ಧಾರವಾಡ, ಫೆಬ್ರವರಿ. 01 : ಕ್ರಾಂತಿ ಪ್ರಕಾಶನದಿಂದ ಸಾಹಿತ್ಯ ಸಂಕ್ರಾಂತಿ ಎಂಬ ಕಾರ್ಯಕ್ರಮ ಫೆಬ್ರವರಿ 5ರಂದು ರವಿವಾರ ಧಾರವಾಡದ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಜರುಗಲಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5ವರೆಗೆ ಕಾರ್ಯಕ್ರಮ ನಡೆಯಲಿದ್ದು ಮುಂಜಾನೆ ಕ್ರಾಂತಿ ಪ್ರಕಾಶನದಿಂದ ಪ್ರಕಟಗೊಂಡ ಪ್ರೇಮಾ ನಡುವಿನಮನಿ ಅವರ 'ಕಂಬನಿ' ಕಥಾಸಂಕಲನ ಮತ್ತು ಡಾ. ಸಿದ್ರಾಮ್ ಕಾರಣಿಕ ಅವರ 'ನಮ್ಮೊಳಗಿನ ನಾವು' ಕಥಾಸಂಕಲನ ಲೋಕಾರ್ಪಣೆಗೊಳ್ಳಲಿವೆ.
ಮೊಟ್ಟಮೊದಲ ಬಾರಿಗೆ ಕ್ರಾಂತಿ ಪ್ರಕಾಶನ ಧಾರವಾಡ ನೀಡುತ್ತಿರುವ ಕ್ರಾಂತಿ ಪುರಸ್ಕಾರ ಪ್ರಧಾನ ಸಮಾರಂಭ ನಡೆಯಲಿದ್ದು, ಪತ್ರಿಕಾ ಸೇವೆಗಾಗಿ ಡಾ. ವೀರೇಶ ಹಂಡಿಗಿ, ಸಾಹಿತ್ಯ/ಸಮಾಜ ಸೇವೆಗಾಗಿ ಪೇದೆ ಸೋಮು ರೆಡ್ಡಿ. ಸಮಾಜ ಸೇವೆಗಾಗಿ ಅಲ್ತಾಫ ಬಿಳಗುಳ, ರಂಗಭೂಮಿ ಸೇವೆಗಾಗಿ ಸಂಪತಕುಮಾರ, ಸಾಹಿತ್ಯ ಸೇವೆಗಾಗಿ ಚಂಸು ಪಾಟೀಲ, ಕುಮಾರಿ ರೇಣುಕಾ ಹೆಳವರ ಮತ್ತು ಮಹಮದ್ ಅಲಿ ಗೂಡುಬಾಯಿ ಅವರಿಗೆ ಕ್ರಾಂತಿ ಪುರಸ್ಕಾರ ನೀಡಲಾಗುವುದು. ಸಾಹಿತಿ ಪೊಲೀಸ್ ಕಾನ್ಸ್ ಟೇಬಲ್ ಸೋಮು ರೆಡ್ಡಿಯವರ 'ಅಭಿನೇತ್ರಿ' ಕಾದಂಬರಿ, 'ನೋಟದಾಗ ನಗೆಯಾ ಮೀಟಿ' ಕಥಾಸಂಕಲನ ಕೃತಿಗಳ ಸಂವಾದ ಕಾರ್ಯಕ್ರಮ ನಡೆಯಲಿದೆ. ಪ್ರೇಮಾ ನಡುವಿನಮನಿರವರ ಕಂಬನಿಯೊಳಗಿನ ಕಥೆಯನ್ನು ಆಧರಿಸಿದ ಕಿರುಚಿತ್ರ ಪ್ರದರ್ಶನ ನಡೆಯಲಿದೆ. ಚಿತ್ರದ ಹೆಸರು ಕಂಬನಿ. ದಿ. ಸಾಹಿತಿ ಮಾಬು ಡಂಬಳ ಆವರ ನೆನಪಿಗಾಗಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ ಸುಮಾರು ಅರವತ್ತಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾಗವಹಿಸಿದ ಎಲ್ಲಾ ಕವಿಗಳಿಗೆ ಕ್ರಾಂತಿ ಪ್ರಕಾಶನದಿಂದ ಪ್ರಮಾಣ ಪತ್ರ ನೀಡಲಾಗುವುದು. ಬೆಳಗಾವಿ ಉತ್ತರ ವಲಯ ಐಜಿಪಿ ಡಾ. ಕೆ ರಾಮಚಂದ್ರರಾವ್ ಉದ್ಘಾಟನೆ ಮಾಡಲಿದ್ದಾರೆ. ಸಿದ್ದನಗೌಡ ಪಾಟೀಲ್, ಚಂದ್ರಕಾಂತ ಬೆಲ್ಲದ ಇನ್ನಿತರರು ಆಗಮಿಸಲಿದ್ದಾರೆ.