ಶಿವಮೊಗ್ಗ, ಸೆಪ್ಟೆಂಬರ್ 12 : 'ಯಾರೋ ಹೇಳಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ, ಪಕ್ಷದ ವರಿಷ್ಠರು ತಿಳಿಸಿದರೆ ಮಾತ್ರ ನಾನು ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧ' ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ ಅವರು, 'ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಕಾರ್ಯಕರ್ತನಾಗಿ ವರಿಷ್ಠರ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ. ಪಕ್ಷದ ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ದ' ಎಂದರು.
ಎಂಎಲ್.ಸಿ ಹಾಗೂ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಅವರು ಎರಡು ದಿನಗಳ ಹಿಂದೆ, 'ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಕೆ.ಎಸ್.ಈಶ್ವರಪ್ಪ ಕಣಕ್ಕಿಳಿದರೂ ಆಶ್ಚರ್ಯವಿಲ್ಲ. ಈ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ' ಎಂದು ಹೇಳಿದ್ದರು.
ಕುಮಾರಸ್ವಾಮಿಗೆ ತಿರುಗೇಟು : 'ಬಿಜೆಪಿಯಿಂದ 5 ಜನ ಶಾಸಕರನ್ನ ರಾಜೀನಾಮೆ ನೀಡಿ ನಮ್ಮ ಪಕ್ಷಕ್ಕೆ ಸೆಳೆದರಾಯ್ತು' ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. 'ಇತರೆ ಪಕ್ಷದ ಅಭ್ಯರ್ಥಿಗಳನ್ನ ನಮ್ಮ ಪಕ್ಷಕ್ಕೆ ಸೆಳೆದರೆ. ಅದು ಆಪರೇಷನ್ ಕಮಲ ಎಂದು ಜರಿಯುವ ಕುಮಾರಸ್ವಾಮಿ ಬಿಜೆಪಿಯ 5 ಜನ ಶಾಸಕರನ್ನ ಸೆಳೆದರಾಯ್ತು ಎಂದು ಬಹಿರಂಗ ವೇದಿಕೆಯಲ್ಲಿ ತಿಳಿಸುತ್ತಾರೆ. 'ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ತಾವು ಮಾಡುವುದೇ ಸರಿ ಎಂಬ ಧೋರಣೆಯಲ್ಲಿದ್ದಾರೆ. ಇದನ್ನು ಜನರೇ ನಿರ್ಧಾರ ಮಾಡುತ್ತಾರೆ. ನಾವು ಬಿಜೆಪಿಯ 104 ಜನ ಶಾಸಕರು ಹುಲಿಗಳಂತೆ ಒಟ್ಟಾಗಿದ್ದೇವೆ' ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಅವರು ಮಾಡುವುದು ಸರಿ, ಬಿಜೆಪಿ ಮಾಡುವುದು ತಪ್ಪು ಎಂಬ ಧೋರಣೆ ಇದೆ' ಎಂದರು.