ಮೇಷ ರಾಶಿಯವರ ಗುಣ-ಸ್ವಭಾವ, ಅದೃಷ್ಟ ರತ್ನ, ದಿನಾಂಕ, ದೇವತೆಗಳು
Recommended Video
ಈ ದಿನ ಮೇಷ ರಾಶಿಯ ಗುಣ ಸ್ವಭಾವ, ಅದೃಷ್ಟ-ದುರದೃಷ್ಟ ಇತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳೋಣ. ಅಶ್ವಿನಿ ನಕ್ಷತ್ರ ನಾಲ್ಕು ಪಾದ, ಭರಣಿ ನಕ್ಷತ್ರದ ನಾಲ್ಕು ಪಾದ ಹಾಗೂ ಕೃತ್ತಿಕಾ ನಕ್ಷತ್ರದ ಒಂದು ಪಾದ ಸೇರಿ ಮೇಷ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಕುಜ. ಯಾವ ರಾಶಿಗೆ ಕುಜ ಅಧಿಪತಿಯೋ ಅವರಿಗೆ ಹಠ ಜಾಸ್ತಿ ಇರುತ್ತದೆ.
ಈಗ ನಕ್ಷತ್ರಗಳಿಗೆ ಯಾವ ಗ್ರಹ ಅಧಿಪತಿ ಅಂತ ನೋಡುವುದಾದರೆ, ಅಶ್ವಿನಿಗೆ ಕೇತು ಅಧಿಪತಿ. ಭರಣಿಗೆ ಶುಕ್ರ ಅಧಿಪತಿ ಹಾಗೂ ಕೃತ್ತಿಕಾಗೆ ರವಿ ಅಧಿಪತಿಯಾಗಿರುತ್ತಾರೆ. ಮೇಷ ರಾಶಿಗೆ ಕುಜ ಗ್ರಹ ಅಧಿಪತಿಯೇನೋ ಸರಿ. ಆದರೆ ಶತ್ರು ಗ್ರಹಗಳು ಯಾವುವು ಅಂದರೆ, ಬುಧ-ಶುಕ್ರ-ಶನಿ ಶತ್ರುಗಳಾಗುತ್ತವೆ.
ಆದ್ದರಿಂದ ಈ ರಾಶಿಯವರಿಗೆ ಶುಕ್ರ ದಶೆ ಅನುಕೂಲವಾಗಿರುವುದಿಲ್ಲ. ಸಾಮಾನ್ಯ ಅಭಿಪ್ರಾಯದ ಪ್ರಕಾರ ಶುಕ್ರದಶೆಯಲ್ಲಿ ಅಭಿವೃದ್ಧಿ ಆಗುತ್ತದೆ ಎನ್ನುತ್ತಾರೆ. ಆದರೆ ಶುಕ್ರ ದಶೆಯು ಮೇಷ ರಾಶಿಯವರಿಗೆ ಅನುಕೂಲಕರವಾಗಿ ಇರುವುದಿಲ್ಲ. ಈ ರಾಶಿಯವರು ಕುಜ ದಶೆಯಲ್ಲಿ ಅದ್ಭುತವಾದ ಫಲಗಳನ್ನು ಪಡೆಯುತ್ತಾರೆ. ಮೇಷ ರಾಶಿಯವರ ಜನ್ಮ ಜಾತಕದಲ್ಲಿ ಕುಜ ಯಾವ ಸ್ಥಾನದಲ್ಲಿ ಇದ್ದಾನೆ ಎಂಬುದನ್ನು ನೋಡಿಕೊಂಡರೆ ಅಭಿವೃದ್ಧಿಗೆ ಇನ್ನಷ್ಟು ದಾರಿಯನ್ನು ಹೇಳಬಹುದು.
Love Astrology: ಯಾರಿಗೆ ಪ್ರೇಮ ವಿವಾಹ? ಯಾವ ರಾಶಿಯವರು ಆಗಬಾರದು?
ಈ ರಾಶಿಯವರಿಗೆ ರವಿ, ಚಂದ್ರರು ಮಿತ್ರ ಗ್ರಹಗಳು. ಇನ್ನು ಗುರು ಇವರಿಗೆ ಜಾತಕದಲ್ಲಿ ಎಲ್ಲಿ ಸ್ಥಿತನಾಗಿದ್ದಾನೆ ಎಂಬ ಆಧಾರದ ಮೇಲೆ ಶುಭಾಶುಭ ಫಲಗಳನ್ನು ನೀಡುತ್ತಾನೆ.
ಗುರಿ ತಲುಪವ ಸಂಕಲ್ಪ ಶಕ್ತಿ ಅಧಿಕ
ಜಾತಕದಲ್ಲಿ ಲಗ್ನ-ನವಾಂಶ ಕುಂಡಲಿ ನೋಡಿ, ಫಲ ನುಡಿಯಬೇಕು. ಆದರೂ ಈ ರಾಶಿಯವರಲ್ಲಿ ಕಂಡುಬರುವ ಸಾಮಾನ್ಯ ಫಲಗಳು ಯಾವುವು ಅಂದರೆ, ಇವರು ರೂಪವಂತರಾಗಿರುತ್ತಾರೆ. ಆಕರ್ಷಣಾ ಶಕ್ತಿ ಇರುತ್ತದೆ. ಸ್ವಲ್ಪ ಕಪ್ಪಗಿದ್ದರೂ ಆಕರ್ಷಕವಾಗಿ ಕಾಣುತ್ತಾರೆ. ಆತ್ಮವಿಶ್ವಾಸ ಕೂಡ ಬಹಳ ಹೆಚ್ಚಾಗಿರುತ್ತದೆ. ಯಾರಿಗೂ ಸೋಲುವುದಿಲ್ಲ. ತಲೆ ಬಾಗಿಸಲ್ಲ. ಇವರು ಸೌಂದರ್ಯ ಆರಾಧಕರು. ಅಂದವನ್ನು ಆರಾಧಿಸುವ ಸ್ವಭಾವ ಇವರದಾಗಿರುತ್ತದೆ. ಬಹಳ ಹಠಮಾರಿಗಳಾಗಿರುತ್ತಾರೆ. ಮುಂಗೋಪಿಗಳಾಗಿರುತ್ತಾರೆ. ನ್ಯಾಯ-ನೀತಿಗೆ ಹೆಚ್ಚು ಪ್ರಾಧಾನ್ಯ ನೀಡುತ್ತಾರೆ. ಯಾವುದೇ ಕೆಲಸವನ್ನಾದರೂ ಪೂರ್ಣಗೊಳಿಸುತ್ತಾರೆ. ಗುರಿಯನ್ನು ತಲುಪುವಂಥ ಸಂಕಲ್ಪ ಶಕ್ತಿ ಇರುತ್ತದೆ. ಇವರಿಗೆ ಅದೆಂಥದೇ ಅಡ್ಡಿ-ಆತಂಕಗಳು ಎದುರಾದರೂ ಅವೆಲ್ಲವನ್ನೂ ದಾಟಿ, ನಿಶ್ಚಿತವಾದ ಗುರಿಯನ್ನು ತಲುಪುತ್ತಾರೆ. ಮೇಷ ರಾಶಿಯವರಿಗೆ ಸ್ನೇಹಿತರು ಹೆಚ್ಚು. ವಿವಾಹದ ನಂತರ ಇವರ ಬದುಕಿನಲ್ಲಿ ಉತ್ತಮ ಪ್ರಗತಿ ಆಗುತ್ತದೆ.
ಮದುವೆ ನಂತರ ಉತ್ತಮ ಪ್ರಗತಿ ಕಾಣುತ್ತಾರೆ
ಸಾಮಾನ್ಯವಾಗಿ ಮೇಷ ರಾಶಿಯವರಿಗೆ ಮದುವೆ ಆಗುವ ತನಕ ಅಂಥ ಒಳ್ಳೆ ಫಲ ಸಿಗುವುದಿಲ್ಲ. ಮದುವೆ ನಂತರ ಬಹಳಷ್ಟು ಉತ್ತಮ ಪ್ರಗತಿ ಕಾಣುತ್ತಾರೆ. ಚಂಚಲದ ಮನಸು ಜಾಸ್ತಿ. ನಿರ್ಧಾರಗಳನ್ನು ಸ್ಥಿರವಾಗಿ ತೆಗೆದುಕೊಳ್ಳಲು ಆಗದೆ ಒದ್ದಾಡುತ್ತಿರುತ್ತಾರೆ. ಯಾವುದೇ ವಿಚಾರವನ್ನು ಪೂರ್ತಿಯಾಗಿ ತಿಳಿದುಕೊಂಡು, ನಿರ್ಧಾರ ಮಾಡಿ, ಮುಂದುವರಿಯೋಣ ಅಂದುಕೊಂಡರೆ ಆ ಪ್ರಯತ್ನ ಸಫಲವಾಗಲು ಹರಸಾಹಸ ಪಡಬೇಕು. ಮನಸಿನಲ್ಲಿ ಬಹಳ ಏರಿಳಿತಗಳು ಆಗುತ್ತಿರುತ್ತವೆ. ಇವರು ಸ್ವತಂತ್ರವಾಗಿ ಜೀವನ ನಡೆಸಲು ಬಯಸುತ್ತಾರೆ. ಯಾರ ಮೇಲೂ ಅವಲಂಬಿಸಿರಬಾರದು ಎಂಬುದನ್ನು ಬಯಸುತ್ತಾರೆ. ಒಬ್ಬರ ಕೈ ಕೆಳಗೆ ಕೆಲಸ ಮಾಡಬಾರದು ಅಂದುಕೊಳ್ಳುತ್ತಾರೆ. ಅನಿವಾರ್ಯವಾಗಿ ಕೆಲಸಕ್ಕೆ ಅಥವಾ ತಿಂಗಳ ಸಂಬಳದ ಉದ್ಯೋಗಕ್ಕೆ ಹೋಗಬಹುದೇ ಹೊರತು, ಈ ರಾಶಿಯವರು ಸ್ವತಂತ್ರವಾಗಿ ವ್ಯಾಪಾರ-ವ್ಯವಹಾರ ಮಾಡುವಂಥವರು.
ಅದೃಷ್ಟ ರತ್ನ, ದಿನ ಇತ್ಯಾದಿ ವಿವರ
ಮೇಷ ರಾಶಿಯವರಿಗೆ ಕೋಪ ಬರುವುದು ಕಡಿಮೆ. ಆದರೆ ಬಂದಾಗ ವಿಪರೀತ ಕೋಪ ಬರುತ್ತದೆ. ಏಕೆಂದರೆ ಇದು ಅಗ್ನಿ ತತ್ವದ ರಾಶಿಯಾದ್ದರಿಂದ ಸಿಟ್ಟು ಹೆಚ್ಚಾಗಿರುತ್ತದೆ. ಕೋಪದಿಂದ ಅದೃಷ್ಟ ಕಳೆದುಕೊಳ್ಳಬೇಕಾಗುತ್ತದೆ. ಈ ಅಂಶವನ್ನು ಮೇಷ ರಾಶಿಯವರು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು. ಇನ್ನು ಸಾಧನೆ ಬಗ್ಗೆ ಸದಾ ತಪನೆ ಮಾಡುವ ವ್ಯಕ್ತಿಗಳು ಇವರು. ಜೀವನದಲ್ಲಿ ಏನನ್ನಾದರೂ ಸಾಧಿಸಿ, ಹುಟ್ಟಿದ್ದಕ್ಕೂ ಸಾರ್ಥ ಎನಿಸಿಕೊಳ್ಳಬೇಕು ಎಂಬುದು ಇವರ ಚಿಂತನೆಯಾಗಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಇವರಿಗೆ ದೈವ ಭಕ್ತಿ ಹೆಚ್ಚಾಗಿರುತ್ತದೆ. ಜತೆಗೆ ಇವರಲ್ಲಿ ನಾಯಕತ್ವ ಗುಣಗಳು ಹೆಚ್ಚಾಗಿರುತ್ತವೆ. ಅಧಿಕಾರ ಪಡೆಯಲು ಇವರ ಮನಸು ಹಾತೊರೆಯುತ್ತಿರುತ್ತದೆ. ಮೇಷ ರಾಶಿಯವರಿಗೆ ಹವಳ, ಕನಕ ಪುಷ್ಯರಾಗ ಹಾಗೂ ಮಾಣಿಕ್ಯ ಅದೃಷ್ಟದ ರತ್ನಗಳು. ಬಿಳಿ ಹಾಗೂ ಕೆಂಪು ಅದೃಷ್ಟದ ಬಣ್ಣಗಳು. ಭಾನುವಾರ ಹಾಗೂ ಮಂಗಳವಾರ ಅದೃಷ್ಟದ ದಿನಗಳಾಗಿರುತ್ತವೆ.
ಅದೃಷ್ಟ ದೇವತೆ ಹಾಗೂ ದಿನಾಂಕಗಳು
ಮೇಷ ರಾಶಿಯವರಿಗೆ ಹನುಮಂತ ಹಾಗೂ ಸುಬ್ರಹ್ಮಣ್ಯ ಅದೃಷ್ಟ ತರುವ ದೇವತೆಗಳು. 6 ಹಾಗೂ 9ನೇ ಸಂಖ್ಯೆ ಇವರ ಪಾಲಿನ ಅದೃಷ್ಟ ಸಂಖ್ಯೆಗಳು. 9, 18, 27 ಈ ದಿನಾಂಕಗಳು ಕುಜ ಗ್ರಹ ಪಾಲಿಗೆ ಅದೃಷ್ಟ ತರುತ್ತವೆ. ಸಿಂಹ, ತುಲಾ, ಧನು ರಾಶಿಯವರ ಜತೆಗಿನ ವಿವಾಹ ಇವರಿಗೆ ಅದೃಷ್ಟ ತರುತ್ತದೆ. ಮಿಥುನ ಹಾಗೂ ಕನ್ಯಾ ರಾಶಿಯವರ ಜತೆಗೆ ವಿವಾಹ ಮಾಡಿಕೊಂಡರೆ ಶತ್ರುತ್ವ ಬೆಳೆಯುತ್ತದೆ. ಅದೃಷ್ಟ ಕಡಿಮೆ ಆಗುತ್ತದೆ. ಮೇಷ ರಾಶಿಯವರು ಎದುರಿನವರ ನಕಾರಾತ್ಮಕ ಸ್ವಭಾವವನ್ನು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಅದು ಇವರ ಪಾಲಿಗೆ ನೆಗೆಟಿವ್ ಆಗಿ ಪರಿಣಮಿಸುತ್ತದೆ. ರಾಜಕಾರಣದಲ್ಲಿ ಇವರಿಗೆ ಉತ್ತಮ ಪ್ರಗತಿ ದೊರೆಯುತ್ತಿದೆ. ತುಂಬ ಸರಳ ವ್ಯಕ್ತಿತ್ವದವರಾಗಿರುವ ಇವರು, ಸತ್ಯವನ್ನು ಹೇಳುವಂಥವರಾಗಿರುತ್ತಾರೆ, ಕಠಿಣ ಪರಿಶ್ರಮದ ಮೂಲಕ ತಮ್ಮ ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. ಇವರು ಇತರರ ಸಹಾಯ ಕೇಳುವುದಿಲ್ಲ. ಅತ್ಯಂತ ವಿರಳ ಅಥವಾ ಸಂದಿಗ್ಧ ವೇಳೆಯಲ್ಲಿ ಮಾತ್ರ ನೆರವು ಕೇಳಬಹುದು.
ಕುಜ ನೀಚನಾಗಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ
ಮೇಷ ರಾಶಿಯವರಿಗೆ ಸಹನೆ ಕಡಿಮೆ. ಆತುರದ ಸ್ವಭಾವದವರು. ಜೀವನದಲ್ಲಿ ಸಾಧನೆ ಮಾಡಬೇಕೆಂಬ ತಪನೆ ಇರುತ್ತದೆ. ಆದರೆ ಇವರ ಪಾಲಿಗೆ ಅದೃಷ್ಟ ಕಡಿಮೆಯಾದ್ದರಿಂದ ಅಂದುಕೊಂಡಿದ್ದನ್ನು ಸಾಧಿಸುವ ಹಾದಿ ಕಠಿಣವಾಗಿರುತ್ತದೆ. ಸ್ವತಂತ್ರವಾಗಿ ಇರಬೇಕು ಎಂಬುದು ಇವರ ಆದ್ಯತೆ ಆಗಿರುತ್ತದೆ. ಆದರೆ ಅದಕ್ಕೆ ಸುತ್ತಲಿನವರು ಅವಕಾಶ ನೀಡುವುದಿಲ್ಲ. ಮೇಷ ರಾಶಿಯವರ ಜನ್ಮ ಜಾತಕದಲ್ಲಿ ಕುಜ ಗ್ರಹ ನೀಚವಾಗಿದ್ದರೆ (ಕರ್ಕಾಟಕ ರಾಶಿಯಲ್ಲಿ ಕುಜ ಗ್ರಹ ಇದ್ದರೆ ನೀಚ ಸ್ಥಾನ) ಅಥವಾ ರಾಹುವಿನ ಜತೆಗೆ ಕುಜ ಗ್ರಹ ಇದ್ದರೆ ಆಗ ಕೂಡ ಸಮಸ್ಯೆಗಳು ಆಗುತ್ತವೆ. ಇನ್ನು ಕುಜ ಗ್ರಹದ ಜತೆಗೆ ಬುಧ ಇರುವವರಿಗೂ ತೊಂದರೆಗಳಾಗುತ್ತವೆ. ಜತೆಗೆ ಅಪಕೀರ್ತಿ ಪಡೆಯುತ್ತಾರೆ. ಇಷ್ಟನ್ನು ವಿವರಿಸಿದ್ದು ಸಾಮಾನ್ಯವಾಗಿ ನುಡಿಯುವ ಫಲದ ಮೂಲಕವೇ. ಆದರೆ ಯಾವುದಕ್ಕೂ ಒಮ್ಮೆ ಜ್ಯೋತಿಷಿಗಳಲ್ಲಿ ನಿಮ್ಮ ಜನ್ಮ ಜಾತಕವನ್ನು ತೋರಿಸಿ.
ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.