ಲಂಡನ್, ಸೆಪ್ಟೆಂಬರ್ 12: ಭಾರತ ಬಿಟ್ಟು ಹೊರಡುವುದಕ್ಕೂ ಮುನ್ನಾ ವಿತ್ತ ಸಚಿವ ಅರುಣ್ ಜೆಟ್ಲಿ ಅವರನ್ನು ಭೇಟಿ ಆಗಿದ್ದೆ ಎಂದು ಹೇಳಿದ್ದ ವಿಜಯ್ ಮಲ್ಯ, ಕೆಲವೇ ಗಂಟೆಯಲ್ಲಿ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ.
ಲಂಡನ್ನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಇಂದು ವಿಚಾರಣೆಗೆ ಹಾಜರಾದ ಮಲ್ಯ ಅವರು, ತಾವು ಅರುಣ್ ಜೆಟ್ಲಿ ಅವರನ್ನು ಭೇಟಿಯಾಗಿ ಎಲ್ಲ ಸಾಲವನ್ನೂ ಒಂದೇ ಬಾರಿಗೆ ಚುಕ್ತಾ ಮಾಡಲು ಅವಕಾಶ ನೀಡುವಂತೆ ಕೇಳಿದ್ದೆ ಎಂದಿದ್ದರು. ಆದರೆ ಕೆಲವೇ ಗಂಟೆಯಲ್ಲಿ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ.
'ಸಂಸತ್ನಲ್ಲಿ ನಾನು ಅವರನ್ನು ಭೇಟಿಯಾಗಲು ಕೋರಿದ್ದೆ, ನಾನು ಲಂಡನ್ಗೆ ತೆರಳುತ್ತಿರುವುದಾಗಿಯೂ ಅವರಿಗೆ ಹೇಳಿದ್ದೆ, ನಮ್ಮ ಭೇಟಿ ಪೂರ್ವನಿಗದಿತವಾಗಿರಲಿಲ್ಲ' ಎಂದು ಮಲ್ಯ ತಮ್ಮ ಹೊಸ ಹೇಳಿಕೆಯಲ್ಲಿ ಹೇಳಿದ್ದಾರೆ. ಅವರು ಲಂಡನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ನಾನು ಹಲವು ಸಂಸದರನ್ನು, ಮಂತ್ರಿಗಳನ್ನು ಭೇಟಿಯಾಗಿ ಸಾಲ ಮರುಪಾವತಿಯ ಬಗ್ಗೆ ನಾನು ಮನವಿ ಮಾಡಿದ್ದೆ ಎಂದು ಹೇಳಿದಮಲ್ಯ. ದೇಶ ತೊರೆಯುವಂತೆ ನನಗೆ ಯಾರೂ ಸಲಹೆಯನ್ನೂ ನೀಡಿರಲಿಲ್ಲ ಅಥವಾ ಯಾರೂ ಬೆಂಬಲವನ್ನೂ ನೀಡಿರಲಿಲ್ಲ ಎಂದು ಸಹ ಇದೇ ಸಮಯದಲ್ಲಿ ಸ್ಪಷ್ಟಪಡಿಸಿದ್ದಾರೆ. ಮಲ್ಯ ಅವರು ಈ ಮುಂಚೆ ನೀಡಿದ್ದ ಹೇಳಿಕೆ ಈಗಾಗಲೇ ರಾಷ್ಟ್ರ ರಾಜಕರಣದಲ್ಲಿ ವಿವಾದದ ಅಲೆ ಎಬ್ಬಿಸಿದೆ. ಕೇಜ್ರಿವಾಲ್ ಸೇರಿದಂತೆ, ಬಿಜೆಪಿಯ ವಿರೋಧಿ ಬಣ ಈಗಾಗಲೇ ಅರುಣ್ ಜೇಟ್ಲಿ ಅವರಿಗೆ ಪ್ರಶ್ನೆಗಳ ಬಾಣಗಳನ್ನು ಎಸೆಯುತ್ತಿದ್ದಾರೆ. ವಿಜಯ್ ಮಲ್ಯ ದೇಶಬಿಟ್ಟು ಹೋಗುತ್ತಿರುವುದು ಅರುಣ್ ಜೇಟ್ಲಿ ಅವರಿಗೆ ಗೊತ್ತಿದ್ದರೂ ಸಹ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ 2016ರ ಮಲ್ಯ-ಅರುಣ್ ಜೇಟ್ಲಿ ಭೇಟಿಯ ಬಗ್ಗೆ ಅವರು ಸದನಕ್ಕೆ ಮಾಹಿತಿ ನೀಡಿಲ್ಲ ಎಂದು ಆರೋಪಗಳು ಪ್ರಾರಂಭವಾಗಿವೆ. ವಿಜಯ್ ಮಲ್ಯ ಅವರ ಮೊದಲ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, '2014ರ ನಂತರ ನಾನು ಈವರೆಗೆ ವಿಜಯ್ ಮಲ್ಯರನ್ನು ಭೇಟಿಯೇ ಆಗಿಲ್ಲ' ಎಂದಿದ್ದಾರೆ.