ಚೆನ್ನೈ-ಶಿವಮೊಗ್ಗ ತತ್ಕಾಲ್ ರೈಲು ಶಾಶ್ವತವಾಗಿ ಸಂಚರಿಸುವಂತೆ ಮನವಿ: ಬಿ.ವೈ.ರಾಘವೇಂದ್ರ


ಶಿವಮೊಗ್ಗ, ಅಕ್ಟೋಬರ್ 22: ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್-19ರ ಸಂದಿಗ್ಧ ಸಂದರ್ಭದ ಪ್ರಸ್ತುತ ದಿನಗಳಲ್ಲಿ ಜಿಲ್ಲೆಯ ವಿವಿಧ ರೈಲ್ವೆ ಯೋಜನೆಗಳು, ಈಗಾಗಲೇ ಕೈಗೊಳ್ಳಲಾಗಿರುವ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸುವ ರೈಲ್ವೇ ಯೋಜನೆಗಳು, ರೈಲ್ವೇ ಮೇಲ್ಸೇತುವೆ ಸೇರಿದಂತೆ ಕಾಮಗಾರಿಗಳು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸುವ ಸಂಬಂಧ ನೈಋತ್ಯ ರೈಲ್ವೆ ವಲಯವ ಮಹಾಪ್ರಬಂಧಕ ಎ.ಕೆ.ಸಿಂಗ್ ಹಾಗೂ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ವಿಡಿಯೋ ಸಂವಾದ ನಡೆಸಿದರು.

Advertisement

ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಸಹ್ಯಾದ್ರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ರೈಲ್ವೆ ಯೋಜನೆಗಳು ಮತ್ತು ಅನುದಾನದ ಲಭ್ಯತೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಈಗಾಗಲೇ ಆರಂಭಿಸಲಾಗಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಆರಂಭಿಸಿ ಪೂರ್ಣಗೊಳಿಸಬೇಕು. ಅದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸೂಚಿಸಿದರು.

Advertisement

ವಾಣಿಜ್ಯ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಸಂಚಾರ

ಮುಂದಿನ ದಿನಗಳಲ್ಲಿ ದೇಶದಾದ್ಯಂತ ರೈಲು ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದ್ದು, ಈಗಿರುವ ರೈಲು ಮಾರ್ಗಗಳು ಮತ್ತು ಸಮಯದಲ್ಲಿ ಬದಲಾವಣೆಯಾಗಬಹುದಾದ ಮಾಹಿತಿ ಇದೆ. ಶಿವಮೊಗ್ಗ ಜಿಲ್ಲೆಯ ಜನರ ಅನುಕೂಲಕ್ಕೆ ಪೂರಕವಾಗಿ ಪ್ರವಾಸಿಗರು, ಉದ್ಯಮಿಗಳು, ವಿಶೇಷವಾಗಿ ಕೈಗಾರಿಕೋದ್ಯಮಿಗಳು ಹಾಗೂ ವಾಣಿಜ್ಯ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಸಂಚಾರ ಎಂದಿನಂತೆ ಮುಂದುವರೆಸುವ, ಅಗತ್ಯಕ್ಕೆ ತಕ್ಕಂತೆ ಸಮಯ ಬದಲಾವಣೆ ಮಾಡುವ ಬಗ್ಗೆಯೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ಬಿ.ವೈ ರಾಘವೇಂದ್ರ ತಿಳಿಸಿದರು.

ರಾಜ್ಯದ 13 ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರ ಹೆಚ್ಚಳ: ಎಲ್ಲೆಲ್ಲಿ ಬೆಲೆ ಏರಿಕೆ?

ಶಿವಮೊಗ್ಗ-ರಾಣೇಬೆನ್ನೂರು ಮಾರ್ಗದ ಸರ್ವೇ ಪೂರ್ಣ

ಈಗಾಗಲೇ ಸ್ಥಗಿತಗೊಳಿಸಿರುವ ರೈಲುಗಳನ್ನು ಕೂಡಲೇ ಪುನರಾರಂಭಿಸುವಂತೆ, ಹಾಗೂ ಪ್ರತಿದಿನ ಬೆಳಿಗ್ಗೆ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಸಂಚರಿಸುವ ಜನ ಶತಾಬ್ದಿ ರೈಲನ್ನು ಯಶವಂತಪುರದಿಂದ ಮುಖ್ಯ ನಿಲ್ದಾಣಕ್ಕೆ ಮುಂದುವರೆಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.

ಚೆನ್ನೈ-ಶಿವಮೊಗ್ಗ ತತ್ಕಾಲ್ ರೈಲನ್ನು ಶಾಶ್ವತವಾಗಿ ಸಂಚರಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದ ಅವರು, ಮುಂದಿನ ಒಂದು ವಾರದಲ್ಲಿ ಶಿವಮೊಗ್ಗ-ರಾಣೇಬೆನ್ನೂರು ಮಾರ್ಗದ ಸರ್ವೇ ಹಾಗೂ ಭೂಸ್ವಾಧೀನ ಕಾರ್ಯ ಪೂರ್ಣಗೊಳ್ಳಲಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಲ್ಲದೇ ಕೋಟೆಗಂಗೂರು ರೈಲ್ವೇ ಟರ್ಮಿನಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಂದಿನ ವಾರದೊಳಗಾಗಿ ಭೂಸ್ವಾಧೀನ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

15 ದಿನಗಳಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ನಾಲ್ಕು ಪ್ರಮುಖ ಸ್ಥಳಗಳಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ರಾಜ್ಯ ಸರ್ಕಾರ ವತಿಯಿಂದ ಅಗತ್ಯ ಸಹಕಾರ ದೊರೆತಿದೆ ಹಾಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.

ಬುಧವಾರದಿಂದ ಚೆನ್ನೈ-ಬೆಂಗಳೂರು ನೇರ ರೈಲು; ವೇಳಾಪಟ್ಟಿ

ಮುಂದಿನ 15 ದಿನಗಳಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಇದಕ್ಕೆ ಪೂರಕವಾಗಿ ಕೇಂದ್ರದಿಂದಲೂ ಅನುದಾನ ಹಾಗೂ ಅಗತ್ಯ ನೆರವು ನೀಡುವಂತೆ ಈ ಸಂಬಂಧ ಕೇಂದ್ರ ರೈಲ್ವೇ ಸಚಿವರೊಂದಿಗೆ ಸಮಾಲೋಚಿಸಿರುವುದಾಗಿ ಅವರು ತಿಳಿಸಿದರು.

ಅರಸಾಳು ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಲಭ್ಯ

ಸಾಗರ-ಜಂಬಗಾರು ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಮತ್ತೊಂದು ಸುಸಜ್ಜಿತ ನಿಲ್ದಾಣವನ್ನು ನಿರ್ಮಿಸಲು ಅನುದಾನ ಒದಗಿಸುವಂತೆ, ಕುಂಸಿ-ಅರಸಾಳು ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಲಭ್ಯವನ್ನು ಕಲ್ಪಿಸಲು, ಎಕ್ಸ್ ಪ್ರೆಸ್ ರೈಲುಗಳನ್ನು ನಿಲುಗಡೆಗೊಳಿಸಲು ಮನವಿ ಮಾಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರೈಲ್ವೆ ಸಲಹೆಗಾರ ಶ್ರೀಧರಮೂರ್ತಿ, ನೈಋತ್ಯ ರೈಲ್ವೆಯ ವಿಭಾಗೀಯ ಅಭಿಯಂತರ ಟಿ.ಆರ್.ಬಗಾಡೆ, ಶಾಸಕ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯೆ ಭಾರತಿಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

English Summary

The survey and land acquisition of the Shivamogga-Ranebennuru Railway route will be completed in the next week and the tender process is in progress, MP BY Raghavendra said.