Recommended Video
ಬೆಂಗಳೂರು, ಸೆಪ್ಟೆಂಬರ್ 11 : ಜಾರಕಿಹೊಳಿ ಸಹೋದರರು ಬೆಳಗಾವಿಯಲ್ಲಿ ಕುಳಿತುಕೊಂಡು ಮಾಡಿದ ಕೆಲಸ ಬೆಂಗಳೂರಿನಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರ ಚಲ್ಲಣದಲ್ಲಿ ತಲ್ಲಣ ಉಂಟುಮಾಡಿದೆ. ಜಾರಕಿಹೊಳಿ ಕುಟುಂಬದ ಪ್ರಭಾವವೇ ಹಾಗೆ. ಕರ್ನಾಟಕ ರಾಜಕೀಯದ ಪ್ರಭಾವಿ ಕುಟುಂಬ ಜಾರಕಿಹೊಳಿ.
ಜಾರಕಿಹೊಳಿ ಕುಟುಂಬದ ಮೂವರು ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ.
ಕಳೆದ 20 ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಅದರಲ್ಲಿ ಜಾರಕಿಹೊಳಿ ಕುಟುಂಬದ ಒಬ್ಬರು ಸಚಿವ ಸ್ಥಾನದಲ್ಲಿದ್ದರು. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ ಸಚಿವರಾಗಿದ್ದರು.
ನಂತರ ಬಿಜೆಪಿ ಸರ್ಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಸತೀಶ್ ಮತ್ತು ರಮೇಶ್ ಜಾರಕಿಹೊಳಿ ಸಚಿವರಾಗಿದ್ದರು. ಮತ್ತೊಬ್ಬ ಸಹೋದರ ಲಖನ್ ಜಾರಕಿಹೊಳಿ ಅವರು 2018ರ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅದು ಸಾಧ್ಯವಾಗಲಿಲ್ಲ. ಹಲವಾರು ಸಕ್ಕರೆ ಕಾರ್ಖನೆಯನ್ನು ಹೊಂದಿರುವ ಜಾರಕಿಹೊಳಿ ಕುಟುಂಬದವರು ದೊಡ್ಡ ಉದ್ಯಮಿಗಳು. ಉದ್ಯಮದ ಜೊತೆಗೆ ರಾಜಕೀಯವನ್ನು ಮಾಡುತ್ತಾ, ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಜಾರಕಿಹೊಳಿ ಸಹೋದರರು ಗುರುತಿಸಿಕೊಂಡಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಯ ರಾಜಕೀಯವೇ ಬೇರೆ. ಬೆಳಗಾವಿ ರಾಜಕೀಯವೇ ಬೇರೆ. ಜಾರಕಿಹೊಳಿ, ಪಾಟೀಲ್, ಕತ್ತಿ ಕುಟುಂಬಗಳು ಜಿಲ್ಲೆಯ ರಾಜಕೀಯದಲ್ಲಿ ಸಕ್ರಿಯವಾಗಿವೆ. ಆದರೆ, ಜಾರಕಿಹೊಳಿ ಕುಟುಂಬ ಬಹಳ ಪ್ರಭಾವಿಯಾಗಿದೆ. ಪ್ರಭಾವಿ ಜಾರಕಿಹೊಳಿ ಕುಟುಂಬಕ್ಕೆ ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಹಿನ್ನಡೆ ಉಂಟಾಯಿತು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಬಣದವರನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲ ಸಫಲರಾದರು. ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ನಂತರವೇ ಜಾರಕಿಹೊಳಿ ಸಹೋದರರು ಸುಮ್ಮನೆ ಇರುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು. ಚುನಾವಣೆ ಬಳಿಕ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಸೇರುವ ಚಟುವಟಿಕೆ ಆರಂಭಿಸಿ ರಾಜ್ಯ ರಾಜಕೀಯದಲ್ಲಿ ತಲ್ಲಣ ಆರಂಭಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದು ಕಡೆ ಬೆಂಗಳೂರಿಗೆ ಬಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿದ ಬಳಿಕ ರಮೇಶ್ ಜಾರಕಿಹೊಳಿ ಅವರು ನಮ್ಮ ನಡುವಿನ ಅಸಮಾಧಾನ ಬಗೆಹರಿದಿದೆ ಎಂದು ಹೇಳಿದ್ದಾರೆ. ತಮಗೆ ಮತ್ತು ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸುವುದಕ್ಕೆ ಜಾರಕಿಹೊಳಿ ಅವರು ತಲ್ಲಣ ಸೃಷ್ಟಿ ಮಾಡಿದರೆ? ಅಥವ ತಮ್ಮ ಪ್ರಭಾವವನ್ನು ತೋರಿಸಲು ಇಂತಹ ಕೆಲಸ ಮಾಡಿದರೆ ಎಂಬುದು ಸದ್ಯದ ಪ್ರಶ್ನೆ?. ಜಾರಕಿಹೊಳಿ ಕುಟುಂಬದ ಸಿಟ್ಟು ಕಡಿಮೆ ಆಯಿತೇ? ಎಂಬ ಪ್ರಶ್ನೆಯೂ ಇದೆ. ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಮಾಪ್ತರು. ಸಿದ್ದರಾಮಯ್ಯ ಅವರ ಮಾತನ್ನು ಸಹೋದರರು ತಳ್ಳಿ ಹಾಕುವುದಿಲ್ಲ. ಆದ್ದರಿಂದ, ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಅವರು ಕೈ ಹಾಕುವುದಿಲ್ಲ ಎಂದು ಹಲವು ನಾಯಕರು ಸಮಾಧಾನಪಟ್ಟುಕೊಳ್ಳಬೇಕು. 15 ದಿನ ಕಾದು ನೋಡಿ ಎಂದು ಸತೀಶ್ ಜಾರಕಿಹೊಳಿ, ಸೆ.16ರ ತನಕ ಕಾಯಿರಿ ಎಂದು ರಮೇಶ್ ಜಾರಕಿಹೊಳಿ ಹೇಳಿರುವುದು ಮುಂದೇನಾಗಲಿದೆ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ, ಈ ನಾಯಕರು ಬಿಜೆಪಿಗೆ ಸೇರಿದರೆ ಪಕ್ಷದ ರಾಜ್ಯ ನಾಯಕರ ಮಾತನ್ನು ಕೇಳಿಲಿದ್ದಾರೆಯೇ? ಕಾದು ನೋಡಬೇಕು...