ಶುಕ್ರ ಗ್ರಹ ಅನುಗ್ರಹಕ್ಕಾಗಿ 7 ಅದ್ಭುತ ಸಲಹೆಗಳು
ಕೆಲವರಿಗೆ ವ್ಯಕ್ತಿತ್ವದಲ್ಲಿ ಆಕರ್ಷಣೆ ಕಾಯ್ದುಕೊಳ್ಳುವ ಉದ್ದೇಶ ಇರುತ್ತದೆ. ಇತರರನ್ನು ತಮ್ಮ ವ್ಯಕ್ತಿತ್ವ ಹಾಗೂ ಮಾತಿನಿಂದ ಹಿಡಿದಿಟ್ಟುಕೊಳ್ಳುವ ಅಗತ್ಯ ಇದೆ ಭಾವಿಸುವ ಮಂದಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅಂದರೆ ಮುಖ್ಯವಾಗಿ ವ್ಯಕ್ತಿತ್ವದಲ್ಲಿ ಇತರರನ್ನು ಸೂಜಿಗಲ್ಲಿನಂತೆ ಸೆಳೆಯುವ ಆಕರ್ಷಣೆ ಇರಬೇಕು ಎಂಬುದು ಇದರ ಹೂರಣ.
ಪ್ರಬಲ ನಾಯಕರಾಗಿ ಜನರ ಮಧ್ಯೆ ಕಾಣಿಸಿಕೊಳ್ಳಬೇಕು, ಯಶಸ್ವಿ ಚಿತ್ರ ನಟ- ನಟಿ ಆಗಬೇಕು, ಮಾಧ್ಯಮ ಲೋಕದಲ್ಲಿ ಹೆಸರು ಮಾಡಬೇಕು ಎಂಬ ಇರಾದೆ ಇರುವಂಥವರು ಇಂದಿನ ಲೇಖನದಲ್ಲಿ ನೀಡುವ ಸಲಹೆಗಳನ್ನು ಶ್ರದ್ಧಾ- ಭಕ್ತಿಯಿಂದ ಅನುಸರಿಸಿದರೆ ಸಕಾರಾತ್ಮಕವಾದ ಫಲಿತಾಂಶವನ್ನು ಕಾಣಬಹುದು.
ಆಕರ್ಷಕ ವ್ಯಕ್ತಿತ್ವ ಹೊಂದಲು ಶುಕ್ರನ ಅನುಗ್ರಹ ಬಹಳ ಮುಖ್ಯ. ವೈದಿಕ ಜ್ಯೋತಿಷ್ಯದ ಸಾವಿರಾರು ವರ್ಷಗಳ ಸಂಶೋಧನೆಯ ಫಲವಾಗಿ ಈ ಫಲಿತಾಂಶ ಕಂಡುಬಂದಿದೆ. ಜ್ಯೋತಿಷ್ಯದ ಪ್ರಕಾರ ಸೌಂದರ್ಯ, ಚರಿಷ್ಮಾ, ಆಕರ್ಷಣೆ, ವಿಲಾಸಿ ಜೀವನ... ಇವೆಲ್ಲವನ್ನೂ ಸೂಚಿಸುವ ಗ್ರಹ ಶುಕ್ರ.
ನಿಮ್ಮ ಗಮನಕ್ಕೂ ಬಂದಿರಬಹುದು, ಕೆಲವರು ಆ ಸ್ಥಳದಲ್ಲಿ ಇದ್ದರೆ ಅದೆಂಥದ್ದೋ ಶಕ್ತಿ ಇದ್ದಂತೆ. ಅವರ ವ್ಯಕ್ತಿತ್ವವು ಸೂಜಿಗಲ್ಲಿನಂತೆ ಸೆಳೆಯುತ್ತಿರುತ್ತದೆ. ಅವರ ಜಾತಕ ಗಮನಿಸಿ: ಶುಕ್ರ ಗ್ರಹ ಉತ್ತಮ ಸ್ತ್ಗಿತಿಯಲಿರುತ್ತದೆ. ಒಂದು ವೇಳೆ ಶುಕ್ರ ಉತ್ತಮ ಸ್ಥಿತಿಯಲ್ಲಿ ಇಲ್ಲದ ಪಕ್ಷದಲ್ಲಿ ಆ ಗ್ರಹಕ್ಕೆ ಬಲ ತುಂಬಲು ಇಲ್ಲಿ ಕೆಲವು ಅದ್ಭುತವಾದ ಸಲಹೆಗಳಿವೆ. ಇವುಗಳನ್ನು ಪಾಲಿಸಿದರೂ ಶುಕ್ರ ಗ್ರಹದ ಅನುಗ್ರಹ ದೊರೆತು, ಬದಲಾವಣೆ ಅನುಭವಕ್ಕೆ ಬರುತ್ತದೆ.
ಲಕ್ಷ್ಮಿದೇವಿಯ ಆರಾಧನೆ
ಲಕ್ಷ್ಮಿದೇವಿಯು ಶುಕ್ರ ಗ್ರಹದ ಅಧಿದೇವತೆ. ಲಕ್ಷ್ಮಿ ದೇವಿಯ ಆರಾಧನೆ ಮಾಡುವುದರಿಂದ ಶುಕ್ರ ಗ್ರಹದ ಮೂಲ ಗುಣಗಳು ಮೈಗೂಡುತ್ತವೆ. ಇನ್ನು ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಅಂತ ಕೂಡ ಕರೆಯಲಾಗುತ್ತದೆ. ದೇವಿಯ ಆರಾಧನೆ ಮಾಡುವುದರಿಂದ ಆರ್ಥಿಕ ಅನುಕೂಲ ಹೆಚ್ಚಾಗುತ್ತದೆ. ಸಂಪತ್ತಿನ ಕ್ರೋಡೀಕರಣ ಆಗುತ್ತದೆ.
ಶುಕ್ರ ಗ್ರಹದ ಬೀಜ ಮಂತ್ರ ಪಠಿಸಿ
ನಿಮ್ಮ ಒಳಗಿನ ಶುಕ್ರನ ಸಕಾರಾತ್ಮಕ ಗುಣಗಳು ಹೆಚ್ಚಾಗಬೇಕು ಅಂದರೆ ಶುಕ್ರ ಗ್ರಹದ ಬೀಜ ಮಂತ್ರ ಪಠಣ ಮಾಡುವುದು ಬಹಳ ಮುಖ್ಯ. ಶುಕ್ರ ಗ್ರಹದ ಬೀಜ ಮಂತ್ರವನ್ನು ಸರಿಯಾದ ರೀತಿಯಲ್ಲಿ ಪಠಣ ಮಾಡಿದರೆ ಜನರು ನಿಮ್ಮ ಕಡೆ ಅಚ್ಚರಿಯಿಂದ ನೋಡಲು ಆರಂಭ ಮಾಡುತ್ತಾರೆ. ಈ ಬೀಜ ಮಂತ್ರದ ಸಂಪೂರ್ಣ ಅನುಕೂಲವನ್ನು ಅನುಭವಕ್ಕೆ ಪಡೆಯಲು ಇಪ್ಪತ್ತು ದಿನದೊಳಗೆ ಇಪ್ಪತ್ತು ಸಾವಿರ ಸಲ "ಓಂ ದ್ರಂ ದ್ರೀಂ ದ್ರೌಂ ಸಹ್ ಶುಕ್ರಾಯ ನಮಃ" ಎಂದು ಪಠಿಸಿ.
ಬಟ್ಟೆ ಮತ್ತು ಮೊಸರು ದಾನ ಮಾಡಿ
ಬಟ್ಟೆ ಮತ್ತು ಮೊಸರು ಶುಕ್ರ ಗ್ರಹವನ್ನು ಪ್ರತಿನಿಧಿಸುತ್ತವೆ. ಇವೆರಡನ್ನೂ ದಾನ ಮಾಡುವುದರಿಂದ ಶುಕ್ರ ಗ್ರಹದ ನಕಾರಾತ್ಮಕ ಪರಿಣಾಮಗಳು ದೂರವಾಗುತ್ತವೆ. ಸೌಂದರ್ಯ ಹಾಗೂ ಆಕರ್ಷಣೆ ವೃದ್ಧಿಯಾಗುತ್ತವೆ. ಜತೆಗೆ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತೀರಿ. ಇತರರು ನಿಮ್ಮ ಕಡೆಗೆ ಸೆಳೆಯಲ್ಪಡುತ್ತಾರೆ.
ಶ್ರೀ ಸೂಕ್ತ ಪಠಣ
ಋಗ್ವೇದದಲ್ಲಿ ಶ್ರೀ ಸೂಕ್ತ ಎಂಬುದಿದೆ. ನಂಬಿಕೆಗಳ ಪ್ರಕಾರ ಇದು ಐದು ಸಾವಿರ ವರ್ಷಗಳಷ್ಟು ಹಿಂದೆ ರಚನೆಯಾದದ್ದು. ಈ ಸೂಕ್ತ ಪಠಿಸುವುದರಿಂದ ಆ ವ್ಯಕ್ತಿಯ ಮೇಲಿನ ಶುಕ್ರ ಗ್ರಹದ ಸಕಾರಾತ್ಮಕ ಪರಿಣಾಮ ಹೆಚ್ಚಾಗುತ್ತದೆ. ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣಿಸಿಕೊಂಡು, ಇತರರ ಮೇಲೆ ಅದರ ಪ್ರಭಾವ ಬೀರುವಂಥ ಸನ್ನಿವೇಶ ಸೃಷ್ಟಿಯಾಗುತ್ತದೆ.
ಶುಕ್ರವಾರದಂದು ಉಪವಾಸ
ಶುಕ್ರವಾರದ ಅಧಿಪತಿ ಶುಕ್ರ ಗ್ರಹ. ಆ ದಿನದಂದು ಉಪವಾಸ ಮಾಡುವುದರಿಂದ ಶುಕ್ರ ಗ್ರಹದ ಸಕಾರಾತ್ಮಕ ಪರಿಣಾಮ ವ್ಯಕ್ತಿಯ ಮೇಲೆ ಬೀರುತ್ತದೆ. ತಾವು ಇಷ್ಟಪಡುವ ವ್ಯಕ್ತಿಯ ಪ್ರೀತಿಯನ್ನು ಪಡೆಯಲು ಹಂಬಲಿಸುವವರು ಶುಕ್ರವಾರದಂದು ಉಪವಾಸ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ.
ಆರು ಮುಖಿ ರುದ್ರಾಕ್ಷಿ ಧಾರಣೆ
ಯಾರ ಜಾತಕದಲ್ಲಿ ಶುಕ್ರ ಗ್ರಹ ನೀಚವಾಗಿರುತ್ತದೋ ಅಥವಾ ದುರ್ಬಲ ಆಗಿರುತ್ತದೋ ಅಂಥವರು ಆರು ಮುಖಿ ರುದ್ರಾಕ್ಷಿ ಧರಿಸುವುದರಿಂದ ಗ್ರಹಕ್ಕೆ ಶಕ್ತಿ ದೊರೆಯುತ್ತದೆ. ಹಾಗೂ ಶುಕ್ರ ಗ್ರಹ ದುರ್ಬಲ ಆಗಿರುವುದರಿಂದ ಬೀರುವ ನಕಾರಾತ್ಮಕ ದೋಷಗಳ ನಿವಾರಣೆಯೂ ಆಗುತ್ತದೆ.
ವಜ್ರ ಧಾರಣೆ
ವಜ್ರ ಧಾರಣೆ ಮಾಡುವುದರಿಂದ ಶುಕ್ರ ಗ್ರಹದ ಅನುಗ್ರಹ ಪಡೆಯಬಹುದು. ಕಣ್ಣುಗಳಲ್ಲಿ ಹೊಳಪು ನೀಡುತ್ತದೆ, ಸಂಗೀತಗಾರರಿಗೆ ಧ್ವನಿ ಮತ್ತಷ್ಟು ಚೆಂದವಾಗುತ್ತದೆ, ಸೌಂದರ್ಯ- ಆಕರ್ಷಣೆ ಹೆಚ್ಚಾಗುತ್ತದೆ. ಆದರೆ ವಜ್ರ ಧಾರಣೆ ಮಾಡುವ ಮುಂಚೆ ಉತ್ತಮ ಜ್ಯೋತಿಷಿಗಳ ಬಳಿ ಸಲಹೆ ಪಡೆಯಲೇಬೇಕು.