ಬೆಂಗಳೂರು, ಫೆಬ್ರವರಿ. 03: ಉದ್ಯಾನನಗರಿಯಲ್ಲಿ ಕೆರೆಗಳು ಮಾಯವಾಗಿ ವಸತಿ ಸಮುಚ್ಚಯಗಳೇ ಕಾಣಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಯಾವುದಾದರು ಕೆರೆ ನೀರಿನಿಂದ ತುಂಬುತ್ತಿದೆ ಎಂದರೆ ಇಲ್ಲಿನ ನಿವಾಸಿಗಳಿಗೆ ಅದೊಂದು ಹಬ್ಬವೇ ಸರಿ. ಇಂತಹದ್ದೆ ಪ್ರಯತ್ನಕ್ಕೆ ಬಿಡಬ್ಲ್ಯೂಎಸ್ಎಸ್ಬಿ ಕೈ ಹಾಕಿದೆ.
15 ಎಕರೆ ವಿಸ್ತೀರ್ಣದ ಕಲುಷಿತಗೊಂಡಿರುವ ನಾಯಂಡಹಳ್ಳಿ ಕೆರೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಸಂಸ್ಕರಿಸಿದ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಕೆರೆ ಮರುಜೀವ ಪಡೆಯಲಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಗುರುವಾರ 120 ಮಿಲಿಯನ್ ಲೀಟರ್ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ನಾಯಂಡಹಳ್ಳಿ ಕೆರೆಗೆ ಬಿಡುಗಡೆ ಮಾಡಿದೆ. ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಯೋಜನೆಯನ್ನು ಉದ್ಘಾಟಿಸಿದ್ದಾರೆ.
ಇದರಿಂದಾಗಿ ಕೆರೆ ಸಮೀಪದ ಪಂತರಪಾಳ್ಯ, ನಾಯಂಡಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗ ನೀರಿನ ಬವಣೆ ಕಡಿಮೆಯಾಗಲಿದ್ದು, ಅಂತರ್ಜಲ ಮಟ್ಟ ಏರಿಕೆಯಾಗುವ ನಿರೀಕ್ಷೆಯಿದ್ದು, ಪ್ರತ್ಯೇಕ ಬೋರ್ವೆಲ್ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವ ಸಾಧ್ಯತೆಯಿದೆ. ಮೂರು ಹಂತದ ಶುದ್ಧೀಕರಿಸಿದ ನೀರಿನಿಂದ ತುಂಬಿದ ನಗರದ ಮೊದಲ ಜಲಮೂಲ ಈ ನಾಯಂಡಹಳ್ಳಿ ಕೆರೆ ಎಂದು ಬಿಡಬ್ಲ್ಯುಎಸ್ಎಸ್ಬಿ ಹೇಳಿಕೊಂಡಿದೆ. ಮೈಸೂರು ರಸ್ತೆ ಬಳಿಯ ವೃಷಭಾವತಿ ಕಣಿವೆಯಲ್ಲಿರುವ ಹತ್ತಿರದ 60-ಎಂಎಲ್ಡಿ (ದಿನಕ್ಕೆ ಮಿಲಿಯನ್ ಲೀಟರ್) ಮೂರು ಹಂತದ ಶುದ್ಧೀಕರಣ ಘಟಕದಿಂದ ನೀರನ್ನು ಕೆರೆಗೆ ಪಂಪ್ ಮಾಡಲಾಗುವುದು ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ತಿಳಿಸಿದ್ದಾರೆ. "15 ಎಕರೆ ವಿಸ್ತೀರ್ಣದ ಈ ಕೆರೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇತ್ತೀಚೆಗೆ ಅಭಿವೃದ್ಧಿಪಡಿಸಿದೆ. ಬಿಬಿಎಂಪಿಯು ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ, ಕೆರೆಯು ಕಲುಷಿತ ನೀರಿನಿಂದ ತುಂಬಿದೆ. ಆದ್ದರಿಂದ ನಾವು ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ನಾಯಂಡಹಳ್ಳಿ ಕೆರೆಗೆ ಬಿಡಲು ಯೋಜಿಸಿದ್ದೇವೆ. ಬಿಡಬ್ಲ್ಯುಎಸ್ಎಸ್ಬಿ 2.52 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದೆ" ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿರುವ ಹಲವು ಕೆರೆ ಉಳಿಸಿ ಅಭಿಯಾನದ ಕಾರ್ಯಕರ್ತರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. "ಯೋಜನೆಯೇನೋ ಉತ್ತಮವಾಗಿದೆ ಆದರೆ ಈ ನೀರಿನಲ್ಲಿ ಎಲ್ಲಾ ಪೋಷಕಾಂಶಗಳಿವೆಯೇ ಎಂಬುದು ಯೋಚಿಸಬೇಕಾಗಿದೆ. ಬಿಡಬ್ಲ್ಯೂಎಸ್ಎಸ್ಬಿ ಸ್ಥಾವರವು ಜೈವಿಕ ಪೋಷಕಾಂಶ ತೆಗೆಯುವ ತಂತ್ರಜ್ಞಾನವನ್ನು ಹೊಂದಿರಬೇಕು. ಕೆರೆಗೆ ನೀಡು ಬಿಡುವ ಮೊದಲು ತ್ಯಾಜ್ಯ ನೀರಿನಿಂದ ಸಾರಜನಕ ಮತ್ತು ರಂಜಕವನ್ನು ತೆಗೆಯಬೇಕು" ಎಂದಿದ್ದಾರೆ.