ಮಿಥುನ ಮತ್ತು ಕರ್ಕಾಟಕ ರಾಶಿ ಗುಣಸ್ವಭಾವ
* ಧವಳ
ಅಪಾರ ಸಂಖ್ಯೆಯ ಓದುಗ ದೊರೆಗಳು ಮೇಷ ಮತ್ತು ವೃಷಭ ರಾಶಿಗಳ ಸ್ವಭಾವ ಕುರಿತ ಲೇಖನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತ ರೀತಿಯಲ್ಲಿ ತಿಳಿಸಿ ನನ್ನ ಅಂಕಣದ ಹೊಸ ವಿಷಯವನ್ನು ಸ್ವಾಗತಿಸಿದ್ದೀರಿ. ತಮಗೆಲ್ಲರಿಗೂ ಧನ್ಯವಾದಗಳು. ರಾಶಿ ನಮ್ಮ ಬದುಕಿನ ಅಚ್ಚರಿಯ ಸಂಗತಿ, ಎಂಥ ನಾಸ್ತಿಕನಿಗಾಗಲಿ ನಾಳೆ ಅನ್ನುವುದರ ಬಗ್ಗೆ ಕುತೂಹಲ ಇದ್ದೆ ಇರುತ್ತದೆ. ನಾವು ಆ ನಾಳಿನ ಕನಸಲ್ಲಿ ಇಂದಿನ ದಿನವನ್ನು ಆರಂಭಿಸಿ ನಿನ್ನೆಯ ನೋವನ್ನು ಮರೆಯುತ್ತೇವೆ.. ಇದು ಜೀವನ, ಇದುವೇ ಜೀವನ.
ರಾಶಿಯಲ್ಲಿ ತಿಳಿಸಿರುವ ಗುಣ ಸ್ವಭಾವಗಳು ಹುಟ್ಟಿನಿಂದ ನಮ್ಮ ಜೊತೆ ಇದ್ದೆ ಇರುತ್ತವೆ. ಸಮಾಜದಿಂದ ನಾವು ಆ ಗುಣಗಳಿಂದ ಮೆಚ್ಚುಗೆಯನ್ನು, ಮತ್ಸರ ಹಾಗೂ ತಾತ್ಸಾರವನ್ನು ಪಡೆದಿರುತ್ತೇವೆ. ಆದರೆ ಹುಟ್ಟುಗುಣ ಸುಟ್ಟರೂ ಹೋಗದು ಅಲ್ವೆ? ಹಾಗೆಂದು ಕೋಪಿಷ್ಠ ಸದಾ ಕೋಪ ಮಾಡಿಕೊಂಡು ಬದುಕು ಹಾಳು ಮಾಡಿಕೊಳ್ಳಬೇಕಿಲ್ಲ, ಬದಲಿಗೆ ಅಗತ್ಯ ಇರುವ ಕಡೆ ತಮ್ಮ ಗುಣದಲ್ಲಿ ಬದಲಾವಣೆ ಮಾಡಿಕೊಂಡರೆ ಬದುಕೆಷ್ಟು ನಿರಾಳ ಹಾಗೂ ನಿರಮ್ಮಳ! ಬದುಕು ಜನ್ಮಜಾತ್ಯವಾಗಿ ಬಂದಿರುವ ಗುಣಗಳಿಂದ ಸೋರಿ ಹೋಗ್ತಾ ಇರುತ್ತದೆ, ಅದರತ್ತ ನಾವು ಗಮನವೇ ಹರಿಸಿರಲ್ಲ. ಅದನ್ನು ಸರಿಪಡಿಸಿ ಕೊಂಡರೆ ಎಷ್ಟು ಸುಂದರ! ಈ ವಿಷಯದ ಮೂಲ ಉದ್ದೇಶ ಎಲ್ಲರ ಖುಷಿ -ಸಂತೋಷ.. ಮತ್ತೇನೂ ಇಲ್ಲ.. ಬಿ ಹ್ಯಾಪಿ.. ಫೀಲ್ ಹ್ಯಾಪಿ..!
ಮಿಥುನ (Gemini) ಮೇ 22 - ಜೂನ್ 21 : ಜೋಡಿ ಜೀವಗಳನ್ನು ಪ್ರತಿನಿಧಿಸುತ್ತದೆ. ಒಂದು ರಾಶಿಯಲ್ಲಿ ಎರಡೆರಡು ಚಿನ್ಹೆಗಳು ನಮ್ಮ ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆ. ರಾಶಿಗಳಲ್ಲಿ ಮೂರನೇ ಸ್ಥಾನದಲ್ಲಿ ವಿರಾಜಮಾನವಾಗಿರುವ ಮಿಥುನ ಸ್ವಲ್ಪ ಭಿನ್ನ ಹಾಗೂ ವಿಶೇಷ ರಾಶಿ. ಈ ರಾಶಿಯನ್ನು ಪಡೆದ ವ್ಯಕ್ತಿಗಳದು ದ್ವಂದ್ವ ಸ್ವಭಾವ. ಅವಳನ್ನು ಪ್ರಪೋಸ್ ಮಾಡಲೋ ಬೇಡವೋ? ಅವನು ನನ್ನನ್ನು ಲವ್ಸ್ ಮಿ... ಅಥವಾ ಲವ್ಸ್ ಮಿ ನಾಟ್...! ಹೋಗಲಾ ಬೇಡ್ವಾ...! ಹೀಗೆ ಎಲ್ಲದಕ್ಕೂ ನಿಶ್ಚಿತ ನಿರ್ಧಾರ ಇಲ್ಲ.
ಕಡೆಗೆ ತಾವು ಧರಿಸುವ ಉಡುಪು, ಸೇವಿಸುವ ಆಹಾರ ಎಲ್ಲದರ ಬಗ್ಗೆ ಕನ್ಫ್ಯೂಶನ್ನೋ ಕನ್ಫ್ಯೂಶನ್. ಇದೆ ಇವರ ಮುಖ್ಯ ಐಡೆ೦ಟಿಟಿ!ಇಷ್ಟೆ ಅಲ್ಲದೆ ಸ್ವಲ್ಪ ಅರ್ಥ ಆಗೋದು ಕಷ್ಟ, ನೀನು ಅಂದ್ರೆ ನಿಮ್ಮಪ್ಪ ಅನ್ನುವಂತೆ ಸರಳವಾಗಿ ಹೇಳುವುದಾದರೆ ಏತಿ ಅಂದ್ರೆ ಪ್ರೇತಿ ಅಂತಾರಲ್ಲ ಹಾಗೆ. ಇದು ಅವರ ರಾಶಿಯ ಮೂಲ ಗುಣ. ಹಾಗೆಂದು ಇದೇನು ಎಲ್ಲ ನೆಗೆಟಿವ್ ಅಂಶಗಳೇ ಇದೆ ಎಂದು ಬೇಸರಿಸುವ ಅಗತ್ಯವಿಲ್ಲ, ಇವರು ಅಕ್ಕರೆ ತೋರುವುದರಲ್ಲಿ ಎತ್ತಿದ ಕೈ, ಕರುಣೆ ಇವರ ಪ್ಲಸ್ ಪಾಯಿಂಟ್, ದೀನದಲಿತರ ಬಗ್ಗೆ ವಹಿಸುವ ಕಾಳಜಿ ಇವರ ರಾಶಿಯ ವಿಶೇಷತೆ. ಸಭ್ಯರು, ಕೊಡಗೈ ದಾನಿ, ಉದಾರಿ. ಈ ರಾಶಿಯವರಿಗೆ ಹೊಸ ಕೆಲಸಗಳ ಬಗ್ಗೆ ವಿಪರೀತ ಕುತೂಹಲ. ಅಂತಹ ಕೆಲಸ ವಹಿಸಿದರೆ ಶ್ರದ್ಧೆ ಆಸಕ್ತಿಯಿಂದ ಶುರು ಮಾಡ್ತಾರೆ, ಆದರೆ ಅದನ್ನು ಪೂರ್ಣ ಮಾಡುವ ಗೋಜಿಗೆ ಹೋಗಲ್ಲ. ಎಲ್ಲದಕ್ಕೂ ಆರಂಭ ಶೂರತ್ವ.
ಇಷ್ಟೆಲ್ಲಾ ಗುಣಗಳು ಇದ್ರು ಈ ರಾಶಿಯವರು ತುಂಬಾ ಬೇಗ ಹೊಂದಿಕೊಂಡು ಬಿಡ್ತಾರೆ. ವಿಜ್ಞಾನಿಗಳು, ಸೈನ್ಯ, ಪೊಲೀಸ್, ಭದ್ರತಾ ವ್ಯವಸ್ಥೆ ಈ ರಾಶಿಯ ಸೂಕ್ತ ವೃತ್ತಿ. ಉಷ್ಣ ಪಿತ್ತ ಪ್ರಕೃತಿಯವರು. ಸಾಮಾನ್ಯವಾಗಿ ಗ್ಯಾಸ್ (ವಾಯು ಪ್ರಕೋಪ) ಇವರನ್ನು ಕಾಡ್ತಾ ಇರುತ್ತದೆ. ನರಕ್ಕೆ ಸಂಬಂಧ ಪಟ್ಟ ಸಮಸ್ಯೆ, ಅಸ್ತಮ, ಬ್ರಾಂಕೈಟಿಸ್ ಕಾಡುವ ರೋಗ ಮಿತ್ರರು. ಇನ್ನು ದಾಂಪತ್ಯದ ವಿಷಯದಲ್ಲಿ ಜೋಡಿ ಹಕ್ಕಿಗಳು, ತುಂಬಾ ಸುಂದರವಾಗಿ ಹೊಂದಿಕೊಂಡು ಸಂಗಾತಿಗೆ ಇಷ್ಟ ಆಗುವಂತೆ ಬಾಳು ನಡೆಸುತ್ತಾರೆ.
ಕರ್ಕಾಟಕ (Cancer) ಜೂನ್ 21 - ಜುಲೈ 21 : ರಾಶಿಗಳಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಕರ್ಕ ಅಥವಾ ಕಟಕ ಅಥವಾ ಕರ್ಕಾಟಕ ರಾಶಿಯವರದು ಗ್ರಹಿಸುವ ಗುಣ ರಕ್ತದಲ್ಲಿ ಕರಗಿ ಬಿಟ್ಟಿರುತ್ತದೆ. ಮೂಗಿನ ತುದಿ ಸದಾ ಕಾದ ಹೆಂಚಂತೆ ಬಿಸಿ ಬಿಸಿ! ಮುಂಗೋಪ ಇವರ ಮುಖ್ಯ ಗುಣ. ಹಾಗಂತ ಕಠಿಣ ಹೃದಯಿಗಳು ಎಂದು ತಿಳಿದರೆ ನಿಮ್ಮೆಣಿಕೆ ತಪ್ಪಾಗುತ್ತದೆ. ಇವರು ತುಂಬಾ ಸೆನ್ಸಿಟೀವ್, ಯಾವುದೇ ವಿಷಯ ಆಗಿರಲಿ ಅದನ್ನು ಭಾವುಕರಾಗಿ ಯೋಚಿಸುವ ಗುಣ ಹೊಂದಿರುತ್ತಾರೆ. ಸಣ್ಣಪುಟ್ಟ ಸಂಗತಿಯಾಗಿರಲಿ ಕಲ್ಪನೆಯ ಮೂಲಕ ಅದಕ್ಕೊಂದು ವಿಶೇಷ ರೂಪ ನೀಡುವುದರಲ್ಲಿ ಈ ರಾಶಿಯವರು ಮೊದಲಿಗರು. ಅದನ್ನು ತಮ್ಮ ಭಾವನೆಗಳ ಮೂಲಕ ಇತರರ ಬಳಿ ವ್ಯಕ್ತ ಪಡಿಸುತ್ತಾರೆ. ಅಗತ್ಯ ಇರುವ ಕಡೆ ತಪ್ಪದೆ ಬಿಡದೆ ತಾವು ಊಹೆ ಮಾಡಿದ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಇವರು ತಮ್ಮ moody ಗುಣದಿಂದಲೂ ಪ್ರಖ್ಯಾತರು.
ಪತ್ರಕರ್ತ, ಲೇಖಕ, ರಾಜಕಾರಣ ಅಥವಾ ರಾಜಕೀಯ ಬೆಸ್ಟ್ ಪ್ರೊಫೆಷನ್. ಅತಿ ಭಾವುಕತೆಯಿಂದ ಅನೇಕ ಸಾರಿ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ತಾರೆ. ಸಂಶಯದ ಗುಣ ಇವರಲ್ಲಿ ಮೇಳೈಸಿರುವುದರಿಂದ ಜನರನ್ನು ಸುಲಭವಾಗಿ ನಂಬರು! ಒಮ್ಮೆ ನಂಬಿಕೆ ಬಂದಿತೆಂದರೆ ಪ್ರಾಣ ಕೊಡುವುದಕ್ಕೂ ಸಿದ್ಧರಾಗುತ್ತಾರೆ. ಎಷ್ಟೇ ಕಷ್ಟವಾದರೂ ಸಹಕಾರ ನೀಡುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಈ ರಾಶಿಯರ ಮೂಡ್ ಮೇಲೆ ವಿಷಯಗಳನ್ನು ಗ್ರಹಿಸುತ್ತಾರೆ. ಮನಸ್ಸಿದ್ದರೆ ಎಲ್ಲಾ ಓಕೆ, ಇಲ್ಲದೆ ಇದ್ರೆ ಯಾವುದೂ ಅಲ್ಲ ಓಕೆ! ಸಣ್ಣ ಬುದ್ಧಿಯಿಂದಲೂ ಜನರ ಗಮನ ಸೆಳೆದಿರುತ್ತಾರೆ. ಸ್ವಲ್ಪ ಹೆಚ್ಚೇ ಕೀಳರಿಮೆ ಮನೆಮಾಡಿರುತ್ತದೆ. ಇವರು ಊಟದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ತುತ್ತು ತುತ್ತು ಸವಿದು ಉಣ್ಣುತ್ತಾರೆ.
ಹಾಲುಜೇನು
:
ಸಂಗಾತಿ
ಜ್ಯೋತಿಷ್ಯ
ಭವಿಷ್ಯ