ಪುಣೆ, ಸೆಪ್ಟೆಂಬರ್ 12: ಭಾರತೀಯ ಸೇನೆಯು ಎರಡು ವರ್ಷದ ಹಿಂದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಆಸಕ್ತಿಕರವಾದ ವಿಷಯವನ್ನು ಲೆಫ್ಟಿನೆಂಟ್ ಜನರಲ್ ರಾಜೇಂದ್ರ ನಿಂಬೋರ್ಕರ್ ಶನಿವಾರ ಬಹಿರಂಗ ಪಡಿಸಿದ್ದಾರೆ.
ನೌಷೇರಾ ವಲಯದಲ್ಲಿ ಬ್ರಿಗೇಡಿಯರ್ ಕಮ್ಯಾಂಡರ್ ಆಗಿ ಸೇವೆ ಸಲ್ಲಿಸಿದವರು ರಾಜೇಂದ್ರ ನಿಂಬೋರ್ಕರ್. ರಾತ್ರಿ ಮಲಗಿದ ವೇಳೆ ತಮ್ಮ ಮೇಲೆ ಆಗಬಹುದಾದ ದಾಳಿಯನ್ನು ನಾಯಿ ಬೊಗಳುವುದರಿಂದ ಗುರುತಿಸಬಹುದಾಗಿದ್ದ ಉಗ್ರರಿಗೆ ಆ ಸುಳಿವು ಸಿಗದಂತೆ ಮಾಡಿದ್ದು ಹೇಗೆ ಎಂಬುದನ್ನು ಅವರು ತಿಳಿಸಿದ್ದಾರೆ.
ಆ ವಲಯದಲ್ಲಿ ಆಗಿಂದಾಗ್ಗೆ ನಾಯಿಗಳ ಮೇಲೆ ಚಿರತೆಗಳ ದಾಳಿಗಳಾಗುತ್ತಿದ್ದವು. ಅವುಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನವಸತಿ ಇರುವಂಥ ಕಡೆಯೇ ನಾಯಿಗಳಿರುತ್ತಿದ್ದವು. ನಮ್ಮ ಕಾರ್ಯಾಚರಣೆ ರೂಪಿಸುವಾಗ ತಿಳಿದಿದ್ದೇನೆಂದರೆ, ಹಳ್ಳಿಗಳನ್ನು ದಾಟಿ ಹೋಗುವಾಗ ದಾರಿಯುದ್ದಕ್ಕೂ ನಾಯಿಗಳು ಎದುರಾಗುತ್ತವೆ. ಆಗ ಬೊಗಳುತ್ತವೆ ಮತ್ತು ದಾಳಿಯನ್ನೂ ಮಾಡಬಹುದು.
ಆದ್ದರಿಂದ ನಮ್ಮ ತಂಡವು ಅವುಗಳನ್ನು ನಿವಾರಿಸಿಕೊಳ್ಳುವ ಸಲುವಾಗಿಯೇ ಚಿರತೆಯ ಮಲ-ಮೂತ್ರವನ್ನು ಜತೆಗೆ ಒಯ್ದಿತ್ತು. ಅದನ್ನು ಹಳ್ಳಿಯ ಹೊರಭಾಗದಲ್ಲಿ ಸಿಂಪಡಿಸಿತ್ತು. ಅದು ಚೆನ್ನಾಗಿ ಕೆಲಸ ಮಾಡಿತು. ನಮ್ಮ ತಂಡದ ತಂಟೆಗೆ ಅವುಗಳು ಬರಲಿಲ್ಲ ಎಂದು ಅವರು ವಿವರವಾಗಿ ತಿಳಿಸಿದ್ದಾರೆ. ಭಾರತೀಯ ಸೇನೆಯಿಂದ ಈ ದಾಳಿ ಬಗ್ಗೆ ರಹಸ್ಯ ಕಾಯ್ದುಕೊಳ್ಳಲಾಗಿತ್ತು. ಆಗ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕರ್, ವಾರದೊಳಗೆ ಈ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದರು. ಅದನ್ನು ನಮ್ಮ ತಂಡದ ಜತೆ ವಾರಕ್ಕೆ ಮುಂಚೆ ಚರ್ಚೆ ಮಾಡಿದೆ. ಆದರೆ ಎಲ್ಲಿ ದಾಳಿ ನಡೆಸುವುದು ಎಂಬ ಮಾಹಿತಿ ತಿಳಿಸಲಿಲ್ಲ. ಕೇವಲ ಒಂದು ದಿನ ಮುಂಚಿತವಾಗಿಯಷ್ಟೇ ಅವರಿಗೆ ಆ ಬಗ್ಗೆ ತಿಳಿಸಲಾಯಿತು. ನಾವು ದಾಳಿ ನಡೆಸುವುದಕ್ಕೆ ಬೆಳಗಿನ ಜಾವವನ್ನೇ ಆಯ್ಕೆ ಮಾಡಿಕೊಂಡೆವು. ನಾವು ಉಗ್ರಗಾಮಿಗಳ ನೆಲೆಯನ್ನು ಗುರುತಿಸಿದೆವು. ಅವರ ವೇಳಾಪಟ್ಟಿ ಬಗ್ಗೆ ಅಧ್ಯಯನ ಮಾಡಿ, 3.30ರ ನಸುಕಿನ ಜಾವ ದಾಳಿಗೆ ಸೂಕ್ತ ಸಮಯ ಎಂದು ತೀರ್ಮಾನ ಮಾಡಿದೆವು. ಅದಕ್ಕೂ ಮುನ್ನ ಒಂದು ಸುರಕ್ಷತಾ ಸ್ಥಳಕ್ಕೆ ನಮ್ಮ ತಂಡ ತಲುಪಬೇಕಿತ್ತು ಕಷ್ಟದ ಸ್ಥಳಗಳನ್ನೆಲ್ಲ ಅಷ್ಟರಲ್ಲಿ ಯಶಸ್ವಿಯಾಗಿ ದಾಟಿ ಹೋದರು. ಉಗ್ರರ ನೆಲೆಗಳನ್ನು ಹಾಗೂ ಇಪ್ಪತ್ತೊಂಬತ್ತು ಉಗ್ರಗಾಮಿಗಳನ್ನು ನಾಶಪಡಿಸಿದರು ಎಂದು ನಿಂಬೋರ್ಕರ್ ತಿಳಿಸಿದ್ದಾರೆ.