ಅರಣ್ಯ ಇಲಾಖೆಯಲ್ಲಿ ಜೇಷ್ಠತಾ ಪಟ್ಟಿ ಇಲ್ಲದೇ ಮುಂಬಡ್ತಿಗೆ ಕರಸತ್ತು!
ಬೆಂಗಳೂರು, ಜನವರಿ 04: ಅರಣ್ಯ ಇಲಾಖೆಯ ಹದಿಮೂರು ವೃತ್ತಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ಜೇಷ್ಠತಾ ಪಟ್ಟಿ ತಯಾರಿಕೆಯಲ್ಲಿ ಆಗಿರುವ ಲೋಪ ದೋಷಗಳನ್ನು ಸರಿ ಪಡಿಸದೇ ಉಪ ವಲಯ ಅರಣ್ಯಾಧಿಕಾರಿಗಳಿಗೆ ಬಡ್ತಿ ನೀಡಲು ಹಿರಿಯ ಅರಣ್ಯ ಅಧಿಕಾರಿಗಳು ಮುಂಬಡ್ತಿ ಆದೇಶ ತಯಾರು ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಹಿರಿಯ ಅರಣ್ಯ ಅಧಿಕಾರಿಗಳ ಈ ಕ್ರಮದಿಂದ ಅರಣ್ಯ ಸಚಿವ ಆನಂದ ಸಿಂಗ್ ಅವರು ಮುಜುಗರಕ್ಕೆ ಈಡಾಗುವ ಸನ್ನಿವೇಶ ಸೃಷ್ಟಿಯಾಗಿದೆ. ರಾಜ್ಯದ ಹದಿಮೂರು ಅರಣ್ಯ ವೃತ್ತ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ಜೇಷ್ಠತಾ ಪಟ್ಟಿ ತಯಾರಿಕೆಯಲ್ಲಿ ಸಾಕಷ್ಟು ಸಮಸ್ಯೆ ತಲೆದೋರಿತ್ತು. ವರ್ಷಗಳಿಂದ ವಿವಾದವಾಗಿ ರೂಪಾಂತರಗೊಂಡಿತ್ತು.
ಈ ಸಮಸ್ಯೆಗೆ ತಾರ್ತಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಸಚಿವ ಆನಂದ ಸಿಂಗ್ ಅವರು ಪ್ರಯತ್ನಿಸಿದ್ದರು. ಹದಿಮೂರು ವೃತ್ತಗಳಿಗೆ ಸಂಬಂಧಿಸಿದಂತೆ ತಯಾರಿಸಿರುವ ಜೇಷ್ಠತಾ ಪಟ್ಟಿಯನ್ನು ನ್ಯಾಯಾಲಯದ ಆದೇಶದಂತೆ ಈ ಹಿಂದಿನ ಅವಧಿಯಲ್ಲಿ ಕ್ರೋಢೀಕರಿಸಿ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿ ಪ್ರಕಟಿಸಿದಂತೆ ಪ್ರಸ್ತುತ ಬಾರಿಯೂ ತಯಾರಿಸಲು ಸೂಚನೆ ನೀಡಿದ್ದರು. ಈ ಕುರಿತು ಕಾನೂನು ಸಲಹೆ ಪಡೆದು ಅರಣ್ಯ ಇಲಾಖೆಯಲ್ಲಿನ ಸಮಸ್ಯೆ ಬಗೆಹರಿಸಲು ಸೂಚಿಸಿದ್ದರು.
ವಿವಾದದ ಮೂಲ
ಅರಣ್ಯ ಅಧಿಕಾರಿಗಳ ಜೇಷ್ಠತಾ ವಿವಾದ ನೌಕರರಲ್ಲೇ ಎರಡು ಬಣ ಸೃಷ್ಟಿಸಿದೆ. ಎರಡು ಬಣಗಳ ಗುದ್ದಾಟದಲ್ಲಿ ಜೇಷ್ಠತಾ ಸಮಸ್ಯೆ ಗೊಂದಲದ ಗೂಡಾಗಿದೆ. ಇದರ ಬಗ್ಗೆ ಕಳೆದ ಅಧಿನವೇಶನದಲ್ಲಿ ಶಾಸಕ ಅಪ್ಪಾಜಿಗೌಡರು ಪ್ರಸ್ತಾಪಿಸಿದ್ದರು. ಅರಣ್ಯ ಅಧಿಕಾರಿಗಳ ಜೇಷ್ಠತೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿ ರಾಜ್ಯ ಮಟ್ಟದ ಸಂಯೋಜಿತ ಜೇಷ್ಠತಾ ಪಟ್ಟಿ ತಯಾರಿಸಿದ ನಂತರವೇ ಬಡ್ತಿ ಪ್ರಕ್ರಿಯೆ ಮಾಡುವುದಾಗಿ ಸಚಿವ ಆನಂದ ಸಿಂಗ್ ಸದನದಲ್ಲಿ ಉತ್ತರ ನೀಡಿದ್ದರು. ಇದರ ಭಾಗವಾಗಿ ಸಚಿವರು ಕಾರ್ಯೋನ್ಮುಖರಾಗಿದ್ದರು.
ಈ ಸಂಬಂಧ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಆನಂದ ಸಿಂಗ್ ಪತ್ರ ಬರೆದಿದ್ದರು. ಅರಣ್ಯ ಇಲಾಖೆಯ ವಿವಿಧ ವೃಂದಗಳ ಜೇಷ್ಠತಾ ಪಟ್ಟಿ ಪರಿಷ್ಕರಿಸುವ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ನೀಡಿದ್ದ ವರದಿ ಆಧರಸಿ ಜೇಷ್ಠತಾ ಪಟ್ಟಿ ಪ್ರಕಟಿಸಲು ಸೂಚಿಸಿದ್ದರು. ಸಮಿತಿಯ ಪ್ರಸ್ತಾಪಿಸಿರುವ ಅಂಶ ಪಾಲಿಸಿರುವ ಬಗ್ಗೆ ಸಮಿತಿ ಮುಂದೆ ಪ್ರಸ್ತಾಪಿಸಲು ಸಚಿವರು ನಿರ್ದೇಶಿಸಿದ್ದರು. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲು ಸಚಿವರು ಸೂಚಿಸಿದ್ದರೂ, ಸಂಬಂದ ಪಟ್ಟ ಅಧಿಕಾರಿಗಳು ಮಾಹಿತಿ ಪಡೆಯದ ಬಗ್ಗೆ ಹಾಗೂ ನಿರ್ದೇಶನ ಪಾಲನೆ ಮಾಡದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
ಸಚಿವರ ಕಟ್ಟಪ್ಪಣೆ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಜೇಷ್ಠತಾ ಪಟ್ಟಿ ಪ್ರಕಟಿಸಿದ ಹೊರತು ಯಾವುದೇ ಕಾರಣಕ್ಕೂ ಅಧಿಕಾರಿಗಳ ಮುಂಬಡ್ತಿ ಪ್ರತಿಕ್ರಿಯೆ ಮಾಡುವಂತಿಲ್ಲ ಎಂದು ಸಚಿವರು ಕಡ್ಡಿ ಮುರಿದಂತೆ ಹೇಳಿದ್ದರು. ರಾಜ್ಯ ಮಟ್ಟದ ಸಂಯೋಜಿತ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸುವ ವರೆಗೂ ಮುಂಬಡ್ತಿ ಪ್ರಕ್ರಿಯೆ ನಡೆಸದಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಸೂಚಿಸಿದ್ದರು.
ಆದರೆ, ಸಚಿವರ ಈ ನಿರ್ದೇಶನ ಪಾಲಿಸಿ ಜೇಷ್ಠತಾ ಪಟ್ಟಿ ಪ್ರಕಟಿಸಿದ್ದಲ್ಲಿ ಅರಣ್ಯ ಇಲಾಖೆಯಲ್ಲಿ ವರ್ಷಗಳಿಂದ ಗೊಂದಲದ ಗೂಡಾಗಿರುವ ಅರಣ್ಯ ಇಲಾಖೆಯ ಮುಂಬಡ್ತಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿತ್ತು. ಆದರೆ, ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಮತ್ತು ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಂಗರಾವ್ ಜಿ.ವಿ. ಅವರು ನ್ಯೂನ್ಯತೆ ಇರುವ ಐದು ವೃತ್ತಗಳಿಗೆ ಸಂಬಂಧಿಸಿದಂತೆ ಅನರ್ಹ ಉಪ ವಲಯ ಅರಣ್ಯ ಅಧಿಕಾರಿಗಳಿಗೆ ಬಡ್ತಿ ನೀಡುವ ಪ್ರಸ್ತಾವನೆಯನ್ನು ಅಂತಿಮಗೊಳಿಸಿ ಇರುತ್ತಾರೆ ಎನ್ನಲಾಗಿದೆ. ಸಚಿವರ ನಿರ್ದೇಶನಗಳನ್ನು ಗಾಳಿಗೆ ತೂರಿ ಮುಂಬಡ್ತಿ ನೀಡಲು ಮುಂದಾಗಿರುವ ಕಾರಣ ನಿಗೂಢವಾಗಿದೆ.
ಈಗಾಗಲೇ ಬೆಂಗಳೂರು ಮತ್ತು ಚಿಕ್ಕಮಗಳೂರು ವೃತ್ತಕ್ಕೆ ಸಂಬಂಧಿಸಿದಂತೆ ಯಾವುದೇ ಮುಂಬಡ್ತಿ ಪ್ರಕ್ರಿಯೆ ನಡೆಸದಂತೆ ಕೆಎಟಿ ತಡೆಯಾಜ್ಙೆ ನೀಡಿದೆ. ಕೆಎಟಿ ಆದೇಶವನ್ನು ಗಾಳಿಗೆ ತೂರಿ ತರಾತುರಿಯಲ್ಲಿ ಮುಂಬಡ್ತಿ ಪಟ್ಟಿ ತಯಾರಿಸಿರುವ ಕ್ರಮ ನಿಯಮ ಬಾಹಿರ ಎಂದು ಹೆಸರು ಹೇಳಲು ಇಚ್ಛಿಸದ ಅರಣ್ಯ ಅಧಿಕಾರಿ ತಿಳಿಸಿದ್ದಾರೆ. ಸಚಿವರ ಆದೇಶಗಳನ್ನು ನ್ಯಾಯಾಲಯದ ತೀರ್ಪುಗಳನ್ನು ಉಲ್ಲಂಘಿಸಿ ಬಡ್ತಿ ನೀಡುತ್ತಿರುವುದಕ್ಕೆ ಕಾರಣವೇನು ಎಂಬುದಕ್ಕೆ ಈ ಹಿರಿಯ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.
ಸಚಿವರ ಹೆಸರಿಗೆ ಕಳಂಕ
ಇನ್ನು ರಾಜ್ಯದ ಅರಣ್ಯ ಅಧಿಕಾರಿಗಳಿಗೆ ಅನ್ವಯ ವಾಗುವ ರಾಜ್ಯದ ಜೇಷ್ಠತಾ ಪಟ್ಟಿ ತಯಾರಿಸುವ ನಿಟ್ಟಿನಲ್ಲಿ ಸಚಿವರು ಈವರೆಗೂ ಮಾಡಿದ ಪ್ರಮಾಣಿಕ ಪ್ರಯತ್ನ ಅಧಿಕಾರಿಗಳಲ್ಲಿ ಸಂತಸ ಮನೆ ಮಾಡಿತ್ತು. ಈವರೆಗೂ ಯಾವ ಸಚಿವರೂ ಇತ್ಯರ್ಥ ಗೊಳಿಸದ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವ ನಿಟ್ಟಿನಲ್ಲಿ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ನಿವೃತ್ತಿ ಅಂಚಿನಲ್ಲಿರುವರು ಸೇವಾವಧಿಯ ಮುಂಬಡ್ತಿ ಲಾಭ ಪಡೆಯಲು ವಾಮ ಮಾರ್ಗದ ಮೂಲಕ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಇದರ ಭಾಗವಾಗಿ ಬಡ್ತಿ ನೀಡುವ ಪ್ರಕ್ರಿಯೆ ಚಾಲ್ತಿಗೆ ಬಂದಿದೆ. ಸಚಿವ ಆನಂದ ಸಿಂಗ್ ಅವರು ಈ ವರೆಗೂ ಮಾಡಿದ್ದ ಪ್ರಾಮಾಣಿಕ ಪ್ರಯತ್ನ ಹುಣಿಸೆ ಹಣ್ಣಿನಲ್ಲಿ ತೊಳೆದಂತಾಗಿದೆ. ಅರಣ್ಯ ಇಲಾಖೆಯ ವೃಂದ ನೇಮಕಾತಿಗೆ ಸಂಬಂಧಿಸಿದಂತೆ ತಲೆದೋರಿರುವ ಜೇಷ್ಠತಾ ಪಟ್ಟಿ ತಯಾರಿಕೆ ಸಮಸ್ಯೆ ಒಂದು ಸಲ ಬಗೆಹರಿಸಿದಲ್ಲಿ ಅದರ ಆಧಾರದ ಮೇಲೆ ಮುಂಬಡ್ತಿ ನೀಡಬೇಕಾಗುತ್ತದೆ. ಸಚಿವರ ಈ ಕ್ರಮದಿಂದ ಎಲ್ಲರಿಗೂ ನ್ಯಾಯ ಸಿಗುವಂತಾಗುತ್ತಿತ್ತು. ಆದರೆ ಅಧಿಕಾರಿಗಳು ಸಚಿವರ ವಿರುದ್ಧ ನಿರ್ಣಯ ತೆಗೆದುಕೊಂಡು ಮುಂಚೂಣಿ ಸಿಬ್ಬಂದಿ/ನೌಕರರಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ತಿಳಿಸಿದ್ದಾರೆ.
ಬಡ್ತಿ ಪಟ್ಟಿಗಾಗಿ ನಿರೀಕ್ಷೆ
ಸಚಿವರ ನಿರ್ದೇಶನದಂತೆ ಜೇಷ್ಠತಾ ಪಟ್ಟಿ ಪ್ರಕಟಿಸದೇ ಕೆಲವು ವೃತ್ತದ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಪ್ರಕಟಿಸಬಹುದಾದ ಪಟ್ಟಿಗಾಗಿ ಕೆಲವು ಅಧಿಕಾರಿಗಳು ಅರಣ್ಯ ಇಲಾಖೆ ಕಚೇರಿ ಮುಂದೆ ಕಾಯುತ್ತಿದ್ದರು. ರಾಜ್ಯವಾರು ಜೇಷ್ಠತಾ ಪಟ್ಟಿ ಪ್ರಕಟವಾಗದಿದ್ದರೂ ಮುಂಬಡ್ತಿ ಸಿಗಲಿದ್ದು ಅದರ ಸಂತಸದಲ್ಲಿ ತೇಲಾಡುತ್ತಿದ್ದ ದೃಶ್ಯ ಇಂದು ಕಂಡು ಬಂತು. ಆದರೆ ವಿಷಯ ಸಚಿವ ಆನಂದ ಸಿಂಗ್ ಅವರ ಗಮನಕ್ಕೆ ಹೋಗುತ್ತಿದ್ದಂತೆ ಮೊದಲು ಜೇಷ್ಠತಾ ಪಟ್ಟಿಯ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಕಾನೂನು ಇಲಾಖೆಯ ಅಭಿಪ್ರಾಯದೊಂದಿಗೆ ಪ್ರಕಟಿಸಿಯೇ ಮಂಬಡ್ತಿ ಪ್ರಕ್ರಿಯೆ ಮುಂದುವರೆಸಬೇಕು ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬಡ್ತಿ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸಚಿವರ ಪ್ರತಿಕ್ರಿಯೆ
ಅರಣ್ಯ ಇಲಾಖೆಯ ವೃಂದ ನೇಮಕಾತಿ ಜೇಷ್ಠತಾ ಪಟ್ಟಿ ತಯಾರಿಕೆ ಸಂಬಂಧ ತಲೆದೋರಿರುವ ಸಮಸ್ಯೆ ಕುರಿತು ಒನ್ ಇಂಡಿಯಾ ಕನ್ನಡ ಜತೆ ಪ್ರತಿಕ್ರಿಯೆ ನೀಡಿದ ಸಚಿವ ಆನಂದ ಸಿಂಗ್ ಅವರು, ಯಾವುದೇ ಕಾರಣಕ್ಕೂ ಜೇಷ್ಠತಾ ಪಟ್ಟಿ ಪರಿಷ್ಕರಿಸಿ ಕಾನೂನು ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅನುಮತಿ ಪಡೆಯುವ ವರೆಗೂ ಮುಂಬಡ್ತಿ ಪ್ರಕ್ರಿಯೆ ನಡೆಸದಂತೆ ಸೂಚನೆ ನೀಡಿದ್ದೇನೆ. ಹಲವಾರು ವರ್ಷದಿಂದ ತಲೆದೋರಿರುವ ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗುವ ವರೆಗೂ ಅರಣ್ಯ ಇಲಾಖೆಯಲ್ಲಿ ಮುಂಬಡ್ತಿ ಪ್ರಕ್ರಿಯೆ ನಡೆಸಲು ಅವಕಾಶ ನೀಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.