ಜೂನ್ 1- ವಿಶ್ವ ಹಾಲು ದಿನ: ಕ್ಷೀರೋದ್ಯಮಿ ಶಿಲ್ಪಾ ಯಶೋಗಾಥೆ
ಪತಿಗೆ ಆದ ಅಪಘಾತ ಅವರನ್ನು ಕಂಗಾಲಾಗಿಸಬೇಕಿತ್ತು. ಆದರೆ ಛಲದಿಂದ ಪತಿಯು ನಡೆಸುತ್ತಿದ್ದ ಕ್ಷೀರೋದ್ಯಮವನ್ನೇ ಮುನ್ನಡೆಸಿಕೊಂಡು ಬರುತ್ತಿರುವ ಮಂಡ್ಯದ ಬೆಟ್ಟದಹಳ್ಳಿಯ ಶಿಲ್ಪಾ ಚಂದ್ರಶೇಖರ್ ಇಂದು ಒಬ್ಬ ಯಶಸ್ವೀ ಉದ್ಯಮಿ. ಸೌರಚಾಲಿತ ಹಾಲು ಕರೆಯುವ ಯಂತ್ರವನ್ನು ಅಳವಡಿಸಿಕೊಳ್ಳುವುದರ ಮೂಲಕ ಶಿಲ್ಪಾ ಕೋವಿಡ್-19ನಿಂದಾಗಿ ಅನೇಕ ರೀತಿಯ ಸವಾಲುಗಳಿಗೆ ಧೃತಿಗೆಡದೆ ಮುನ್ನಡೆಯುತ್ತಿದ್ದಾರೆ.
Recommended Video
ಶಿಲ್ಪಾ ಚಂದ್ರಶೇಖರ್ ಹೈನುಗಾರಿಕೆ ನಡೆಸುತ್ತಿರುವ ಮಹಿಳೆ. ಮಂಡ್ಯ ಜಿಲ್ಲೆಯ ಬೆಟ್ಟದಹಳ್ಳಿಯವರಾದ ಶಿಲ್ಪಾ, ತುಂಬ ವರ್ಷಗಳಿಂದ ಹೈನುಗಾರಿಕೆಯನ್ನೇ ಪ್ರಮುಖವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ವರು ಇರುವ ಇವರ ಕುಟುಂಬದಲ್ಲಿ ಇವರ ಪತಿ ಚಂದ್ರಶೇಖರ್ ಹೈನೋದ್ಯಮ ನಡೆಸುತ್ತಿದ್ದರು. ಈ ಮೊದಲು ಬಿಡದಿಯ ಗಾರ್ಮೆಂರ್ಟ್ಸ್ ಗೆ ಹೋಗುತ್ತಿದ್ದ ಶಿಲ್ಪಾ, ನಂತರ ಹೈನುಗಾರಿಕೆಗೆ ಪತಿಯೊಂದಿಗೆ ಕೈಜೋಡಿಸಿದ್ದರು. 15 ಹಸುಗಳನ್ನು ಕಟ್ಟಿದ್ದು, ಈ ಪೈಕಿ 10 ಹಸುಗಳು ಹಾಲುಕೊಡುತ್ತವೆ.
ಎಂಥವರ ಮನವನ್ನೂ ಕರಗಿಸುವ ಗೋ 'ಮಾತೃ'ಪ್ರೇಮದ ವರದಿಯಿದು...
ಇತ್ತೀಚೆಗೆ ಅವರು ಸೌರಚಾಲಿತ ಹಾಲು ಕರೆಯುವ ಯಂತ್ರವನ್ನು ಅಳವಡಿಸಿಕೊಂಡರು. ಇದನ್ನು ಅಳವಡಿಸಿಕೊಂಡಿರುವ ಹಿಂದೆ ಒಂದು ಹಿನ್ನೆಲೆ ಇದೆ. ಅದೆಂದರೆ ಅವರ ಪತಿಗೆ ಬೈಕ್ ಅಪಘಾತವಾಗಿ, ತಲೆಗೆ ಹಾಗು ಹೊಟ್ಟೆಗೆ ವಿಪರೀತ ಪೆಟ್ಟಾಗಿ ಹಾಸಿಗೆ ಹಿಡಿದರು. "ಅವರು ಬದುಕಿದ್ದೇ ಹೆಚ್ಚು. ತಲೆಗೆ 22 ಹೊಲಿಗೆ ಹಾಕಿದ್ದಾರೆ. ಅವರಿಗೆ ಈಗ ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ನಾವು ಬಡವರು. ಈ ಹೈನುಗಾರಿಕೆಯೇ ನಮಗೆ ಆಧಾರ' ಎನ್ನುವ ಶಿಲ್ಪಾ ಈಗ ಸಂಪೂರ್ಣವಾಗಿ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಸೌರಶಕ್ತಿ ಕ್ಷೀರೋದ್ಯಮಕ್ಕೆ ಆಧಾರ
ಶಿಲ್ಪಾ ಎಸ್ಕೆಡಿಆರ್ ಡಿಪಿಯಲ್ಲಿ ಸದಸ್ಯೆಯಾಗಿದ್ದರು. ಒಮ್ಮೆ ಸುಸ್ಥಿರ ಪರಿಹಾರಕ್ಕೆ ಹೆಸರಾದ ಸೆಲ್ಕೋ ಫೌಂಡೇಶನ್ನ ಸೌರಚಾಲಿತ ಹಾಲು ಕರೆಯುವ ಯಂತ್ರದ ಬಗ್ಗೆ ವಿಡಿಯೋವೊಂದನ್ನು ನೋಡಿ ತಾನು ಯಾಕೆ ಅಳವಡಿಸಿಕೊಳ್ಳಬಾರದೆಂದು ಯೋಚಿಸಿದರು. ಆದರೆ 73 ಸಾವಿರದಷ್ಟು ದುಬಾರಿ ಬೆಲೆಯನ್ನು ಕೊಟ್ಟು ಕೊಳ್ಳುವ ಸಾಮರ್ಥ್ಯ ಅವರಲ್ಲಿರಲಿಲ್ಲ.
ಆಗ ಅವರು ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟವನ್ನು ಸಂಪರ್ಕಿಸಿದರು. ಅದರ ಯೋಜನೆಯಡಿ 15 ಸಾವಿರ ರೂ. ಸಿಕ್ಕಿತು. ಉಳಿದ ಹಣವನ್ನು ಸೆಲ್ಕೋ ಫೌಂಡೇಶನ್ ಮತ್ತು ಎಸ್ಕೆಡಿಆರ್ಡಿಪಿಗಳು ಭರಿಸಿದವು. ಇದರಿಂದ ಅವರು ಸೌರಚಾಲಿತ ಹಾಲು ಕರೆಯುವ ಯಂತ್ರವನ್ನು ಖರೀದಿಸಿದರು. ಇದರೊಂದಿಗೆ ಎರಡು ಸೌರದೀಪಗಳನ್ನೂ ಹಾಕಿಸಿಕೊಂಡರು. ಇದರಿಂದ ಸದಾ ವಿದ್ಯುತ್ ವ್ಯತ್ಯಯವಾಗುತ್ತಿದ್ದ ಅಲ್ಲಿ, ಬೆಳಗಿನಜಾವವೇ ಎದ್ದು ಹಾಲು ಕರೆಯಲು ಬೆಳಕಿನ ವ್ಯವಸ್ಥೆಯಾಯಿತು.
ಮೇವು ದೊರಕುವುದೇ ದೊಡ್ಡ ಸಮಸ್ಯೆ
ಕೋವಿಡ್-19ನಿಂದಾದ ಲಾಕ್ಡೌನ್ ಸಮಯದಲ್ಲಿ ಎಲ್ಲಾ ಕಡೆ ಮುಖ್ಯವಾಗಿ ಜಿಲ್ಲೆಗಳ ಗಡಿಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿತ್ತು. ಹೀಗಿದ್ದೂ ಹಾಲು ಅವಶ್ಯಕ ವಸ್ತುವಾದ್ದರಿಂದ ಇದರ ಮಾರಾಟಕ್ಕೆ ನಿರ್ಬಂಧವಿರಲಿಲ್ಲ. ಅಲ್ಲದೆ ಒಂದು ಕಿ.ಮೀ.ಅಂತರದಲ್ಲಿ ಇರುವುದರಿಂದ ಈ ಲಾಕ್ಡೌನ್ ಶಿಲ್ಪಾಗೆ ಸಾರಿಗೆ ಸಮಸ್ಯೆಯಾಗಲಿಲ್ಲ. ಆದರೆ ಈ ಲಾಕ್ಡೌನ್ನಿಂದಾಗಿ ಹಸುಗಳಿಗೆ ಮೇವು ದೊರಕುವುದೇ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ ಶಿಲ್ಪಾ.
ಗೋವುಗಳ
ಪಾಲಿನ
ಆಪದ್ಭಾಂಧವ
ಮಂಗಳೂರಿನ
ಪ್ರಕಾಶ್
ಶೆಟ್ಟಿ
ಎರಡು ಮೂಟೆ ಹಿಂಡಿ ಸಾಕಾಗಲ್ಲ
ಈ ಡೈರಿಯಲ್ಲಿ ಕೊಡುವ ಎರಡು ಮೂಟೆ ಹಿಂಡಿ ನಮಗೇನೂ ಸಾಲುತ್ತಿರಲಿಲ್ಲ. ಹಾಗಾಗಿ ಹಸುಗಳಿಗೆ ಬೇಕಾದ ರವೆ ಬೂಸಾ, ಎಲೆ ಬೂಸಾ, ಕಡ್ಲೆ ಹಿಂಡಿ ಎಲ್ಲವನ್ನೂ ನಾವು ಮೈಸೂರಿನಿಂದಲೇ ತರಿಸಿಕೊಳ್ತಿದ್ವಿ. ಆದರೆ ಈಗ ಲಾಕ್ಡೌನ್ ಇರೋದ್ರಿಂದ ನಮಗೆ ಅಲ್ಲಿಂದ ತರಿಸಲು ಹೆದರಿಕೆ. ಹಾಗಾಗಿ ತರಿಸುತ್ತಿಲ್ಲ. ಅಲ್ಲದೆ ಡೈರಿಯಲ್ಲಿ ಮೂಟೆಗೆ 1200ರೂ. ಇದೆ. ಹೊರಗಡೆ ಒಂದು ಮೂಟೆಗೆ 1100 ರೂ. ಇದೆ. ಇದೇ ನಮಗೆ ಹೆಚ್ಚು ಲಾಭದಾಯಕ.
ನಮ್ಮಲ್ಲಿ ಒಟ್ಟು 15 ಹಸುಗಳಿವೆ
ಈಗ ನಮ್ಮಲ್ಲಿ ಒಟ್ಟು 15 ಹಸುಗಳಿವೆ. ಈಗ 8 ಹಸುಗಳು ಹಾಲು ಕೊಡ್ತಾ ಇವೆ. 4 ಕರುಗಳು ಇವೆ. ಇನ್ನೇನು ತಿಂಗಳಲ್ಲಿ ಅವೂ ಹಾಲು ಕೊಡುತ್ತವೆ. ಹಾಲು ಮೊದಲು ಲೀ. ಗೆ 30 ರೂ. ಇತ್ತು. ಈಗ 27ರೂ. ಆಗಿದೆ. ಮೊದಲು ಹಸುಗಳು 30ಲೀ. ಕೊಡ್ತಾ ಇದ್ವು. ಈಗ 15 ಲೀ.ಕೊಡ್ತಾ ಇವೆ. ಅಂದರೆ ಪೌಷ್ಟಿಕಾಂಶಗಳ ಕೊರತೆಯಿಂದಾಗಿ ಹಸುಗಳು ಹಾಲು ಕೊಡುವ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ ಮಳೆ ಇಲ್ಲದಿರುವ ಕಾರಣಕ್ಕೆ ಹಸಿ ಹುಲ್ಲು ಮತ್ತು ಒಣಹುಲ್ಲುಗಳೆರಡರ ಬೆಲೆಯೂ ಈಗ ಜಾಸ್ತಿಯಾಗಿದೆ. ಈ ಎಲ್ಲವುಗಳಿಂದಲೂ ನಮ್ಮ ಉದ್ಯಮಕ್ಕೆ ತೊಂದರೆಯಾಗುತ್ತಿದೆ. ಹೀಗಿದ್ದೂ ಸೌರಚಾಲಿತ ಹಾಲು ಕರೆಯುವ ಯಂತ್ರವನ್ನು ಇಟ್ಟುಕೊಂಡಿರುವುದರಿಂದ ಸ್ವಲ್ಪಮಟ್ಟಿಗೆ ಉದ್ಯಮನಡೆಯುತ್ತಿದೆ ಎನ್ನುತ್ತಾರೆ ಶಿಲ್ಪಾ.
ಹಾಲಿನ ಯಂತ್ರ ಕೊಳ್ಳಲು ಹೆದರಿದ್ದೆ
ನಿಜ ಹೇಳಬೇಕೆಂದರೆ ಇದರ ದುಬಾರಿ ಬೆಲೆಯನ್ನು ನೋಡಿ ಸೌರಚಾಲಿತ ಮೊದಲು ಹಾಲಿನ ಯಂತ್ರವನ್ನು ಕೊಳ್ಳಲು ಹೆದರಿದ್ದೆ. ಆದರೆ ಈಗ ಇದಿಲ್ಲದಿದ್ದರೆ ನನ್ನ ಜೀವನವೇ ನಡೆಯುವುದಿಲ್ಲ ಎನ್ನುವ ಹಾಗಾಗಿದೆ. ನನ್ನ ಪತಿಯ ಅಪಘಾತದ ನಂತರ ಅವರ ಸಹಾಯವನ್ನು ನಾನು ಎದುರುನೋಡುವಂತಿಲ್ಲ. ಈ ಲಾಕ್ಡೌನ್ ಸಮಯದಲ್ಲಿ ಕಾರ್ಮಿಕರೂ ಸಿಗುತ್ತಿಲ್ಲ. ಈ ಸಂದರ್ಭದಲ್ಲಿ ಸೌರಚಾಲಿತ ಯಂತ್ರ ಸಾಕಷ್ಟು ಸಹಾಯಕವಾಗಿ ನಿಂತಿದೆ ಎಂದು ನೆನೆಯುತ್ತಾರೆ ಶಿಲ್ಪಾ.