ಬೆಂಗಳೂರು, ಜು.23: ವಿಶ್ವದ ಪ್ರಸಿದ್ಧ ತಾಣವಾದ ಹಂಪಿಯನ್ನು ಸಂಪರ್ಕಿಸುವ ಹೊಸಪೇಟೆಯಿಂದ ಬೆಂಗಳೂರಿನ ಮಧ್ಯೆ ರೈಲು ಸಂಚಾರ ಆರಂಭಿಸುವಂತೆ ಕರ್ನಾಟಕ ರೈಲ್ವೆ ಬಳಕೆದಾರರ ವೇದಿಕೆ ಟ್ವಿಟ್ಟರ್ ಮೂಲಕ ಮನವಿ ಮಾಡಿದೆ.
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ಕೇಂದ್ರ ಸಚಿವ ಅನಂತಕುಮಾರ್, ಸಚಿವ ಡಿವಿ ಸದಾನಂದಗೌಡ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮತ್ತು ಈ ಭಾಗದ ಕೆಲವು ಪ್ರತಿನಿಧಿಗಳನ್ನು ಟ್ಯಾಗ್ ಮಾಡಿ ಮನವಿ ಸಲ್ಲಿಸಿದ್ದಾರೆ.
ಹೊಸಪೇಟೆಯಿಂದ ಬಳ್ಳಾರಿ ಮಾರ್ಗವಾಗಿ ರಾಯದುರ್ಗ, ಚಳ್ಳಕೆರೆ, ಚಿತ್ರದುರ್ಗ, ಚಿಕ್ಕಜಾಜೂರು, ಬೀರೂರು, ಕಡೂರು ಅರಸೀಕೆರೆ ಹಾಗೂ ತುಮಕೂರು ಮೂಲಕ ಬೆಂಗಳೂರನ್ನು ಸಂಪರ್ಕಿಸಲು ನಿತ್ಯ ರೈಲು ಸಂಪರ್ಕ ಆರಂಭಿಸಬೇಕು. ಇದರಿಂದ ವಿಶ್ವವಿಖ್ಯಾತ ತಾಣವಾದ ಹಂಪಿಗೆ ಪ್ರವಾಸಕ್ಕೆ ಬರುವವರಿಗೆ ಅನುಕೂಲವಾಗಲಿದೆ. ದೇಶವಿದೇಶಗಳಿಂದ ನಿತ್ಯ ಸಹಸ್ರಾರು ಜನರು ಹಂಪಿಗೆ ಭೇಟಿ ನೀಡುತ್ತಿದ್ದು, ರಾಜಧಾನಿ ಬೆಂಗಳೂರಿನಿಂದ ಸರಿಯಾದ ರೈಲು ಸಂಪರ್ಕವಿಲ್ಲ ಹೀಗಾಗಿ ನಿತ್ಯ ಇಂಟರ್ಸಿಟಿ ರೈಲು ಆರಂಭಿಸಿದರೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹಂಪಿ ಅಭಿವೃದ್ಧಿಗೆ ಮತ್ತಷ್ಟು ನೆರವಾಗಲಿದೆ. ಹಾಗೂ ಈ ಭಾಗದ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ರೈಲ್ವೆ ಬಳಕೆದಾರರ ವೇದಿಕೆ ತಿಳಿಸಿದೆ. ಹೊಸ ಪೇಟೆ ಹಾಗೂ ಬೆಂಗಳೂರು ನಡುವೆ ಹಗಲಿನಲ್ಲಿ ಸಂಚರಿಸುವ ಒಂದೂ ರೈಲೂ ಕೂಡ ಇಲ್ಲ, ಈ ಮಾರ್ಗದಲ್ಲಿ ಒಂದು ರೈಲಾದರೂ ಸಂಚರಿಸುವಂತೆ ಮಾಡಿ ಎಂದು ಮನವಿ ಮಾಡಿದ್ದಾರೆ.