ಬೆಂಗಳೂರು, ಆಗಸ್ಟ್ 13: ಬೆಂಗಳೂರು ಉಪನಗರ ರೈಲು ಯೋಜನೆ ಮತ್ತಷ್ಟು ಚುರುಕುಗೊಂಡಿದೆ, ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಬೆಂಗಳೂರು ವಿಭಾಗದ ಮತ್ತಷ್ಟು ಡೆಮು ಹಾಗೂ ಸಾಮಾನ್ಯ ಬೋಗಿಯುಳ್ಳ ರೈಲುಗಳನ್ನು ಮೆಮು ರೈಲಾಗಿ ಮಾರ್ಪಡಿಸಲು ನೈಋತ್ಯ ಇಲಾಖೆ ಬೆಂಗಳೂರು ವಿಭಾಗದ ಚಿಂತನೆ ನಡೆಸಿದೆ.
ಈ ತಿಂಗಳಾಂತ್ಯದ ವರೆಗೆ ವಿಶೇಷ ಉದ್ದೇಶ ವಾಹಕ ರಚಿಸಲು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಉಪನಗರ ರೈಲು ಯೋಜನೆ ಅನುಷ್ಠಾನ ಪ್ರಕ್ರಿಯೆ ಚುರುಕು ಪಡೆದಿದೆ. ಮಾರಿಕುಪ್ಪಂ-ಬೆಂಗಳೂರು ಸ್ವರ್ಣ ಪ್ಯಾಸೆಂಜರ್ ರೈಲನ್ನು ಸಂಖ್ಯೆ 56508/56507 ಶೀಘ್ರ 16 ಬೋಗಿ ಮೆಮಪು ರೈಲಿನಿಂದ ಬದಲಾಯಿಸುವ ಅವಶ್ಯಕತೆ ಇದೆ ಎಂದು ಭೂಸಾರಿಗೆ ನಿರ್ದೇಶನಾಲಯ ತಿಳಿಸಿದೆ.
ಸ್ವರ್ಣ ಪ್ಯಾಸೆಂಜರ್ ರೈಲು ದಟ್ಟಣೆ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ರೈಲಾಗಿದೆ. ಈ ರೈಲು ವಿಳಂಬದಿಂದಾಗಿ ಇತರೆ ರೈಲುಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮೆಮು ರೈಲು ಸಾಮಾನ್ಯ ರೈಲಿಗಿಂತ ವೇಗ ಹೊಂದಿದ್ದು, ನಿಲುಗಡೆಗೂ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಸ್ವರ್ಣ ಪ್ಯಾಸೆಂಜರ್ ರೈಲನ್ನು ಮೆಮು ರೈಲಿನಿಂದ ಬದಲಾವಣೆಗೊಳಿಸುವ ಮೂಲಕ ಸಮಯಕ್ಕೆ ಸರಿಯಾದ ರೈಲು ಕಾರ್ಯಾಚರಣೆಗೊಳಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ವಿಭಾಗದಲ್ಲಿ ಇರುವ ಎಲ್ಲ ಉಪನಗರ ರೈಲುಗಳನ್ನು 2 ಹಂತಗಳಲ್ಲಿ ಮೆಮು ರೈಲಿನಿಂದ ಬದಲಾವಣೆಗೊಳಿಸಲು ಸರ್ಕಾರ ಹಾಗೂ ನೈಋತ್ಯ ರೈಲ್ವೆ ಒಪ್ಪಂದ ಮಾಡಿಕೊಂಡಿದೆ. ಉಪನಗರ ರೈಲು ಯೋಜನೆಗೆ 2016ರಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಸಿದ್ದ ರೈಟ್ಸ್ ಸಂಸ್ಥೆ ಪ್ರಕಾರ ನಗರಕ್ಕೆ 4 ಬೋಗಿಯುಳ್ಳ 27 ಮೆಮು ರೈಲುಗಳ ಅವಶ್ಯಕತೆಯಿದೆ ಎಂದು ತಿಳಿಸಿತ್ತು.