಲ ಜ್ಯೋತಿಷಿ ನುಡಿದ ಭವಿಷ್ಯ ಸಾಮಾಜಿಕ ತಾಣದಲ್ಲಿ ಭಾರೀ ಸದ್ದನ್ನು ಮಾಡಿತ್ತು. ಆತ ಹೇಳಿದ ಭವಿಷ್ಯ ಸತ್ಯಕ್ಕೆ ದೂರವಾದದ್ದು ಎಂದು, ಸೌರಬ್ ದ್ವಿವೇದಿ ಎನ್ನುವವರು ತಿರುಗೇಟು ನೀಡಿದ್ದರು.
ಬಾಲ ಜ್ಯೋತಿಷಿ ಅಭಿಗ್ಯಾ ಆನಂದ್ ನುಡಿದ ಭವಿಷ್ಯದ ಸತ್ಯಾಸತ್ಯತೆ. ಎಲ್ಲಾ ಪೊಳ್ಳು?
ಈ ಬಾಲ ಜ್ಯೋತಿಷಿಯಲ್ಲದೇ, ಕೋಡಿಮಠದ ಶ್ರೀಗಳು ಕೂಡಾ, ಭಾರತಕ್ಕೆ, ಅದರಲ್ಲೂ ಕರ್ನಾಟಕಕ್ಕೆ ಕೊರೊನಾದಿಂದ ಅಂತಹ ತೊಂದರೆ ಏನೂ ಆಗುವುದಿಲ್ಲ ಎಂದು ಈಗಾಗಲೇ ಹೇಳಿದ್ದಾಗಿದೆ.
ಗುಜರಾತ್ ನ ವಾಣಿಜ್ಯ ನಗರ ಅಹಮದಾಬಾದ್ ಮೂಲದ ಖ್ಯಾತ ಜ್ಯೋತಿಷಿಯೊಬ್ಬರು, ಕೊರೊನಾ ವೈರಸಿನ ಪ್ರಭಾವ ಇನ್ನೆಷ್ಟು ದಿನ ಇರಲಿದೆ ಎನ್ನುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ, ಯಾರೂ ಚಿಂತಿಸುವ ಅವಶ್ಯಕತೆಯಿಲ್ಲ. ಅವರು ಹೇಳಿದ್ದು ಹೀಗೆ:
ಪ್ರದ್ಯುಮಾನ್ ಭಟ್ ಎನ್ನುವ ಜ್ಯೋತಿಷಿ, ಅಹಮದಾಬಾದ್ ಮೂಲದವರು
ಪ್ರದ್ಯುಮಾನ್ ಭಟ್ ಎನ್ನುವ ಜ್ಯೋತಿಷಿ, ಅಹಮದಾಬಾದ್ ಮೂಲದವರು, ಈ ಭಾಗದಲ್ಲಿ ಇವರ ಭವಿಷ್ಯವನ್ನು ನಂಬುವವರ ಸಂಖ್ಯೆ ಜಾಸ್ತಿ. ಭಟ್ ಅವರು, ಕೊರೊನಾ ವೈರಸ್ ಬಗ್ಗೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯ ನುಡಿದಿದ್ದು, ಈ ವೈರಸಿನ ಕಾಟ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ.
ನವಗ್ರಹಗಳಲ್ಲಿ ಒಂದಾದ ರಾಹು
ನವಗ್ರಹಗಳಲ್ಲಿ ಒಂದಾದ ರಾಹು, ಆದ್ರಾ ನಕ್ಷತ್ರ, ಮಿಥುನ ರಾಶಿಯನ್ನು 11.09.19 ರಂದು ಪ್ರವೇಶಿಸಿದ್ದ ಮತ್ತು 20.05.20 ಇಲ್ಲಿಂದ ಪಥ ಬದಲಾಯಿಸಲಿದ್ದಾನೆ. ಹಾಗಾಗಿ, ಈ ಅವಧಿಯವರೆಗೆ, ಅಂದರೆ ಮೇ ಇಪ್ಪತ್ತರವರೆಗೆ ಕೊರೊನಾ ಇಂಪ್ಯಾಕ್ಟ್ ಇರಲಿದೆ. ಅನಿಷ್ಟವೂ ದೂರವಾಗುತ್ತಾ ಬರುತ್ತದೆ.
ಲಸಿಕೆ ಕಂಡು ಹಿಡಿಯುವ ವಿಜ್ಞಾನಿಗಳ ಪ್ರಯತ್ನಕ್ಕೆ ಬಲ ನೀಡಲಿದೆ
ಮಂಗಳ ರಾಶಿಯು, ಧನಿಷ್ಟ ನಕ್ಷತ್ರಕ್ಕೆ ಏಪ್ರಿಲ್ 24ಕ್ಕೆ ಪ್ರವೇಶಿಸಿದ್ದಾನೆ. ಶುಕ್ರ ರಾಶಿಯು ಮೃಗಶಿರಾ ನಕ್ಷತ್ರಕ್ಕೆ ಏಪ್ರಿಲ್ 27ಕ್ಕೆ ಪ್ರವೇಶಿಸಿದ್ದಾನೆ. ಇದಲ್ಲದೇ, ಮೇ 11ಕ್ಕೆ ಸೂರ್ಯನು ಕೃತ್ತಿಕಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಇದೆಲ್ಲಾ, ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ವಿಜ್ಞಾನಿಗಳ ಪ್ರಯತ್ನಕ್ಕೆ ಬಲ ನೀಡುವ ಸಂಕೇತವಾಗಿದೆ.
ಕೊರೊನಾ ಮಹಾಮಾರಿಯಿಂದ ನಿಶ್ಚಿಂತೆ
"ಈ ಎಲ್ಲಾ ರಾಶಿ ಬದಲಾವಣೆಯಿಂದ ಮುಂದಿನ ಕೆಲವೇ ಕೆಲವು ದಿನಗಳಲ್ಲಿ ಕೊರೊನಾ ಮಹಾಮಾರಿಯಿಂದ, ನಾವೆಲ್ಲಾ ಭಾರತೀಯರು ನಿಶ್ಚಿಂತೆಯಿಂದ ಇರಬಹುದಾಗಿದೆ. ಮೇ ಇಪ್ಪತ್ತರ ನಂತರ, ಕೊರೊನಾ ಪ್ರಭಾವ ಕಮ್ಮಿಯಾಗಲಿದೆ, ಯಾರೂ ಭಯ ಪಡುವ ಅವಶ್ಯಕತೆಯಿಲ್ಲ" ಎಂದು ಪ್ರದ್ಯುಮಾನ್ ಭಟ್ ಹೇಳಿದ್ದಾರೆ.