ಸಿಂಹ ಮತ್ತು ಕನ್ಯಾ ರಾಶಿ ಗುಣಸ್ವಭಾವಗಳು
* ಧವಳ
ಸಿಂಹ (Leo) ಜುಲೈ 23 - ಆಗಸ್ಟ್ 21 : ಈ ರಾಶಿ ಐದನೆಯ ಸ್ಥಾನದಲ್ಲಿದೆ. ಸಿಂಹವನ್ನು ಇದು ಪ್ರತಿನಿಧಿಸುತ್ತದೆ. ಸೃಜನಶೀಲ ಹಾಗೂ ಪ್ರೀತಿಸುವ ಗುಣ ಇದರ ಮುಖ್ಯ ಅಂಶ . ಇದು ಎಲ್ಲರನ್ನು ಆಕರ್ಷಿಸುವ ಗುಣವುಳ್ಳ ರಾಶಿ. ಈ ರಾಶಿಯಲ್ಲಿ ಜನಿಸಿದವರು ಒಂದಲ್ಲ ಒಂದು ರೀತಿ ಜನರನ್ನು ಸೆಳೆಯುತ್ತಲೇ ಇರುತ್ತಾರೆ. ಒಂದರ್ಥದಲ್ಲಿ ಎವರ್ ಗ್ರೀನ್ ಗಳು ಈ ರಾಶಿಯವರು.
ಇವರು ತಮ್ಮ ರಕ್ತದಲ್ಲಿ ಬೆರೆತಿರುವ ಕ್ರಿಯೇಟಿವಿಟಿ, ಉದಾರ ಹೃದಯ, ಸಮಚಿತ್ತ, ಕುತೂಹಲ, ಪ್ರೀತಿಸುವ ಗುಣ, ಮುಕ್ತ ಮನ ಹಾಗೂ ನಂಬಿಕಸ್ತ ಗುಣದಿಂದ ಸಮಾಜದ ಗಮನ ಸೆಳೆಯುತ್ತಾರೆ. ಇಷ್ಟೆ ಅಲ್ಲದೆ ಪವರ್ ಫುಲ್ ಸಂಗತಿಗೂ ಇವರು ಪ್ರಖ್ಯಾತಿ ಪಡೆದಿರುತ್ತಾರೆ. ಈ ರಾಶಿಯಲ್ಲಿರುವವರು ಸ್ವಲ್ಪ ಡಾಮಿನೇಟ್ ಮಾಡುವುದರಲ್ಲಿ ಮುಂದೆ, ಸಾಕಷ್ಟು ಸರ್ತಿ ಅದು ಅವರ ಬದುಕಲ್ಲಿ ಪ್ಲಸ್ ಹಾಗೂ ಮೈನಸ್ ಆಗಿ ಬದಲಾವಣೆ ಪಡೆದುಕೊಳ್ಳುತ್ತದೆ.
ಸಿಂಹ ಪ್ರಾಣಿಗಳ ರಾಜ, ಅದೇ ರೀತಿ ಈ ರಾಶಿಯವರು ರಾಜನ-ನಾಯಕತ್ವದ ಗುಣ ಪಡೆದಿರುತ್ತಾರೆ. ರಾಜ ಅಂದ ಬಳಿಕ ಇನ್ನು ಹಲವು ವಿಶೇಷ ಗುಣಗಳು ಇರಲೇಬೇಕಲ್ಲ. ಇವರು ವೇದಾಂತ -ಧಾರ್ಮಿಕ ಅಂಶಕ್ಕೆ ಆದ್ಯತೆ ನೀಡುತ್ತಾರೆ, ಕೆಲವು ಸರ್ತಿ ಆ ಅಂಶವು ಅದೆಷ್ಟು ಅತಿರೇಕಕ್ಕೆ ಹೋಗುತ್ತದೆ ಅಂದ್ರೆ ಅವರ ಕಣ್ಣಿಗೆ ರಾಮ ಒಬ್ಬನೇ ದೇವ್ರು ಇನ್ಯಾರು ಅಲ್ಲ. ಕೃಷ್ಣ ಪ್ರತ್ಯಕ್ಷ ಆಗಿ ನಾನು ರಾಮನ ಮತ್ತೊಂದು ಅವತಾರ ನಾನು ದೇವರೇ ಅಂದ್ರೂ ದೇವರ ಮಾತನ್ನೇ ಒಪ್ಪದ ಗುಣ ಹೊಂದಿರುತ್ತಾರೆ.
ಈ ವಿಷಯದದಲ್ಲಿ ಖುದ್ದು ಶ್ರೀ ರಾಮಚಂದ್ರ ಪ್ರತ್ಯಕ್ಷವಾಗಿ ನಿಜ ಸಂಗತಿ ಹೇಳಿದ್ರು ಒಲ್ಲೆ ಸ್ವಾಮಿ ನೀನೆ ನನ್ ದೇವ್ರು ಅಂತ ತಮ್ಮ ಪಟ್ಟು ಉಡಕ್ಕಿಂತ ಗಟ್ಟಿಯಾಗಿ ಹಿಡಿದುಕೊಂಡಿರುತ್ತಾರೆ. ಪ್ರಾಮಾಣಿಕತೆ ಇವರ ಮತ್ತೊಂದು ವಿಶೇಷ ಗುಣ. ಈ ಕೆಚ್ಚದೆಯಿಂದ ಎಲ್ಲ ಕೆಲಸಗಳಲ್ಲೂ ಮುಂದುವರೆಯುತ್ತಾರೆ. ಇನ್ನು ಕೆಲಸದ ವಿಷಯಕ್ಕೆ ಬಂದ್ರೆ ಚಿಕ್ಕ ಪುಟ್ಟದಕ್ಕೆ ಹೋಗಲ್ಲ ಅಂತಾರೆ, ಕಂಪನಿ ಚೇರ್ ಪರ್ಸನ್, ರಾಜಕೀಯ ನಾಯಕತ್ವ, ಡೈರೆಕ್ಟರ್ ಇಂತಹ ದೊಡ್ಡ ಸ್ಥಾನವನ್ನೇ ಆಯ್ಕೆ ಮಾಡಿಕೊಳ್ತಾರೆ.
ಪ್ರೀತಿಸುವ ಗುಣ ಸಿಕ್ಕಾಪಟ್ಟೆ ಹಾಗೂ ಸಂಗಾತಿಯ ವಿಷಯದಲ್ಲಿ ತುಂಬಾ ಕನ್ಸರ್ನ್. ಕಾಯಿಲೆಯ ವಿಷಯಕ್ಕೆ ಬಂದ್ರೆ ಇವರಿಗೆ ಒಮ್ಮೆ ಹುಷಾರು ತಪ್ಪಿದರೆ ಅಷ್ಟು ಬೇಗ ಗುಣ ಆಗಲ್ಲ. ಅಲ್ಲಿ ಮಾತ್ರ ನಿಧಾನವೇ ಪ್ರಧಾನ ಅಂಶವು ಹಾಸು ಹೊಕ್ಕಿರುತ್ತದೆ.
ಕನ್ಯಾ (Virgo) ಆಗಸ್ಟ್22 - ಸೆಪ್ಟೆಂಬರ್ 23 : ಡಿಪ್ಲೋಮ್ಯಾಟ್ ಗುಣದ ಮತ್ತೊಂದು ಹೆಸರು ಕನ್ಯಾ ರಾಶಿ. ಈ ರಾಶಿಯವರು ಯಾವುದೇ ಸಮಸ್ಯೆಯನ್ನು ಸರಳ ಹಾಗೂ ಸುಲಭವಾಗಿ ಪರಿಹರಿಸಬಲ್ಲರು. ತುಂಬಾ ಪ್ರಭಾವಶಾಲಿ ಅಂತಲ್ಲ, ಇವರಿಗೆ ಸಮಸ್ಯೆಯ ಸಿಕ್ಕನ್ನು ಬಿಡಿಸುವ ಗುಣ ರಕ್ತಗತ. ಇವರಂತಹ ದಿ ಬೆಸ್ಟ್ ಕೆಲಸಗಾರರು ಮತ್ತೊಬ್ಬರಿಲ್ಲ ಎಂದೇ ಹೇಳಬಹುದು.
ಕೆಲಸ ಯಾವುದೇ ಆಗಿರಲಿ ಸಣ್ಣ ಪುಟ್ಟ ಸಂಗತಿಗೂ ಹೆಚ್ಚಿನ ಗಮನ ಕೊಡುತ್ತಾರೆ. ಯಾವುದೇ ಸಂಗತಿ ಜಟಿಲ ಆಗುವ ತನಕ ಬಿಡುವುದಿಲ್ಲ. ಇದು ಅವರ ಸ೦ಗಾತಿಗೆ ತುಂಬಾ ಸಹಾಯ ಮಾಡುತ್ತದೆ. ಪತಿದೇವರು ತಮ್ಮ ಮ್ಯಾಡಂ ಸಾರಿಗೆ ಉಪ್ಪು ಜಾಸ್ತಿ ಹಾಕಿದ್ದರೂ ಸಿಟ್ಟಾಗದೆ ನಿಂಬೆ ರಸ ಮಿಕ್ಸ್ ಮಾಡಿಕೊಂಡು ವಾತಾವರಣ ಹಗುರಗೊಳಿಸುತ್ತಾರೆ. ಈ ಅಂಶವು ಅವರ ಗೆಲುವಿಗೆ ದಾರಿ ಮಾಡಿಕೊಡುವ ಅತಿ ಮುಖ್ಯ ಸಂಗತಿಗಳಲ್ಲಿ ಒಂದಾಗಿದೆ.
ಇವರಿಗೆ ಓದುವುದಕ್ಕೆ ತುಂಬಾ ಇಷ್ಟ. ಅವರ ಅಕ್ಷರ ಪ್ರಿಯತೆ ಕಾರಣದಿಂದ ಪುಸ್ತಕ, ಪತ್ರಿಕೆ ಅವರ ಕೈ ಅಲಂಕರಿಸಿ ಇರುತ್ತದೆ. ಯಾವುದನ್ನೇ ಆಗಲಿ ತರ್ಕಮಾಡುವ ಗುಣ ಇವರದು. ಮಜ್ಜಿಗೆ ಹುಳಿಗೆ ಮಜ್ಜಿಗೆ ಯಾಕೆ ಬೇಕು ಅನ್ನುವ ಸಂಗತಿಯು ತರ್ಕಕ್ಕೆ ಸಿಕ್ಕದೆ ಇರದು. ಸುಮ್ಮನೆ ಇರುವ ಜಾಯಮಾನ ಇವರದಲ್ಲ. ಇವರಿಗೆ ವಿಜ್ಞಾನ, ಕಲೆ ಹಾಗೂ ಭಾಷೆಗಳ ಕಲಿಕೆಯಲ್ಲಿ ಅಪಾರವಾದ ಆಸಕ್ತಿ. ರಾಶಿಗಳಲ್ಲಿ ಆರನೇ ಸ್ಥಾನ ಪಡೆದಿರುವ ಇವರಿಗೆ ಹೆಚ್ಚಾಗಿ ಆಮಶಂಕೆ, ಡಯೇರಿಯ, ಮಲಬದ್ಧತೆ, ಪೋಷಕಾಂಶದ ಕೊರತೆ, ಅಪೆಂಡಿಸೈಟಿಸ್ , ಕಾಲರ ದಂತಹ ಸಮಸ್ಯೆ ಕಾದು ಕುಳಿತಿರುತ್ತದೆ.
ಬೇಸಿಗೆ ಕಾಲದಲ್ಲಿ ತಂಪಾಗಿ ಫ್ಯಾನ್ ಇಲ್ಲವೇ ಎಸಿ ಹಾಗೂ ಚಳಿಗಾಲದಲ್ಲಿ ಬೆಚ್ಚಗೆ ಹೀಟರ್ ಇರುವ ಕಡೆ ಕೆಲಸ ಮಾಡಿಕೊಂಡು ಇರುವುದಕ್ಕೆ ಪಕ್ಕಾ ಸೂಟಬಲ್. ಲೈಬ್ರರಿ, ಆಫೀಸ್ ವರ್ಕ್ ನೂರಕ್ಕೆ ನೂರರಷ್ಟು ಹೊಂದುತ್ತದೆ.