ನವದೆಹಲಿ, ಸೆಪ್ಟೆಂಬರ್ 12: 'ಬ್ಯಾಂಕ್ ಸಾಲ ತೀರಿಸಲು ಮುಂದಾಗಿ, ಒನ್ ಟೈಮ್ ಸೆಟ್ಲ್ ಮೆಂಟ್ ವ್ಯವಸ್ಥೆ ಮಾಡಿಕೊಡಿ ಎಂದು ಮೋದಿ ಸರ್ಕಾರವನ್ನು ಕೋರಿದ್ದೆ. ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿ ಇದಕ್ಕೆ ನಿರಾಕರಿಸಿದ್ದರು' ಎಂದಿರುವ ಉದ್ಯಮಿ ವಿಜಯ್ ಮಲ್ಯ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲ ತಾಣಗಳಾದ ಫೇಸ್ಬುಕ್, ಟ್ವಿಟ್ಟರ್ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿ, 2014ರ ನಂತರ ಪರಸ್ಪರ ವೈಯಕ್ತಿಕ ಭೇಟಿ, ಚರ್ಚ, ಮೀಟಿಂಗ್ ಮಾಡಿಲ್ಲ. ಮಲ್ಯ ಅವರು ರಾಜ್ಯಸಭಾ ಸದಸ್ಯರಾಗಿದ್ದ ಕಾರಣ, ಸಂಸತ್ತಿನಲ್ಲಿ ಅಕಸ್ಮಾತ್ ಭೇಟಿ ಸಾಧ್ಯತೆಯಿತ್ತು.
ಈ ರೀತಿ ಮುಖಾಮುಖಿಯಾಗಿದ್ದು, ಬಿಟ್ಟರೆ ವೈಯಕ್ತಿಕವಾಗಿ ಒನ್ ಟು ಒನ್ ಮೀಟಿಂಗ್ ನಡದೇ ಇಲ್ಲ ಎಂದು ಜೇಟ್ಲಿ ಹೇಳಿದ್ದಾರೆ. ಮಲ್ಯ ಈ ರೀತಿ ಹೇಳಿದ್ದು ಇದೇ ಮೊದಲಲ್ಲ: ನಾನು ಹಲವು ಬಾರಿ ಮನವಿ ಮಾಡಿದರೂ ಸರ್ಕಾರಿ ಸ್ವಾಮ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಲಿಲ್ಲ. 4400 ಕೋಟಿ ರು ನೀಡಿ ಒಂದೇ ಸಲಕ್ಕೆ ಸೆಟ್ಲ್ ಮೆಂಟ್ ಮಾಡಿಕೊಳ್ಳುವ ಇರಾದೆ ಇತ್ತು. ಆದರೆ, ನಮ್ಮ ಆಫರ್ ಗೆ ಬೆಲೆ ನೀಡಬೇಕಿತ್ತು. ಈ ಸೆಟ್ಲ್ ಮೆಂಟ್ ಮಾಡಿಕೊಂಡಿದ್ದರೆ ನಮಗೆ 8400 ಕೋಟಿ ರು ನಷ್ಟವಾಗುತ್ತಿತ್ತು. ಆದರೆ, ಸಾಲ ತೀರುತ್ತಿತ್ತು. ಆಗ ಇದ್ದ ಯುಪಿಎ ಸರ್ಕಾರ ಇದಕ್ಕೆ ಆಸ್ಪದ ನೀಡಲಿಲ್ಲ. ಈಗ ನಿಮ್ಮ ಸರ್ಕಾರದಿಂದ ನನಗೆ ಅವಕಾಶ ನೀಡಿದರೆ, ನಾನು ಸೆಟ್ಲ್ ಮೆಂಟ್ ಗೆ ಸಿದ್ಧ ಎಂದು 9 ಸಾವಿರ ಕೋಟಿ ಸಾಲ ಹೊತ್ತುಕೊಂಡಿರುವ ಮಾರ್ಚ್ 2016ರಿಂದ ಭಾರತದಿಂದ ಪರಾರಿಯಾಗಿರುವ ಮಲ್ಯ ಅವರು ಮಾಧ್ಯಮಗಳ ಮುಂದೆ ಈ ರೀತಿ ಹೇಳಿದ್ದರು.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ರುಗಳಿಗೂ ಅಧಿಕ ಸಾಲ ಮಾಡಿಕೊಂಡು 2016ರ ಮಾರ್ಚ್ ತಿಂಗಳಿನಲ್ಲಿ ಯುಕೆಗೆ ಹಾರಿದ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಜಾರಿ ನಿರ್ದೇಶನಾಲಯ ಸತತ ಪ್ರಯತ್ನ ನಡೆಸಿದೆ. ಮನಿಲಾಂಡ್ರಿಂಗ್ ಪ್ರಕರಣದಲ್ಲಿ ರೆಡ್ ಕಾರ್ನರ್, ಜಾಮೀನು ರಹಿತ ವಾರೆಂಟ್ ಪಡೆದಿರುವ ಮಲ್ಯ ಅವರು ತಾವು ಮೋದಿ ಅವರಿಗೆ ಏಪ್ರಿಲ್ 2016ರಲ್ಲಿ ಬರೆದಿದ್ದ ಪತ್ರದ ಬಗ್ಗೆ ಮತ್ತೊಮ್ಮೆ ಮಲ್ಯ ಪ್ರಸ್ತಾಪಿಸಿದ್ದಾರೆ.