ಬೆಳಗಾವಿ, ಸೆಪ್ಟೆಂಬರ್ 12 : 'ಕಾಂಗ್ರೆಸ್ ಪಕ್ಷದಲ್ಲಿ ಮೂಲ ನಾಯಕರು ಇಲ್ಲ. ಬೇರೆ ಪಕ್ಷದಿಂದ ಬಂದ ನಾಯಕರೇ ಹೆಚ್ಚಾಗಿದ್ದಾರೆ. ಜಾರಕಿಹೊಳಿ ಸಹೋದರರು ಬಿಜೆಪಿಗೆ ಬಂದರೆ ಸ್ವಾಗತ' ಎಂದು ಬಿಜೆಪಿ ನಾಯಕ ಪ್ರಭಾಕರ ಕೋರೆ ಹೇಳಿದರು.
ಬೆಳಗಾವಿಯಲ್ಲಿ ಬುಧವಾರ ಮಾತನಾಡಿದ ರಾಜ್ಯಸಭಾ ಸದಸ್ಯ ಮತ್ತು ಬಿಜೆಪಿ ನಾಯಕ ಪ್ರಭಾಕರ ಕೋರೆ ಅವರು, 'ಬೆಳಗಾವಿಯ ರಾಜಕೀಯವೇ ಬೇರೆ, ಇತರ ಜಿಲ್ಲೆಗಳ ರಾಜಕೀಯವೇ ಬೇರೆ. ಬೆಳಗಾವಿ ರಾಜಕೀಯ ಬೆಂಗಳೂರಿನಲ್ಲಿರುವ ಸರ್ಕಾರದ ಮೇಲೆ ಯಾವಾಗಲೂ ಪ್ರಭಾವ ಬೀರುತ್ತದೆ' ಎಂದರು.
'ಜಾರಕಿಹೊಳಿ ಸಹೋದರರು ಬಹಳ ಅನುಭವಿ ನಾಯಕರು. ಅವರಿಗೆ ಬಿಜೆಪಿಗೆ ಬರುವ ಆಸಕ್ತಿ ಇದ್ದರೆ ಬರಲಿ. ಅವರು ಬಿಜೆಪಿಗೆ ಬಂದರೆ ಸ್ಥಳೀಯ ನಾಯಕರು ಸ್ವಾಗತಿಸುತ್ತಾರೆ' ಎಂದು ಪ್ರಭಾಕರ ಕೋರೆ ತಿಳಿಸಿದರು.
'ಕಾಂಗ್ರೆಸ್ ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಪಕ್ಷದಲ್ಲಿ ಮೂಲ ನಾಯಕರೇ ಇಲ್ಲ. ಬೇರೆ-ಬೇರೆ ಪಕ್ಷದಿಂದ ನಾಯಕರು ಪಕ್ಷದಲ್ಲಿ ಸೇರಿಕೊಂಡಿದ್ದಾರೆ' ಎಂದು ಪ್ರಭಾಕರ ಕೋರೆ ಹೇಳಿದರು. ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಸಹೋದರರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಹಬ್ಬಿದೆ. ಕಾಂಗ್ರೆಸ್ ನಾಯಕರು ಜಾರಕಿಹೊಳಿ ಸಹೋದರರ ಜೊತೆ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಜಾರಕಿಹೊಳಿ, ಪಾಟೀಲ್, ಕತ್ತಿ ಕುಟುಂಬಗಳು ಸಕ್ರಿಯವಾಗಿವೆ. ಆದರೆ, ಜಾರಕಿಹೊಳಿ ಸಹೋದರರು ಜಿಲ್ಲೆ ಮತ್ತು ರಾಜ್ಯ ರಾಜಕಾರಣದಲ್ಲಿ ಪ್ರಭಾವವನ್ನು ಹೊಂದಿದ್ದಾರೆ.