ಮೈಸೂರು, ಸೆಪ್ಟೆಂಬರ್ 12: ಅಕ್ಟೋಬರ್ 10 ರಿಂದ 19ರವರೆಗೆ ನಡೆಯಲಿರುವ ಮೈಸೂರು ದಸರೆಯಲ್ಲಿ ಇದೇ ಮೊದಲ ಬಾರಿಗೆ 2 ಬಾರಿ ಜಂಬೂ ಸವಾರಿಯನ್ನು ನಡೆಯಲಿದೆ.
ಹೌದು, ಈ ದಸರಕ್ಕೆ ಎರಡು ಬಾರಿ ಜಂಬೂ ಸವಾರಿಯನ್ನು ಕಣ್ತುಂಬಿ ಕೊಳ್ಳಬಹುದು. ದಸರೆಯ ಅಂಗವಾಗಿ ನಡೆಯುವ ನಡೆಯುವ ಪಂಜಿನ ಕವಾಯತು ಪೂರ್ವತಯಾರಿಯಂತೆ ಜಂಬೂಸವಾರಿಯ ತಾಲೀಮು ಕೂಡ ಇದೇ ಮೊದಲ ಬಾರಿಗೆ ನಡೆಸಲು ಸಿದ್ಧತೆ ಆರಂಭಗೊಂಡಿದೆ.
ವಿಜಯದಶಮಿ ದಿನ ನಡೆಯುತ್ತಿದ್ದ ಜಂಬೂ ಸವಾರಿ ಈ ಬಾರಿ ಎರಡು ಬಾರಿ ನಡೆಯಲಿದೆ. ಈ ಹಿಂದೆ ಜಂಬೂ ಸವಾರಿಯ ಪೂರ್ವ ತಯಾರಿ ನಡೆದರೂ ಅದು ಕೇವಲ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಆದರೆ, ಈ ಬಾರಿ ಜಂಬೂ ಸವಾರಿಯ ಮಾರ್ಗವನ್ನು ಮೆರವಣಿಗೆಗೆ ಬಳಸಲು ನಿರ್ಧರಿಸಲಾಗಿದೆ.
ಇದೇ ಅಕ್ಟೋಬರ್ 17 ರಂದು ಜಂಬೂ ಸವಾರಿ ಪೂರ್ವತಯಾರಿ ನಡೆಯಲಿದೆ. ಮೈಸೂರಿನ ಅರಮನೆಯಿಂದ ಬನ್ನಿಮಂಟಪದವರೆಗೂ ರಿಹರ್ಸಲ್ನ ಮೆರವಣಿಗೆ ಸಾಗಲಿದೆ. ಸ್ಥಬ್ಧ ಚಿತ್ರ ಹೊರತು ಪಡಿಸಿ ಎಲ್ಲ ಕಲಾ ತಂಡಗಳು ಮತ್ತು ಜಂಬೂ ಸವಾರಿ ದಿನ ಪಾಲ್ಗೊಳ್ಳಲು ಅವಕಾಶ ಸಿಗದ ಕಲಾ ತಂಡಗಳು ಪೂರ್ವತಯಾರಿಯಲ್ಲಿ ಭಾಗಿಯಾಗಲಿವೆ. ಪಂಜಿನ ಕವಾಯತು ನಡೆಯುವ ಹಿಂದಿನ ದಿನ ಸಾಮಾನ್ಯವಾಗಿ ರಿಹರ್ಸಲ್ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಜನರು ಹಾಜರಿರುತ್ತಾರೆ. ಇದೇ ರೀತಿ ದಸರಾ ಜಂಬೂ ಸವಾರಿ ರಿಹರ್ಸಲ್ ಆಯೋಜಿಸಿದರೆ, ಸ್ಥಳೀಯರು ಸೇರಿದಂತೆ ಮತ್ತಷ್ಟು ಪ್ರವಾಸಿಗರು ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಂತಾಗಲಿದೆ. ಹೀಗಾಗಿ ಈ ಬಾರಿ ಜಂಬೂ ಸವಾರಿ ರಿಹರ್ಸಲ್ ಆಯೋಜಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೂಚಿಸಿದ್ದಾರೆ . ಕ್ಯಾಪ್ಟನ್ ಅರ್ಜುನ ನೇತೃತ್ವದ ಎಲ್ಲಾ ಆನೆಗಳು ಮೆರವಣಿಗೆಯಲ್ಲಿ ಸಾಗಲಿವೆ. ಆದರೆ ಅರ್ಜುನನಿಗೆ ಚಿನ್ನದ ಅಂಬಾರಿ ಹೊರಿಸಬೇಕೆ ಅಥವಾ ಮರದ ಅಂಬಾರಿಯನ್ನು ಮಾತ್ರ ಹೊರಿಸಬೇಕೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ ಎನ್ನುತ್ತಾರೆ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್.