ನವದೆಹಲಿ, ಸೆಪ್ಟೆಂಬರ್ 12: ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣದ ಐವರು ಆರೋಪಿ ವಿಚಾರವಾದಿಗಳ ಗೃಹಬಂಧನದ ಅವಧಿಯನ್ನು ಸುಪ್ರೀಂಕೋರ್ಟ್ ಸೆಪ್ಟೆಂಬರ್ 17ರವರೆಗೂ ವಿಸ್ತರಿಸಿದೆ.
ಬುಧವಾರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಈ ಐವರು ವಿಚಾರವಾದಿಗಳ ವಿರುದ್ಧದ ಆರೋಪದ ಮುಂದಿನ ವಿಚಾರಣೆಯನ್ನು ಸೆ. 17ಕ್ಕೆ ನಿಗದಿಪಡಿಸಿತು. ಅಲ್ಲದೆ, ಈ ಅರ್ಜಿಗಳ ಜತೆಗೆ ಜೂನ್ನಲ್ಲಿ ಬಂಧನಕ್ಕೆ ಒಳಗಾಗಿದ್ದ ಇತರೆ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸಹ ನಡೆಸಲು ಒಪ್ಪಿಕೊಂಡಿತು.
ಭೀಮಾ ಕೊರೆಗಾಂವ್ ಯುದ್ಧದ 200ನೇ ವರ್ಷಾಚರಣೆ ಪ್ರಯುಕ್ತ ಈ ವರ್ಷದ ಜನವರಿಯಲ್ಲಿ ಪುಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಸಂಬಂಧ ಐವರು ವಿಚಾರವಾದಿಗಳಾದ ಸುಧಾ ಭಾರದ್ವಾಜ್, ಪಿ. ವರವರ ರಾವ್, ಗೌತಮ್ ನವ್ಲಂಕ, ಅರುಣ್ ಫೆರೀರಾ ಮತ್ತು ವೆರ್ನನ್ ಗೋನ್ಸಾಲ್ವೆಸ್ ಅವರನ್ನು ಆಗಸ್ಟ್ 28ರಂದು ವಿವಿಧ ನಗರಗಳಲ್ಲಿ ಬಂಧಿಸಲಾಗಿತ್ತು.
ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು, ಮಾವೋವಾದಿಗಳ ಜತೆ ನಂಟು ಮತ್ತು ಮೋದಿ ಹತ್ಯೆ ಸಂಚಿನ ಪ್ರಕರಣದಲ್ಲಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದ ಮಹಾರಾಷ್ಟ್ರ ಸರ್ಕಾರ, ಈ ಕಾರ್ಯಕರ್ತರು ನಿಷೇಧಿತ ಉಗ್ರ ಸಂಘಟನೆಯಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸದಸ್ಯರಾಗಿದ್ದಾರೆ ಎಂದು ಆರೋಪಿಸಿತ್ತು.