ಕುಲಾಂತರಿ ಬದನೆಗೆ ಕರ್ನಾಟಕ ಕೊಕ್
ಬಿಟಿ ಬದನೆ ವಿರೋಧಿಸಿ ತಮ್ಮನ್ನು ಭೇಟಿ ಮಾಡಿದ ನಿಯೋಗದೊಂದಿಗೆ ಮಾತನಾಡಿದ ಅವರು, ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುವ ಇಂಥ ಬಿಟಿ ಬದನೆಗಳನ್ನು ಬೆಳೆಯುವ ಅವಶ್ಯಕತೆ ರೈತರಿಗಿಲ್ಲ. ಕುಲಾಂತರಿ ಬೀಜಗಳಿಂದ ಹಾನಿಯಾಗಲಿದೆ ಎನ್ನುವುದಾದರೆ ಅದರ ಪ್ರವೇಶಕ್ಕೆ ರಾಜ್ಯ ಸರಕಾರ ಬೆಂಬಲ ನೀಡುವುದಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಮುಂದುವರೆದ ದೇಶಗಳಲ್ಲಿ ಈ ಬಿಟಿ ಬದನೆಯನ್ನು ನಿಷೇಧಿಸಲಾಗಿದೆ. ಆದರೆ ರಾಜ್ಯದಲ್ಲಿ ಪ್ರವೇಶ ನೀಡುತ್ತಿರುವುದು ಏಕೆ ? ಸ್ಥಳೀಯವಾಗಿ ಬೆಳೆಯುವ ಬದನೆ ತಳಿಗಳಿಲ್ಲ ಹೆಚ್ಚು ಪೌಷ್ಠಿಕಾಂಶದಿಂದ ಕೂಡಿರುವ ಹಾಗೂ ಪ್ರಸ್ತುತ ರೈತರಿಂದ ಬರುವ ಬೇಡಿಕೆಗೆ ಅನುಗುಣವಾಗಿ ಉತ್ತಮ ತಳಿಯ ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯವಿರುವಾಗ ಇನ್ನು ಬಿಟಿ ಬದನೆಯ ಅವಶ್ಯಕತೆ ರೈತನಿಗೆ ಇದೆಯೇ ಎಂಬ ಪ್ರಶ್ನೆಯೊಂದಿಗೆ ತೆರೆಳಿದ ನಿಯೋಗಕ್ಕೆ ಮುಖ್ಯಮಂತ್ರಿ ಈ ಭರವಸೆ ನೀಡಿದರು.
ಕೃಷಿ ವಿಜ್ಞಾನಿಗಳಾದ ಡಾ ಪುಷ್ಪಾ ಬಾರ್ಗವ, ಕವಿತಾ ಕುರುಗಂಟಿ, ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸಹಜ ಸಮೃದ್ಧಿ ಸಂಸ್ಥೆಯ ಜಿ ಕೃಷ್ಣಪ್ರಸಾದ್, ಬೆಂಗಳೂರು ಕೃಷಿ ವಿವಿ ನಿವೃತ್ತ ಕುಲಪತಿ ಡಾ ಜಿ ಕೆ ವೀರೇಶ್, ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ಬರಹಗಾರ ಬೇಳೂರು ಸುದರ್ಶನ್ ಮತ್ತು ವರ್ತೂರು ನಾರಾಯಣರೆಡ್ಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದರು. ಕುಲಾಂತರಿ ಬದನೆ ಬೆಳೆಯಲು ಕೇರಳ ಮತ್ತು ಒರಿಸ್ಸಾ ಸರಕಾರಗಳು ನಿಷೇಧಿಸಿವೆ.